‘ನೀರ್‌ದೋಸೆ’ ಬಳಿಕ ನಿರ್ದೇಶಕ ವಿಜಯ ಪ್ರಸಾದ್‌ ನಿರ್ದೇಶಿಸಿರುವ ರೊಮ್ಯಾಂಟಿಕ್‌ ಕಾಮಿಡಿ ಡ್ರಾಮಾ ‘ತೋತಾಪುರಿ’. ಜಗ್ಗೇಶ್‌, ಧನಂಜಯ್‌, ಅದಿತಿ ಪ್ರಭುದೇವ ನಟಿಸಿದ್ದಾರೆ. ಕೆ ಎ ಸುರೇಶ್‌ ನಿರ್ಮಾಪಕರು. ಮಾರ್ಚ್‌ನಲ್ಲಿ ರಿಲೀಸ್‌ಗೆ ರೆಡಿಯಾಗ್ತಿರೋ ಈ ಸಿನಿಮಾದ ಬಗ್ಗೆ, ಮೇಕಿಂಗ್‌ ಸ್ಟೈಲಿನ ಬಗ್ಗೆ ವಿಜಯ ಪ್ರಸಾದ್‌ ಮಾತಾಡಿದ್ದಾರೆ.

ಪ್ರಿಯಾ ಕೆರ್ವಾಶೆ

‘ನೀರ್‌ದೋಸೆ’ (Neer Dose) ಬಳಿಕ ನಿರ್ದೇಶಕ ವಿಜಯ್​ ಪ್ರಸಾದ್ (Vijay Prasad) ನಿರ್ದೇಶಿಸಿರುವ ರೊಮ್ಯಾಂಟಿಕ್‌ ಕಾಮಿಡಿ ಡ್ರಾಮಾ ‘ತೋತಾಪುರಿ’ (Totapuri). ಜಗ್ಗೇಶ್‌ (Jaggesh), ಧನಂಜಯ್‌ (Dhananjay), ಅದಿತಿ ಪ್ರಭುದೇವ (Aditi Prabhudeva) ನಟಿಸಿದ್ದಾರೆ. ಕೆ ಎ ಸುರೇಶ್‌ ನಿರ್ಮಾಪಕರು. ಮಾರ್ಚ್‌ನಲ್ಲಿ ರಿಲೀಸ್‌ಗೆ ರೆಡಿಯಾಗ್ತಿರೋ ಈ ಸಿನಿಮಾದ ಬಗ್ಗೆ, ಮೇಕಿಂಗ್‌ ಸ್ಟೈಲಿನ ಬಗ್ಗೆ ವಿಜಯ ಪ್ರಸಾದ್‌ ಮಾತಾಡಿದ್ದಾರೆ.

* ನೀರ್‌ದೋಸೆ ನೋಡಲು ಮಕ್ಕಳೂ ಥಿಯೇಟರ್‌ಗೆ ಬಂದ್ರು. ತೋತಾಪುರಿನೂ ಅದೇ ಥರ ಇರುತ್ತಾ?
ಈ ಚಿತ್ರದಲ್ಲಿ ಬೇರೆ ಥರದ ಜರ್ನಿ ಇದೆ. ಇಡೀ ಸಿನಿಮಾ ಬೇರೆಯೇ ಮಜಲಿನಲ್ಲಿದೆ. ಕುಟುಂಬದವರೆಲ್ಲ ಬಂದು ನೋಡಬಹುದು. ಆದರೆ ನನ್ನ ಚಿತ್ರಗಳಿಗೆ ಯಾವಾಗಲೂ ‘ಎ’ ಸರ್ಟಿಫಿಕೇಟೇ ಸಿಗೋದು. ನಿರ್ಮಾಪಕರಿಗೆ ನಾನೇ ಹೇಳಿರ್ತೀನಿ, ‘ಸಾರ್‌, ಎ ಸರ್ಟಿಫಿಕೇಟ್‌ ನಾವೇ ತಗೊಂಡು ಹೋಗೋಣ, ಅವರು ಸೀಲು ಸೈನ್‌ ಹಾಕಿಕೊಟ್ಟರೆ ಸಾಕು’ ಅಂತ. ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ತೋತಾಪುರಿ ಒಂದು ಭಾವೈಕ್ಯತೆಯ ಸಿನಿಮಾ. ಅದನ್ನು ನನ್ನ ಸ್ಟೈಲಿನಲ್ಲಿ ಪ್ರಸ್ತುತ ಪಡಿಸಿದ್ದೀನಿ.

* ಕಳೆದ ವಾರ ಬಿಡುಗಡೆಯಾದ ‘ಬಾಗ್ಲು ತೆಗಿ ಮೇರಿ ಜಾನ್‌’ ಹಾಡು ಬಹುಶಃ ಈ ಭಾವೈಕ್ಯತೆಯನ್ನು ಸಂಕೇತಿಸುವ ಹಾಗಿದೆಯೇನೋ?
ಹೌದು. ನಾಯಕಿ ಮತ್ತು ನಾಯಕನ ಮಧ್ಯೆ ಪ್ರೇಮಾಂಕುರವಾಗುತ್ತೆ. ಅವರಿಬ್ಬರ ಕಲ್ಪನೆಯಲ್ಲಿ ಈ ಹಾಡು ಬರುತ್ತೆ. ಅದನ್ನು ಗಂಭೀರವಾಗಿ ಹೇಳೋ ಬದಲು ಚೇಷ್ಟೆಯಲ್ಲಿ, ಗ್ರಾಮ್ಯವಾಗಿ ಹೇಳಿದರೆ ಚೆನ್ನಾಗಿರುತ್ತೆ ಅಂತ ಈ ಪ್ರಯೋಗ ಮಾಡಿದ್ವಿ. ಹಿಂದಿ ಮಿಕ್ಸ್‌ ಆಗಿದೆ ಅಂತ ಇದಕ್ಕೆ ಆರಂಭದಲ್ಲಿ ಕೊಂಚ ಪ್ರತಿರೋಧ ಬಂತು. ಅದು ನಿರೀಕ್ಷಿತವೇ ಆಗಿತ್ತು. ಆದರೆ ಒಂದೇ ಓಟದಲ್ಲಿ ಸಿನಿಮಾದೊಳಗೆ ಈ ಹಾಡು ನೋಡಿದಾಗ ಅಬ್ರಪ್ಟ್‌ ಅನಿಸಲ್ಲ.

Dhananjay: ಮೋಡ ಕವಿದ ವಾತಾವರಣದಲ್ಲೇ 'ತೋತಾಪುರಿ' ತಿಂದು ಮೊಡವೆ ಬಂತು!

* ಯಾವ ಧೈರ್ಯದ ಮೇಲೆ ತೋತಾಪುರಿ ರಿಲೀಸ್‌ಗೂ ಮೊದಲೇ ಭಾಗ 2 ನ್ನೂ ಮಾಡಿದ್ರಿ?
ಈ ಐಡಿಯಾ ಕೊಟ್ಟಿದ್ದು ನಿರ್ಮಾಪಕರು. ಕತೆ ಬಹಳ ಗಾಢವಾಗಿದೆ, ಜೊತೆಗೆ ವಿಸ್ತಾರವೂ ಇದೆ. ಗಾಢ ಕಥೆಯನ್ನು ಕಡಿಮೆ ಅವಧಿಗೆ ಕಟ್‌ ಮಾಡಿ ಕೊಟ್ಟರೆ ಜನರಿಗೆ ಹೇರಿಕೆ ಆಗುತ್ತೆ. ಹಾಗೆ ಎರಡು ಭಾಗವಾಗಿ ಮಾಡೋಣ ಅಂದರು. ನನಗೆ ಕತೆ ಬಗ್ಗೆ ಆತ್ಮವಿಶ್ವಾಸ ಇತ್ತು. ನಿರ್ಮಾಪಕರ ಮಾತಿಗೆ ಜೈ ಅಂದೆ.

* ತೋತಾಪುರಿ ಹೇಗಿರುತ್ತೆ?
ಪ್ರಸ್ತುತ ಸಮಯದಲ್ಲಿ ಜನರಿಗೆ ಬೇಕಾಗಿರುವ ವಿಷಯ ಈ ಸಿನಿಮಾದಲ್ಲಿದೆ. ಮನರಂಜನೆ, ಗಾಢ ಕತೆ, ಆಪ್ತತೆ ಸಿಗುತ್ತೆ, ಅವರ ಮನಸ್ಸಿನ ಕೆಲವು ಗೊಂದಲಗಳಿಗೆ ಉತ್ತರ ಸಿಗುತ್ತೆ. ಜಾತಿ, ಧರ್ಮ ಎಲ್ಲವೂ ಬರುತ್ತೆ. ಹಿಂದೂ ಮುಸ್ಲಿಂ ಕತೆ ಅಂದಾಗ ಎಲ್ಲರೂ ಅದರಲ್ಲಿ ಗಲಭೆ, ರಕ್ತಪಾತ, ಗಲಾಟೆ, ದ್ವೇಷ ಅಂತೆಲ್ಲ ತಿಳ್ಕೊಳ್ತಾರೆ. ಆದರೆ ನಮ್ಮ ಸಿನಿಮಾ ಇದ್ಯಾವುದೂ ಇಲ್ಲದ ಒಂದು ಪುಟ್ಟಪ್ರೇಮಕಥೆ. ಮನಸ್ಸುಗಳನ್ನು ಬೆಸೆಯುವ ಚಿತ್ರವಿದು.

* ನಿಮ್‌ ಪ್ರಕಾರ ತೋತಾಪುರಿ ಯಶಸ್ವಿ ಆಗೋದಕ್ಕೆ 5 ಕಾರಣಗಳು?
ಕತೆ, ವಸ್ತು ವಿಷಯ, ನಿರೂಪಣೆ, ಕನೆಕ್ಟ್ ಆಗುವ ಪಾತ್ರಗಳು, ಸಂಗೀತ ಹಾಗೂ ಇವೆಲ್ಲದರ ಫೈನಲ್‌ ಫಲಿತಾಂಶ.

ತೋತಾಪುರಿ ಸಿನಿಮಾ ಪ್ಯಾನ್ ಇಂಡಿಯಾವೋ, ಅಲ್ಲವೋ? ನೆಟ್ಟಿಗರು ಕೇಳ್ತಿದ್ದಾರೆ

* ತೋತಾಪುರಿ ಕಣ್ತುಂಬಿಸಿಕೊಳ್ಳೋ ಸೌಭಾಗ್ಯ ಪ್ರೇಕ್ಷಕರಿಗೆ ಯಾವಾಗ ಸಿಗುತ್ತೆ?
ಮಾರ್ಚ್ ತಿಂಗಳಲ್ಲಿ ನಮ್ಮ ಸಿನಿಮಾ ಬಿಡುಗಡೆ. ಥಿಯೇಟರ್‌ಗೇ ಬರ್ತೀವಿ. ನಂತರ ಓಟಿಟಿ.