ಗೋಲ್ಡನ್‌ ಸ್ಟಾರ್‌ ಗಣೇಶ್‌ ಹಾಗೂ ನಿರ್ದೇಶಕ ಪ್ರೀತಮ್‌ ಗುಬ್ಬಿ ಕಾಂಬಿನೇಶನ್‌ ಹೊಸ ಚಿತ್ರದ ಟೈಟಲ್‌ ಪೋಸ್ಟರ್‌ ಯುಗಾದಿ ಹಬ್ಬದ ಅಂಗವಾಗಿ ರೀವಿಲ್‌ ಆಗಿದೆ. ಈ ಹಿನ್ನೆಲೆಯಲ್ಲಿ ಗಣೇಶ್‌ ಮಾತನಾಡಿದ್ದಾರೆ.

ಆರ್‌. ಕೇಶವಮೂರ್ತಿ

ಗೋಲ್ಡನ್‌ ಸ್ಟಾರ್‌ ಗಣೇಶ್‌ (Golden Star Ganesh) ಹಾಗೂ ನಿರ್ದೇಶಕ ಪ್ರೀತಮ್‌ ಗುಬ್ಬಿ (Preetham Gubbi) ಕಾಂಬಿನೇಶನ್‌ ಹೊಸ ಚಿತ್ರದ ಟೈಟಲ್‌ ಪೋಸ್ಟರ್‌ (Title Poster) ಯುಗಾದಿ ಹಬ್ಬದ (Ugadi Festival) ಅಂಗವಾಗಿ ರೀವಿಲ್‌ ಆಗಿದೆ. ಈ ಹಿನ್ನೆಲೆಯಲ್ಲಿ ಗಣೇಶ್‌ ಮಾತನಾಡಿದ್ದಾರೆ.

* ಯುಗಾದಿ ಹಬ್ಬಕ್ಕೆ ಹೊಸ ಸಿನಿಮಾ ಘೋಷಿಸುತ್ತಿದ್ದೀರಲ್ಲ?
ಹೌದು. ಪ್ರೀತಮ್‌ ಗುಬ್ಬಿ ಹಾಗೂ ನನ್ನ ಕಾಂಬಿನೇಶನ್‌ನ ಸಿನಿಮಾ. ‘99’ ಚಿತ್ರದ ನಂತರ ಮತ್ತೆ ಇಬ್ಬರು ಜತೆಯಾಗುತ್ತಿದ್ದೇವೆ.

* ಮತ್ತೆ ರೀಮೇಕ್‌ ಸಿನಿಮಾನಾ?
ಖಂಡಿತ ಇಲ್ಲ. ನೂರಕ್ಕೆ ನೂರು ಪಾಲು ಸ್ವಮೇಕ್‌ ಕತೆ. ಪ್ರೀತಮ್‌ ಅವರ ತಂಡ ನನ್ನನ್ನು ಹೊಸದಾಗಿ ತೋರಿಸುವುದಕ್ಕೆ ಸಾಕಷ್ಟುತಯಾರಿ ಮಾಡಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಅವರು ಈ ಕತೆ ಮೇಲೆ ಕೆಲಸ ಮಾಡಿದ್ದಾರೆ. ವಿಶೇಷ ಎಂದರೆ ಕತೆ ಬರೆದಿರುವುದು ಛಾಯಾಗ್ರಾಹಕಿ ಪ್ರೀತಾ ಜಯರಾಮ್‌. ಇದಕ್ಕೆ ಪ್ರೀತಮ್‌ ಗುಬ್ಬಿ ಚಿತ್ರಕತೆ, ಸಂಭಾಷಣೆ, ನಿರ್ದೇಶನ.

* ಯಾವ ರೀತಿಯ ಸಿನಿಮಾ ಇದು?
ಪಕ್ಕಾ ಅಡ್ವೆಂಚರ್‌ ಎಮೋಷನ್‌ ಕತೆ. ನನ್ನ ಮೊದಲನೇ ಬಾರಿಗೆ ಅಡ್ವೆಂಚರ್‌ ಚಿತ್ರ. ಚಿತ್ರದ ಟೈಟಲ್‌ ಪೋಸ್ಟರ್‌ ನೋಡಿದಾಗ ಪಾತ್ರ ಹಾಗೂ ಕತೆ ಬಗ್ಗೆ ಐಡಿಯಾ ಬರುತ್ತದೆ.

Old Monk ಚಿತ್ರವನ್ನು ಥಿಯೇಟರ್‌ನಲ್ಲೇ ಗೆಲ್ಲಿಸಿ: ಶ್ರೀನಿ

* ಆದರೆ, ಚಿತ್ರದ ಹೆಸರು ಸ್ಟಾಫ್ಟ್ ಆಗಿದೆ. ಅದೇ ಮಳೆ ಪ್ಲೇವರ್‌ ಮುಂದುವರಿಯಲಿದೆಯೇ?
ನಾವು ಮಳೆಯಿಂದ ಆಚೆ ಬಂದಿದ್ದೇವೆ. ಹೊಸ ರೀತಿಯ ಚಿತ್ರಗಳನ್ನು ಮಾಡಲಿದ್ದೇವೆ. ಅದರ ಮೊದಲ ಹೆಜ್ಜೆಯಾಗಿ ಈಗ ‘ಬಾನದಾರಿಯಲ್ಲಿ’ ಚಿತ್ರ. ಪೋಸ್ಟರ್‌ನಲ್ಲಿ ಬಳಸಿರುವ ಕ್ಯಾರೆಕ್ಟರ್‌ಗಳು ಹಾಗೂ ಹಿನ್ನೆಲೆ ಅಡ್ವೆಂಚರ್‌ ಕತೆಯನ್ನು ಹೇಳುತ್ತದೆ.

* ನೀವು ಮತ್ತು ಪ್ರೀತಮ್‌ ಗುಬ್ಬಿ ಮತ್ತೆ ಮತ್ತೆ ಜತೆಯಾಗಿ ಸಿನಿಮಾ ಮಾಡುತ್ತಿರುವ ವಿಶೇಷತೆ ಏನು?
ಪ್ರೀತಮ್‌ ಗುಬ್ಬಿ ಅವರು ಆಯ್ಕೆ ಮಾಡಿಕೊಳ್ಳುವ ಕತೆಗಳು ನನಗೆ ಇಷ್ಟ. ಅವರ ಕತೆಗನ್ನು ನಿರೂಪಿಸುವ ರೀತಿ ತುಂಬಾ ಹೊಸತನದಿಂದ ಕೂಡಿರುತ್ತದೆ. ತೆರೆ ಮೇಲೆ ಸಿನಿಮಾ ನೋಡುವಾಗ ಪ್ರೇಕ್ಷಕರಿಗೆ ಫ್ರೆಶ್‌ ಫೀಲ್‌ ಬರಬೇಕು. ಪ್ರೀತಮ್‌ ಅವರು ನನಗೆ ಕತೆ ಹೇಳುವಾಗಲೇ ಅಂಥ ಫ್ರೆಶ್‌ನೆಸ್‌ ಕಾಣುತ್ತದೆ. ಅವರ ಈ ಕಥಾ ಅಭಿರುಚಿಯೇ ನಮ್ಮನ್ನು ಮತ್ತೆ ಮತ್ತೆ ಜತೆಯಾಗುವಂತೆ ಮಾಡುತ್ತಿದೆ.

* ಟೈಟಲ್‌ ಪೋಸ್ಟರ್‌ನಲ್ಲಿ ಮೂವರು ವಿದೇಶಿ ಪಾತ್ರಧಾರಿಗಳ ಗುಟ್ಟೇನು?
ಚಿತ್ರದ ಹೆಸರು ಸಾಫ್ಟ್. ಆದರೆ, ಚಿತ್ರದ ಪಾತ್ರಧಾರಿಗಳು ಸಾಫ್ಟ್ ಅಲ್ಲ. ಸಾಹಸಮಯ ಸಿನಿಮಾ ಎಂಬುದನ್ನು ಹೇಳುವುದಕ್ಕೆ ಪೋಸ್ಟರ್‌ನಲ್ಲಿ ಆಫ್ರಿಕ ಮೂಲದ ಪಾತ್ರಗಳನ್ನು ಪೋಸ್ಟರ್‌ನಲ್ಲಿ ಹೇಳಿದ್ದೇವೆ. ಇನ್ನೂ ‘ನೋಡು ಎಷ್ಟುಚೆಂದ’ ಎನ್ನುವ ಟ್ಯಾಗ್‌ ಲೈನ್‌ ಚಿತ್ರದ ಜರ್ನಿ ಹೇಳುತ್ತದೆ.

Jogi Prem: ಪ್ರೀತಿ ಪ್ರೇಮದ ನೆರಳಲ್ಲಿ ವ್ಯವಸ್ಥೆಯ ಕ್ರೌರ್ಯ 'ಏಕ್‌ ಲವ್‌ ಯಾ'

* ಶೂಟಿಂಗ್‌ ಆರಂಭವಾಗುವುದು ಯಾವಾಗ?
ಮೇ ತಿಂಗಳಿನಿಂದ ಚಿತ್ರಕ್ಕೆ ಶೂಟಿಂಗ್‌ ಆರಂಭವಾಗಲಿದೆ. ಬೆಂಗಳೂರು, ಮಂಗಳೂರು, ಚೆನ್ನೈ ಹಾಗೂ ವಾರಾಣಸಿಯಲ್ಲಿ ಚಿತ್ರೀಕರಣ ನಡೆಯಲಿದೆ. ಶ್ರೀವಾರಿ ಟಾಕೀಸ್‌ ಮೂಲಕ ಈ ಚಿತ್ರ ನಿರ್ಮಾಣ ಆಗುತ್ತಿದೆ. ಅಭಿಲಾಷ್‌ ಕ್ಯಾಮೆರಾ, ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಲಿದ್ದಾರೆ.