ಪೆಟ್ರೋಲ್ ಡೀಸೆಲ್ ಮೇಲಿನ ಸುಂಕ 10 ರೂ ಇಳಿಕೆ ಬಳಿಕ ನಿಮ್ಮ ನಗರದಲ್ಲಿ ಎಷ್ಟಾಗಿದೆ ಇಂಧನ ದರ? ತೈಲ ಆತಂಕದ ಬೆನ್ನಲ್ಲೇ ಕೇಂದ್ರ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಇದರಿಂದ ಜನಸಾಮಾನ್ಯರು ಖರೀದಿಸುವ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಕಡಿತವಾಗಿದೆಯಾ?
ನವದೆಹಲಿ (ಮಾ.27) ಮಧ್ಯಪ್ರಾಚ್ಯ ಯುದ್ಧದಿಂದ ತೈಲ ಹಾಗೂ ಗ್ಯಾಸ್ ಪೂರೈಕೆಯಲ್ಲಿನ ವ್ಯತ್ಯಯದಿಂದ ಭಾರತ ಸೇರಿದಂತೆ ಹಲವು ದೇಶಗಳು ಸಂಕಷ್ಟಕ್ಕೆ ಸಿಲುಕಿದೆ. ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳದ ಆತಂಕದ ನಡುವೆ ಕೇಂದ್ರ ಸರ್ಕಾರ ಅಬಕಾರಿ ಸುಂಕ 10 ರೂಪಾಯಿ ಇಳಿಕೆ ಮಾಡಿ ಬಂಪರ್ ಸುದ್ದಿ ನೀಡಿದೆ. ಹೀಗಾಗಿ ಜನರ ಆತಂಕಕ್ಕೆ ಅಂತ್ಯಹಾಡಿದೆ. ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆಯಿಂದ ಕೇಂದ್ರ ಸರ್ಕಾರ ದೇಶದಲ್ಲಿನ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಈ ಮಹತ್ವದ ನಿರ್ಧಾರ ಘೋಷಿಸಿದೆ. ಇದರಿಂದ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಡಿಮೆಯಾಗುತ್ತಾ? ಬೆಂಗಳೂರು ಸೇರಿದಂತೆ ನಿಮ್ಮ ನಗರ, ಪಟ್ಟಣಗಳಲ್ಲಿ ಸುಂಕ ಕಡಿತ ಬಳಿಕ ಇಂದನ ದರ ಎಷ್ಟಾಗಿದೆ?
ಸುಂಕ ಕಡಿತ ಬಳಿಕ ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟು?
ಇಂಧನದ ಮೇಲಿನ ಅಬಕಾರಿ ಸುಂಕ ದರವನ್ನು ಕೇಂದ್ರ ಸರ್ಕಾರ ಪ್ರತಿ ಲೀಟರ್ ಮೇಲೆ 10 ರೂಪಾಯಿ ಕಡಿತಗೊಳಿಸಿದೆ. ಇದು ನೇರವಾಗಿ ಗ್ರಾಹಕರು ಖರೀದಿಸುವ ಪೆಟ್ರೋಲ್ ಡೀಸೆಲ್ ಮೇಲಿನ ದರದಲ್ಲಿ ಯಾವುದೇ ವ್ಯತ್ಯಾಸ ತರುವುದಿಲ್ಲ. ಇಂಧನದ ಮೇಲಿನ ಸುಂಕ 10 ರೂಪಾಯಿ ಇಳಿಕೆ ಮಾಡಿದರೂ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಸಾಮಾನ್ಯವಾಗಿ ಅಬಕಾರಿ ಸುಂಕ ಇಳಿಕೆಯಾದಾಗ ನೇರವಾಗಿ ಗ್ರಾಹಕರು ಖರೀದಿಸುವ ಪೆಟ್ರೋಲ್ ಡೀಸೆಲ್ ಬೆಲೆಯಲ್ಲೂ ಇಳಿಕೆಯಾಗುತ್ತದೆ. ಆದರೆ ಈ ಬಾರಿ ತೈಲ ಹಾಗಲ್ಲ.
ಸುಂಕ ಕಡಿತದಿಂದ ಯಾರಿಗೆ ಲಾಭ?
ಮಧ್ಯಪ್ರಾಚ್ಯ ಯುದ್ಧದ ಪರಿಣಾಮದಿಂದ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ 150 ರೂಪಾಯಿ ಗಡಿ ದಾಟಿದೆ. ಕಳೆದ ಹಲವು ತಿಂಗಳಿನಿಂದ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಲೇ ಸಾಗಿ, ಯುದ್ಧದ ಬಳಿಕ ಇದರ ವೇಗ ಹೆಚ್ಚಾಗಿದೆ. ಇಷ್ಟಾದರೂ ಭಾರತದಲ್ಲಿ ತೈಲ ಕಂಪನಿಗಳು ಐಒಸಿಎಲ್ (IOCL), ಬಿಪಿಸಿಎಲ್( BPCL), ಹೆಚ್ಪಿಸಿಎಲ್( HPCL) ಬೆಲೆಯಲ್ಲಿ ಯಾವುದೇ ಏರಿಕೆ ಮಾಡಿರಲಿಲ್ಲ. ಇದರಿಂದ ತೈಲ ಕಂಪನಿಗಳಿಗೆ ಭಾರಿ ನಷ್ಟ ಸಂಭವಿಸಿದೆ. ಹೀಗಾಗಿ ತೈಲ ಕಂಪನಿಗಳ ನಷ್ಟ ಸರಿದೂಗಿಸಲು 10 ರೂಪಾಯಿ ಸಂಕ ಕಡಿತಗೊಳಿಸಿದೆ.
ತೈಲ ಆಮದು ಬಲು ದುಬಾರಿ
ಭಾರತಕ್ಕೆ ಇದೀಗ ತೈಲ ಆಮದು ದುಬಾರಿಯಾಗುತ್ತಿದೆ. ಇದಕ್ಕೆ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಆಗಿರುವ ಏರಿಕೆ ಮಾತ್ರ ಕಾರಣವಲ್ಲ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದ ಕಾರಣ ಭಾರತ ಹೆಚ್ಚು ಹಣ ನೀಡಿ ಕಚ್ಚಾ ತೈಲ ಖರೀದಿಸಬೇಕಾಗಿದೆ. ಇದರಿಂದ ಭಾರತಕ್ಕೆ ಆಮದು ಆಗುತ್ತಿರುವ ಕಚ್ಚಾ ತೈಲ ಬೆಲೆ ಭಾರಿ ಏರಿಕೆಯಾಗಿದೆ.
ತೈಲದ ಮೇಲಿನ ಅಬಕಾರಿ ಸುಂಕ ಕಡಿತ ಮಾಡಿರುವ ಕೇಂದ್ರ ಸರ್ಕಾರ ಹಣದುಬ್ಬರ ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಪ್ರಮುಖವಾಗಿ ಇಂಧನ ದರ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವು ಆರ್ಥಿಕ ಸಂಕಷ್ಟಗಳು ಎದುರಾಗುತ್ತದೆ. ಇದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಸುಂಕ ಕಡಿತಗೊಳಿಸಿ ಸಂಕಷ್ಟದ ಪರಿಸ್ಥಿತಿಯಲಲೂ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳುವ ಪ್ರಯತ್ನ ಮಾಡಿದೆ.


