Asianet Suvarna News Asianet Suvarna News

ಕೋವಿಡ್‌ ಬಳಿಕ ರಾಜ್ಯದಲ್ಲಿ ಆದಾಯ ಹೆಚ್ಚಳ: ಮಹಾ ಲೆಕ್ಕಪರಿಶೋಧಕರ ವರದಿಯಲ್ಲಿ ಮಾಹಿತಿ

ಕೊರೋನಾ ಸಂಕಷ್ಟದ ನಂತರದ ವರ್ಷವಾದ 2022-23ರಲ್ಲಿ ಹಿಂದಿನ ವರ್ಷಕ್ಕಿಂತ ರಾಜ್ಯದ ಆಂತರಿಕ ಉತ್ಪನ್ನ ದರ ಶೇ.11.13 ಹಾಗೂ ರಾಜಸ್ವ ಸ್ವೀಕೃತಿಯಲ್ಲಿ ಶೇ. 17.19ರಷ್ಟು ಹೆಚ್ಚಳವಾಗಿದೆ ಎಂದು ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ವರದಿಯಲ್ಲಿ ತಿಳಿಸಲಾಗಿದೆ. 
 

Revenue growth in state after Covid Information in Auditor Generals report gvd
Author
First Published Jul 29, 2024, 9:48 AM IST | Last Updated Jul 29, 2024, 9:59 AM IST

ಬೆಂಗಳೂರು (ಜು.29): ಕೊರೋನಾ ಸಂಕಷ್ಟದ ನಂತರದ ವರ್ಷವಾದ 2022-23ರಲ್ಲಿ ಹಿಂದಿನ ವರ್ಷಕ್ಕಿಂತ ರಾಜ್ಯದ ಆಂತರಿಕ ಉತ್ಪನ್ನ ದರ ಶೇ.11.13 ಹಾಗೂ ರಾಜಸ್ವ ಸ್ವೀಕೃತಿಯಲ್ಲಿ ಶೇ. 17.19ರಷ್ಟು ಹೆಚ್ಚಳವಾಗಿದೆ ಎಂದು ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ವರದಿಯಲ್ಲಿ ತಿಳಿಸಲಾಗಿದೆ. ಆದರೂ, ರಾಜಸ್ವ ಮತ್ತು ಬಂಡವಾಳ ನಡುವಿನ ತಪ್ಪು ವರ್ಗೀಕರಣ ಹಾಗೂ ನಿಗದಿತ ಅನುದಾನಕ್ಕಿಂತ ಹೆಚ್ಚುವರಿ ವೆಚ್ಚವನ್ನು ಸಕ್ರಮಗೊಳಿಸದಿರುವ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಿ, ರಾಜ್ಯ ಸರ್ಕಾರ ಅದನ್ನು ಸರಿಪಡಿಸುವಂತೆ ಸಿಎಜಿ ಸೂಚಿಸಿದೆ.

ವರದಿ ಬಿಡುಗಡೆ ಮಾಡಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನ ಅಕೌಂಟೆಂಟ್‌ ಜನರಲ್‌ ಎಸ್‌. ಶಾಂತಿಪ್ರಿಯಾ, 2018-19ರಲ್ಲಿ 14.79 ಲಕ್ಷ ಕೋಟಿ ರು.ಗಳಷ್ಟಿದ್ದ ರಾಜ್ಯದ ಆಂತರಿಕ ಉತ್ಪನ್ನ ಪ್ರಮಾಣ 2022-23ರಲ್ಲಿ 21.81 ಲಕ್ಷ ಕೋಟಿ ರು.ಗೆ ಹೆಚ್ಚಾಗಿದೆ. ಇದನ್ನು ಗಮನಿಸಿದರೆ 5 ವರ್ಷಗಳಲ್ಲಿ ಶೇ.10.52ರಷ್ಟು ಹಾಗೂ 2021-22ಕ್ಕಿಂತ ಶೇ.11.13ರಷ್ಟು ಆಂತರಿಕ ಉತ್ಪನ್ನ ದರ ಬೆಳವಣಿಗೆ ಹೊಂದಿದೆ. ಹಾಗೆಯೇ, 2022-23ರಲ್ಲಿ 2.29 ಲಕ್ಷ ಕೋಟಿ ರು. ರಾಜಸ್ವ ಸ್ವೀಕೃತಿಯಾಗಿದ್ದು, ಹಿಂದಿನ ವರ್ಷಕ್ಕಿಂತ ಶೇ. 17.19ರಷ್ಟು ಹೆಚ್ಚಳವಾಗಿದೆ. ಅಲ್ಲದೆ, ಆಂತರಿಕ ಉತ್ಪನ್ನದ ಮೇಲಿನ ರಾಜಸ್ವ ಸ್ವೀಕೃತಿ 2021-22ಕ್ಕಿಂತ 2022-23ರಲ್ಲಿ ಶೇ. 10.50ರಷ್ಟು ಸುಧಾರಿಸಿದೆ ಎಂದು ವಿವರಿಸಿದರು.

ನೀತಿ ಆಯೋಗದ ಸಭೆಗೆ ಸಿಎಂ ಸಿದ್ದರಾಮಯ್ಯ ಹಾಜರಾಗದೇ ರಾಜ್ಯಕ್ಕೆ ಅನ್ಯಾಯ: ಸಂಸದ ಬೊಮ್ಮಾಯಿ

ರಾಜಸ್ವ ವೆಚ್ಚ, ಬಂಡವಾಳ ವೆಚ್ಚ ಹಾಗೂ ಸಾಲ-ಮುಂಗಡಗಳ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, 2021-22ರಲ್ಲಿ 2.61 ಲಕ್ಷ ಕೋಟಿ ರು.ಗಳಿದ್ದರೆ 2022-23ರಲ್ಲಿ 2.76 ಲಕ್ಷ ಕೋಟಿ ರು.ಗಳಷ್ಟು ವೆಚ್ಚ ಮಾಡಲಾಗಿತ್ತು. ಇದು ಹಿಂದಿನ ವರ್ಷಕ್ಕಿಂತ ಶೇ. 5.61ರಷ್ಟು ಹೆಚ್ಚಿನ ರಾಜ್ಯದ ಒಟ್ಟು ವೆಚ್ಚವಾಗಿದೆ. ಅಲ್ಲದೆ, ರಾಜಸ್ವ ವೆಚ್ಚಕ್ಕಿಂತ ರಾಜಸ್ವ ಸ್ವೀಕೃತಿಯಲ್ಲಿ ಹೆಚ್ಚಿನ ಬೆಳವಣಿಯಾಗಿದೆ. ಅದರಿಂದ 2021-22ರಲ್ಲಿನ ರಾಜಸ್ವ ಕೊರತೆಯನ್ನು ನೀಗಿಸಿ 2022-23ರಲ್ಲಿ 13,496 ಕೋಟಿ ರು. ಹೆಚ್ಚುವರಿ ರಾಜಸ್ವ ಹೊಂದುವಂತಾಗಿತ್ತು. ಅದರಿಂದಾಗಿ ವಿತ್ತೀಯ ಕೊರತೆ ಪ್ರಮಾಣ 66,036 ಕೋಟಿ ರು.ಗಳಿಂದ 46,623 ಕೋಟಿ ರು. ಇಳಿಯುವಂತಾಗಿತ್ತು ಎಂದು ಹೇಳಿದರು.

5 ವರ್ಷಗಳಲ್ಲಿ ಶೇ. 9.97ರಷ್ಟು ವಾರ್ಷಿಕ ಬೆಳವಣಿಗೆ2018-19ರಿಂದ 2022-23ರ ಅವಧಿಯಲ್ಲಿ ರಾಜ್ಯದ ಸರಾಸರಿ ವಾರ್ಷಿಕ ಬೆಳವಣಿಗೆ ದರ ಶೇ. 9.97ರಷ್ಟು ಹೆಚ್ಚಾಗಿದೆ. ಅದರಲ್ಲಿ ರಾಜಸ್ವ ಸ್ವೀಕೃತಿಗಳು 1.64 ಲಕ್ಷ ಕೋಟಿ ರು.ಗಳಿಂದ 2.29 ಲಕ್ಷ ಕೋಟಿ ರು.ಗೆ ಹೆಚ್ಚಳವಾಗಿದೆ. ಈ ಅವಧಿಯಲ್ಲಿ ಬಂಡವಾಳ ಸ್ವೀಕೃತಿ 42 ಸಾವಿರ ಕೋಟಿ ರು.ಗಳಿಂದ 45 ಸಾವಿರ ಕೋಟಿ ರು.ಗೆ ಹೆಚ್ಚಳವಾಗಿದೆ. ಅಲ್ಲದೆ, ತೆರಿಗೆ ರಾಜಸ್ವವು 2022-23ರಲ್ಲಿ ಹಿಂದಿನ ವರ್ಷಕ್ಕಿಂತ ಶೇ. 15.76ರಷ್ಟು ಹೆಚ್ಚಳವಾಗಿದೆ. 2021-22ರಲ್ಲಿ 1.54 ಲಕ್ಷ ಕೋಟಿ ರು.ಗಳಷ್ಟಿದ್ದ ತೆರಿಗೆ ರಾಜಸ್ವ, 2022-23ರಲ್ಲಿ 1.78 ಲಕ್ಷ ಕೋಟಿ ರು.ಗೆ ಹೆಚ್ಚಳವಾಗಿದೆ ಎಂದು ಶಾಂತಿಪ್ರಿಯಾ ವಿವರಿಸಿದರು.

ರಾಜಸ್ವ-ಬಂಡವಾಳ ತಪ್ಪು ವರ್ಗೀಕರಣ2022-23ನೇ ಸಾಲಿನಲ್ಲಿ ರಾಜಸ್ವ ವೆಚ್ಚ ಮತ್ತು ಬಂಡವಾಳ ವೆಚ್ಚವನ್ನು ತಪ್ಪು ವರ್ಗೀಕರಿಸಲಾಗಿದೆ. ಅದರಂತೆ 51.10 ಕೋಟಿ ರು. ರಾಜಸ್ವ ವೆಚ್ಚವನ್ನು ಬಂಡವಾಳ ವೆಚ್ಚವನ್ನಾಗಿ ಹಾಗೂ 75 ಲಕ್ಷ ರು. ಬಂಡವಾಳ ವೆಚ್ಚವನ್ನು ರಾಜಸ್ವ ವೆಚ್ಚವನ್ನಾಗಿ ವರ್ಗೀಕರಿಸಲಾಗಿದೆ. ಅದರ ಪರಿಣಾಮ ರಾಜಸ್ವ ವೆಚ್ಚ 50.35 ಕೋಟಿ ರು. ಕಡಿಮೆಯಾಗಿದೆ ಎಂದು ಲೆಕ್ಕಪರಿಶೋಧನಾ ವರದಿಯಲ್ಲಿ ತಿಳಿಸಲಾಗಿದೆ.5.53 ಲಕ್ಷ ಕೋಟಿ ರು. ಹೊಣೆಗಾರಿಕೆ2022-23ರಲ್ಲಿ ಕೊರೋನಾ ಅವಧಿ ನಂತರದಲ್ಲಿ ಸಾಲ ಪ್ರಮಾಣ ಕಡಿಮೆಯಾದ ವರ್ಷವಾಗಿದೆ. 

2022-23ರ ವೇಳೆಗೆ ರಾಜ್ಯ ಸರ್ಕಾರವು 5.53 ಲಕ್ಷ ಕೋಟಿ ರು. ವಿತ್ತೀಯ ಹೊಣೆಗಾರಿಕೆಯನ್ನು ಹೊಂದಿತ್ತು. ಅದರಲ್ಲಿ ಸಾರ್ವಜನಿಕ ಲೆಕ್ಕ ಹೊಣೆಗಾರಿಕೆ 1.33 ಲಕ್ಷ ಕೋಟಿ ರು.ಗಳಷ್ಟಿದ್ದರೆ, ಆಂತರಿಕ ಹೊಣೆಗಾರಿಕೆ 3.53 ಲಕ್ಷ ಕೋಟಿ ರು.ಗಳಾಗಿದೆ. ಉಳಿದಂದೆ ಭಾರತ ಸರ್ಕಾರದ ಸಾಲ 49 ಸಾವಿರ ಕೋಟಿ ರು. ಹಾಗೂ ಆಯವ್ಯಯೇತರ ಸಾಲ 17 ಸಾವಿರ ಕೋಟಿ ರು.ಗಳಾಗಿದೆ. ಅಲ್ಲದೆ, 2022-23ರಲ್ಲಿ ಕೇವಲ 44 ಸಾವಿರ ಕೋಟಿ ರು. ಸಾಲ ಪಡೆದಿತ್ತು. ಆಯವ್ಯಯ ಲೋಪ ತಪ್ಪಿಸಲು ಸಂಚಿತ ನಿಧಿ ವರ್ಗಾವಣೆಇಲಾಖೆಗಳ ವೈಯಕ್ತಿಕ ಠೇವಣಿ ಖಾತೆಗಳಲ್ಲಿನ ಮೊತ್ತ ಎರಡು ವರ್ಷಗಳಲ್ಲಿ ಭಾರೀ ಏರಿಕೆಯಾಗಿದೆ. 2020-21ರಲ್ಲಿ 3,989 ಕೋಟಿ ರು.ಗಳಷ್ಟಿದ್ದ ಠೇವಣಿ ಮೊತ್ತ 2022-23ರಲ್ಲಿ 29,510 ಕೋಟಿ ರು.ಗೆ ಹೆಚ್ಚಳವಾಗಿದೆ. ಅಲ್ಲದೆ, 542.64 ಕೋಟಿ ರು. ಠೇವಣಿಯಿದ್ದ 29 ನಿಷ್ಕ್ರಿಯ ಖಾತೆಗಳನ್ನು ಸರ್ಕಾರ ಮುಕ್ತಾಯಗೊಳಿಸಿರಲಿಲ್ಲ. 

5,963 ಕೋಟಿ ರು. ಋಣಾತ್ಮಕ ಮೊತ್ತವಿದ್ದ 12 ವೈಯಕ್ತಿಕ ಖಾತೆಗಳು ಲೆಕ್ಕಪರಿಶೋಧನೆ ವೇಳೆ ಪತ್ತೆಯಾಗಿದೆ. ಅಲ್ಲದೆ, ಆಯವ್ಯಯ ಲೋಪ ತಪ್ಪಿಸಲು 2018-19ರಿಂದ 2022-23ರ ಅವಧಿಯಲ್ಲಿ 8,801 ಕೋಟಿ ರು. ಸಂಚಿತ ನಿಧಿಯನ್ನು ವೈಯಕ್ತಿಕ ಠೇವಣಿ ಖಾತೆಗೆ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ.ಇದರ ಜತೆಗೆ ಆಯವ್ಯಯ ನಿರ್ವಹಣೆಯಲ್ಲೂ ಸಾಕಷ್ಟು ಲೋಪಗಳು ಕಂಡು ಬಂದಿದ್ದು, ಶಾಸಕಾಂಗದ ಅನುಮೋದನೆ ಇಲ್ಲದೆ 147 ಕಾರ್ಯನಿರ್ವಾಹಕ ಆದೇಶಗಳ ಮೂಲಕ 10,948 ಕೋಟಿ ರು. ಸೆಳೆಯಲಾಗಿತ್ತು. ನಂತರ ಪೂರಕ ಬೇಡಿಕೆಗಳ ಮೂಲಕ ಅದನ್ನು ಸಕ್ರಮಗೊಳಿಸಲಾಯಿತು. ಜತೆಗೆ 2020-21ನೇ ಅವಧಿಯ 415.90 ಕೋಟಿ ರು. 2022-23ನೇ ಸಾಲಿನಲ್ಲಿ 1,907.83 ಕೋಟಿ ರು. ಹೆಚ್ಚುವರಿ ವೆಚ್ಚಗಳನ್ನು ಸರ್ಕಾರ ಸಕ್ರಮಗೊಳಿಸಿಕೊಂಡಿಲ್ಲ. ಅದನ್ನು ಶೀಘ್ರದಲ್ಲಿ ಮಾಡುವಂತೆ ಸಲಹೆ ನೀಡಲಾಗಿದೆ.

ತೆರಿಗೆ ವಂಚನೆ ಪ್ರಕರಣಗಳ ಬಗ್ಗೆ ನಿರ್ಲಕ್ಷ್ಯ2023ರ ಮಾರ್ಚ್‌ 31ರ ಅಂತ್ಯಕ್ಕೆ 19,826 ತೆರಿಗೆ ವಂಚನೆ ಪ್ರಕರಣಗಳು ಪತ್ತೆ ಮಾಡಲಾಗಿತ್ತು. ಆದರೆ, ಅದರಲ್ಲಿ 9,530 ಪ್ರಕರಣಗಳನ್ನು ಮಾತ್ರ ಇತ್ಯರ್ಥಗೊಳಿಸಿ 1,320.18 ಕೋಟಿ ರು. ದಂಡ ವಸೂಲಿ ಮಾಡಲಷ್ಟೇ ಸರ್ಕಾರ ಶಕ್ತವಾಗಿದೆ. ಸಹಾಯಧನಗಳ ಹೆಚ್ಚಳಬದ್ಧವಲ್ಲದ ವೆಚ್ಚದಲ್ಲಿ ಸಹಾಯಧನಗಳ ಪ್ರಮಾಣ ಹೆಚ್ಚುತ್ತಿರುವುದನ್ನು ಲೆಕ್ಕಪರಿಶೋಧನಾ ವರದಿಯಲ್ಲಿ ಕಂಡು ಹಿಡಿಯಲಾಗಿದೆ. 2018-19ರಲ್ಲಿ 15,400 ಕೋಟಿ ರು.ಗಳಿಷ್ಟ ಸಹಾಯಧನದ ಪ್ರಮಾಣ 2022-23ರಲ್ಲಿ 22,754 ಕೋಟಿ ರು.ಗೆ ಹೆಚ್ಚಳವಾಗಿದೆ. ಅದರಂತೆ ರಾಜಸ್ವ ವೆಚ್ಚದಲ್ಲಿ ಶೇ. 10.55ರಷ್ಟು ಸಹಾಯಧನದ ಪಾಲಾಗಿದೆ. ಅದರಲ್ಲಿ ವಿದ್ಯುತ್‌ ಸಹಾಯಧನವೇ ಶೇ. 49ರಿಂದ 52ರಷ್ಟಿದೆ.

ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ವಿರೋಧ ಎಡಬಿಡಂಗಿತನದ್ದು: ಡಿ.ಕೆ.ಶಿವಕುಮಾರ್

ಅಪೂರ್ಣ ಯೋಜನೆಗಳ ಪ್ರಮಾಣ ಏರಿಕೆವರ್ಷದಿಂದ ವರ್ಷಕ್ಕೆ ಅಪೂರ್ಣ ಯೋಜನೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. 2021-22ರಲ್ಲಿ 1 ಕೋಟಿ ರು.ಗೂ ಹೆಚ್ಚಿನ ಮೊತ್ತದ 1,208 ಯೋಜನೆಗಳ ಕಾಮಗಾರಿ ಚಾಲನೆಗೊಂಡು ಅಪೂರ್ಣಗೊಂಡಿದ್ದವು. ಅದೇ 2022-23ರಲ್ಲಿ ಆ ಸಂಖ್ಯೆ 1,864ಕ್ಕೆ ಏರಿಕೆಯಾಗಿದೆ. 40 ಉದ್ಯಮಗಳ ಮೌಲ್ಯ ಶೂನ್ಯರಾಜ್ಯದಲ್ಲಿನ ಆರು ಶಾಸನಬದ್ಧ ನಿಗಮಗಳು ಸೇರಿದಂತೆ 127 ಸಾರ್ವಜನಿಕ ವಲಯ ಉದ್ಯಮಗಳಿದ್ದು, ಅವುಗಳು 1.12 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆ ಹಾಗೂ ಸರ್ಕಾರದಿಂದ 12,684 ಕೋಟಿ ರು. ದೀರ್ಘಾವಧಿ ಸಾಲ ಹೊಂದಿದ್ದವು. ಆ ಸಾರ್ವಜನಿಕ ವಲಯ ಉದ್ಯಮಗಳಲ್ಲಿ 60 ಉದ್ಯಮಗಳು ನಷ್ಟದಲ್ಲಿದ್ದು, ಅದರಲ್ಲೂ 40 ಉದ್ಯಮಗಳು ನಿವ್ವಳ ಮೌಲ್ಯ ಶೂನ್ಯವನ್ನು ಹೊಂದಿವೆ. ಅಲ್ಲದೆ, 96 ಸರ್ಕಾರಿ ಸಂಸ್ಥೆಗಳು 233 ಲೆಕ್ಕಗಳ ಬಾಕಿಯನ್ನು ಈವರೆಗೆ ಲೆಕ್ಕಪರಿಶೋಧನೆಗೆ ಸಲ್ಲಿಸಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

Latest Videos
Follow Us:
Download App:
  • android
  • ios