ಸತತ 3ನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ, ಇಂದಿನ ಬೆಲೆ ಏಷ್ಟು?
- ಕೇಂದ್ರದ ವಿರುದ್ಧ ಜನರ ಹಿಡಿ ಶಾಪ, ಮತ್ತೆ ತೈಲ ಬೆಲೆ ಏರಿಕೆ
- ಸತತ 3ನೇ ದಿನ ಮತ್ತೆ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ
- ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 110.61 ರೂಪಾಯಿ
ದೆಹಲಿ(ಅ.22): ಪೆಟ್ರೋಲ್ ಡೀಸೆಲ್ ಬೆಲೆ ದಿನದಿಂದ ದಿನಕ್ಕ ಏರಿಕೆಯಾಗುತ್ತಲೇ ಇದೆ. ಇದರಿಂದ ಕೇಂದ್ರದ ಬಿಜೆಪಿ ಸರ್ಕಾರದ ಮೇಲೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ. ಇದೀಗ ಸತತ 3ನೇ ದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿಚಾರ ಯುಪಿಎ ಸರ್ಕಾರದವನ್ನು ಟೀಕಿಸಿ ಅಧಿಕಾರಕ್ಕೇರಿದ್ದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇದೀಗ ಬೆಲೆ ನಿಯಂತ್ರಿಸಲಾಗದೇ, ಅಂತಾರಾಷ್ಟ್ರೀಯ ಮಾರುಕಟ್ಟೆ ಕಡೆ ಕೈತೋರಿಸುತ್ತಿದೆ.
2014ರಷ್ಟೇ ತೆರಿಗೆ ಇದ್ದರೆ ಪೆಟ್ರೋಲ್ 66 ರೂ, ಡೀಸೆಲ್ 55 ರೂ. ಇರುತ್ತಿತ್ತು!
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಇಂದು(ಅ.22) 36 ಪೈಸೆ ಎರಿಕೆಯಾಗಿದ್ದರೆ, ಡೀಸೆಲ್ ಬೆಲೆ 37 ಪೈಸೆ ಎರಿಕೆಯಾಗಿದೆ. ಇದರೊಂದಿಗೆ ಬೆಂಗಳೂರಿಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 110.61 ರೂಪಾಯಿ ಆಗಿದೆ. ಇತ್ತ ಡೀಸೆಲ್ ಬೆಲೆ 101.49 ಪೈಸೆ ಆಗಿದೆ. ಕರ್ನಾಟಕದ ಎಲ್ಲಾ ಕಡೆ ಪೆಟ್ರೋಲ್ ಹಾಗೂ ಹಾಗೂ ಡೀಲೆಲ್ ಶಕಕ ದಾಟಿ ಇದೀಗ ದ್ವಿಶತಕದತ್ತ ಮುನ್ನಗ್ಗುತ್ತಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಇಂದು 106.89 ರೂಪಾಯಿ ಆಗಿದ್ದು, ಡೀಸೆಲ್ ಬೆಲೆ 95.62 ರೂಪಾಯಿ ಆಗಿದೆ. ಶೀಘ್ರದಲ್ಲೇ ದೆಹಲಿಯಲ್ಲಿ ಡೀಸೆಲ್ ಬೆಲೆ ಕೂಡ ಶತಕ ಬಾರಿಸಲಿದೆ. ದೇಶದಲ್ಲಿ ಪೆಟ್ರೋಲ್ ಅತ್ಯಂತ ದುಬಾರಿ ಆಗಿರುವ ನಗರಗಳಲ್ಲಿ ಜೈಪುರಕ್ಕೆ ಮೊದಲ ಸ್ಥಾನ, ಮುಂಬೈ ಮಹಾನಗರಕ್ಕೆ ಎರಡನೇ ಸ್ಥಾನ.
ವಿಮಾನ ಇಂಧನಕ್ಕಿಂತ ಪೆಟ್ರೋಲ್ ಬೆಲೆ ದುಬಾರಿ!
ಜೈಪುರದಲ್ಲಿ ಪೆಟ್ರೋಲ್ ಬೆಲೆ 114.11 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 105.34 ರೂಪಾಯಿ ಆಗಿದೆ. ಇನ್ನು ಮುಂಬೈನಲ್ಲಿ ಪೆಟ್ರೋಲ್ ಬೆಲೆ 112.78 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 103.63 ರೂಪಾಯಿ ಆಗಿದೆ. ಈಗಾಗಲೇ ಎಲ್ಲಾ ದಾಖಲೆಗಳನ್ನು ಮುರಿದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಪ್ರತಿಭಟನೆ, ಟೀಕೆಗಳು ವ್ಯಕ್ತವಾದರೂ ಬೆಲೆ ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನದ ಸರಾಸರಿ ಬೆಲೆ ಹಾಗೂ ವಿದೇಶಿ ವಿನಿಮಯ ದರಗಳ ಆಧಾರದ ಮೇಲೆ OMC ಪ್ರತಿ ದಿನ ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಪರಿಷ್ಕರಿಸುತ್ತದೆ. ಇದರಿಂದ ಪ್ರತಿ ದಿನ ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಇತ್ತ ಕೇಂದ್ರ ಹಾಗೂ ರಾಜ್ಯ ಸರ್ಕಾರದ ತೆರಿಗೆ ಜನರನ್ನು ಮತ್ತಷ್ಟು ಹೈರಾಣಾಗಿಸಿದೆ.
ಇಂಧನ ಖರೀದಿಗೆ ಭಾರತದಿಂದ 500 ಮಿಲಿಯನ್ ಡಾಲರ್ ಸಾಲ ಕೇಳಿದ ಶ್ರೀಲಂಕಾ!
ಕೇಂದ್ರದ ವಿರುದ್ಧ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಸತತ ಹೋರಾಟ, ಪ್ರತಿಭಟನೆ ಮಾಡುತ್ತಿದೆ. ಬಿಜೆಪಿ ಸರ್ಕಾರದ ಆಡಳಿತ ಅಂತ್ಯಗೊಳಿಸಲು ಇಂಧನ ಬೆಲೆ ಏರಿಕೆಯನ್ನೇ ಅಸ್ತ್ರವಾಗಿ ಬಳಸಿಕೊಂಡಿದೆ. ಆದರೆ ಕೇಂದ್ರ ಸರ್ಕಾರ ಏನೂ ಮಾಡಲಾಗದೇ ಕೈಕಟ್ಟಿ ಕುಳಿತಿದೆ.
ಕರ್ನಾಟಕದಲ್ಲೂ ಕಾಂಗ್ರೆಸ್ ಎತ್ತಿನ ಗಾಡಿ, ಸೈಕಲ್ ಜಾಥಾ ಸೇರಿದಂತೆ ಹಲವು ರೂಪದಲ್ಲಿ ಪ್ರತಿಭಟನೆ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದೆ. ಆದರೆ ಬೆಲೆ ಇಳಿಕೆ ಬದಲು ಪ್ರತಿ ದಿನ ಏರಿಕೆಯಾಗುತ್ತಲೇ ಇದೆ. ಇತ್ತ ಎಲ್ಲಾ ಅಗತ್ಯವಸ್ತುಗಳ ಬೆಲೆ ಕೂಡ ಏರಿಕೆಯಾಗಿದೆ. ಇದರಿಂದ ಜನರು ಬದುಕು ದುಸ್ತರವಾಗಿದೆ.