ಎಲ್ರೂ ಮದ್ವೆ ಆಗ್ತಿದ್ದಾರೆ: ಕೇಳ್ರಿ ಅಂಗಡಿ ಸಾಹೇಬ್ರು ಹೇಳ್ತಿದ್ದಾರೆ!
'ದೇಶದಲ್ಲಿ ಎಲ್ಲರೂ ಮದುವೆಯಾಗುತ್ತಿದ್ದಾರೆ, ಎಲ್ಲವೂ ಸುಭಿಕ್ಷವಾಗಿದೆ'| 'ದೇಶದ ರೈಲು ನಿಲ್ದಾಣ, ವಿಮಾನ ನಿಲ್ದಾಣಗಳು ಭರ್ತಿಯಾಗಿವೆ'| ದೇಶದ ಆರ್ಥಿಕ ಸ್ಥಿತಿ ಚೆನ್ನಾಗಿದೆ ಎಂದ ಕೇಂದ್ರ ಸಚಿವ ಸುರೇಶ್ ಅಂಗಡಿ| ಆರ್ಥಿಕ ಕುಸಿತದ ಆರೋಪ ವಿಪಕ್ಷಗಳ ಹುನ್ನಾರ ಎಂದ ಬೆಳಗಾವಿ ಸಂಸದ| 'ಮೂರು ವರ್ಷಗಳಿಗೊಮ್ಮೆ ದೇಶದಲ್ಲಿ ಬೇಡಿಕೆ ಕುಸಿಯುವುದು ಸಾಮಾನ್ಯ ಸಂಗತಿ'| ಸಂಸದ ಸುರೇಶ್ ಅಂಗಡಿ ಬೇಜವಾಬ್ದಾರಿ ಹೇಳಿಕೆಗೆ ವಿಪಕ್ಷ ಕಿಡಿ|
ನವದೆಹಲಿ(ನ.15): ಭಾರತದ ಆರ್ಥಿಕ ಕುಸಿತದ ಕುರಿತು ಇಡೀ ವಿಶ್ವವೇ ತಲೆ ಕೆಡಿಸಿಕೊಂಡಿದೆ. ಉತ್ಪಾದನಾ ಕ್ಷೇತ್ರದ ಚಟುವಟಿಕೆ ಕುಂಠಿತಗೊಂಡ ಪರಿಣಾಮ ಜಿಡಿಪಿ ಬೆಳವಣಿಗೆ ಹಿಮ್ಮುಖವಾಗಿ ಸಾಗುತ್ತಿರುವುದು ಮೋದಿ ಸರ್ಕಾರದ ನಿದ್ದೆಗೆಡೆಸಿದೆ.
ಮೋದಿ ಊರಲ್ಲಿಲ್ಲ: ಸರ್ಕಾರ ಈ ಆಘಾತ ಖಂಡಿತ ನಿರೀಕ್ಷಿಸಿರಲಿಲ್ಲ!
ಆದರೆ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ, ಬೆಳಗಾವಿ ಸಂಸದ ಸುರೇಶ್ ಅಂಗಡಿ ಅವರ ಪ್ರಕಾರ ಭಾರತದ ಆರ್ಥಿಕತೆ ಸದೃಢವಾಗಿದ್ದು, ಇದಕ್ಕೆ ಅವರು ಕೊಡುವ ಕಾರಣ ಕೂಡ ಅಷ್ಟೇ ಮಜೇದಾರ್ ಆಗಿದೆ.
ಭಾರತದಲ್ಲಿ ಎಲ್ಲರೂ ಮದುವೆಯಾಗುತ್ತಿದ್ದು, ರೈಲುಗಳು ನಿತ್ಯ ಭರ್ತಿಯಾಗಿ ಓಡುತ್ತಿವೆ. ಅಲ್ಲದೇ ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲೂ ಜನಜಂಗುಳಿ ಇದ್ದು, ಇದು ಆರ್ಥಿಕ ಸಬಲತೆಯನ್ನು ತೋರಿಸುತ್ತದೆ ಎಂದು ಸುರೇಶ್ ಅಂಗಡಿ ಹೇಳಿದ್ದಾರೆ.
ಕಾಣದಾಗಿದೆ ಪರಿಹಾರ: ಗುರಿ ಕಡಿತಗೊಳಿಸಿದ ಮೋದಿ ಸರ್ಕಾರ!
ಪ್ರತಿ ಮೂರು ವರ್ಷಗಳಿಗೊಮ್ಮೆ ದೇಶದಲ್ಲಿ ಬೇಡಿಕೆ ಕುಸಿಯುವುದು ಸಾಮಾನ್ಯ ಸಂಗತಿ ಎಂದಿರುವ ಸುರೇಶ್ ಅಂಗಡಿ, ಪ್ರಧಾನಿ ಮೋದಿ ಹೆಸರಿಗೆ ಮಸಿ ಬಳಿಯಲು ಆರ್ಥಿಕ ಕುಸಿತದ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಇನ್ನು ಸುರೇಶ್ ಅಂಗಡಿ ಹೇಳಿಕೆಗೆ ವ್ಯಂಗ್ಯವಾಡಿರುವ ವಿಪಕ್ಷಗಳು, ರೈಲು ನಿಲ್ದಾಣಗಳು ಭರ್ತಿಯಾಗಿರುವುದು ಕೆಲಸ ಕಳೆದುಕೊಂಡಿರುವ ಜನ ಮರಳಿ ಮನೆಗೆ ತೆರಳುತ್ತಿರುವ ಕಾರಣದಿಂದ ಎಂದು ಹರಿಹಾಯ್ದಿವೆ.
ಅಲ್ಲದೇ ಸುರೇಶ್ ಅಂಗಡಿ ಹೇಳಿಕೆಗೆ ನೆಟ್ಟಿಗರು ಕೂಡ ಆಕ್ರೋಶ ಹೊರಹಾಕಿದ್ದು, ಆರ್ಥಿಕ ಕುಸಿತಕ್ಕೆ ಮದುವೆಯೂ ಪ್ರಮುಖ ಕಾರಣವಲ್ಲವೇ ಎಂದು ವ್ಯಂಗ್ಯವಾಡಿದ್ದಾರೆ.
ಕಹಿ ಸತ್ಯ ಕೇಳುವ ಮನೋಭಾವ ಇರಲಿ: ಸ್ವಾಮಿ ಹೇಳಿಕೆಗೆ ಮೋದಿ ತಲೆ ಕೆದರಿಕೊಳ್ಳದಿರಲಿ!