ದೇಶದಲ್ಲಿಯೇ ಅತಿ ದೊಡ್ಡ ಗಣಪನಲ್ಲಿ ಒಂದೆನಿಸಿರುವ ಮುಂಬೈನ ಲಾಲ್ಬೌಚಾ ರಾಜಾನಿಗೆ ಈ ಬಾರಿ ಅನಂತ್​ ಅಂಬಾನಿ 20 ಕೆ.ಜಿ ಚಿನ್ನದ ಕಿರೀಟ ಕೊಟ್ಟಿದ್ದರು. ಗಣಪನ ವಿಸರ್ಜನೆ ಮಾಡಲಾಗಿದ್ದು, ವಿಡಿಯೋ ವೈರಲ್​ ಆಗಿದೆ. ಈ ಬಾರಿಯ ವಿಶೇಷತೆ ಏನು?  

ದೇಶದ ಅತ್ಯಂತ ದೊಡ್ಡ ಗಣಪನಲ್ಲಿ ಒಂದೆನಿಸಿರುವುದು ಮುಂಬೈನ ಲಾಲ್ಬೌಚಾ ರಾಜಾ. ಇದರ ವೀಕ್ಷಣೆಗೆ ದೇಶದ ಮೂಲೆಮೂಲೆಗಳಿಂದ ಮಾತ್ರವಲ್ಲದೇ ವಿದೇಶಗಳಿಂದಲೂ ಪ್ರತಿವರ್ಷ ಜನರು ಆಗಮಿಸುವುದು ಇದೆ. ನಿನ್ನೆ ಈ ಗಣೇಶನ ವಿಸರ್ಜನೆ ಕಾರ್ಯ ನಡೆದಿದೆ. ಪ್ರತಿವರ್ಷವೂ ಒಂದೊಂದು ಥೀಮ್​ನೊಂದಿಗೆ ಈ ಗಣಪನ ಶೃಂಗಾರ ಮಾಡಲಾಗುತ್ತದೆ. ಈ ಬಾರಿ ಅಯೋಧ್ಯೆಯ ರಾಮ ಮಂದಿರದಿಂದ ಪ್ರೇರಿತವಾಗಿ ಅಲಂಕಾರ ಮಾಡಲಾಗಿತ್ತು. ದೇವಾಲಯದ ಗುಮ್ಮಟದ ಪ್ರತಿಕೃತಿ ಮತ್ತು ಭಗವಾನ್ ರಾಮನ ವಿಗ್ರಹವನ್ನು ಇದು ಒಳಗೊಂಡಿತ್ತು. ಕುತೂಹಲದ ವಿಷಯ ಏನೆಂದರೆ, ಈ ವಿಗ್ರಹಕ್ಕೆ ನ್ಯೂ ಇಂಡಿಯಾ ಇನ್ಶೂರೆನ್ಸ್‌ನಿಂದ 32.76 ಕೋಟಿ ರೂಪಾಯಿ ವಿಮೆ ಮಾಡಿಸಲಾಗಿತ್ತು. ಇದು ಸೆಟ್, ಆಸ್ತಿ, ಚಿನ್ನದ ಆಭರಣಗಳು, ಮಂಡಲ ಕೆಲಸಗಾರರು ಮತ್ತು ಇತರ ಆಭರಣಗಳನ್ನು ಒಳಗೊಂಡಿತ್ತು. ಇಲ್ಲಿಗೆ ಆಗಮಿಸಲು ಆಗದಿದ್ದ ಭಕ್ತವೃಂದದ ವೀಕ್ಷಣೆಗಾಗಿ ಆನ್‌ಲೈನ್ ದರ್ಶನ ಕೂಡ ಏರ್ಪಡಿಸಲಾಗಿತ್ತು. ಭಕ್ತರು ತಮ್ಮ ಮನೆಗಳಿಗೆ ಪ್ರಸಾದವನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ ಅನುಕೂಲ ಕಲ್ಪಿಸಲಾಗಿತ್ತು.

ಇವೆಲ್ಲವುಗಳಿಗಿಂತಲೂ ವಿಶೇಷ ಎಂದರೆ, ಈ ಬಾರಿ ಮದುಮಗ ಅನಂತ್ ಅಂಬಾನಿ 15 ಕೋಟಿ ಮೌಲ್ಯದ 20 ಕೆಜಿ ಚಿನ್ನದ ಕಿರೀಟವನ್ನು ಲಾಲ್ಬೌಚಾ ರಾಜಾಗೆ ಉಡುಗೊರೆಯಾಗಿ ನೀಡಿದ್ದರು. ಮೆರೂನ್ ಬಣ್ಣದ ವಸ್ತ್ರದಿಂದ ಅಲಂಕೃತನಾಗಿ ಆಭರಣಗಳಿಂದ ಕಂಗೊಳಿಸುತ್ತಿದ್ದ ಗಣಪನಿಗೆ ವಿಶೇಷವಾಗಿ ಈ ಕಿರೀಟ ಮೆರುಗು ನೀಡಿತ್ತು. ಅನಂತ್ ಅಂಬಾನಿಯವರು, ಕಳೆದ 15 ವರ್ಷಗಳಿಂದ ಲಾಲ್ಬೌಚಾ ರಾಜಾ ಸಮಿತಿಯೊಂದಿಗೆ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ದಾನ ಧರ್ಮ ಮಾಡುತ್ತಲೇ ಇರುತ್ತಾರೆ. ಅಷ್ಟೇ ಅಲ್ಲದೇ 2020-21ರ ಕೋವಿಡ್ ಸಮಯದಲ್ಲಿ ಈ ಗಣೇಶೋತ್ಸನ ಸಮಿತಿಯು ಹಣಕಾಸಿನ ಸಮಸ್ಯೆಗೆ ಒಳಗಾಗಿದ್ದ ಸಂದರ್ಭದಲ್ಲಿಯೂ ಅವರು ನೆರವಾಗಿದ್ದದರು. ಈ ಸಮಿತಿಯ ಜೊತೆ ಸೇರಿ ಅಂಬಾನಿ ತಮ್ಮ ರಿಲಯನ್ಸ್ ಫೌಂಡೇಶನ್ ಜೊತೆಗೆ 24 ಡಯಾಲಿಸಿಸ್ ಯಂತ್ರವನ್ನು ಸಹಾಯ ನಿಧಿಗಾಗಿ ದಾನ ಮಾಡಿದ್ದರು. ಅನಂತ್ ಅಂಬಾನಿ ಅವರು ಈ ಸಮಿತಿಯ ಕಾರ್ಯಕಾರಿ ಸಲಹೆಗಾರರೂ ಆಗಿದ್ದಾರೆ.

ಗ್ರಾಹಕರನ್ನು ಸೆಳೆಯಲು ಮತ್ತೆ ಭರ್ಜರಿ ಆಫರ್​ ನೀಡಿದ ಜಿಯೋ! 91 ರೂ.ಗಳಿಂದ ಶುರುವಾಗ್ತಿದೆ ಬಂಪರ್​ ಯೋಜನೆ

View post on Instagram


ಮಹಾರಾಷ್ಟ್ರದ ಗಣಪನ ವಿಶೇಷ ಎಂದರೆ, ಎಲ್ಲಾ ಗಣಪನನ್ನು ಒಟ್ಟಿಗೇ ವಿಸರ್ಜನೆ ಮಾಡಲಾಗುತ್ತದೆ. 11ನೇ ದಿನ ಮುಂಬೈನ ಪ್ರಮುಖ ಬೀದಿಯಲ್ಲಿ ಗಣೇಶನ ಮೆರವಣಿಗೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಭಾಗಿಯಾಗಿದ್ದರು. ವಿಸರ್ಜನೆಯ ವೇಳೆಯೂ ಅವರು ಗಣಪನ ಸಮೀಪದಲ್ಲಿಯೇ ಇದ್ದರು. ವಿಸರ್ಜನೆಯ ಕೊನೆಯ ಕ್ಷಣದ ವಿಡಿಯೋ ವೈರಲ್​ ಆಗಿದೆ. ಈ ಸಂದರ್ಭದಲ್ಲಿ ಅನಂತ್​ ಅಂಬಾನಿ ನೀಡಿದ್ದ ಚಿನ್ನದ ಕಿರೀಟವನ್ನು ತೆಗೆದು ಇರಿಸಿ ನಂತರ ಗಣಪನನ್ನು ವಿಸರ್ಜನೆ ಮಾಡಲಾಗಿದೆ. ಇದರ ವಿಡಿಯೋ ನೋಡಿ ಭಕ್ತರು ಕಣ್ತುಂಬಿಸಿಕೊಂಡಿದ್ದಾರೆ. ವಿಸರ್ಜನೆಯನ್ನು ಸೋಷಿಯಲ್​ ಮೀಡಿಯಾದಲ್ಲಿ ನೋಡಿ ಕುಳಿತಲ್ಲಿನಿಂದಲೇ ಭಕ್ತಾದಿಗಳು ಆಶೀರ್ವಾದವನ್ನೂ ಪಡೆದುಕೊಂಡಿದ್ದಾರೆ. 


ಅಂದಹಾಗೆ ಲಾಲ್ಬೌಚಾ ರಾಜಾ 12 ಅಡಿ ಎತ್ತರವಿದ್ದು, ಮರೂನ್​ ಬಟ್ಟೆಗಳಿಂದ ಕಂಗೊಳಿಸುತ್ತಿದ್ದ. ಬಾಲಿವುಡ್​ ಸೆಲೆಬ್ರಿಟಿಗಳಿಂದ ಹಿಡಿದ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳೂ, ದೇಶ-ವಿದೇಶಗಳ ಗಣ್ಯರೂ ಈ ಗಣಪನನ್ನು ಕಣ್ತುಂಬಿಸಿಕೊಳ್ಳಲು ಪ್ರತಿವರ್ಷ ಬರುತ್ತಾರೆ. ಸೆಲೆಬ್ರಿಟಿಗಳು ಬಂದಾಗ ಸಹಜವಾಗಿಯೇ ಕಾಲ್ತುಳಿತ ಆಗುವುದು ಇದೆ. ಇವೆಲ್ಲವನ್ನೂ ಪ್ರತಿವರ್ಷವೂ ಯಾವುದೇ ಅನನುಕೂಲ ಆಗದಂತೆ ಮುಂಬೈ ಪೊಲೀಸರು ನಿಭಾಯಿಸುತ್ತಿದ್ದಾರೆ. ಈ ಮೂಲಕ ಶ್ಲಾಘನೆಗೆ ಪಾತ್ರರಾಗುತ್ತಿದ್ದಾರೆ. ಸೆಪ್ಟೆಂಬರ್​ 7ರಂದು ಒಂದೇ ದಿನ ಲಾಲ್ಬೌಚಾ ರಾಜಾನಿಗೆ 40.30 ಲಕ್ಷ ರೂಪಾಯಿಗಳ ದೇಣಿಗೆ ಹರಿದು ಬಂದಿರುವುದು ವಿಶೇಷ. 

ಬಿಗ್​ಬಾಸ್​ಗೆ ಕ್ಷಣಗಣನೆ: ಇವರೇ ನೋಡಿ ದೊಡ್ಮನೆ ಹೋಗ್ತಿರೋ ಸಂಭಾವ್ಯ ಸ್ಪರ್ಧಿಗಳು- ನಿಮ್ಮ ನೆಚ್ಚಿನ ಸ್ಟಾರ್ ಯಾರು?

View post on Instagram