11,432 ಕೋಟಿ ರು. ಜಿಎಸ್‌ಟಿ ಮೊತ್ತವನ್ನು ಈ ತಿಂಗಳ ಅಂತ್ಯದೊಳಗೆ ಬಿಡುಗಡೆಗೊಳಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.

ಬೆಂಗಳೂರು (ಅ.13): ರಾಜ್ಯಕ್ಕೆ ಜೂನ್‌ ತಿಂಗಳಿನಿಂದ ಆಗಸ್ಟ್‌ ತಿಂಗಳವರೆಗಿನ ಬಾಕಿ ಇರುವ 11,432 ಕೋಟಿ ರು. ಜಿಎಸ್‌ಟಿ ಮೊತ್ತವನ್ನು ಈ ತಿಂಗಳ ಅಂತ್ಯದೊಳಗೆ ಬಿಡುಗಡೆಗೊಳಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೋಮವಾರ ನಡೆದ ಜಿಎಸ್‌ಟಿ ಸಭೆಯಲ್ಲಿ ರಾಜ್ಯವು ತನ್ನ ಯೋಜನಾ ಮತ್ತು ಯೋಜನೇತರ ವೆಚ್ಚಗಳಲ್ಲಿ ಹಣ ತೊಡಗಿಸಲು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಹೀಗಾಗಿ ಅವಶ್ಯಕವಾಗಿರುವ ನಷ್ಟಪರಿಹಾರ ಮೊತ್ತದ ಬಿಡುಗಡೆಗೆ ಒತ್ತು ನೀಡಬೇಕು. ರಾಜ್ಯಕ್ಕೆ 1776 ಕೋಟಿ ರು. ನಷ್ಟಪರಿಹಾರಕ್ಕಾಗಿ ಬಿಡುಗಡೆ ಮಾಡಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಉಳಿದಿರುವ ಮೊತ್ತವನ್ನು ಅ.31ರೊಳಗೆ ಬಿಡುಗಡೆ ಮಾಡಬೇಕು ಎಂದು ಕೋರಿದರು.

ಕೊಳ್ಳುವ ಶಕ್ತಿ ಹೆಚ್ಚಳಕ್ಕೆ ನಿರ್ಮಲಾ 73 000 ಕೋಟಿ ಪ್ಯಾಕೇಜ್, ಕೇಂದ್ರ ನೌಕರರಿಗೆ ಬಂಪರ್! ..

ಜಿಎಸ್‌ಟಿ ನಷ್ಟಪರಿಹಾರ ಸೆಸ್‌ ಅನ್ನು ಸಂಗ್ರಹಿಸುವ ಅವಧಿಯನ್ನು 2022ರ ನಂತರವೂ ವಿಸ್ತರಿಸುವ ಸಂಬಂಧ ಕೇಂದ್ರ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿದೆ. ಇದಕ್ಕೆ ಪೂರಕವಾಗಿ ಅಂದಾಜು ಅಭಿವೃದ್ಧಿದರವನ್ನು ಶೇ.10ರಿಂದ ಶೇ.7ಕ್ಕೆ ಇಳಿಸುವಲ್ಲಿ ಕೇಂದ್ರವು ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಇದರಿಂದಾಗಿ ಕರ್ನಾಟಕ ರಾಜ್ಯಕ್ಕೆ ಲಭ್ಯವಿರುವ ಸಾಲಸೌಲಭ್ಯದ ಮೊತ್ತವು 11,432 ಕೋಟಿ ರು.ನಿಂದ 12400 ಕೋಟಿಗೆ ಹೆಚ್ಚಾಗಿ ಸುಮಾರು ಒಂದು ಸಾವಿರ ಕೋಟಿ ರು. ಹೆಚ್ಚುವರಿ ಸಾಲಸೌಲಭ್ಯ ಪಡೆಯಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯಗಳಿಗೆ ಕೇಂದ್ರದಿಂದ 20000 ಕೋಟಿ GST ಪಾಲು!

ಸಾಲ ಪಡೆಯುವುದರ ಮೂಲಕ ನಷ್ಟಪರಿಹಾರದ ರಾಜಸ್ವದ ಕೊರತೆಯನ್ನು ನೀಗಿಸಿಕೊಳ್ಳಲು ಅವಕಾಶ ಕಲ್ಪಿಸುತ್ತವೆ. ಅದರಂತೆ ಕೇಂದ್ರ ಸರ್ಕಾರವು ನೀಡಿರುವ ಆಯ್ಕೆಗಳು ಜಿಎಸ್‌ಟಿ ನಿಯಮಗಳ ಅನುಸಾರವಾಗಿಯೇ ಇರುತ್ತವೆ. ಕೋವಿಡ್‌ನಿಂದಾಗಿ ಜಾಗತಿಕವಾಗಿ ಸೇರಿದಂತೆ ದೇಶ ಮತ್ತು ರಾಜ್ಯದಲ್ಲಿ ಜೀವನ ಮತ್ತು ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇದರಿಂದಾಗಿ ಕೇಂದ್ರ ಮತ್ತು ರಾಜ್ಯಗಳು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿವೆ. ಆರ್ಥಿಕ ಪ್ರಗತಿಗೆ ಸಮಯ ಮತ್ತು ಹಣ ಬಹುಮುಖ್ಯವಾದ ಅಂಶಗಳಾಗಿವೆ. ಹೀಗಾಗಿ ಸಮಯಕ್ಕೆ ಸರಿಯಾಗಿ ನಷ್ಟಪರಿಹಾರ ಮೊತ್ತವನ್ನು ಬಿಡುಗಡೆಗೊಳಿಸುವುದು ಮುಖ್ಯವಾಗಿದೆ ಎಂದು ತಿಳಿಸಿದರು.