ಮಾಜಿ ಅಧ್ಯಕ್ಷ ಅತನು ಚಕ್ರವರ್ತಿ ಅವರ ರಾಜೀನಾಮೆಯ ನಂತರ, HDFC ಬ್ಯಾಂಕ್ ಹಿಂದಿನ ನಿರ್ಧಾರಗಳನ್ನು ಮರುಪರಿಶೀಲಿಸಲು ಸಿದ್ಧವಿದೆ ಎಂದು ಸಿಇಒ ಶಶಿಧರ್ ಜಗದೀಶನ್ ಹೇಳಿದ್ದಾರೆ. ಯಾವುದೇ ಕೊರತೆಗಳು ಕಂಡುಬಂದರೆ, ಕಾರ್ಯಾಚರಣೆ ಅಥವಾ ನಡವಳಿಕೆಗೆ ಸಂಬಂಧಿಸಿದ ಸಮಸ್ಯೆಗಳಾಗಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಮಾಜಿ ಅಧ್ಯಕ್ಷ ಅತನು ಚಕ್ರವರ್ತಿ ಅವರ ರಾಜೀನಾಮೆಯ ನಂತರ ಉಂಟಾದ ಬೆಳವಣಿಗೆಗಳ ನಡುವೆ, HDFC Bank ಯಾವುದೇ ಹೊಸ ಸಮಸ್ಯೆಗಳನ್ನೂ ಪರಿಶೀಲಿಸಲು ಸಂಪೂರ್ಣ ಮುಕ್ತವಾಗಿದ್ದು, ಅಗತ್ಯವಿದ್ದರೆ ಹಿಂದಿನ ನಿರ್ಧಾರಗಳನ್ನೂ ಮರುಪರಿಶೀಲಿಸಲು ಸಿದ್ಧವಾಗಿದೆ ಎಂದು ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶಶಿಧರ್ ಜಗದೀಶನ್ ತಿಳಿಸಿದ್ದಾರೆ. ಅತನು ಚಕ್ರವರ್ತಿ ನಿರ್ಗಮನದ ನಂತರ ಆರ್ಬಿಐ ಕೇಕಿ ಮಿಸ್ತ್ರಿ ಅವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ಅನುಮೋದಿಸಿದ ನಂತರ ಮತ್ತು ಷೇರುಗಳು ಶೇಕಡಾ 11 ರಷ್ಟು ಕುಸಿದ ನಂತರ, ಎಚ್ಡಿಎಫ್ಸಿ ಬ್ಯಾಂಕ್ ಸಿಇಒ ಶಶಿಧರ್ ಜಗದೀಶನ್ ಮಂಡಳಿಯ ಪರಿಶೀಲನೆಗೆ ಪ್ರತಿಜ್ಞೆ ಮಾಡಿದ್ದಾರೆ.
ನಿರಂತರ ಮಂಡಳಿ ಸಭೆ
ಸಂಪೂರ್ಣ ಮತ್ತು ಸ್ವತಂತ್ರ ಪರಿಶೀಲನಾ ಪ್ರಕ್ರಿಯೆಯನ್ನು ಬೆಂಬಲಿಸುವುದಾಗಿ ತಿಳಿಸಿದ ಜಗದೀಶನ್, ಬ್ಯಾಂಕ್ ಹಲವು ಮಂಡಳಿ ಸಭೆಗಳನ್ನು ಕರೆಯಲಿದ್ದು, ಕಾಲಾನಂತರದಲ್ಲಿ ಕೈಗೊಂಡ ನಿರ್ಧಾರಗಳನ್ನು ಸಮಗ್ರವಾಗಿ ಪರಿಶೀಲಿಸಿ, ಅಗತ್ಯವಿದ್ದರೆ ಮರುಮೌಲ್ಯಮಾಪನ ಮಾಡಲಿದೆ ಎಂದು ಹೇಳಿದರು. ಯಾವುದೇ ಕೊರತೆಗಳು ಕಂಡುಬಂದರೆ, ಅವುಗಳನ್ನು ಹಿಂಜರಿಕೆಯಿಲ್ಲದೆ ಸರಿಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
“ನಾವು ಎಲ್ಲಾ ಮಂಡಳಿ ಸಭೆಗಳನ್ನು ನಡೆಸುತ್ತೇವೆ. ಹಿಂದಿನ ನಿರ್ಧಾರಗಳನ್ನು ಮರುಪರಿಶೀಲಿಸಿ, ನಾವು ಯಾವ ಕ್ಷೇತ್ರಗಳಲ್ಲಿ ಸುಧಾರಣೆ ಅಗತ್ಯವಿದೆ ಎಂಬುದನ್ನು ಗುರುತಿಸುತ್ತೇವೆ. ಅಗತ್ಯವಿದ್ದಲ್ಲಿ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳುತ್ತೇವೆ. ಸಮಸ್ಯೆಗಳ ಸ್ವರೂಪವನ್ನು ಅವಲಂಬಿಸಿ ಕ್ರಮ ಕೈಗೊಳ್ಳಲಾಗುವುದು. ಇವು ಕಾರ್ಯಾಚರಣಾ ಸಂಬಂಧಿತ ಸಮಸ್ಯೆಗಳಾಗಿದ್ದರೆ, ವ್ಯವಸ್ಥೆಯ ವಿನ್ಯಾಸ ಮತ್ತು ನಿಯಂತ್ರಣಗಳನ್ನು ಮತ್ತಷ್ಟು ಬಲಪಡಿಸುತ್ತೇವೆ. ಆದರೆ, ನಡವಳಿಕೆಗೆ ಸಂಬಂಧಿಸಿದ ಸಮಸ್ಯೆಗಳಾಗಿದ್ದರೆ, ಯಾವುದೇ ಸಡಿಲಿಕೆ ಇಲ್ಲದೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಷೇರು ಮಾರುಕಟ್ಟೆಯಲ್ಲಿ ಬಿದ್ದ ಹೆಚ್ಡಿಎಫ್ ಸಿ
ಅತನು ಚಕ್ರವರ್ತಿ ಮಾರ್ಚ್ 19 ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈ ಬೆಳವಣಿಗೆ ಹೂಡಿಕೆದಾರರು ಮತ್ತು ಷೇರುದಾರರಲ್ಲಿ ಕೆಲ ಮಟ್ಟಿನ ಅನಿಶ್ಚಿತತೆಯನ್ನು ಉಂಟುಮಾಡಿದರೂ, ಅವರ ಅಧಿಕಾರಾವಧಿಯಲ್ಲಿ ಯಾವುದೇ ಸಮಸ್ಯೆಗಳು ಅಧಿಕೃತವಾಗಿ ದಾಖಲಾಗಿಲ್ಲ ಎಂದು ಜಗದೀಶನ್ ಸ್ಪಷ್ಟಪಡಿಸಿದರು.
“ಯಾವುದೇ ಗೊಂದಲ, ಭಯವಿದ್ದರೆ ಅದನ್ನು ಸ್ಥಾಪಿತ ಪ್ರಕ್ರಿಯೆಯ ಮೂಲಕ ಮಂಡಳಿಗೆ ಸಲ್ಲಿಸಬಹುದು. ನಾವು ಅವುಗಳನ್ನು ಸಮೂಹವಾಗಿ ಪರಿಶೀಲಿಸಿ ಬರೆಹರಿಸುತ್ತೇವೆ. ಆದರೆ, ಅವರಿಂದ ಹಂಚಿಕೊಳ್ಳಲಾದ ಯಾವುದೇ ನಿರ್ದಿಷ್ಟ ವಿಷಯಗಳಿಲ್ಲ ಎಂದು ಜಗದೀಶನ್ ಹೇಳಿದರು.
ಇದೇ ವೇಳೆ, ಭವಿಷ್ಯದಲ್ಲಿ ಹೊಸ ಸಮಸ್ಯೆಗಳು ಹೊರಹೊಮ್ಮಿದರೂ ಸಹ, ಬ್ಯಾಂಕ್ ಅವುಗಳನ್ನು ಪರಿಶೀಲಿಸಲು ಸಂಪೂರ್ಣ ಸಿದ್ಧವಿದೆ. ಹುಟ್ಟಿಕೊಳ್ಳುವ ಯಾವುದೇ ಹೊಸ ವಿಷಯಗಳು ಈಗ ನಮಗೆ ಗೋಚರಿಸದಿದ್ದರೂ, ಅವುಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಈ ಘಟನೆ ಹೂಡಿಕೆದಾರರ ಮನೋಭಾವದ ಮೇಲೆ ಪರಿಣಾಮ ಬೀರಿರುವುದನ್ನು ಒಪ್ಪಿಕೊಂಡ ಜಗದೀಶನ್, ವಿಶೇಷವಾಗಿ ಚಿಲ್ಲರೆ ಷೇರುದಾರರಲ್ಲಿ ಆತಂಕ ಉಂಟಾಗಿದೆ. ಈ ಹಿನ್ನೆಲೆಯಲ್ಲಿ, ಬ್ಯಾಂಕ್ ಕಾನೂನು ಆಯ್ಕೆಗಳನ್ನೂ ಪರಿಶೀಲಿಸುತ್ತಿದ್ದು, ಎಲ್ಲಾ ಸಾಧ್ಯತೆಗಳನ್ನು ಅಧ್ಯಯನ ಮಾಡಲು ತಜ್ಞರೊಂದಿಗೆ ಚರ್ಚೆ ನಡೆಸುತ್ತಿದೆ ಎಂದು ತಿಳಿಸಿದರು.
ಈ ನಡುವೆ, ಹೆಚ್ಚುತ್ತಿರುವ ಪರಿಶೀಲನೆಯ ಹಿನ್ನೆಲೆಯಲ್ಲಿ ಬ್ಯಾಂಕ್ ತನ್ನ ಆಡಳಿತ ಮೇಲ್ವಿಚಾರಣೆಯನ್ನು ಮತ್ತಷ್ಟು ಬಲಪಡಿಸುತ್ತಿದೆ. ಮಂಡಳಿ ಮಟ್ಟದಲ್ಲಿ ಭಿನ್ನಾಭಿಪ್ರಾಯಗಳು ಸಹಜವಾಗಿದ್ದು, ಉತ್ತಮ ಆಡಳಿತ ವ್ಯವಸ್ಥೆಗೆ ಅವು ಅಗತ್ಯವಿವೆ ಉತ್ತಮ ಆಡಳಿತವನ್ನು ಸಾಧಿಸಲು ಎಲ್ಲಾದಕ್ಕೂ ಹೌದು ಎನ್ನುವ, ತಲೆ ಆಡಿಸು ಸಂಸ್ಕೃತಿ ಇರಬಾರದು ಎಂದು ಜಗದೀಶನ್ ಅಭಿಪ್ರಾಯಪಟ್ಟರು.
ಒಟ್ಟಿನಲ್ಲಿ, ಬ್ಯಾಂಕ್ ತನ್ನ ಆಡಳಿತ ಚೌಕಟ್ಟನ್ನು ಸ್ಥಿರವಾಗಿರಿಸಿಕೊಂಡು, ಈ ಘಟನೆಯನ್ನು ಆಂತರಿಕ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸಲು ಒಂದು ಅವಕಾಶವಾಗಿ ಬಳಸಿಕೊಳ್ಳಲು ನಿರ್ಧರಿಸಿದೆ. “ನಾವು ಹಿಂದಿನ ವಿಷಯಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ, ಅಸ್ತಿತ್ವದಲ್ಲಿರುವ ಅಥವಾ ಹೊಸದಾಗಿ ಹೊರಹೊಮ್ಮುವ ಎಲ್ಲಾ ಸಮಸ್ಯೆಗಳನ್ನು ಪಾರದರ್ಶಕವಾಗಿ ಪರಿಹರಿಸುತ್ತೇವೆ,” ಎಂದು ಜಗದೀಶನ್ ದೃಢಪಡಿಸಿದರು.


