ಏ.29ರ ಪಂಚ ರಾಜ್ಯ ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್ ಬೆಲೆ ಏರುತ್ತಾ? ಕೇಂದ್ರ ಹೇಳಿದ್ದೇನು?, ಬಂಗಾಳದ 2ನೇ ಹಂತದ ಮತದಾನದ ಬಳಿಕ ಕೇಂದ್ರ ಸರ್ಕಾರ ಇಂಧನ ಬೆಲೆ ಏರಿಕೆ ಮಾಡುತ್ತೆ ಅನ್ನೋ ಮಾತು ಕೇಳಿಬರುತ್ತಿದೆ.

ನವದೆಹಲಿ (ಏ.28) ಪಂಜ ರಾಜ್ಯಗಳ ಚುನಾವಣೆ ನಾಳೆ (ಏ.29)ಯೊಂದಿಗೆ ಅಂತ್ಯಗೊಳ್ಳುತ್ತಿದೆ. ಪಶ್ಚಿಮ ಬಂಗಾಳದಲ್ಲಿ ನಾಳೆ 2ನೇ ಹಾಗೂ ಅಂತಿಮ ಹಂತದ ಮತದಾನ ನಡೆಯಲಿದೆ. ಈ ಮೂಲಕ ಐದು ರಾಜ್ಯಗಳ ಚುನಾವಣೆ ಅಂತ್ಯಗೊಳ್ಳಲಿದೆ. ಮೇ ನಾಲ್ಕರಂದು ಫಲಿತಾಂಶ ಘೋಷಣೆಯಾಗಲಿದೆ. ಇದೀಗ ಮತದಾನದ ಮರುದಿನವೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಈ ರೀತಿಯ ಯಾವುದೇ ಬದಲಾವಣೆ, ಏರಿಕೆ ಮಾಡುತ್ತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಪೆಟ್ರೋಲ್ ಡೀಸೆಲ್ ಬೆಲೆ

ಪಂಚ ರಾಜ್ಯಗಳ ಚುನಾವಣೆ ಕಾರಣ ಮದ್ಯಪ್ರಾಚ್ಯ ಯುದ್ಧದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾದರೂ ಭಾರತದಲ್ಲಿ ವ್ಯತ್ಯಾಸವಾಗದೆ ನೋಡಿಕೊಳ್ಳಲಾಗಿತ್ತು. ಆದರೆ ಚುನಾವಣೆ ಮುಗಿಯುತ್ತಿದ್ದಂತೆ ಬೆಲೆ ಏರಿಕೆಯಾಗಲಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರ ಯಾರು ಆತಂಕ ಪಡುವ ಅಗತ್ಯವಿಲ್ಲ. ಆತುರಕ್ಕೆ ಬಿದ್ದು ಇಂಧನ ಖರೀದಿಸಬೇಕಾದ ಅನಿವಾರ್ಯತೆ ಇಲ್ಲ. ಕಾರಣ ಕೇಂದ್ರ ಸರ್ಕಾರದ ಮುಂದೆ ಬೆಲೆ ಏರಿಕೆಯ ಯಾವುದೇ ಪ್ರಸ್ತಾವನೆ, ನಿರ್ಧಾರಗಳಿಲ್ಲ ಎಂದು ಪೆಟ್ರೋಲಿಯಂ ಗ್ಯಾಸ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತ ಶರ್ಮಾ ಹೇಳಿದ್ದಾರೆ.

ಆತಂಕ ಪಡುವ ಅಗತ್ಯವಿಲ್ಲ

ಊಹಾಪೋಹಗಳಿಗೆ ಕಿವಿಗೊಡಬೇಡಿ. ಕೇಂದ್ರ ಸರ್ಕಾರ ಯಾವುದೇ ರೀತಿಯ ಬೆಲೆ ಏರಿಕೆ ಮಾಡುತ್ತಿಲ್ಲ. ಆತಂಕಕ್ಕೆ ಒಳಗಾಗಿ ಪೆಟ್ರೋಲ್ ಅಥವಾ ಡೀಸೆಲ್ ಖರೀದಿಸಿ ಶೇಖರಣೆ ಮಾಡಿಕೊಳ್ಳುವ ಅಗತ್ಯವಿಲ್ಲ. ಭಾರತದಲ್ಲಿ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಗ್ಯಾಸ್ ಪೂರ್ಣ ಪ್ರಮಾಣದಲ್ಲಿ ಸರಬರಾಜು ಆಗುತ್ತಿದೆ. ಯಾವುದೇ ವ್ಯತ್ಯಯವಿಲ್ಲ. ಯುದ್ಧ ಕಾರಣದಿಂದ ಕೆಲ ದಿನಗಳ ಕಾಲ ವ್ಯತ್ಯಾಸಗಳಾಗಿತ್ತು. ಸದ್ಯ ಎಲ್ಲವೂ ಸಾಮಾನ್ಯವಾಗಿದೆ ಎಂದು ಸುಜಾತಾ ಶರ್ಮಾ ಹೇಳಿದ್ದಾರೆ.

ಭಾರತದ ತೈಲ ಕಂಪನಿಗಳಿಗೆ ಪ್ರತಿ ಲೀಟರ್ ಮೇಲೆ 20 ರೂಪಾಯಿ ನಷ್ಟವಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿದೆ. ಈ ವೇಳೆ ಭಾರತದಲ್ಲಿ ಯಾವುದೇ ಏರಿಕೆ ಮಾಡದೇ ಇಂಧನ ನೀಡಲಾಗಿತ್ತು. ಹೀಗಾಗಿ 2400 ಕೋಟಿ ರೂಪಾಯಿ ನಷ್ಟವಾಗಿದೆ. ಸದ್ಯ ಕೆಲ ಮಾರ್ಪಡು ಮಾಡಲಾಗಿದೆ ಎಂದು ಸುಜಾತಾ ಶರ್ಮಾ ಹೇಳಿದ್ದಾರೆ.