Asianet Suvarna News Asianet Suvarna News

ನೆರೆ ರಾಜ್ಯದಲ್ಲಿ ನಂದಿನಿಗೆ ವಿರೋಧ: ಕರ್ನಾಟಕದಲ್ಲಿ ಅಮುಲ್ ಪರ - ವಿರೋಧ ಚರ್ಚೆ ವೇಳೆ ಕೇರಳ ಕ್ಯಾತೆ

ಕೆಎಂಎಫ್‌ ಕೆಲ ತಿಂಗಳ ಹಿಂದೆ ಮಲಪ್ಪುರಂ ಜಿಲ್ಲೆಯ ಮಂಜೇರಿ ಮತ್ತು ಕೊಚ್ಚಿಯ ವ್ಯಿಟ್ಟಿಲ್ಲದಲ್ಲಿ ಎರಡು ಹಾಲು, ಡೈರಿ ಉತ್ಪನ್ನಗಳ ಮಾರಾಟ ಮಳಿಗೆ ತೆರೆದಿದೆ. ಜೊತೆಗೆ ಇನ್ನೂ 100 ಫ್ರಾಂಚೈಸಿಗಳನ್ನು ತೆರೆಯಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

another milk war kerala cooperative red flags nandini entry in state ash
Author
First Published Apr 15, 2023, 8:07 AM IST

ತಿರುವನಂತಪುರ (ಏಪ್ರಿಲ್ 15, 2023): ಗುಜರಾತ್‌ ಮೂಲದ ಅಮುಲ್‌ ಸಂಸ್ಥೆಗೆ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡಿದ್ದಕ್ಕೆ ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗಿರುವ ಹೊತ್ತಿನಲ್ಲೇ, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್‌) ತನ್ನ ನಂದಿನ ಉತ್ಪನ್ನವನ್ನು ಕೇರಳದಲ್ಲಿ ಮಾರಾಟ ಮಾಡಲು ಮುಂದಾಗಿರುವುದಕ್ಕೆ ಸ್ಥಳೀಯ ಹಾಲು ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಕೆಎಂಎಫ್‌ (KMF) ಕೆಲ ತಿಂಗಳ ಹಿಂದೆ ಮಲಪ್ಪುರಂ (Malappuram) ಜಿಲ್ಲೆಯ ಮಂಜೇರಿ ಮತ್ತು ಕೊಚ್ಚಿಯ ವ್ಯಿಟ್ಟಿಲ್ಲದಲ್ಲಿ ಎರಡು ಹಾಲು, ಡೈರಿ ಉತ್ಪನ್ನಗಳ ಮಾರಾಟ ಮಳಿಗೆ ತೆರೆದಿದೆ. ಜೊತೆಗೆ ಇನ್ನೂ 100 ಫ್ರಾಂಚೈಸಿಗಳನ್ನು ತೆರೆಯಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

ಇದನ್ನು ಓದಿ: ಅಮುಲ್‌ ಆದಾಯ 66 ಸಾವಿರ ಕೋಟಿ ರೂ. ಗೆ ಹೆಚ್ಚಳ: ದಕ್ಷಿಣ ಭಾರತಕ್ಕೆ ಲಗ್ಗೆ ಇಟ್ಟ ಸಂದೇಶ ನೀಡಿದ ಎಂಡಿ..!

ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಮಿಲ್ಮಾ (Milma) ಹೆಸರಲ್ಲಿ ಕೇರಳದಲ್ಲಿ (Kerala) ಹಾಲು ಮಾರಾಟ ಮಾಡುವ ‘ಕೇರಳ ಸಹಕಾರ ಹಾಲು ಮಾರುಕಟ್ಟೆ ಒಕ್ಕೂಟ’(ಕೆಸಿಎಂಎಂಎಫ್‌) (Kerala Co -operative Milk Marketing Federation) ಅಧ್ಯಕ್ಷ ಕೆ.ಎಸ್‌.ಮಣಿ, ‘ಅನಾರೋಗ್ಯಕರ ಸ್ಪರ್ಧೆ ಏರ್ಪಡುತ್ತದೆ ಎಂಬ ಕಾರಣಕ್ಕಾಗಿಯೇ ಒಂದು ರಾಜ್ಯದ ಹಾಲು ಸಹಕಾರಿ ಒಕ್ಕೂಟಗಳು ಇನ್ನೊಂದು ರಾಜ್ಯಕ್ಕೆ ಪ್ರವೇಶ ಮಾಡಬಾರದು ಎಂಬ ಅಲಿಖಿತ ನಿಯಮವನ್ನು ಹಿಂದಿನಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ. ಹೀಗಾಗಿಯೇ ನಮ್ಮ ಬಳಿ ಹೆಚ್ಚುವರಿ ಹಾಲು ಇದ್ದರೂ ನಾವು ನೆರೆ ರಾಜ್ಯವನ್ನು ಪ್ರವೇಶ ಮಾಡಿರಲಿಲ್ಲ. ಹೀಗಿರುವಾಗ ಕೇರಳದಲ್ಲಿ ತನ್ನ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಕೆಎಂಫ್‌ನ ನಿರ್ಧಾರ ಅನೈತಿಕ ಮತ್ತು ಸಹಕಾರ ತತ್ವಗಳಿಗೆ ವಿರುದ್ಧವಾದುದು’ ಎಂದು ಕಿಡಿಕಾರಿದ್ದಾರೆ.

ಜೊತೆಗೆ ‘ಇತರೆ ರಾಜ್ಯಗಳು ಕೇರಳದಲ್ಲಿ ಮಾರಾಟ ಮಾಡುವುದು ಸ್ಥಳೀಯರಿಗೆ ತಾಜಾ ಹಾಲಿನ ಅವಕಾಶವನ್ನು ನಿರಾಕರಿಸುತ್ತದೆ. ಈ ಕುರಿತು ಕೆಎಂಎಫ್‌ ಮುಖ್ಯಸ್ಥರಿಗೆ ನಾನು ಈಗಾಗಲೇ ಪತ್ರ ಬರೆದಿರುವೆನಾದರೂ ಅದಕ್ಕೆ ಉತ್ತರ ಬಂದಿಲ್ಲ’ ಎಂದು ಮಣಿ ಹೇಳಿದ್ದಾರೆ. ಇದೇ ವೇಳೆ, ‘ರಾಜ್ಯದಲ್ಲಿ ಹಲವು ಸಮಯಗಳಿಂದ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಅಮುಲ್‌ಗೆ ನಾವು ವಿರೋಧವೇನೂ ಮಾಡಿಲ್ಲ’ ಎಂದೂ ಮಣಿ ಹೇಳಿದ್ದಾರೆ.

ಇದನ್ನೂ ಓದಿ: ಕೆಎಂಎಫ್‌ ಮೂಲಕ ಕನ್ನಡಿಗರ ಮೇಲೆ ಹಿಂದಿ ಹೇರಿಕೆ: ಸರಣಿ ಟ್ವೀಟ್‌ ಮೂಲಕ ಕುಮಾರಸ್ವಾಮಿ ಕಿಡಿ

ಕೇರಳದ ತಕರಾರೇನು..?

  • ಕೆಲ ತಿಂಗಳ ಹಿಂದೆ ಮಲಪ್ಪುರಂ, ಕೊಚ್ಚಿಯಲ್ಲಿ ಎರಡು ನಂದಿನಿ ಬೂತ್‌ ಸ್ಥಾಪನೆ
  • ಕೇರಳದಲ್ಲಿ ಇನ್ನೂ 100 ಬೂತ್‌ ಸ್ಥಾಪನೆಗೆ ಫ್ರಾಂಚೈಸಿ ಆಹ್ವಾನಿಸಿದ ಕೆಎಂಎಫ್‌
  • ಕೇರಳದಲ್ಲಿ ಈಗಾಗಲೇ ಸಹಕಾರಿ ಒಕ್ಕೂಟದ ಮಿಲ್ಮಾ ಹಾಲು ಮಾರಾಟವಾಗುತ್ತಿದೆ
  • ಹೀಗಾಗಿ ಕೆಎಂಎಫ್‌ ಕೇರಳಕ್ಕೆ ಪ್ರವೇಶಿಸಿರುವುದು ಸಹಕಾರ ತತ್ವಗಳಿಗೆ ವಿರುದ್ಧ 
  • ಕರ್ನಾಟಕದಲ್ಲಿ ಅಮುಲ್‌ ವಿರೋಧಿಸಿ, ಕೇರಳಕ್ಕೆ ಕೆಎಂಎಫ್‌ ಬಂದಿರುವುದು ಏಕೆ
  • ನಮ್ಮಲ್ಲಿ ಹೆಚ್ಚುವರಿ ಹಾಲು ಇದ್ದರೂ ನಾವು ಬೇರೆ ರಾಜ್ಯಕ್ಕೆ ಹೋಗಿಲ್ಲ: ಕೆಎಂಎಂಎಫ್‌

ಇದನ್ನೂ ಓದಿ: ಕಾಂಗ್ರೆಸ್‌ನ ಒಡೆದು ಆಳುವ ನೀತಿಗೆ ನಂದಿನಿ-ಅಮೂಲ್‌ ವಿವಾದ ಸಾಕ್ಷಿ: ಪ್ರತಾಪ ಸಿಂಹ ನಾಯಕ 

Follow Us:
Download App:
  • android
  • ios