ಮುಸ್ಲಿಮರು ತಲೆಯೆತ್ತದಂತೆ ಸರ್ಕಾರ ಕೆಲಸ ಮಾಡುತ್ತಿದೆ. ಅಂಥ ಸಾಧನೆ ಮಾಡಿದರೆ ದೆಹಲಿ ಸ್ಫೋಟದ ರೂವಾರಿಗಳು ಕೆಲಸ ಮಾಡುತ್ತಿದ್ದ ಅಲ್‌ ಫಲಾ ವಿವಿಯ ಸ್ಥಾಪಕ ಅಜಂ ಖಾನ್‌ರನ್ನು ಜೈಲಿಗೆ ಕಳಿಸಿದಂತೆ ಅವರನ್ನೂ ಕಳಿಸುತ್ತದೆ ಎಂದು ಜಮೀಯತ್ ಉಲಮಾ-ಇ-ಹಿಂದ್ ಮುಖ್ಯಸ್ಥ ಮೌಲಾನಾ ಅರ್ಷದ್ ಮದನಿ ವಿವಾದಿತ ಹೇಳಿಕೆ

ವದೆಹಲಿ: ಮುಸ್ಲಿಮರು ತಲೆಯೆತ್ತದಂತೆ ಸರ್ಕಾರ ಅವಿರತವಾಗಿ ಕೆಲಸ ಮಾಡುತ್ತಿದೆ. ಯಾರಾದರೂ ಅಂಥ ಸಾಧನೆ ಮಾಡಿದರೆ ದೆಹಲಿ ಸ್ಫೋಟದ ರೂವಾರಿಗಳು ಕೆಲಸ ಮಾಡುತ್ತಿದ್ದ ಅಲ್‌ ಫಲಾ ವಿವಿಯ ಸ್ಥಾಪಕ ಅಜಂ ಖಾನ್‌ರನ್ನು ಜೈಲಿಗೆ ಕಳಿಸಿದಂತೆ ಅವರನ್ನೂ ಕಳಿಸುತ್ತದೆ ಎಂದು ಜಮೀಯತ್ ಉಲಮಾ-ಇ-ಹಿಂದ್ ಮುಖ್ಯಸ್ಥ ಮೌಲಾನಾ ಅರ್ಷದ್ ಮದನಿ ವಿವಾದಿತ ಹೇಳಿಕೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಭಾರತದಲ್ಲಿ ಯಾವ ಮುಸ್ಲಿಮನೂ ವಿವಿ ಮುಖ್ಯಸ್ಥನಾಗುವುದೂ ಸಾಧ್ಯವಿಲ್ಲ

ಇಲ್ಲಿ ಮಾತನಾಡಿದ ಅವರು, ‘ಇಂದು ಮುಸ್ಲಿಮರಾದ ಮಮ್ದಾನಿ ಹಾಗೂ ಖಾನ್‌, ನ್ಯೂಯಾರ್ಕ್‌ ಮತ್ತು ಲಂಡನ್‌ನ ಮೇಯರ್‌ ಆಗಿದ್ದಾರೆ. ಆದರೆ ಭಾರತದಲ್ಲಿ ಯಾವ ಮುಸ್ಲಿಮನೂ ವಿವಿ ಮುಖ್ಯಸ್ಥನಾಗುವುದೂ ಸಾಧ್ಯವಿಲ್ಲ. ಯಾರಾದರೂ ಹಾಗೆ ಅದರೂ, ಅವರನ್ನು ಅಜಂ ಖಾನ್‌ರಂತೆ ಜೈಲಿಗೆ ಕಳುಹಿಸಲಾಗುತ್ತದೆ. ಮುಸ್ಲಿಮರು ಎಂದಿಗೂ ತಲೆ ಎತ್ತದಂತೆ ನೋಡಿಕೊಳ್ಳಲು ಸರ್ಕಾರ ಅವಿರತವಾಗಿ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ.

ಬಿಜೆಪಿ ಆಕ್ರೋಶ :

ಮೌಲಾನಾ ಹೇಳಿಕೆಗೆ ಬಿಜೆಪಿ ವಕ್ತಾರ ಶೆಹಜಾದ್‌ ಪೂನವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಇಂದು ಆತಂಕಿ ಬಚಾವೋ ಜಮಾತ್ (ಉಗ್ರ ರಕ್ಷಕ ಜಮಾತ್‌) ಸಕ್ರಿಯವಾಗಿದೆ. ಅವರು ಉಗ್ರರು ಸಿಕ್ಕಿಬಿದ್ದಾಗ ರಕ್ಷಣೆಗೆ ಓಡಿಬರುತ್ತಾರೆ’ ಎಂದು ಕಿಡಿ ಕಾರಿದ್ದಾರೆ.