ಬಂಪರ್ ಲಾಟರಿ ಹೊಡೆದಿದೆ. 5 ಲಕ್ಷ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ,ಆಧಾರ್ ಸಂಖ್ಯೆ ನಮೂದಿಸಿ. ಇಂಥ ಜಾಹೀರಾತುಗಳು ನೂರಾರು ಬರ್ತಿರುತ್ತವೆ. 5 ಲಕ್ಷದ ಆಸೆಗೆ ಆಧಾರ್ ದಾಖಲೆ ನೀಡಿದ್ರೆ ಮೂರು ನಾಮ ಬೀಳೋದು ನಿಶ್ಚಿತ. ಆಧಾರ್ ಕಾರ್ಡ್ ಹೊಂದಿದ್ದರೆ ಸಾಲದು,ಅದರ ಬಳಕೆ,ಸುರಕ್ಷತೆ ಕೂಡ ಗೊತ್ತಿರಬೇಕು. 

ಆಧಾರ್ ಕಾರ್ಡ್(aadhaar card), ಸದ್ಯ ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ. ಇದು ಭಾರತ(India )ದಲ್ಲಿ ಡಿಜಿಟಲೀಕರಣವನ್ನು (Digitalization) ಸುಲಭಗೊಳಿಸಲು ಸರ್ಕಾರಕ್ಕೆ ಸಹಾಯ ಮಾಡಿದೆ. ಪಾನ್ (PAN) ಕಾರ್ಡ್ ನಿಂದ ಹಿಡಿದು ಬ್ಯಾಂಕ್ ಖಾತೆಯವರೆಗೆ ಬಹುತೇಕ ಸೇವೆಗಳು (Services) ಆಧಾರ್ ಯುಐಡಿಎಐಗೆ (UIDAI) ಲಿಂಕ್ ಆಗಿವೆ. ಈ ಹಿಂದೆ ಕಚೇರಿಗೆ ಹೋಗಿ ಸೇವೆ ಪಡೆಯಬೇಕಾಗಿತ್ತು. ಆಧಾರ್ ಬಂದಾಗಿನಿಂದ ಮನೆಯಲ್ಲಿಯೇ ಕುಳಿತು ಅನೇಕ ಸೇವೆಗಳ ಲಾಭವನ್ನು ಪಡೆಯಬಹುದು.

Add Asianetnews Kannada as a Preferred SourcegooglePreferred

ದೇಶ ಡಿಜಿಟಲ್ ಆಗುತ್ತಿದ್ದಂತೆ ವಂಚನೆ (fraud),ಹ್ಯಾಕಿಂಗ್(hacking) ಕೂಡ ಹೆಚ್ಚಾಗಿದೆ. ಆಧಾರ್ ಮತ್ತು ಪಾನ್ ಕಾರ್ಡ್ ವಿವರಗಳನ್ನು ಕೆಲವರು ದುರುದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜನರ ಆಧಾರ್ ಮತ್ತು ಪಾನ್ ವಿವರವನ್ನು ಹಣಕಾಸಿನ ವಂಚನೆಗೆ ಬಳಸಲಾಗುತ್ತಿದೆ. ಪಾನ್ ಮತ್ತು ಆಧಾರ್ ಮಾಹಿತಿಯನ್ನು ಕದ್ದು,ಸಣ್ಣ ಸಾಲ ಮತ್ತು ಹಣಕಾಸು ಸೇವೆಗಳನ್ನು ಪಡೆಯಲು ಬಳಸಲಾಗುತ್ತಿದೆ. ನಮ್ಮ ಆಧಾರ್ ಮೂಲಕ ಅನ್ಯ ವ್ಯಕ್ತಿ ಸಾಲ ಪಡೆದಿದ್ದಾನೆ ಎಂಬುದು ನಮಗೆ ಗೊತ್ತೇ ಆಗುವುದಿಲ್ಲ. ಆದ್ದರಿಂದ, ಆಧಾರ್ ಹಾಗೂ ಪಾನ್ ಕಾರ್ಡಿನ ಮಾಹಿತಿಯನ್ನು ಸುರಕ್ಷಿತಗೊಳಿಸುವುದು ಬಹಳ ಮುಖ್ಯ. ವಂಚನೆಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು. ಪಾನ್ ಮತ್ತು ಆಧಾರ್‌ನಂತಹ ದಾಖಲೆಗಳ ಸುರಕ್ಷತೆಯ ಬಗ್ಗೆ ನಿಮಗೆ ಕಾಳಜಿ ಇದ್ದರೆ, ನಿಮ್ಮ ವಿವರಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನೀವು ಏನು ಮಾಡಬೇಕು ಎಂಬ ವಿವರ ಇಲ್ಲಿದೆ.

Aadhar card update: ಆನ್‌ಲೈನ್‌ನಲ್ಲಿ ಫೋಟೋ, ವಿಳಾಸ, ಮೊಬೈಲ್‌ ಸಂಖ್ಯೆ ಬದಲಾಯಿಸೋದು ಹೇಗೆ?

ಆಧಾರ್ ಸುರಕ್ಷತೆಗೆ ಏನು ಮಾಡಬೇಕು ?
ಯಾವುದೇ ಸಂದರ್ಭದಲ್ಲೂ ನಿಮ್ಮ ಆಧಾರ್ ಮತ್ತು ಪಾನ್ ಮಾಹಿತಿಯನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ. ಅಪ್ಪಿತಪ್ಪಿ ಈ ಬಗ್ಗೆ ನೀವು ನೀಡುವ ಮಾಹಿತಿ,ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಬಹುದು.
ನಿಮ್ಮ ಆಧಾರ್, ಪಾನ್ ಕಾರ್ಡಿನ ಫೋಟೋಕಾಪಿಯನ್ನು ಎಲ್ಲಿಯೂ ಬಿಡಬೇಡಿ. ಕೆಲವೊಮ್ಮೆ ಅಂಗಡಿಯಲ್ಲಿ ಅಥವಾ ವ್ಯಾಪಾರಕ್ಕೆ ಇದನ್ನು ಬಳಸಿರುತ್ತೇವೆ. ಹೋದ ಸ್ಥಳದಲ್ಲಿಯೇ ಅದನ್ನು ಮರೆತು ಬರುತ್ತೇವೆ. ಇದು ಅಪಾಯವನ್ನು ಹೆಚ್ಚಿಸುತ್ತದೆ. ವಂಚಕರು ಇದನ್ನು ಬಳಸಿಕೊಂಡು ಲಾಭ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ

ಎಸ್ ಎಂಎಸ್ (SMS) ಹಾಗೂ ವಾಟ್ಸ್ ಅಪ್(Whatsapp) ಸೇರಿದಂತೆ ಅನೇಕ ಮೂಲಗಳಿಂದ ಸಾಕಷ್ಟು ಲಿಂಕ್ ಗಳು ಬರ್ತಿರುತ್ತವೆ. ಇದನ್ನು ಕ್ಲಿಕ್ ಮಾಡಿ, ಲಾಟರಿ ಗೆಲ್ಲಿ ಸೇರಿದಂತೆ ಅನೇಕ ಜಾಹೀರಾತು ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ಆ ಲಿಂಕ್ ಗಳನ್ನು ಕ್ಲಿಕ್ ಮಾಡಬಾರದು. ಮಾಡಿದರೂ ಅದರಲ್ಲಿ ಆಧಾರ್ ಸೇರಿದಂತೆ ಯಾವುದೇ ಮಾಹಿತಿ ನಮೂದಿಸಬೇಡಿ. ನಂಬಿಕೆಯಿಲ್ಲದ,ಅಪರಿಚಿತ ವೆಬ್ಸೈಟ್ ಗಳಲ್ಲಿ (websites) ಆಧಾರ್ ಮಾಹಿತಿ ಹಂಚಿಕೊಳ್ಳುವುದನ್ನು ತಪ್ಪಿಸಿ. ಇದಲ್ಲದೆ ನಿಮ್ಮ ಸಿಬಿಲ್ (CIBIL) ಸ್ಕೋರ್ ಮತ್ತು ಹಣಕಾಸಿನ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುತ್ತಿರಬೇಕು. ನೀವು ಏನೂ ಮಾಡದೆ ಸಿಬಿಲ್ ಸ್ಕೋರ್ ನಲ್ಲಿ ಬದಲಾವಣೆಯಾಗುತ್ತಿದ್ದರೆ ಅಥವಾ ಖಾತೆಯಲ್ಲಿರುವ ಹಣ ಖಾಲಿಯಾಗುತ್ತಿದ್ದರೆ ತಕ್ಷಣ ಎಚ್ಚೆತ್ತುಕೊಳ್ಳಬೇಕು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಹಾಗೆಯೇ,ಒನ್ ಟೈಮ್ ಪಾಸ್ವರ್ಡನ್ನು (OTP) ಯಾರೊಂದಿಗೂ ಹಂಚಿಕೊಳ್ಳಬೇಡಿ. ಆಧಾರ್, ಪಾನ್ ಅಥವಾ ಹಣಕಾಸು ಚಟುವಟಿಕೆಗೆ ಸಂಬಂಧಿಸಿದಂತೆ ನಮೂದಿಸುವ ಒನ್ ಟೈಂ ಪಾಸ್ವರ್ಡ ಅನ್ನು ಎಲ್ಲೂ ಹಂಚಿಕೊಳ್ಳುವ ಅಪಾಯದ ಹೆಜ್ಜೆ ಇಡಬೇಡಿ.

ವಾಹನ ಸಂಬಂಧಿ ಎಲ್ಲಾ ವ್ಯವಹಾರಕ್ಕೆ ಆಧಾರ್‌ ಕಡ್ಡಾಯ!

ಆಧಾರ್ ಕಾರ್ಡನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನಿರ್ವಹಿಸುತ್ತದೆ. ಆಧಾರ್ ಗೆ ಸಂಬಂಧಿಸಿದ ಮಾಹಿತಿಯನ್ನು ಇದು ಹಂಚಿಕೊಳ್ಳುತ್ತದೆ. ಆಧಾರ್ ಸುರಕ್ಷತೆಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಸಲಹೆಗಳನ್ನು ನೀಡುತ್ತಿರುತ್ತದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೀಡುವ ಮಾಹಿತಿ ಹಾಗೂ ಸಲಹೆಯನ್ನು ಪಾಲಿಸಬೇಕು. ನಿಮ್ಮ ಡೇಟಾ ಸೋರಿಕೆಯಾಗ್ತಿದೆ ಎಂಬ ಬಗ್ಗೆ ನಿಮಗೆ ಯಾವುದೇ ಅನುಮಾನ ವ್ಯಕ್ತವಾದರೂ ನೀವು ತಕ್ಷಣ ಕ್ರಮಕ್ಕೆ ಮುಂದಾಗಬೇಕು. ಪೊಲೀಸರಿಗೆ ಈ ಬಗ್ಗೆ ದೂರು ನೀಡಬೇಕು.