ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಪ್ರಯಾಣಿಕರೊಬ್ಬರು 6 ರೂಪಾಯಿ ಟಿಕೆಟ್‌ಗೆ ಆನ್‌ಲೈನ್ ಮೂಲಕ 60 ಸಾವಿರ ರೂಪಾಯಿ ಪಾವತಿಸಿ ಎಡವಟ್ಟು ಮಾಡಿಕೊಂಡಿದ್ದಾರೆ. ಈ ಹಣ ನೇರವಾಗಿ ನಿಗಮದ ಖಾತೆಗೆ ಜಮೆಯಾಗಿದ್ದು, ಅದನ್ನು ಮರಳಿ ಪಡೆಯಲು ಪ್ರಯಾಣಿಕರು ಸಂಕಷ್ಟ ಎದುರಿಸುತ್ತಿದ್ದಾರೆ.

ಆನ್‌ಲೈನ್ ಪೇಮೆಂಟ್ ಎಷ್ಟು ಲಾಭಕಾರಿಯೋ ಅಜಾಗರೂಕರಾಗಿದ್ದರೆ ಕೆಲವೊಮ್ಮೆ ಅಷ್ಟೇ ಹಾನಿಕಾರಿಯಾಗಿ ಬದಲಾಗುತ್ತದೆ. ಅದೇ ರೀತಿ ಈಗ ಬಿಎಂಟಿಸಿ ಬಸ್‌ನಲ್ಲಿ ಟಿಕೆಟ್ ಹಣ ಆರು ರೂಪಾಯಿ ಪಾವತಿ ಮಾಡುವ ಬದಲು ವ್ಯಕ್ತಿಯೊಬ್ಬರು ಎಲ್ಲೋ ನೋಡಿಕೊಂಡು 60 ಸಾವಿರ ರೂಪಾಯಿ ಪಾವತಿ ಮಾಡಿ ದೊಡ್ಡ ಅನಾಹಹುತ ಮಾಡಿಕೊಂಡಿದ್ದಾರೆ. ನೋಟು ಕೊಟ್ಟರೆ ಕಂಡಕ್ಟರ್ ಚಿಲ್ಲರೆ ಕೊಡಬಹುದು. ಆದರೆ ಈ ಆನ್‌ಲೈನ್ ಪಾವತಿ ನೇರವಾಗಿ ಕೆಎಸ್‌ಆರ್‌ಟಿಸಿ ನಿಗಮದ ಖಾತೆಗೆ ಹೋಗಿ ಸೇರುತ್ತದೆ. ಹೀಗಿರುವಾಗ ಈ ಹಣವನ್ನು ವಾಪಸ್ ಪಡೆಯುವುದು ಹೇಗೆ ಎಂಬ ಬಗ್ಗೆ ಈಗ ಆ ಪ್ರಯಾಣಿಕನಿಗೆ ದೊಡ್ಡ ಚಿಂತೆಯಾಗಿದೆ.

ಜನವರಿ 14ರಂದು ಬೆಂಗಳೂರಿನ ಬನಶಂಕರಿಯಲ್ಲಿ ಈ ಘಟನೆ ನಡೆದಿದೆ. ಬನಶಂಕರಿಯಿಂದ ಕದಿರೇನಹಳ್ಳಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಬಿಎಂಟಿಸಿ ಬಸ್‌ನಲ್ಲಿ ನಗದು ಹಣ ನೀಡುವ ಬದಲು 6 ರೂಪಾಯಿ ಟಿಕೆಟ್‌ಗೆ ಆನ್‌ಲೈನ್ ಪೇಮೆಂಟ್ ಮಾಡಿದ್ದಾರೆ. ಆದರೆ ಯಾವುದೋ ಯೋಚನೆಯ ಭರದಲ್ಲಿ ಅವರು ಆರು ರೂಪಾಯಿ ಬದಲು 60 ಸಾವಿರ ರೂಪಾಯಿಯನ್ನೇ ಪಾವತಿ ಮಾಡಿದ್ದು, ಕೆಲ ನಿಮಿಷದಲ್ಲಿ ಖಾತೆಯಿಂದ ಹಣ ಗುಳುಂ ಆಗಿದೆ. ಕೂಡಲೇ ಆ ಪ್ರಯಾಣಿಕನಿಗೆ ತಾವು ಮಾಡಿದ ಎಡವಟ್ಟಿನ ಅರಿವಾಗಿದೆ. ಕೂಡಲೇ ಅವರು ಕಂಡಕ್ಟರ್‌ಗೆ ಈ ವಿಚಾರ ತಿಳಿಸಿದ್ದು, ಖಾತೆಯಲ್ಲಿ ಪರಿಶೀಲಿಸುವಂತೆ ಹೇಳಿದ್ದಾರೆ. ಆಗ ಆ ಪ್ರಯಾಣಿಕ 62,313 ರೂಪಾಯಿ ಬಿಎಂಟಿಸಿ ನಿಗಮದ ಖಾತೆಗೆ ಹಾಕಿರುವುದು ಬೆಳಕಿಗೆ ಬಂದಿದ್ದು ಕಂಡಕ್ಟರ್ ಕೂಡ ಬೆಚ್ಚಿ ಬಿದ್ದಿದ್ದಾರೆ.

ಮುಂದೇನು ಗತಿ?

ಹೀಗೆ ಪ್ರಯಾಣಿಕ ಕಣ್ತಪ್ಪಿನಿಂದ ಹಾಕಿದ ಹಣವನ್ನು ಕೂಡಲೇ ಮರುಪಾವತಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ. ಘಟನೆಯ ಬಗ್ಗೆ ಕಂಡಕ್ಟರ್ ತನ್ನ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಅದಾದ ನಂತರ ಕಂಡಕ್ಟರ್ ಅವರು ತಮ್ಮ ಮೇಲಾಧಿಕಾರಿಗಳಿಗೆ ವಿಚಾರ ತಿಳಿಸಿ ಆ ಪ್ರಯಾಣಿಕನಿಗೆ ಅವರ ನಂಬರ್ ಡಿಪೋ ಮ್ಯಾನೇಜರ್‌ನ ನಂಬರ್ ನೀಡಿದ್ದಾರೆ. ಮೇಲಾಧಿಕಾರಿಗಳು ಪರಿಶೀಲಿಸಿದ ನಂತರವೇ ಈ ಹಣ ಪ್ರಯಾಣಿಕನ ಪಾಲಿಗೆ ಮರಳಿ ಸಿಗಲಿದೆ. ಅಲ್ಲದೇ ಈ ಹಣ ಪಡೆಯುವುದಕ್ಕೆ ಡಿಪೋಗೆ ಬರಬೇಕು ಎಂದು ಸಲಹೆ ನೀಡಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಇದುವರೆಗೂ ಆ ಪ್ರಯಾಣಿಕನಿಗೆ ಹಣ ಖಾತೆಗೆ ವಾಪಸ್ ಬಂದಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಗಂಡನ ಮೇಲಿನ ಕೋಪಕ್ಕೆ 18 ತಿಂಗಳ ಮಗುವನ್ನೇ ಚಾಕುವಿನಿಂದ ಇರಿದು ಕೊಂದ ತಾಯಿ

ಆನ್ಲೈನ್ ಹಣ ವರ್ಗಾವಣೆ ವೇಳೆ ಇರಲಿ ಎಚ್ಚರ

ಅನೇಕರಿಗೆ ಸುಲಭವಾಗಿ ಮಾಡಬಹುದಾದ ಆನ್‌ಲೈನ್ ಹಣ ವರ್ಗಾವಣೆ ಮಾಡುವಾಗ ಹಚ್ಚೇನು ಗಮನಿಸದೇ ಹಣ ವರ್ಗಾವಣೆ ಮಾಡುತ್ತಾರೆ. ಆನ್‌ಲೈನ್ ಹಣ ಪಾವತಿ ಮಾಡುವಾಗ ಎಚ್ಚರ ಬಹಳ ಅಗತ್ಯ. ಹಾಕುತ್ತಿರುವ ಮೊತ್ತ ಹಾಗೂ ಖಾತೆ ಸಂಖ್ಯೆಯನ್ನು ನೀವು ಎರಡೆರಡು ಬಾರಿ ಗಮನಿಸಿಕೊಳ್ಳಬೇಕು. ಇಲ್ಲದೇ ಹೋದರೆ ದೊಡ್ಡ ಅನಾಹುತವಾಗುವುದಂತು ಪಕ್ಕಾ.

ಇದನ್ನೂ ಓದಿ: 1984 ಸಿಖ್ ವಿರೋಧಿ ದಂಗೆ: ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ಖುಲಾಸೆಗೊಳಿಸಿದ ನ್ಯಾಯಾಲಯ