ಹಿಂದೂ ಧರ್ಮದಲ್ಲಿ ಸಾವಿನ ನಂತರ ಆತ್ಮಕ್ಕೆ ಮೋಕ್ಷಕ್ಕಾಗಿ ಹಲವು ಕಾರ್ಯಗಳನ್ನು ಮಾಡಲಾಗುತ್ತದೆ. ಆದರೆ ಗರ್ಭಪಾತವಾದ ಮಗುವಿನ ಆತ್ಮಕ್ಕೆ ಮೋಕ್ಷಕ್ರಿಯೆ ಅಗತ್ಯವೇ? ವೈದ್ಯರೊಬ್ಬರು ಈ ಬಗ್ಗೆ ವಿವರಿಸಿದ್ದು, ಅವರೇನು ಹೇಳಿದ್ದಾರೆ ಎಂಬ ಡಿಟೇಲ್ ಇಲ್ಲಿದೆ.
ಹಿಂದೂ ಪುರಾಣಗಳ ಪ್ರಕಾರ ಆತ್ಮಕ್ಕೆ ಸಾವಿಲ್ಲ, ಹಾಗೂ ಮನುಷ್ಯನ ಸಾವಿನ ನಂತರವೂ ಆತನಿಗೆ ಪುನರ್ಜನ್ಮವಿದೆ. ಹಾಗೂ ಸಾವಿನ ನಂತರ ಆತನಿಗೆ ಮೋಕ್ಷಕ್ಕಾಗಿ ಮಾಡಬೇಕಾದ ಕಾರ್ಯಗಳನ್ನು ಮಾಡಲೇಬೇಕು. ಬಹುತೇಕರು ಮನುಷ್ಯನೋರ್ವನ ಸಾವಿನ ನಂತರ ಆತನ ಕುಟುಂಬದವರು ಆತನ ಆತ್ಮದ ಶಾಂತಿಗಾಗಿ ಅನೇಕ ವೈದಿಕ, ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾರೆ. ತರ್ಪಣ ನೀಡುತ್ತಾರೆ. ಆದರೆ ಗರ್ಭದಲ್ಲೇ ಮಗುವಿನ ಸಾವಾದರೆ ಅಂತಹ ಸಾವಿಗೆ ಕ್ರಮಗಳನ್ನು ಮಾಡುವವರು ಬಹಳ ಕಡಿಮೆ. ಅನೇಕರಿಗೆ ಅನೇಕ ಕಾರಣಕ್ಕೆ ಗರ್ಭಪಾತವಾಗುತ್ತದೆ. ವೈದ್ಯಕೀಯ ಸಮಸ್ಯೆಯ ಕಾರಣಕ್ಕೆ ಕೆಲವೊಮ್ಮೆ ಅನಿವಾರ್ಯವಾಗಿ ಗರ್ಭಪಾತ ಮಾಡಿಸಬೇಕಾಗುತ್ತದೆ. ಹೃದಯ ಬಡಿತ ಇಲ್ಲದಿರುವುದು ಮಗುವಿನ ಬೆಳವಣಿಗೆ ಆಗದಿರುವುದು ಹೀಗೆಲ್ಲಾ ಕಾರಣಕ್ಕೆ ಗರ್ಭಪಾತವೂ ಸಂಭವಿಸುತ್ತದೆ. ಆದರೆ ಹೀಗೆ ಗರ್ಭಪಾತದಿಂದ ಅಂತ್ಯಗೊಂಡ ಆತ್ಮಕ್ಕೆ ಯಾರು ಮೋಕ್ಷಕ್ರಿಯೆಗಳನ್ನಾಗಲಿ, ಅಂತ್ಯಸಂಸ್ಕಾರವನ್ನಾಗಲಿ ಮಾಡುವುದಿಲ್ಲ. ಆದರೆ ಇಂತಹ ಸಾವಿಗೂ ಮೋಕ್ಷಕ್ರಿಯೆ ಮಾಡಬೇಕು ಎನ್ನುತ್ತಾರೆ ತಜ್ಞರೊಬ್ಬರು
ಹೌದು ಇನ್ಸ್ಟಾಗ್ರಾಮ್ನಲ್ಲಿ ವೈದ್ಯಕೀಯ ಹಾಗೂ ಅರೋಗ್ಯಕ್ಕೆ ಸಂಬಂಧಿಸಿದಂತೆ ಜನರಿಗೆ ಉಪಯುಕ್ತ ಮಾಹಿತಿ ನೀಡುವ ಡಾಕ್ಟರ್ ಪ್ರೀತಿ ಶಾನಭಾಗ್ (doctorpreetishanbhag) ಎಂಬುವವರು ತಮ್ಮ ಇನ್ಸ್ಟಾ ಪೇಜ್ನಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಉದ್ದನೇಯ ಬರಹವೊಂದನ್ನು ಬರೆದುಕೊಂಡಿದ್ದಾರೆ. 17 ವರ್ಷಗಳಿಂದ ಅಯುಷ್ ವೈದ್ಯರಾಗಿರುವ ಅವರು, ಫಲವತ್ತತೆ ಗರ್ಭಧಾರಣೆ, ಪಿಸಿಒಎಸ್, ಥೈರಾಯ್ಡ್, ಸಾಮಾನ್ಯ ಹೆರಿಗೆ, ಸ್ತನ್ಯಪಾನ, ತೂಕ ಇಳಿಕೆ, ಹಾರ್ಮೋನುಗಳ ಅಸಮತೋಲನ, ಮಹಿಳೆ ಮತ್ತು ಮಕ್ಕಳ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಉಪಯುಕ್ತವಾದ ಮಾಹಿತಿಯನ್ನು ಇನ್ಸ್ಟಾಗ್ರಾಮ್ ಮೂಲಕ ನೀಡುತ್ತಾ ಬಂದಿದ್ದಾರೆ.
ಅವರೀಗ ಗರ್ಭಪಾತ ಹಾಗೂ ಅದರ ನಂತರ ಆ ಗರ್ಭದಲ್ಲಿದ್ದ ಮಗುವಿನ ಆತ್ಮದ ಶಾಂತಿಗಾಗಿ ಏನು ಮಾಡಬೇಕು ಹಾಗೂ ಅದು ತಾಯಿಯಾದವಳಿಗೆ ಎಷ್ಟು ಅಗತ್ಯ ಎಂದು ಅವರು ಹೇಳಿದ್ದಾರೆ. ಅವರ ಪೋಸ್ಟ್ನ ಸಾರಾಂಶ ಇಲ್ಲಿದೆ ನೋಡಿ..
ಗರ್ಭಪಾತ, ಅಬಾರ್ಷನ್, ಗರ್ಭದಲ್ಲಿದ್ದಾಗಲೇ ಎದೆ ಬಡಿತ ನಿಲ್ಲುವುದು ಅಥವಾ ಗರ್ಭದಲ್ಲಿ ಮಗುವಿನ ಸಾವು, ಇವೆಲ್ಲವೂ ಕೇವಲ ಭಾವನಾತ್ಮಕ ಗಾಯ ಮಾತ್ರ ಅಲ್ಲ. ಕೌಟುಂಬಿಕ ಕರ್ಮ ಬಂಧನದ ಪರಿಣಾಮ. ಈ ಜೀವಗಳು ಸಹ ಅತೃಪ್ತ ಆತ್ಮಗಳ ಸಾಲಿಗೆ ಸೇರುತ್ತವೆ. ಇತರೆ ಮೃತ ಆತ್ಮಗಳಂತೆ ಇವುಗಳಿಗೂ ಮೋಕ್ಷ ಅಥವಾ ಪುನರ್ಜನಕ್ಕಾಗಿ ಅವಕಾಶ ಕಲ್ಪಿಸದಿದ್ದರೆ ಮತ್ತೆ ಗರ್ಭ ನಿಲ್ಲಲು ಅಥವಾ ಮುಂದಿನ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ಕುತ್ತಿಗೆಗೆ ಬಾಯಿ ಹಾಕಿದ ಚಿರತೆಗೆ ಸರಿಯಾಗಿ ತುಳಿದು ತನ್ನನ್ನು ತಾನು ರಕ್ಷಿಸಿಕೊಂಡ ಹೋರಿ: ವೀಡಿಯೋ ವೈರಲ್
ಆ ಜೀವಾತ್ಮ ಕೆಟ್ಟದ್ದು ಅಂತ ಅಲ್ಲ ಆದರೆ ತಾಯಿಯೊಂದಿದೆ ಅಪೂರ್ಣ ವಾಗಿ ಕಡಿತಗೊಂಡ ಭಾವನಾತ್ಮಕ ಬಂಧ ಮತ್ತು ಜೀವಿತಾವಧಿ ಪೂರ್ಣಗೊಳ್ಳದೆ ಮಗು ಕಳೆದುಕೊಂಡ ಕಾರಣದಿಂದ ತಾಯಿಯ ಆತ್ಮವೂ ಪಶ್ಚಾತಾಪ, ನೋವು, ದುಃಖ ಮತ್ತು ಭಯದಿಂದ ಆವರಿಸಿರುತ್ತದೆ. ತಂದೆ ತಾಯಿಯರ ಭಾರವಾದ ಭಾವನೆಗಳು, ಮತ್ತು ಅಪೂರ್ಣವಾದ ಮಾತೃತ್ವದ ಭಾವನೆಗಳು ಪಿತೃಋಣವನ್ನು ಹೆಚ್ಚಿಸುತ್ತವೆ. ಹೀಗಾಗಿ ಪ್ರತಿ ಅಮಾವಾಸ್ಯೆ ಮತ್ತು ಪಿತೃ ಪಕ್ಷದಲ್ಲಿ ಈ ಜೀವಾತ್ಮಗಳಿಗೂ ಪ್ರಾರ್ಥನೆ, ತರ್ಪಣ ಮತ್ತು ಮೋಕ್ಷ ಅಥವಾ ಪುನರ್ಜನ್ಮಕ್ಕಾಗಿ ದಾರಿ ಮಾಡಿ ಕೊಡಬೇಕಾಗುತ್ತದೆ.
ಇದನ್ನೂ ಓದಿ: ಮಹಿಳಾ ಕ್ರಿಕೆಟರ್ಗಳೇ ಪಲಾಶ್ಗೆ ಸರಿಯಾಗಿ ಥಳಿಸಿದ್ದರು ಎಂದ ಮಂಧಾನ ಬಾಲ್ಯ ಸ್ನೇಹಿತನ ವಿರುದ್ಧ10 ಕೋಟಿ ಮಾನನಷ್ಟ ಕೇಸ್
ವೈದ್ಯರಾಗಿ ಇದೆಲ್ಲವನ್ನು ಯಾಕೆ ಹೇಳ್ತೀರಾ ಅಂತ ನೀವು ಕೇಳಬಹುದು. ಡಾಕ್ಟರ್ ಕಲಿತ ನಂತರವೇ ನಾನು ವಿಜ್ಞಾನದ ಆಚೆಗೆ ಇರುವ ಶಕ್ತಿ ಬಗ್ಗೆ ಜಾಸ್ತಿ ತಿಳಿದೆ. ಹೀಗಾಗಿ ನಿಮಗೆ ಹಳೆಯ ಗರ್ಭಪಾತ ಅಥವಾ ಅಬಾರ್ಷನ್ ಸಮಸ್ಯೆ ಆಗುತ್ತಿದ್ದರೆ, ಅಮಾವಾಸ್ಯೆಯ ದಿನ ಆ ಜೀವಾತ್ಮಕ್ಕಾಗಿ ದಾನ, ತರ್ಪಣ, ಪ್ರಾರ್ಥನೆ ಮಾಡಿ. ಕರ್ಮಗಳು ಸಹ ಗರ್ಭಧಾರಣೆಗೆ ತೊಡಕು ಉಂಟು ಮಾಡುತ್ತವೆ. ಪ್ರತಿ ಗರ್ಭ, ಪ್ರತಿ ಗರ್ಭಪಾತದ ಹಿಂದೆ ಕಾರಣ ಇರುತ್ತದೆ. ದೈಹಿಕ ಮತ್ತು ಆಧ್ಯಾತ್ಮಿಕ ಎರಡು ಅಂಶಗಳು ಇರುತ್ತೆ. ವೈಜ್ಞಾನಿಕ ಸಲಹೆಗಳ ಜೊತೆಗೆ ದೈವಿಕ ಶಕ್ತಿಯ ಕೈ ಹಿಡಿದರೆ ನಿಮ್ಮ ಪಯಣ ಇನ್ನಷ್ಟು ಸಲೀಸಾಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ. ಅವರ ಪೋಸ್ಟ್ ವೈರಲ್ ಆಗ್ತಿದೆ.
ಈ ಲೇಖನದಲ್ಲಿ ತಿಳಿಸಿರುವ ವಿಚಾರವೂ ವೈದ್ಯರ ವೈಯಕ್ತಿಕ ವಿಚಾರಧಾರೆಗೆ ಸಂಬಂಧಿಸಿದ್ದಾಗಿದ್ದು, ಇದನ್ನು ಏಷ್ಯಾನೆಟ್ ನ್ಯೂಸ್ ಧೃಢೀಕರಿಸುವುದಿಲ್ಲ.


