ಕರ್ಣನಿಂದ ಕೃಷ್ಣನವರೆಗೆ, ನಿಮ್ಮೊಳಗೆ ಮಹಾಭಾರತದ (Mahabharata) ಪಾತ್ರವೊಂದಿದೆ. ಅದರ ಸ್ವಭಾವಗಳಿವೆ. ನಿಮ್ಮ ಜನ್ಮದಿನಾಂಕ ಅಥವಾ ಜನ್ಮಸಂಖ್ಯೆಯನ್ನು ಆಧರಿಸಿ ಆ ಪಾತ್ರ ಯಾವುದು ಎಂದು ನಿರ್ಧಾರವಾಗುತ್ತದೆ. ನೀವು ಯಾರು? ಇಲ್ಲಿ ನೋಡಿ.

ಮಹಾಭಾರತವು ಹಿಂದೂ ಧರ್ಮದ ಅತ್ಯಂತ ಪವಿತ್ರ ಗ್ರಂಥಗಳಲ್ಲಿ ಒಂದು. ಈ ಮಹಾಕಾವ್ಯದಲ್ಲಿನ ಪಾತ್ರಗಳು ಇಂದಿಗೂ ನಮ್ಮ ಜೀವನ, ಯೋಚನೆ ಮತ್ತು ಸ್ವಭಾವದೊಂದಿಗೆ ನಂಟು ಹೊಂದಿವೆ. ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ಪ್ರಕಾರ, ನಮ್ಮ ಜನ್ಮ ಸಂಖ್ಯೆ ನಮ್ಮೊಳಗಿನ ಶಕ್ತಿ ಮತ್ತು ಸ್ವಭಾವವನ್ನು ತೋರಿಸುತ್ತದೆ ಎಂಬ ನಂಬಿಕೆ ಇದೆ. ಹಾಗಾದರೆ, ನಿಮ್ಮ ಜನ್ಮ ದಿನಾಂಕದ ಆಧಾರದಲ್ಲಿ ನೀವು ಮಹಾಭಾರತದ ಯಾವ ಪಾತ್ರದ ಶಕ್ತಿಯನ್ನು ಹೊತ್ತುಕೊಂಡಿದ್ದೀರಿ ಎಂಬುದನ್ನು ನೋಡೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜನ್ಮ ಸಂಖ್ಯೆ: 1, 10, 19, 28

ಆಡಳಿತ ಗ್ರಹ – ಸೂರ್ಯ. ಜನ್ಮ ಸಂಖ್ಯೆ 1 ಇರುವವರು ಸೂರ್ಯನ ಪ್ರಭಾವದಲ್ಲಿರುತ್ತಾರೆ. ಆತ್ಮವಿಶ್ವಾಸ, ನಾಯಕತ್ವ ಮತ್ತು ತೇಜಸ್ಸು ಇವರ ಗುಣ. ಈ ಸಂಖ್ಯೆಗೆ ಹೊಂದಿಕೊಳ್ಳುವ ಮಹಾಭಾರತದ ಪಾತ್ರ ಕರ್ಣ. ಕರ್ಣನು ಸೂರ್ಯನ ಮಗನಾಗಿ ಪ್ರಸಿದ್ಧ. ಅವನ ಧೈರ್ಯ, ದಾನಶೀಲತೆ ಮತ್ತು ಸ್ವಾಭಿಮಾನ ಈ ಸಂಖ್ಯೆಯ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.

ಜನ್ಮ ಸಂಖ್ಯೆ: 2, 11, 20, 29

ಆಡಳಿತ ಗ್ರಹ – ಚಂದ್ರ. ಈ ಸಂಖ್ಯೆ ಭಾವನೆ, ಮನಸ್ಸು ಮತ್ತು ಜಲ ತತ್ವವನ್ನು ಪ್ರತಿನಿಧಿಸುತ್ತದೆ. ಈ ಸಂಖ್ಯೆಗೆ ಹೊಂದುವ ಪಾತ್ರ ಭೀಷ್ಮ. ಗಂಗೆಯ ಮಗನಾದ ಭೀಷ್ಮನು ತ್ಯಾಗ, ಸಹನೆ ಮತ್ತು ಭಾವನಾತ್ಮಕ ಸ್ಥಿರತೆಯ ಸಂಕೇತ.

ಜನ್ಮ ಸಂಖ್ಯೆ: 3, 12, 21, 30

ಆಡಳಿತ ಗ್ರಹ – ಗುರು (ಬೃಹಸ್ಪತಿ). ಜ್ಞಾನ, ಬುದ್ಧಿ ಮತ್ತು ವಿವೇಕ ಈ ಸಂಖ್ಯೆಯ ಪ್ರಮುಖ ಲಕ್ಷಣಗಳು. ಈ ಸಂಖ್ಯೆಗೆ ಹೊಂದುವ ಮಹಾಭಾರತದ ಪಾತ್ರ ಗುರು ದ್ರೋಣಾಚಾರ್ಯ. ಪಾಂಡವರು ಮತ್ತು ಕೌರವರ ಗುರುವಾಗಿದ್ದ ದ್ರೋಣರು ವಿದ್ಯೆ ಮತ್ತು ಶಿಸ್ತುಗಳ ಪ್ರತೀಕ.

ಜನ್ಮ ಸಂಖ್ಯೆ: 4, 13, 22, 31

ಆಡಳಿತ ಗ್ರಹ – ರಾಹು. ರಾಹು ಮೋಹ, ಭ್ರಮೆ ಮತ್ತು ಭೌತಿಕ ಆಸೆಗಳನ್ನು ಸೂಚಿಸುತ್ತದೆ. ಈ ಸಂಖ್ಯೆಗೆ ಹೊಂದುವ ಪಾತ್ರ ದುರ್ಯೋಧನ. ಕೌರವರ ಹಿರಿಯನಾದ ದುರ್ಯೋಧನನ ಅಹಂಕಾರ ಮತ್ತು ಆಸೆಯೇ ಮಹಾಭಾರತ ಯುದ್ಧಕ್ಕೆ ಕಾರಣವಾಯಿತು.

ಜನ್ಮ ಸಂಖ್ಯೆ: 5, 14, 23

ಆಡಳಿತ ಗ್ರಹ – ಬುಧ. ಬುದ್ಧಿ, ಸಂವಹನ, ಚಾತುರ್ಯ ಮತ್ತು ಹಾಸ್ಯಪ್ರಜ್ಞೆ ಈ ಸಂಖ್ಯೆಯ ಗುಣ. ಈ ಸಂಖ್ಯೆಗೆ ಹೊಂದುವ ಅತ್ಯಂತ ಪ್ರಮುಖ ಪಾತ್ರ ಶ್ರೀಕೃಷ್ಣ. ಅರ್ಜುನನಿಗೆ ಗೀತೋಪದೇಶ ನೀಡಿ ಯುದ್ದದತ್ತ ಮುನ್ನಡೆಸಿದವನು, ಪಾಂಡವರ ಇಡಿಯ ಬದುಕನ್ನು ಧರ್ಮದ ಮಾರ್ಗದಲ್ಲಿ ನಿಲ್ಲಿಸಿ ಗೆಲ್ಲಿಸಿದವನು ಕೃಷ್ಣ.

ಜನ್ಮ ಸಂಖ್ಯೆ: 6, 15, 24

ಆಡಳಿತ ಗ್ರಹ – ಶುಕ್ರ. ಶುಕ್ರ ಸೌಂದರ್ಯ, ಪ್ರೀತಿ ಮತ್ತು ಸ್ತ್ರೀಶಕ್ತಿಯ ಪ್ರತಿನಿಧಿ. ಈ ಸಂಖ್ಯೆಗೆ ಹೊಂದುವ ಪಾತ್ರ ದ್ರೌಪದಿ. ಪಾಂಡವರ ಪತ್ನಿಯಾದ ದ್ರೌಪದಿ ಸೌಂದರ್ಯ ಮಾತ್ರವಲ್ಲ, ಧೈರ್ಯ ಮತ್ತು ಆತ್ಮಗೌರವದ ಸಂಕೇತವೂ ಹೌದು.

ಜನ್ಮ ಸಂಖ್ಯೆ: 7, 16, 25

ಆಡಳಿತ ಗ್ರಹ – ಕೇತು. ಕೇತು ಧರ್ಮ ಮತ್ತು ಆಧ್ಯಾತ್ಮಿಕತೆಯನ್ನು ಸೂಚಿಸುತ್ತದೆ. ಈ ಸಂಖ್ಯೆಗೆ ಹೊಂದುವ ಪಾತ್ರ ಧರ್ಮರಾಜ ಯುಧಿಷ್ಠಿರ. ಯಾವ ಸಂದರ್ಭದಲ್ಲೂ ಧರ್ಮದ ದಾರಿ ಬಿಡದ ಯುಧಿಷ್ಠಿರ ಈ ಸಂಖ್ಯೆಯ ಶಕ್ತಿಯನ್ನು ಪ್ರತಿಬಿಂಬಿಸುತ್ತಾನೆ.

ಜನ್ಮ ಸಂಖ್ಯೆ: 8, 17, 26

ಆಡಳಿತ ಗ್ರಹ – ಶನಿ. ಶನಿಯು ಶಿಸ್ತು, ನ್ಯಾಯ ಮತ್ತು ಕರ್ಮದ ಪ್ರತೀಕ. ಈ ಸಂಖ್ಯೆಗೆ ಹೊಂದುವ ಪಾತ್ರ ವಿದುರ. ವಿದುರನು ಸದಾ ಸತ್ಯ, ನ್ಯಾಯ ಮತ್ತು ಕರ್ಮದ ಬಗ್ಗೆ ಮಾತನಾಡಿದ ಜ್ಞಾನಿ. ಭೀಷ್ಮರಂಥವರೇ ಹಿಂಜರಿದಾಗಲೂ ಈತ ನ್ಯಾಯನಿಷ್ಠುರವಾಗಿ ಮಾತಾಡಿದವನು.

ಜನ್ಮ ಸಂಖ್ಯೆ: 9, 18, 27

ಆಡಳಿತ ಗ್ರಹ – ಮಂಗಳ. ಶಕ್ತಿ, ಧೈರ್ಯ ಮತ್ತು ಸಾಹಸ ಈ ಸಂಖ್ಯೆಯ ಗುಣಗಳು. ಈ ಸಂಖ್ಯೆಗೆ ಹೊಂದುವ ಪಾತ್ರ ಭೀಮ. ಅಪಾರ ಬಲ, ಧೈರ್ಯ ಮತ್ತು ಭಯರಹಿತ ಸ್ವಭಾವದಿಂದ ಭೀಮ ಪ್ರಸಿದ್ಧ.

ನಿಮ್ಮ ಸಂಖ್ಯೆಯೇ ನಿಮ್ಮ ಶಕ್ತಿ. ಪ್ರತಿ ಜನ್ಮ ಸಂಖ್ಯೆಯೂ ತನ್ನದೇ ಆದ ಶಕ್ತಿಯನ್ನು ಹೊಂದಿದೆ. ಮಹಾಭಾರತದ ಪಾತ್ರಗಳಂತೆ, ನಮ್ಮೊಳಗಿನ ಗುಣಗಳನ್ನು ಅರಿತು ಸರಿಯಾದ ದಾರಿಯಲ್ಲಿ ಬಳಸಿಕೊಂಡರೆ ಜೀವನ ಇನ್ನಷ್ಟು ಅರ್ಥಪೂರ್ಣವಾಗುತ್ತದೆ.