ನವದೆಹಲಿ: ಕರ್ನಾಟಕ, ಮಹಾರಾಷ್ಟ್ರ ರೀತಿಯಲ್ಲೇ ದೆಹಲಿಯ ಪಂಚತಾರಾ ಹೊಟೆಲ್ಗಳಾದ ಜೆಡಬ್ಲ್ಯೂ ಮ್ಯಾರಿಯಟ್ ಮತ್ತು ಅಂದಾಜ್ನಲ್ಲಿ ಕಳಪೆ ಆಹಾರ ಮತ್ತು ವ್ಯವಸ್ಥೆ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಆಹಾರ ನಿಯಂತ್ರಕ ಎಫ್ಎಸ್ಎಸ್ಎಐ ನೋಟಿಸ್ ಜಾರಿ ಮಾಡಿದೆ. ಗಮನಿಸಬೇಕಾದ ಅಂಶವೆಂದರೆ, ಬ್ರಿಕ್ಸ್ ಸಭೆಗೆಂದು ಆಗಮಿಸುವ ವಿದೇಶಿ ಗಣ್ಯರು ಉಳಿದುಕೊಳ್ಳುವುದು ಈ ಎರಡು ಹೊಟೆಲ್ಗಳಲ್ಲಿ.
ಪರಿಶೀಲನೆ ವೇಳೆ ಈ ಎರಡೂ ಹೊಟೆಲ್ಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಗಂಭೀರ ಕೊರತೆಗಳು ಕಂಡುಬಂದಿವೆ. ಕೀಟ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳದ ಕಾರಣ ಜಿರಳೆ, ನೊಣ, ಸೊಳ್ಳೆ, ಜೇಡದ ಬಲೆ ಇತ್ಯಾದಿಗಳು ಫ್ರೀಜರ್, ಹಿಟ್ಟು ರುಬ್ಬುವ ಸ್ಥಳದಲ್ಲಿ ಪತ್ತೆಯಾಗಿವೆ. ಪಾನೀಯಗಳನ್ನು ತುಂಬಿಸುವಲ್ಲಿ ಗುಟ್ಕಾ ಪ್ಯಾಕೆಟ್ಗಳು ಕಂಡುಬಂದಿವೆ. ಇನ್ನೊಂದೆಡೆ ಸರಿಯಾಗಿ ತೊಳೆಯದ ಪಾತ್ರೆಗಳು, ಕಲುಷಿತ ನೀರು, ಕೊಳೆಯುತ್ತಿರುವ ಟೊಮ್ಯಾಟೊ, ಬೂಸ್ಟ್ ಬಂದಿರುವ ಆ್ಯಪಲ್, ಸಸ್ಯಾಹಾರಿ ಮತ್ತು ಮಾಂಸಾಹಾರಿ ಪದಾರ್ಥಗಳನ್ನು ಒಂದೆಡೆ ಇಟ್ಟಿರುವುದು ಕೂಡ ಪತ್ತೆ ಆಗಿದೆ. ಪನೀರ್, ಖೋಯಾ, ಚನ್ನಾ ಮಸಾಲಾ, ಮೆಣಸಿನ ಪ್ಯಾಕೆಟ್ಗಳ ಮೇಲೆ ಅವುಗಳಿಗೆ ಸಂಬಂಧಿಸಿದ ವಿವರಗಳನ್ನು ಬರೆಯಲಾಗಿರಲಿಲ್ಲ. 87 ಕೆ.ಜಿ. ಅವಧಿ ಮುಗಿದ ಸಿಹಿತಿನಿಸು, ಕೇಕ್, ಬ್ರೆಡ್ ಕೂಡ ದೊರಕಿದೆ.