ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ತಾನು ಮಧ್ಯಸ್ಥಿಕೆ ವಹಿಸಿದ್ದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ 8ನೇ ಬಾರಿ ಹೇಳಿದ್ದಾರೆ.   

ವಾಷಿಂಗ್ಟನ್‌ (ಮೇ.23): ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ತಾನು ಮಧ್ಯಸ್ಥಿಕೆ ವಹಿಸಿದ್ದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ 8ನೇ ಬಾರಿ ಹೇಳಿದ್ದಾರೆ. ಇತ್ತೀಚೆಗೆ ಇದಕ್ಕೆ ಶ್ವೇತಭವನ ಸ್ಪಷ್ಟನೆ ನೀಡಿ, ‘ಅದು ಮಧ್ಯಸ್ಥಿಕೆ ಅಲ್ಲ, ಸಹಾಯ ಮಾತ್ರ’ ಎಂದಿದ್ದರೂ ಟ್ರಂಪ್‌ ತಮ್ಮ ಹಳೆಯ ಹೇಳಿಕೆಯನ್ನು ಪುನರಾವರ್ತಿಸಿದ್ದಾರೆ

ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಂಫೋಸಾ ಜತೆಗಿನ ಭೇಟಿ ವೇಳೆ ಬುಧವಾರ ರಾತ್ರಿ ಮಾತನಾಡಿದ ಟ್ರಂಪ್‌, ‘ಭಾರತ-ಪಾಕ್‌ ನಡುವೆ ಗುಂಡಿನ ದಾಳಿ ಇನ್ನಷ್ಟು ಕೆಟ್ಟದಾಗುತ್ತಾ, ದೊಡ್ಡದಾಗುತ್ತಾ, ಆಳವಾಗುತ್ತಾ ಹೋಗುತ್ತಿತ್ತು. ಯಾರಾದರೂ ಕೊನೆಗೆ ಗುಂಡು ಹಾರಿಸಬೇಕಿತ್ತು. ಆ ವೇಳೆ ಭಾರತ-ಪಾಕಿಸ್ತಾನ ನಡುವಿನ ಕದನವನ್ನು ನಾವು ವ್ಯಾಪಾರದ ಮೂಲಕ (ವ್ಯಾಪಾರ ನಡೆಸುವ ಷರತ್ತಿನ ಮೂಲಕ) ಇತ್ಯರ್ಥಪಡಿಸಿಕೊಂಡಿದ್ದೇನೆ. ಭಾರತ-ಪಾಕ್‌ ಜತೆ ನಮ್ಮ ದೊಡ್ಡ ವ್ಯಾಪಾರ ನಡೆಯುತ್ತದೆ’ ಎಂದರು.

‘ಪಾಕಿಸ್ತಾನವು ಕೆಲವು ಅತ್ಯುತ್ತಮ ಜನರನ್ನು ಮತ್ತು ಒಳ್ಳೆಯ, ಶ್ರೇಷ್ಠ ನಾಯಕರನ್ನು ಹೊಂದಿದೆ ಮತ್ತು ಭಾರತ ನನ್ನ ಸ್ನೇಹಿತ ಮೋದಿಯನ್ನು ಹೊಂದಿದೆ. ಅವರು ಒಳ್ಳೆಯ ವ್ಯಕ್ತಿಗಳು ಮತ್ತು ನಾನು ಅವರಿಬ್ಬರ ಜತೆಗೂ ಮಾತನಾಡಿದೆ’ ಎಂದರು. ಆಗ ದಕ್ಷಿಣ ಆಫ್ರಿಕಾದ ಅಧ್ಯಕ್ಷರು ’ನಾನೂ ಮೋದಿಯ ಒಳ್ಳೇ ಸ್ನೇಹಿತ’ ಎಂದರು.

ನನ್ನಲ್ಲಿ ಈಗ ಸಿಂದೂರ ಹರಿಯುತ್ತಿದೆ, ಇದು ಭಾರತದ ಹೊಸ ರೂಪ: ಪ್ರಧಾನಿ ಮೋದಿ

ಮೌನವೇಕೆ?- ಮೋದಿಗೆ ಕಾಂಗ್ರೆಸ್‌ ಪ್ರಶ್ನೆ: ‘ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಸಂಘರ್ಷವನ್ನು ವ್ಯಾಪಾರದ ಭರವಸೆಯ ಮೂಲಕ ಬಗೆಹರಿಸಿದ್ದೇನೆ ಎಂದು ಟ್ರಂಪ್ 8ನೇ ಬಾರಿ ಹೇಳಿದ್ದಾರೆ. ಆದರೂ ಮೋದಿ ಏಕೆ ಮೌನ ವಹಿಸಿದ್ದಾರೆ?’ ಎಂದು ಕಾಂಗ್ರೆಸ್ ವಕ್ತಾರರಾದ ಜೈರಾಂ ರಮೇಶ್‌ ಹಾಗೂ ಪವನ್‌ ಖೇರಾ ಪ್ರಶ್ನಿಸಿದ್ದಾರೆ.