ವಾರ್ತೆ ಓದುವಾಗ ನೊಣ ನುಂಗಿದ ಪತ್ರಕರ್ತೆ: ವಿಡಿಯೋ
ಇಲ್ಲೊಂದು ಕಡೆ ಪತ್ರಕರ್ತೆಯೊಬ್ಬರು ಲೈವ್ನಲ್ಲಿ ಪಾಕಿಸ್ತಾನದ ಪ್ರವಾಹದ ಬಗ್ಗೆ ಸುದ್ದಿ ಬಿತ್ತರಿಸುತ್ತಿದ್ದಾಗ ನೊಣ ನುಂಗಿದ್ದಾರೆ. ಇದನ್ನು ಅವರೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಮೇತ ಹೇಳಿಕೊಂಡಿದ್ದಾರೆ.
ಪತ್ರಕರ್ತರು, ವಾರ್ತಾ ವಾಚಕರ ಜೀವನ ಅಂದುಕೊಂಡಷ್ಟು ಸುಲಭವಿರುವುದಿಲ್ಲ. ಕೆಲವೊಮ್ಮೆ ಲೈವ್ನಲ್ಲೇ ಏನಾದರೂ ಅನಾಹುತಗಳು ಆಗಿ ಬಿಡುತ್ತವೆ. ಧುತ್ತನೇ ಎದುರಾಗುವ ಅನಾಹುತಗಳನ್ನು ನೇರಪ್ರಸಾರ ಮಾಡಬೇಕಾಗಿರುತ್ತದೆ. ಯೋಚನೆ ಮಾಡಲು ಸಮಯವಿಲ್ಲದೇ ತಡವರಿಸುವಂತಾಗುತ್ತದೆ. ಕೆಲವೊಮ್ಮೆ ಸ್ವಂತ ಕಸಿವಿಸಿಗಳು ಆಡಚಣೆಗಳನ್ನು ವೀಕ್ಷಕರಿಗೆ ತಿಳಿಯದಂತೆ ಮ್ಯಾನೇಜ್ ಮಾಡಬೇಕಾಗುತ್ತದೆ. ಮುಂದೆಯೇ ಕ್ಯಾಮರಾ ಇರುವುದರಿಂದ ಆತಂಕ ಉಂಟಾದರೂ ತೋರ್ಪಡಿಸಿಕೊಳ್ಳಲಾಗದಂತಹ ಸ್ಥಿತಿ ಇರುತ್ತದೆ. ಹಾಗೆಯೇ ಇಲ್ಲೊಂದು ಕಡೆ ಪತ್ರಕರ್ತೆಯೊಬ್ಬರು ಲೈವ್ನಲ್ಲಿ ಪಾಕಿಸ್ತಾನದ ಪ್ರವಾಹದ ಬಗ್ಗೆ ಸುದ್ದಿ ಬಿತ್ತರಿಸುತ್ತಿದ್ದಾಗ ನೊಣ ನುಂಗಿದ್ದಾರೆ. ಇದನ್ನು ಅವರೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಮೇತ ಹೇಳಿಕೊಂಡಿದ್ದಾರೆ.
ಕೆನಡಾದ ನ್ಯೂಸ್ ಆಂಕರ್ ಆಗಿರುವ ಫರ್ಹಾ ನಸೀರ್ ಅವರು ಪಾಕಿಸ್ತಾನದ ಪ್ರವಾಹ (Pakistan floods) ಪರಿಸ್ಥಿತಿಯ ಬಗ್ಗೆ ಲೈವ್ನಲ್ಲಿ ವಿವರಿಸುತ್ತಿದ್ದಾಗ ಎಲ್ಲಿಂದಲೋ ಬಂದ ನೊಣವೊಂದು ಸೀದಾ ಫರ್ಹಾರ ತೆರೆದಿದ್ದ ಬಾಯಿಯೊಳಗೆ ಹೋಗಿದೆ. ಇದರಿಂದ ಕೆಲ ಕಾಲ ತುಸು ಗಾಬರಿಯಾದರೂ ತೋರಿಸಿಕೊಳ್ಳದ ಅವರು ನೊಣವನ್ನು ಬಾಯಿಯಿಂದ ತೆಗೆದು ಹೊರ ಹಾಕಲು ಪ್ರಯತ್ನಿಸದೇ ಹಾಗೆಯೇ ಕಷ್ಟಪಟ್ಟು ನುಂಗಿ ಬಿಟ್ಟಿದ್ದಾರೆ. ಈ ವಿಚಾರವನ್ನು ಸ್ವತಃ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.
ಇವರು ಗ್ಲೋಬಲ್ ನ್ಯೂಸ್ ಟೊರೊಂಟೋಗೆ (Global News Toronto) ಜರ್ನಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದು ನೊಣ ನುಂಗಿದ್ದರೂ ಕೂಡ ಹೆಚ್ಚು ತಲೆಕೆಡಿಸಿಕೊಳ್ಳದೇ ನಿರೂಪಣೆ ಮುಂದುವರಿಸಿದ್ದಾರೆ. ಅಲ್ಲದೇ ಈ ವಿಚಾರವನ್ನು ನಂತರ ತಮಾಷೆಯಾಗಿ ತೆಗೆದುಕೊಂಡ ಅವರು, ಈ ವಿಡಿಯೋವನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಏಕೆಂದರೆ ಈ ದಿನಗಳಲ್ಲಿ ನಮಗೆ ನಗು ಅಗತ್ಯವಾಗಿದೆ. ನಾನಿವತ್ತೂ ನೇರ ನಿರೂಪಣೆ ವೇಳೆ ನೊಣವನ್ನು ನುಂಗಿದೆ ಎಂದು ಬರೆದುಕೊಂಡಿದ್ದಾರೆ.
ಆದಾಗ್ಯೂ, ನಂತರ ಸಂದರ್ಶನವೊಂದರಲ್ಲಿ, ಎಂಟರ್ಟೈನ್ಮೆಂಟ್ ಟುನೈಟ್ ಕೆನಡಾದ (Entertainment Tonight Canada) ಹೋಸ್ಟ್ಗಳಾದ ಚೆರಿಲ್ ಹಿಕಿ (Cheryl Hickey) ಮತ್ತು ಡಲ್ಲಾಸ್ ಡಿಕ್ಸನ್ (Dallas Dixon) ಅವರೊಂದಿಗೆ ಈ ಕ್ಷಣದ ಬಗ್ಗೆ ಫರ್ಹಾ ನಸೀರ್ ಮಾತನಾಡಿದ್ದು, ನಾನು ಸುದ್ದಿಯ ಆರಂಭದಲ್ಲಿ ನೊಣ ನನ್ನ ಸುತ್ತಲು ಹಾರುತ್ತಿರುವುದನ್ನು ನೋಡಿದೆ. ಮತ್ತು ನಾನು ಇವತ್ತು ಬೇಡ ಬೇರೆಡೆ ಹಾರು ಇವತ್ತು ಮಾತ್ರ ಬೇಡ ಅನ್ನುವಂತಿದ್ದೆ. ಇವತ್ತು ನನಗೆ ಅಡ್ಡಿ ಮಾಡಲು ನಾನು ಬಿಡುವುದಿಲ್ಲ ಎಂಬಂತಿದ್ದೆ. ಆದರೆ ನೊಣ ಬಂದು ಬಾಯಿ ಸೇರಿಯೇ ಬಿಟ್ಟಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
ನ್ಯೂಸ್ ಆಂಕರ್ಗಳಿಗೆ ಕೇವಲ ಟೆಲಿಪ್ರೊಂಪ್ಟರ್ನಲ್ಲಿ(teleprompter) ಬರುವ ಸಾಲುಗಳನ್ನು ಓದುವ ಕೆಲಸ ಮಾತ್ರ ಇರುವುದಿಲ್ಲ. ಅವರು ಹಲವು ಒತ್ತಡದ ಸಂದರಭಗಳನ್ನು ಕೂಲಾಗಿ ನಿಭಾಯಿಸಬೇಕಾಗುತ್ತದೆ. ಅನೇಕ ನಿರೂಪಕರು, ಸಮಯ ಮತ್ತು ಕೆಲವು ಅಹಿತಕರ ಸಂದರ್ಭಗಳಲ್ಲಿ ಸಿಲುಕಿ ಪರೀಕ್ಷಿಸಲ್ಪಟ್ಟಿದ್ದಾರೆ . ಧುತ್ತನೇ ಎದುರಾಗುವ ಎದುರಾಗುವ ಹೆಚ್ಚಿನ ಮಾಹಿತಿಗಳಿಲ್ಲದ ಸಂದರ್ಭವನ್ನು ಸಹಜ ಎಂಬಂತೆ ನಿಭಾಯಿಸುವ ನಿರೂಪಣೆ ಸುಲಭದ ಮಾತಲ್ಲ.
ಇತ್ತ ಪಾಕಿಸ್ತಾನದಲ್ಲಿ ಎಂದೂ ಕಂಡು ಕೇಳರಿಯದ ಪ್ರವಾಹಕ್ಕೆ ಜನ ತತ್ತರಿಸಿದ್ದಾರೆ. ಎಂಟು ವಾರಗಳ ಕಾಲ ನಿಲ್ಲದ ಧಾರಾಕಾರ ಮಳೆಯಿಂದ ದೇಶದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಹವಾಮಾನ ವೈಪರೀತ್ಯವೂ ಆತಂಕಕಾರಿಯಾಗಿದ್ದು, ಜನ ತಿನ್ನಲು ಆಹಾರವಿಲ್ಲದೇ ಆಕಾಶ ನೋಡುವಂತಹ ಸ್ಥಿತಿ ಇದೆ.