ಓಮನ್ನಲ್ಲಿ ಸಮುದ್ರದ ಭಾರಿ ಅಲೆಗೆ ತಂದೆ ಮಕ್ಕಳು ಸೇರಿ ಕರ್ನಾಟಕದ ಮೂವರು ಸಮುದ್ರ ಪಾಲು!
- ಸಮುದ್ರ ತಟದಲ್ಲಿ ಆಟವಾಡುತ್ತಿದ್ದ ಒಂದೇ ಕುಟುಂಬ ಮೂವರು ಸಾವು
- ಭಾರಿ ಅಲೆಗೆ ಕೊಚ್ಚಿ ಹೋದ ಕರ್ನಾಟಕ ಮೂಲದ ಕುಟುಂಬ
- ಓಮನ್ನ ಮುಘ್ಸೈಲ್ ಸಮುದ್ರ ತೀರದಲ್ಲಿ ನಡೆದ ಘಟನೆ
ಓಮನ್(ಜು.14): ಸಮುದ್ರ ತೀರದಲ್ಲಿ ಒಂದಷ್ಟು ಹೊತ್ತು ಕಾಲ ಕಳೆಯಲು ಹೋದ ಒಂದೇ ಕುಟುಂಬದ ಮೂವರು ಭಾರಿ ಅಲೆಗೆ ಕೊಚ್ಚಿ ಹೋದ ಘಟನೆ ಓಮನ್ ದೇಶದ ಮುಘ್ಸೈಲ್ ವಲಯದ ಸಮುದ್ರ ತೀರದಲ್ಲಿ ನಡೆದಿದೆ. ಭಾರತದ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ವಾಸವಾಗಿರುವ ಕರ್ನಾಟಕದ ಮೂಲದ ಶಶಿಕಾಂತ್ ಮಹಮನೆ ಕುಟುಂಬ ಕೆಲಸದ ನಿಮಿತ್ತ ದುಬೈಗೆ ಸ್ಥಳಾಂತರಗೊಂಡಿತ್ತು. ರಜಾ ದಿನದಲ್ಲಿ ತಂದೆ ಹಾಗೂ ಇಬ್ಬರು ಮಕ್ಕಳು ಮುಘ್ಸೈಲ್ ವಲಯದಲ್ಲಿರುವ ಅತೀ ಸುಂದರ ಹಾಗೂ ಅಪಾಯಕಾರಿ ಸಮುದ್ರ ತೀರಕ್ಕೆ ತೆರಳಿತ್ತು. ಪ್ರವಾಸಿಗರಿಂದ ತುಂಬಿರುವ ಈ ಪ್ರದೇಶದಲ್ಲಿ ಅಲೆಗಳ ನೀರಿನಲ್ಲಿ ಆಟವಾಡಲು ಶಶಿಕಾಂತ್ ಇಬ್ಬರು ಮಕ್ಕಳಾದ 6 ವರ್ಷದ ಶ್ರೇಯಸ್ ಹಾಗೂ 9 ವರ್ಷದ ಶ್ರೇಯಾ ತೆರಳಿದ್ದಾರೆ. ಒಂದೇ ಸಮನೆ ಬಂದ ಭಾರಿ ಅಲೆಗೆ ಇಬ್ಬರು ಮಕ್ಕಳು ಕೊಚ್ಚಿ ಹೋಗಿದ್ದಾರೆ. ಮಕ್ಕಳನ್ನು ರಕ್ಷಿಸಲು ಮುಂದಾದ ಶಶಿಕಾಂತ್ ಕೂಡ ಸಮುದ್ರಪಾಲಾಗಿದ್ದಾರೆ. ಇದರಲ್ಲಿ 42 ವರ್ಷದ ಶಶಿಕಾಂತ್ ಮಹಮನೆ ಹಾಗೂ ಶ್ರೇಯ ಮೃತದೇಹಗಳನ್ನು ಓಮನ್ ಪೊಲೀಸರು ಹಾಗೂ ರಕ್ಷಣಾ ತಂಡ ಹೊರತೆಗೆದಿದೆ. ಆದರೆ 6 ವರ್ಷದ ಬಾಲಕ ಶ್ರೇಯಸ್ ಮೃತದೇಹ ಪತ್ತೆಯಾಗಿಲ್ಲ. ಈ ಭಾರಿ ಅಲೆಗೆ ಒಟ್ಟು ಐವರು ಕಾಣೆಯಾಗಿದ್ದಾರೆ. ಎಲ್ಲರೂ ಭಾರತೀಯ ಮೂಲದವರು ಎಂದು ಓಮನ್ ಪೊಲೀಸರು ಹೇಳಿದ್ದಾರೆ.
ಸ್ಥಳೀಯ ಮಾಧ್ಯಮದ ವರದಿ ಪ್ರಕಾರ, ಭಾನುವಾರ(ಜು.11) ಕುಟುಂಬ ಸಮೇತ ಶಶಿಕಾಂತ್ ಮಹಮನೆ ಓಮನ್ನ ಮುಘ್ಸೈಲ್ ಸಮುದ್ರ(oman mughsail beach) ತೀರಕ್ಕೆ ತೆರಳಿದ್ದಾರೆ. ಈ ಸಮುದ್ರ ಸುಂದರವಾಗಿದ್ದರೂ ಅಪಾಯಕಾರಿಯಾಗಿದೆ. ಹೀಗಾಗಿ ಕೆಲ ಪ್ರದೇಶಗಳಲ್ಲಿ ತಡೆ ಗೋಡೆಗಳನ್ನು ಹಾಕಲಾಗಿದ್ದು, ಯಾರೂ ಪ್ರವೇಶಿಸದಂತೆ ಎಚ್ಚರಿಕೆ ಸೂಚನಾ ಫಲಕ ಹಾಕಲಾಗಿದೆ. ಆದರೆ ಹಲವು ಪ್ರವಾಸಿಗರು(Tourist) ಈ ತಡೆ ಗೋಡೆ ದಾಟಿ ಸಮುದ್ರ ತಟಕ್ಕೆ ತೆರಳಿದ್ದಾರೆ. ಹೀಗಾಗಿ ಶಶಿಕಾಂತ್ ಮಹಮನೆ(Karnataka Family) ಹಾಗೂ ಇಬ್ಬರು ಮಕ್ಕಳು ಇತರ ಪ್ರವಾಸಿಗರಂತೆ ಕಬ್ಣಿಣದ ಬೇಲಿ ದಾಟಿ ಮುಂದೆ ಸಾಗಿದ್ದಾರೆ. ಮೊದಲು ಬಂದ ಅಲೆಗಳ ನೀರನ್ನು ಎಂಜಾಯ್ ಮಾಡುತ್ತಾ ಕಾಲ ಕಳೆದಿದ್ದಾರೆ. ಆದರೆ ಒಂದೇ ಸಮನೆ ಬಂದ ಭಾರಿ ಗಾತ್ರದ ಅಲೆಗೆ(Strong Tides) ಮಕ್ಕಳು ಕೊಚ್ಚಿ ಹೋಗಿದ್ದಾರೆ. ಮಕ್ಕಳನ್ನು ಹಿಡಿಯಲು ಹೋದ ತಂದೆ ಶಶಿಕಾಂತ್ ಕೂಡ ನೀರು ಪಾಲಾಗಿದ್ದಾರೆ.
ಕಾಪುನಲ್ಲಿ ಕಡಲ್ಕೊರೆತ: ರೆಸಾರ್ಟ್ಗೆ ತಡೆಗೋಡೆ, ಬಡವರ ಮನೆಗಳಿಗಿಲ್ಲ ರಕ್ಷಣೆ..!
ಈ ಆಘಾತಕಾರಿ ಸುದ್ದಿ ಕೇಳಿ ಶಶಿಕಾಂತ್ ಪತ್ನಿ ಆಘಾತಕ್ಕೊಳಗಾಗಿದ್ದಾರೆ. ಮನೆಯಲ್ಲಿದ್ದ ಪತ್ನಿ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಸಾಂಗ್ಲಿಯ ಜಾಟ್ ಪಟ್ಟಣದಲ್ಲಿರುವ ಶಶಿಕಾಂತ್ ಕುಟುಂಬ ಈಗಾಗಲೇ ಓಮನ್ಗೆ ತೆರಳಲು ನೆರವು ನೀಡಿದ್ದೇವೆ. ಓಮನ್ನಲ್ಲಿ ಭಾರತೀಯ ಧೂತವಾಸ ಕಚೇರಿ ಅಧಿಕಾರಿಗಳು ಎಲ್ಲಾ ನೆರವು ನೀಡಲಿದ್ದಾರೆ ಎಂದು ಸಾಂಗ್ಲಿ ಜಿಲ್ಲಾಧಿಕಾರಿ ಅಭಿಜಿತ್ ಚೌಧರಿ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಡಲಬ್ಬರದ ನಡುವೆಯೂ ಪ್ರವಾಸಿಗರ ಹುಚ್ಚಾಟ
ಮುಘ್ಸೈಲ್ ಸಮುದ್ರ ತಟದಲ್ಲಿ ಒಟ್ಟು ಐವರು ನೀರುಪಾಲಾಗಿದ್ದಾರೆ. ಇದರಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಇನ್ನುಳಿದ ಮೂವರ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸುತ್ತಿದ್ದೇವೆ ಎಂದು ಓಮನ್ ಪೊಲೀಸರು(Royal Oman Police) ಹೇಳಿದ್ದಾರೆ. ಮುಘ್ಸೈಲ್ ಸಮುದ್ರ ತೀರದಲ್ಲಿ ಭಾರಿ ಅಲೆಗಳು ಅಪ್ಪಳಿಸುತ್ತದೆ. ಇದೇ ಕಾರಣಕ್ಕೆ ಈ ಸಮುದ್ರ ತೀರದ ಹಲವು ಪ್ರದೇಶಗಳಲ್ಲಿ ಸೂಚನಾ ಫಲಕಗಳನ್ನು ಹಾಕಲಾಗಿದೆ. ಇಲ್ಲಿ ಒಂದೇ ಬಾರಿಗೆ ಭಾರಿ ಗಾತ್ರದ ಅಲೆಗಳು ಅಪ್ಪಳಿಸಿ ಹಲವು ಜೀವಗಳು ನೀರು ಪಾಲಾಗಿದೆ.