ವಿದೇಶದ ಈ 7 ಪ್ರಾಂತ್ಯಕ್ಕೆ ಭಾರತೀಯರು ಪ್ರಯಾಣ ಮಾಡಬೇಡಿ ಎಂದು ರಾಯಭಾರಿ ಕಚೇರಿ ಖಡಕ್ ಸೂಚನೆ ನೀಡಿದೆ. ಥಾಯ್ಲೆಂಡ್-ಕಾಂಬೋಡಿಯಾ ಯುದ್ಧದ ಬೆನ್ನಲ್ಲೇ ಅಧಿಕಾರಿಗಳು ಎಚ್ಚರಿಸಿದ್ದಾರೆ. ಯಾವ ಪ್ರಾಂತ್ಯದ ಪ್ರಯಾಣ ರದ್ಧುಗೊಳಿಸಲು ಸೂಚಿಸಿದ್ದಾರೆ.
ಥಾಯ್ಲೆಂಡ್ (ಜು.25) ಭಾರತೀಯರಿಗೆ ವಿದೇಶಾಂಗ ರಾಯಭಾರ ಕಚೇರಿ ಅಧಿಕಾರಿಗಳು ಮಹತ್ವದ ಸೂಚನೆ ನೀಡಿದ್ದಾರೆ. ಥಾಯ್ಲೆಂಡ್ ಹಾಗೂ ಕಾಂಬೋಡಿಯಾ ದೇಶ ಸಾವಿರಾರು ವರ್ಷ ಹಳೇ ಹಿಂದೂ ಶಿವನ ದೇವಾಲಯ ಹಾಗೂ ಸುತ್ತಮುತ್ತಲಿನ ದೇಗುಲಕ್ಕಾಗಿ ಯುದ್ಧ ಆರಂಭಿಸಿದೆ. ರಾಕೆಟ್ ದಾಳಿ, ಆರ್ಟಿಲರಿ, ಮಿಸೈಲ್ ಸೇರಿದಂತೆ ಹಲವು ಶಸ್ತಾಸ್ತ್ರಗಳ ಬಳಕೆ ಮಾಡುತ್ತಿದೆ. ಇದರ ಪರಿಣಾಮ ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಥಾಯ್ಲೆಂಡ್ನ ಭಾರತೀಯ ರಾಯಭಾರ ಕಚೇರಿ ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಸದ್ಯ ಥಾಯ್ಲೆಂಡ್ನ 7 ಪ್ರಾಂತ್ಯಗಳಿಗೆ ಭೇಟಿ ನೀಡದಂತೆ ಸೂಚನೆ ನೀಡಿದೆ.
ಥಾಯ್ಲೆಂಡ್ ಭಾರತೀಯ ರಾಯಭಾರ ಕಚೇರಿ ಭಾರತೀಯರಿಗೆ ಮಾರ್ಗಸೂಚಿ ಪ್ರಕಟಿಸಿದೆ. ಗುರುವಾರ (ಜುಲೈ 24) ರಂದು ಕಾಂಬೋಡಿಯಾ ಏಕಾಏಕಿ ಥಾಯ್ಲೆಂಡ್ ಮೇಲೆ ರಾಕೆಟ್ ದಾಳಿ ನಡೆಸಿದ್ದರೆ, ಇತ್ತ ಥಾಯ್ಲೆಂಡ್ ಏರ್ ಸ್ಟ್ರೈಕ್ ಮೂಲಕ ಪ್ರತಿದಾಳಿ ನಡೆಸಿದೆ. ಶುಕ್ರವಾರವೂ ದಾಳಿ ಮುಂದುವರಿದಿದೆ. ಈಗಾಲೇ ಥಾಯ್ಲೆಂಡ್ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರಿಗೆ ಮಹತ್ವದ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ಭಾರತೀಯ ರಾಯಭಾರ ಕಚೇರಿ ತಮ್ಮ ಭಾರತೀಯ ನಾಗರೀಕರಿಗೆ ಎಚ್ಚರಿಕೆ ನೀಡಿದೆ.
ಯುದ್ಧದಿಂದ ನಿರ್ಬಂಧಿಸಿರುವ ಥಾಯ್ಲೆಂಡ್ನ 7 ಪ್ರಾಂತ್ಯ ಯಾವುದು
ಉಬೋನ್ ರಚ್ತಾನಿ
ಸುರಿನ್
ಸಿಸಾಕೆಟ್
ಬುರಿಯಮ್
ಸಾ ಕಾವೋ
ಚಂತಬುರಿ
ಟ್ರಾಟ್
ಕಾಂಬೋಡಿಯಾ ಗಡಿ ಭಾಗದಲ್ಲಿರುವ ಥಾಯ್ಲೆಂಡ್ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿ ಸಾವಿರಾರು ವರ್ಷಗಳ ಪುರಾತನ ಹಿಂದೂ ದೇವಾಲಯಗಳಿವೆ. ಇಷ್ಟೇ ಅಲ್ಲ ಪ್ರಾಕೃತಿಕವಾಗಿಯೂ ಸುಂದರ ತಾಣಗಳಾಗಿದೆ. ಹೀಗಾಗಿ ಭಾರತ ಮಾತ್ರವಲ್ಲ ಹಲವು ದೇಶಗಳಿಂದ ಈ ಪ್ರಾಂತ್ಯಗಳಿಗೆ ಭೇಟಿ ನೀಡುತ್ತಾರೆ. ಆದರೆ ಸದ್ಯ ಯುದ್ಧದ ಸಂಘರ್ಷ ಹೆಚ್ಚಾಗಿರುವ ಕಾರಣ ಈ ಪ್ರದೇಶಕ್ಕೆ ಭೇಟಿ ನೀಡುವುದು ಸುರಕ್ಷಿತವಲ್ಲ ಎಂದು ಸೂಚಿಸಲಾಗಿದೆ. ಗುರುವಾರ ಕಾಂಬೋಡಿಯಾ ನಡೆಸಿದ ರಾಕೆಟ್ ದಾಳಿಯಲ್ಲಿ 10 ನಾಗರೀಕರು ಮೃತಪಟ್ಟಿದ್ದರು. ಹೀಗಾಗಿ ಪರಿಸ್ಥಿತಿ ಗಂಭೀರವಾಗುತ್ತಿರುವ ಕಾರಣ ಮಹತ್ವದ ಸೂಚನೆ ನೀಡಲಾಗಿದೆ.
