ಪಾಕಿಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು, ಇಮ್ರಾನ್ಗೆ ಮತ್ತಷ್ಟು ಸಂಕಷ್ಟ ಇಮ್ರಾನ್ ಕುಟುಂಬ, ಆಪ್ತರ ಮೇಲೆ ಭ್ರಷ್ಟಾಚಾರ ಆರೋಪ ಬಂಧನ ಭೀತಿಯಿಂದ ಹಲವರು ದುಬೈಗೆ ಪಲಾಯನ
ಲಾಹೋರ್(ಏ.05): ಪಾಕಿಸ್ತಾನದಲ್ಲಿನ ರಾಜಕೀಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಅಸೆಂಬ್ಲಿ ವಿಸರ್ಜಿಸಿ ಚುನಾವಣೆಗೆ ಇಮ್ರಾನ್ ಖಾನ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇತ್ತ ಇಮ್ರಾನ್ ಸಂವಿಧಾನ ಬಾಹಿರ ನಿರ್ಧಾರ ಕೈಗೊಂಡಿದ್ದಾರೆ ಎಂದು ಪ್ರತಿಪಕ್ಷಗಳು ಹೋರಾಟ ನಡೆಸುತ್ತಿದೆ. ಇದರ ನಡುವೆ ಮಾಜಿ ಇಮ್ರಾನ್ ಖಾನ್ ಕುಟುಂಬಸ್ಥರು, ಆಪ್ತರು ಮೇಲೆ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪ ಬಲವಾಗುತ್ತಿದೆ. ಒಬ್ಬೊಬ್ಬರೋ ಪಾಕಿಸ್ತಾನ ಬಿಟ್ಟು ದುಬೈಗೆ ಪಲಾಯನ ಮಾಡುತ್ತಿದ್ದಾರೆ.
ಇದೀಗ ಇಮ್ರಾನ್ ಖಾನ್ 3ನೇ ಪತ್ನಿ ಬುಶ್ರಾ ಬಿಬಿ ಆಪ್ತೆಯಾಗಿರುವ ಫರಾ ಖಾನ್ ಸದ್ದಿಲ್ಲದ ದುಬೈಗೆ ಪಲಾಯನ ಮಾಡಿದ್ದಾರೆ. ಫರಾ ಖಾನ್ ಹಾಗೂ ಆಕೆಯ ಪತಿ ಅಶನ್ ಜಮೀಲ್ ಗುಜ್ಜರ್ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ. ಇವರಿಬ್ಬರು ಅಧಿಕಾರಿಗಳ ವರ್ಗಾವಣೆ, ಸಚಿವರಿಗೆ ಅನುದಾನ ಸೇರಿದಂತೆ ಸರ್ಕಾರದ ಕೆಲಸ ಮಾಡಿಕೊಡಲು 32 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ಪಡೆದಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿದೆ ಹೀಗಾಗಿ ಫರಾ ಖಾನ್ ಸದ್ದಿಲ್ಲದೆ ದುಬೈ ಹಾರಿದ್ದಾಳೆ.
ರಾಷ್ಟ್ರೀಯ ಅಸ್ಲೆಂಬ್ಲಿ ವಿಸರ್ಜನೆ, ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ಪಾಕ್ ಸುಪ್ರೀಂ ಕೋರ್ಟ್!
ಫರಾ ಪತಿ ಈಗಾಲೇ ಅಮೆರಿಕಾಗ ಪಲಾಯನ ಮಾಡಿದ್ದಾರೆ. ಅಶನ್ ಜಮೀಲ್ ಮೇಲೂ ಆರೋಪ ಗಂಭೀರವಾಗುತ್ತಿರುವ ಕಾರಣ ಬಂಧನ ಭೀತಿ ಎದುರಿಸುತ್ತಿದ್ದಾರೆ. ಹೀಗಾಗಿ ಮೊದಲು ಪತಿ ಪಲಾಯನ ಮಾಡಿದರೆ ಬಳಿಕ ಪತ್ನಿ ಫರಾ ಖಾನ್ ಪಾಕಿಸ್ತಾನ ತೊರೆದಿದ್ದಾರೆ.
ಇಮ್ರಾನ್ ಖಾನ್ ಪತ್ನಿಯ ಆಪ್ತೆ ಅನ್ನೋ ಹೆಸರಿನಲ್ಲಿ ಪಾಕಿಸ್ತಾನ ಸರ್ಕಾರದ ಹಲವು ಇಲಾಖೆಗಳ ಅನುದಾನ ಹಣ ಕೂಡ ನೇರಾವಾಗಿ ಫರಾ ಖಾನ್ ಖಾತೆಗೆ ಜಮಾವಣೆ ಆಗಿದೆ ಅನ್ನೋ ಆರೋಪಗಳು ಕೇಳಿಬಂದಿದೆ.ಇದರ ಹಿಂದೆ ಇಮ್ರಾನ್ ಖಾನ್ ಕೈವಾಡವಿದೆ ಎಂದು ಪಾಕಿಸ್ತಾನದ ವಿಪಕ್ಷಗಳು ಆರೋಪಿಸಿದೆ. ಇವರ ಜೊತೆಗೆ ಇಮ್ರಾನ್ ಕುಟುಂಬಸ್ಥರು, ಆಪ್ತರ ಮೇಲೂ ಆರೋಪಗಳು ಕೇಳಿಬರುತ್ತಿದೆ. ಇದರಿಂದ ಬಂಧನ ಭೀತಿಯಿಂದ ಪಾರಾಗಲು ಪಾಕಿಸ್ತಾನ ತೊರೆಯುತ್ತಿದ್ದಾರೆ.
Pakistan ಗೂಗ್ಲಿ ಎಸೆದ ಇಮ್ರಾನ್ ಖಾನ್? ಮನವಿ ಮಾಡಿದ ಅರ್ಧಗಂಟೆಯಲ್ಲೇ ಪಾಕ್ ಶಾಸನಸಭೆ ವಿಸರ್ಜನೆ!
ವಿಸರ್ಜಿಸಿದ ಸಂಸತ್ನಲ್ಲಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಅಂಗೀಕಾರ
ಪಾಕಿಸ್ತಾನ ರಾಜಕೀಯ ಮತ್ತಷ್ಟುನಾಟಕೀಯ ಬೆಳವಣಿಗೆಗಳನ್ನು ಕಾಣುತ್ತಿದೆ. ನ್ಯಾಷನಲ್ ಅಸೆಂಬ್ಲಿಯನ್ನು ರಾಷ್ಟ್ರಪತಿ ವಿಸರ್ಜಿಸಿದ ನಂತರ ತಮ್ಮದೇ ಆದ ಅಧಿವೇಶನವನ್ನು ನಡೆಸಿದ ವಿಪಕ್ಷಗಳು ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿ ಅನುಮೋದನೆ ಪಡೆದುಕೊಂಡಿವೆ. ಈ ನಿರ್ಣಯಕ್ಕೆ 197 ಮತಗಳಿಂದ ಅನುಮೋದನೆ ದೊರಕಿದೆ ಎಂದು ಘೋಷಿಸಿವೆ. ಸಚಿವಾಲಯದ ಸಿಬ್ಬಂದಿ ಬೆಂಬಲವಿಲ್ಲದೆ ಮತ್ತು ಸೌಂಡ್ ಸಿಸ್ಟಂ ಇಲ್ಲದೇ ಮಂಡಿಸಿದ ಈ ನಿರ್ಣಯವನ್ನು ವಿಪಕ್ಷಗಳು ಕಾನೂನು ರೀತ್ಯಾ ಮತ್ತು ಮಾನ್ಯ ಎಂದು ಹೇಳಿಕೊಂಡಿವೆ. ಈ ನಿರ್ಣಯವನ್ನು ಪಾಕಿಸ್ತಾನ್ ಮುಸ್ಲಿಂ ಲೀಗ್ ನಾಯಕ ಮತ್ತು ಮಾಜಿ ಸ್ಪೀಕರ್ ಸರ್ದಾರ್ ಅಯಾಜ್ ಸಾಧಿಕ್ ಮಂಡಿಸಿದರು.
ಜನರೇ ದೇಶದ ಭವಿಷ್ಯ ನಿರ್ಧರಿಸಬೇಕು: ಇಮ್ರಾನ್
‘ಜನರೇ ಪಾಕಿಸ್ತಾನದ ಭವಿಷ್ಯವನ್ನು ನಿರ್ಧರಿಸಬೇಕು, ಹಣದ ಚೀಲಗಳಲ್ಲ’ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾನುವಾರ ಹೇಳಿದ್ದಾರೆ. ಭಾನುವಾರ ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ವಜಾ ಮಾಡಿದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಇಮ್ರಾನ್, ‘ರಾಷ್ಟಾ್ರಧ್ಯಕ್ಷರಿಗೆ ಶಾಸನಸಭೆಯನ್ನು ವಿಸರ್ಜಿಸುವಂತೆ ಸಲಹೆ ನೀಡಿದ್ದೇನೆ. ಈಗ ಪಾಕಿಸ್ತಾನದ ಜನರು ತಮಗೇನು ಬೇಕು ಎಂಬುದನ್ನು ನಿರ್ಧರಿಸಬೇಕು. ಹಣ ಕೊಟ್ಟು ಜನರ ಬೆಂಬಲವನ್ನು ಖರೀದಿಸಿರುವುದು ಇಂತಹ ಪರಿಸ್ಥಿತಿಗೆ ಕಾರಣವಾಗಿದೆ. ಹೊಸ ಚುನಾವಣೆಗೆ ಸಜ್ಜಾದ ಜನರೇ ತಮ್ಮ ದೇಶದ ಭವಿಷ್ಯವನ್ನು ನಿರ್ಧರಿಸಬೇಕು ಹೊರತು ವಿದೇಶಿಗರಾಗಲೀ, ಭ್ರಷ್ಟಜನರ ಹಣದ ಚೀಲಗಳಾಗಲೀ ಅಲ್ಲ’ ಎಂದರು.
ರಾಜಕೀಯ ಅಸ್ಥಿರತೆ ಬಗ್ಗೆ ಸೂಕ್ತ ತೀರ್ಪು: ಸುಪ್ರೀಂ
ಮುನೀಬ್ ಅಖ್ತರ್ ಮತ್ತು ಜಮಾಲ್ ಖಾನ್ ನೇತೃತ್ವದ ಪಂಚ ಸದಸ್ಯರ ಪೀಠ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡು ಸೋಮವಾರ ವಿಚಾರಣೆ ನಡೆಸಿತು. ಉಪ ಸಭಾಪತಿ ನಿರ್ಣಯದ ಪರ ಮತ್ತು ವಿರುದ್ಧ ವಕೀಲರು ವಾದ-ಪ್ರತಿವಾದ ನಡೆಸಿದರು. ಬಳಿಕ ಕೋರ್ಚ್ ವಿಚಾರಣೆಯನ್ನು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಮುಂದೂಡಿತು. ಇದೇ ವೇಳೆ ಇಡೀ ಪ್ರಕರಣದ ಕಾನೂನು ಮಾನ್ಯತೆ ಬಗ್ಗೆ ಶೀಘ್ರವೇ ಸೂಕ್ತ ಆದೇಶ ಹೊರಡಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.
