ಹಿಂದುಗಳಿಗೆ ದೀಪಾವಳಿ ಶುಭ ಕೋರಿದ ಪಾಕ್ ಪ್ರಧಾನಿ ಇಮ್ರಾನ್
ಪಾಕಿಸ್ತಾನದಲ್ಲಿ ಹಿಂದುಗಳು ಅಲ್ಪಸಂಖ್ಯಾತ ಸಮುದಾಯವಾಗಿದ್ದು, ಅವರು ಅನುಭವಿಸುತ್ತಿರುವ ಸಂಕಷ್ಟ ಅಷ್ಟಿಷ್ಟಲ್ಲ. ವಿಶ್ವದೆಲ್ಲೆಡೆ ಹಿಂದುಗಳು ದೀಪಾವಳಿಯ ಸಂಭ್ರಮದಲ್ಲಿದ್ದಾರೆ. ಈ ಶುಭ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹಿಂದುಗಳಿಗೆ ದೀಪಾವಳಿ ಶುಭಾಶಯ ತಿಳಿಸಿದ್ದು ಹೀಗೆ.
ಇಸ್ಲಾಮಾಬಾದ್ (ನ.15): ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ದೇಶದ ಹಿಂದುಗಳಿಗೆ ದೀಪಾವಳಿ ಶುಭಾಶಯ ತಿಳಿಸಿದ್ದಾರೆ. ಟ್ವೀಟ್ ಮಾಡಿರುವ ಇಮ್ರಾನ್ 'ದೇಶದ ಎಲ್ಲ ಹಿಂದು ನಾಗರಿಕರಿಗೆ ದೀಪಾವಳಿ ಶುಭಾಶಯಗಳು,' ಎಂಬ ಸಂದೇಶ ರವಾನಿಸಿದ್ದಾರೆ.
ಪಾಕಿಸ್ತಾನದಲ್ಲಿ ಸುಮಾರು 75 ಲಕ್ಷ ಹಿಂದುಗಳಿದ್ದು, ಆ ರಾಷ್ಟ್ರದಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರು. ಸಿಂಧ್ ಪ್ರಾಂತ್ಯದಲ್ಲಿ ಹೆಚ್ಚು ಹಿಂದೂಗಳು ವಾಸಿಸುತ್ತಿದ್ದು, ಅಲ್ಲಿಯ ಜನರೊಂದಿಗೆ ತಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ಭಾಷಾ ವೈವಿಧ್ಯತೆಯನ್ನು ಹಂಚಿಕೊಂಡಿದ್ದಾರೆ.
ಹಿಂದುಗಳು ಸಂಭ್ರಮ, ಸಡಗರದಿಂದ ದೀಪಾವಳಿಯನ್ನು ಎಲ್ಲೆಡೆ ಆಚರಿಸುತ್ತಿದ್ದು, ಮನೆ ಹಾಗೂ ದೇವಸ್ಥಾನಗಳನ್ನು ದೀಪಗಳಿಂದ ಅಲಂಕರಿಸಲಾಗಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದ್ದು, ಜನರಿಗೆ ಸಿಹಿ ಹಂಚಲಾಗುವುದು.
ಪಾಕಿಸ್ತಾನದ ಮುಖ್ಯ ನಗರಗಳಾದ ಲಾಹೋರ್, ಕರಾಚಿ ಹೊರತು ಪಡಿಸಿ, ಇತರೆಡೆಯಲ್ಲಿಯೂ ಹಿಂದುಗಳು ದೀಪದ ಹಬ್ಬವನ್ನು ಆಚರಿಸುತ್ತಿದ್ದಾರೆ.
ಗಡಿಯಲ್ಲಿ ಭಾರತದ ಯೋಧರು ಹಾಗೂ ಪಾಕಿಸ್ತಾನದ ಸೈನಿಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 10 ಭಾರತೀಯರು ಸೇರಿ, ಹಲವು ಪಾಕಿಸ್ತಾನಿ ಸೈನಿಕರೂ ಅಸುನಿಗಿದ್ದಾರೆ.
ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ ಮೋದಿ
ಇತ್ತ ಭಾರತದಲ್ಲಿಯೂ ನಿರಾಶ್ರಿತರಾಗಿ ಆಗಮಿಸಿ, ಆಶ್ರಯ ಪಡೆದ ಹಿಂದುಗಳು ಸಂಭ್ರಮ ಸಡಗರದಿಂದ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. ನಾಗರಿಕ ತಿದ್ದುಪಡೆ ಕಾಯ್ದೆ ಜಾರಿಗೊಂಡ ನಂತರ ಇದೇ ಮೊದಲ ಹಬ್ಬವಾಗಿದ್ದು, ದಿಲ್ಲಿ ಆಶ್ರಯ ನಗರದಲ್ಲಿ ಹಿಂದುಗಳು ದೀಪದ ಹಬ್ಬವನ್ನು ಆಚರಿಸಿದರು.
ಗಡಿಯಲ್ಲಿ ಪ್ರಧಾನಿ ಹಬ್ಬ:
ಪ್ರತಿ ವರ್ಷದಂತೆ ಈ ಬಾರಿಯೂ ಯೋಧರ ಜತೆ ದೀಪಾವಳಿ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ, ಚೀನಾ ಹಾಗೂ ಪಾಕಿಸ್ತಾನಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ‘ನಮ್ಮನ್ನು ಕೆಣಕಿದರೆ ಪ್ರಚಂಡ ಉತ್ತರ ನೀಡುತ್ತೇವೆ’ ಎಂದು ಗುಡುಗಿದ್ದಾರೆ. ಅಲ್ಲದೇ ಗಡಿ ವಿಸ್ತರಣೆ ಎಂಬುದು ಮಾನಸಿಕ ಸಮಸ್ಯೆ ಎಂದು ಕಿಡಿಕಾರಿದ್ದಾರೆ.
ಸತತ 7ನೇ ಬಾರಿ ಸೈನಿಕರೊಂದಿಗೆ ಮೋದಿ ದೀಪಾವಳಿ
ಮೋದಿ ಅವರು 2014ರಲ್ಲಿ ಪ್ರಧಾನಿಯಾದಾಗಿನಿಂದ ದೀಪಾವಳಿಯನ್ನು ಯೋಧರ ಜತೆ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಲ ಅವರು ರಾಜಸ್ಥಾನದ ಲೋಂಗೇವಾಲಾ ಮುಂಚೂಣಿ ಗಡಿ ಪೋಸ್ಟ್ಗೆ ಭೇಟಿ ನೀಡಿ ಸೈನಿಕರೊಂದಿಗೆ ಹಬ್ಬ ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಯೋಧರನ್ನು ಹುರಿದುಂಬಿಸುವ ಮಾತುಗಳನ್ನು ಆಡಿ, ವೈರಿ ದೇಶಗಳಿಗೆ ಬಾಲ ಮುಚ್ಚಿಕೊಂಡು ಸುಮ್ಮನಿರುವಂತೆ ಗುಡುಗಿದ್ದಾರೆ. ಭಾರತದ ಯೋಧರು 1971ರಲ್ಲಿ ಪಾಕಿಸ್ತಾನದ ಜತೆಗಿನ ಕದನದ ವೇಳೆ ಇದೇ ಲೋಂಗೇವಾಲಾ ಗಡಿಯಲ್ಲಿ ಪಾಕ್ ಪಡೆಗಳನ್ನು ಹಿಮ್ಮೆಟ್ಟಿಸಿದ್ದರು ಎಂಬುದು ವಿಶೇಷ.