ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಇರಾನ್‌ನ 'ಐರಿಸ್ ದೇನಾ' ಯುದ್ಧನೌಕೆ ಮುಳುಗಡೆಯಾಗಿದ್ದು, ಶ್ರೀಲಂಕಾ ಸೇನೆಯು 30 ನಾವಿಕರನ್ನು ರಕ್ಷಿಸಿದೆ. ಈ ಘಟನೆಯಲ್ಲಿ ಇನ್ನೂ 108 ಮಂದಿ ನಾಪತ್ತೆಯಾಗಿದ್ದು, ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಪರಿಣಾಮ ಭಾರತದ ಸಮೀಪಕ್ಕೂ ತಲುಪಿದಂತಾಗಿದೆ. 

ಕೊಲೊಂಬೊ (ಮಾ. 4): ಇರಾನ್‌ ಮೇಲೆ ಇಸ್ರೇಲ್‌ ಹಾಗೂ ಅಮೆರಿಕ ನಡೆಸಿರುವ ಜಂಟಿ ಯುದ್ಧ ಐದನೇ ದಿನಕ್ಕೆ ಕಾಲಿಡುವ ಹೊತ್ತಿಗೆ ಈ ಯುದ್ಧ ಭಾರತದ ಅಂಚಿಗೂ ಧಾವಿಸಿದೆ. ಶ್ರೀಲಂಕಾ ಕರಾವಳಿಯಲ್ಲಿ ಇರಾನ್‌ ದೇಶಕ್ಕೆ ಸಂಬಂಧಿಸಿದ ನೌಕೆಯ ಮೇಲೆ ದಾಳಿ ನಡೆದಿದ್ದು, 30 ಜನರನ್ನು ಶ್ರೀಲಂಕಾ ಸೇನೆ ರಕ್ಷಣೆ ಮಾಡಿದೆ. ಇನ್ನೂ 108 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಶ್ರೀಲಂಕಾದ ದಕ್ಷಿಣ ಸಮುದ್ರ ತೀರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಇರಾನ್‌ನ 'ಐರಿಸ್ ದೇನಾ' (Iris Dena) ಯುದ್ಧನೌಕೆಯಲ್ಲಿದ್ದ ಕನಿಷ್ಠ 30 ನಾವಿಕರನ್ನು ಶ್ರೀಲಂಕಾ ರಕ್ಷಣಾ ಪಡೆಗಳು ಬುಧವಾರ ಮುಂಜಾನೆ ರಕ್ಷಿಸಿವೆ ಎಂದು ವಿದೇಶಾಂಗ ಸಚಿವ ವಿಜಿತ ಹೇರತ್ ತಿಳಿಸಿದ್ದಾರೆ.

ನಡೆದಿದ್ದೇನು?

ಸಂಸತ್ತಿನಲ್ಲಿ ಈ ಕುರಿತು ಮಾಹಿತಿ ನೀಡಿದ ಹೇರತ್, "ಇಂದು ಮುಂಜಾನೆ 5.08ಕ್ಕೆ ದಕ್ಷಿಣದ ಗಾಲೆ ಬಂದರು ಜಿಲ್ಲೆಯಿಂದ ಸುಮಾರು 40 ನಾಟಿಕಲ್ ಮೈಲಿ ದೂರದಲ್ಲಿ 'ಐರಿಸ್ ದೇನಾ' ಎಂಬ ಹಡಗು ಮುಳುಗುತ್ತಿರುವ ಬಗ್ಗೆ ಶ್ರೀಲಂಕಾ ನೌಕಾಪಡೆ ಮತ್ತು ಕರಾವಳಿ ರಕ್ಷಣಾ ಪಡೆಗೆ ಸಂದೇಶ ಬಂದಿತ್ತು. ಪ್ರಾಥಮಿಕ ಮಾಹಿತಿಯ ಪ್ರಕಾರ ಹಡಗಿನಲ್ಲಿ ಸುಮಾರು 180 ಸಿಬ್ಬಂದಿಗಳಿದ್ದರು ಎನ್ನಲಾಗಿದ್ದು, ಈ ಪೈಕಿ 30 ಜನರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ," ಎಂದು ವಿವರಿಸಿದರು.

ಜಂಟಿ ರಕ್ಷಣಾ ಕಾರ್ಯಾಚರಣೆ

ನೌಕಾಪಡೆ ಮತ್ತು ವಾಯುಪಡೆ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿವೆ. ಆದರೆ, ಯುದ್ಧನೌಕೆ ಮುಳುಗಲು ನಿಖರವಾದ ಕಾರಣವೇನೆಂಬುದು ಈವರೆಗೆ ತಿಳಿದುಬಂದಿಲ್ಲ. "ಅಂತರಾಷ್ಟ್ರೀಯ ಕಡಲ ರಕ್ಷಣಾ ಸಮಾವೇಶದ ನಿಯಮಗಳ ಪ್ರಕಾರ, ಯಾವುದೇ ಕಾರಣವಿರಲಿ, ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದವರನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ," ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಚಿಕಿತ್ಸೆ ಮತ್ತು ಭದ್ರತೆ

ರಕ್ಷಿಸಲಾದ ನಾವಿಕರನ್ನು ನೌಕಾಪಡೆಯ ದಕ್ಷಿಣ ಕಮಾಂಡ್ ಪ್ರಧಾನ ಕಚೇರಿಗೆ ಕರೆತಂದು, ಬಳಿಕ ಗಾಲೆಯ ಕರಾಪಿಟಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನೌಕಾಪಡೆಯ ದಕ್ಷಿಣ ಕಮಾಂಡ್ ಸುತ್ತಮುತ್ತ ಭದ್ರತೆಯನ್ನು ತೀವ್ರಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಂತಿಗಾಗಿ ಶ್ರೀಲಂಕಾ ಮನವಿ

ಇದೇ ಸಂದರ್ಭದಲ್ಲಿ ಗಲ್ಫ್ ಪ್ರದೇಶದಲ್ಲಿ (ಪಶ್ಚಿಮ ಏಷ್ಯಾ) ನಡೆಯುತ್ತಿರುವ ಪ್ರಸ್ತುತ ಸಂಘರ್ಷದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಹೇರತ್, ಸಂಘರ್ಷವನ್ನು ಶಾಂತಿಯುತವಾಗಿ ಅಂತ್ಯಗೊಳಿಸುವಂತೆ ಶ್ರೀಲಂಕಾ ಪರವಾಗಿ ಮನವಿ ಮಾಡಿದರು.