ಭಾರತದ 40 ಸಿಆರ್‌ಪಿಎಫ್‌ ಯೋಧರನ್ನು ಬಲಿಪಡೆದ ಪುಲ್ವಾಮಾ ದಾಳಿ ಮಾಡಿಸಿದ್ದು ನಾವು ಎಂದು ಇದೇ ಮೊದಲ ಬಾರಿ ಪಾಕಿಸ್ತಾನ ಒಪ್ಪಿಕೊಂಡಿದೆ. 

ಇಸ್ಲಾಮಾಬಾದ್‌ (ಮೇ.11): ಭಾರತದ 40 ಸಿಆರ್‌ಪಿಎಫ್‌ ಯೋಧರನ್ನು ಬಲಿಪಡೆದ ಪುಲ್ವಾಮಾ ದಾಳಿ ಮಾಡಿಸಿದ್ದು ನಾವು ಎಂದು ಇದೇ ಮೊದಲ ಬಾರಿ ಪಾಕಿಸ್ತಾನ ಒಪ್ಪಿಕೊಂಡಿದೆ. ಶನಿವಾರ ಸುದ್ದಿಗೋಷ್ಠಿಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನ ಸೇನಾಧಿಕಾರಿಯೊಬ್ಬರು, ‘ಪುಲ್ವಾಮಾ ಒಂದು ಯುದ್ಧತಂತ್ರದ ಅದ್ಭುತವಾಗಿತ್ತು. ಈಗ ನಾವು ಕಾರ್ಯಾಚರಣೆಯ (ಈಗಿನ ಯುದ್ಧದಲ್ಲಿ) ಪ್ರಗತಿಯನ್ನು ತೋರಿಸಿದ್ದೇವೆ’ ಎಂದು ಹೇಳಿದರು. ಈವರೆಗೂ ಪುಲ್ವಾಮಾ ದಾಳಿಯನ್ನು ನಾವು ಮಾಡಿಲ್ಲ ಎಂದು ಹೇಳಿಕೊಳ್ಳುತ್ತಿತ್ತು.

ಅಜರ್ ಕುಟುಂಬದ 10 ಜನ ಫಿನಿಶ್‌: 1999ರಲ್ಲಿ ತನ್ನ ಕಾರ್ಯಕರ್ತರ ಮೂಲಕ ಏರ್‌ಇಂಡಿಯಾ ವಿಮಾನ ಅಪಹರಣ ಮಾಡಿಸಿ, ಬಳಿಕ ವಿಮಾನದಲ್ಲಿನ ಪ್ರಯಾಣಿಕರ ಬಿಡುಗಡೆಗೆ ಬದಲಾಗಿ ಭಾರತದ ಜೈಲಿಂದ ಬಿಡುಗಡೆಯಾಗಿದ್ದ ಜೈಷ್‌ ಎ ಮೊಹಮ್ಮದ್‌ ನಾಯಕ ಅಜರ್‌ ಮಸೂದ್‌ಗೆ ಭಾರತೀಯ ಸೇನೆ ಭರ್ಜರಿ ಪೆಟ್ಟು ನೀಡಿದೆ. ಪಾಕ್‌ ಆಕ್ರಮಿತ ಕಾಶ್ಮೀರದ ಬಹಾವಲ್ಪುರದಲ್ಲಿನ ಮರ್ಕಜ್‌ ಸುಭಾನ್‌ ಉಗ್ರರ ಕ್ಯಾಂಪ್‌ ಮೇಲೆ ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ಅಜರ್‌ ಮಸೂದ್‌ನ ಕುಟುಂಬದ 10 ಸದಸ್ಯರು ಮತ್ತು ಇತರೆ ನಾಲ್ವರು ಆಪ್ತರು ಸಾವನ್ನಪ್ಪಿದ್ದಾರೆ. 

ಇದು ಉಗ್ರನಿಗೆ ಬಿದ್ದ ಭಾರೀ ಪೆಟ್ಟು ಎಂದು ಬಣ್ಣಿಸಲಾಗಿದೆ. ಮರ್ಕಜ್‌ ಸುಭಾನ್‌, ಜೈಷ್‌ ಎ ಮೊಹಮ್ಮದ್‌ ಸಂಘಟನೆಯ ಕೇಂದ್ರ ಕಚೇರಿಯಾಗಿದ್ದು, ಇಲ್ಲೇ ಉಗ್ರರ ನೇಮಕ, ತರಬೇತಿ ನೀಡಲಾಗುತ್ತಿತ್ತು. ಮಸೂದ್‌ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ‘ನನ್ನ ಕುಟುಂಬದ 10 ಸದಸ್ಯರು ಇಂದು ರಾತ್ರಿ ಈ ಸಂತೋಷಕ್ಕೆ ಪಾತ್ರರಾಗಿದ್ದಾರೆ. ಅವರಲ್ಲಿ 5 ಅಮಾಯಕ ಮಕ್ಕಳು, ನನ್ನ ಸೋದರಿ, ಅವರ ಗೌರವಾನಿತ್ವ ಪತಿ, ನನ್ನ ಸಂಬಂಧಿ ಫಾಝಿಲ್‌, ಆತನ ಪತ್ನಿ, ನನ್ನ ಆಪ್ತ ಫಾಜಿಲ್ಲಾ, ನನ್ನ ಸೋದರ ಹುಝೈಫಾ ಹಾಗೂ ಅವರ ತಾಯಿ ಹಾಗೂ ಇನ್ನಿಬ್ಬರು ಆತ್ಮೀಯರು ಸೇರಿದ್ದಾರೆ. 

ಭೂಸೇನೆಯನ್ನೂ ಸಜ್ಜುಗೊಳಿಸುತ್ತಿದೆ ಪಾಕ್‌: ಭಾರತ ಸೇನಾಧಿಕಾರಿಗಳಿಂದ ಸ್ಫೋಟಕ ಮಾಹಿತಿ

ಇಂದು ಮೃತಪಟ್ಟವರೆಲ್ಲಾ ಅಲ್ಲಾನ ಅತಿಥಿಗಳಾಗಿದ್ದಾರೆ. ಘಟನೆ ಬಗ್ಗೆ ನನಗೆ ವಿಷಾದವೂ ಇಲ್ಲ, ನಾನು ಹತಾಶನೂ ಆಗಿಲ್ಲ. ಅದರ ಬದಲಿಗೆ, ಆ 14 ಜನರ ಪ್ರಯಾಣದಲ್ಲಿ ನಾನು ಕೂಡಾ ಒಬ್ಬನಾಗಿರಬಾರದಿತ್ತೇ ಎಂದು ಪದೇ ಪದೇ ನನ್ನ ಹೃದಯ ಹೇಳುತ್ತಿದೆ. ಅವರ ವಿದಾಯದ ಸಮಯ ಬಂದಿದೆ, ಆದರೆ ದೇವರು ಅವರನ್ನು ಕೊಲ್ಲಲಿಲ್ಲ’ ಎಂದು ಹೇಳಿದ್ದಾನೆ. ಇದಲ್ಲದೆ. ಈ ಕ್ರೂರ ಕೃತ್ಯವು ಎಲ್ಲಾ ಗಡಿಗಳನ್ನೂ ಮೀರಿದ್ದು, ಇನ್ನು ಕ್ಷಮೆಯ ಮಾತೇ ಇಲ್ಲ ಎಂದು ಎಚ್ಚರಿಸಿದ್ದಾನೆ.