ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರ ಪುತ್ರಿ ಮಹ್ನೂರ್ ವಿವಾಹವು ರಾವಲ್ಪಿಂಡಿಯಲ್ಲಿ ಅತ್ಯಂತ ಗೌಪ್ಯವಾಗಿ ನಡೆದಿದೆ. ಈ ಸಮಾರಂಭಕ್ಕೆ ಉನ್ನತ ನಾಯಕರು ಹಾಜರಾಗಿದ್ದರೂ, ಮುನೀರ್ ಅವರ ನಾಯಕತ್ವದಲ್ಲಿ ಪಾಕಿಸ್ತಾನವು ಧಾರ್ಮಿಕ ಉಗ್ರವಾದದತ್ತ ಸಾಗುತ್ತಿದೆ ಎಂದಿದೆ.
ನವದೆಹಲಿ (ಡಿ.31): ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರ ಪುತ್ರಿ ಮಹ್ನೂರ್ ಡಿಸೆಂಬರ್ 26 ರಂದು ನಡೆದಿದೆ. ತಮ್ಮ ಅಣ್ಣನ ಮಗನನ್ನೇ ಆಸೀಮ್ ಮುನೀರ್ ಅಳಿಯನನ್ನಾಗಿ ಮಾಡಿಕೊಂಡಿದ್ದಾರೆ. ತಮ್ಮ ಮೊದಲ ಸೋದರ ಸಂಬಂಧಿ ಅಬ್ದುಲ್ ರೆಹಮಾನ್ ಅವರೊಂದಿಗೆ ಮಹ್ನೂರ್ ವಿವಾಹ ನಡೆದಿದೆ. ರಾವಲ್ಪಿಂಡಿಯಲ್ಲಿರುವ ಸೇನಾ ಪ್ರಧಾನ ಕಚೇರಿಯಲ್ಲಿ ಈ ವಿವಾಹ ಸಮಾರಂಭ ನಡೆದಿದೆ. ಪಾಕಿಸ್ತಾನದ ಉನ್ನತ ರಾಜಕೀಯ ನಾಯಕರು ಹಾಗೂ ಮಿಲಿಟರಿ ವ್ಯಕ್ತಿಗಳು ಇದರಲ್ಲಿ ಭಾಗವಹಿಸಿದ್ದರು. ಆದರೆ, ಈ ಸಮಾರಂಭದ ಎಲ್ಲಾ ಮಾಹಿತಿಯನ್ನು ಅತ್ಯಂತ ಗೌಪ್ಯವಾಗಿ ಇಡಲಾಗಿತ್ತು. ಮದುವೆಯ ಯಾವುದೇ ಚಿತ್ರಗಳನ್ನು ಕೂಡ ಬಿಡುಗಡೆ ಮಾಡಲಾಗಿಲ್ಲ.
ವಿವಾಹದಲ್ಲಿ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ಪ್ರಧಾನಿ ಶೆಹಬಾಜ್ ಷರೀಫ್, ಉಪ ಪ್ರಧಾನಿ ಇಶಾಕ್ ದಾರ್, ಐಎಸ್ಐ ಮುಖ್ಯಸ್ಥ ಮತ್ತು ನಿವೃತ್ತ ಜನರಲ್ಗಳು ಮತ್ತು ಮಾಜಿ ಮುಖ್ಯಸ್ಥರು ಸೇರಿದಂತೆ ಪಾಕಿಸ್ತಾನಿ ಸೇನೆಯ ಇತರ ಸದಸ್ಯರು ಭಾಗವಹಿಸಿದ್ದರು.
ಆಸೀಮ್ ಮುನೀರ್ ಅವರ ಅಣ್ಣನ ಮಗ ಅಬ್ದುಲ್ ರೆಹಮಾನ್ ಕೂಡ ಪಾಕಿಸ್ತಾನಿ ಸೇನೆಯಲ್ಲಿ ಕ್ಯಾಪ್ಟನ್ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಸೇನಾ ಅಧಿಕಾರಿಗಳಿಗೆ ಮೀಸಲಾದ ಕೋಟಾದ ಮೂಲಕ ನಾಗರೀಕ ಸೇವೆಗೆ ಸೇರಿದ್ದು, ಪ್ರಸ್ತುತ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಾಕಿಸ್ತಾನಿ ಪತ್ರಕರ್ತ ಜಾಹಿದ್ ಗಿಷ್ಕೋರಿ ಅವರ ಪ್ರಕಾರ, ಮದುವೆಗೆ 400 ಅತಿಥಿಗಳು ಆಗಮಿಸಿದ್ದರು ಆದರೆ ಭದ್ರತಾ ಕಾರಣಗಳಿಂದಾಗಿ ಅದನ್ನು ಗೌಪ್ಯವಾಗಿಡಲಾಗಿತ್ತು. ಆಸೀಮ್ ಮುನೀರ್ ಅವರಿಗೆ ಒಟ್ಟು ನಾಲ್ಕು ಮಂದಿ ಹೆಣ್ಣುಮಕ್ಕಳಿದ್ದು, ಇದು ಮಹ್ನೂರ್ ಅವರ ಮೂರನೇ ಪುತ್ರಿಯಾಗಿದ್ದಾರೆ.
ಪಾಕಿಸ್ತಾನದ ಆಡಳಿತದ ಬಗ್ಗೆ ಜಗತ್ತಿನ ವಿರೋಧ
ಗ್ರೀಕ್ ಸಿಟಿ ಟೈಮ್ಸ್ನ ವರದಿಯ ಪ್ರಕಾರ, ಮುನೀರ್ ಅವರ ನಾಯಕತ್ವದಲ್ಲಿ, ಪಾಕಿಸ್ತಾನವು "ಧಾರ್ಮಿಕ ಉಗ್ರವಾದ"ದತ್ತ ಅತ್ಯಂತ ವೇಗವಾಗಿ ಹೋಗುತ್ತಿದೆ ಎಂದಿದೆ. "ಪಾಕಿಸ್ತಾನವು ಹೆಚ್ಚು ದೇವಪ್ರಭುತ್ವ ಮತ್ತು ಹೋರಾಟದ ಗುರುತಿನತ್ತ ತೀವ್ರವಾಗಿ ತಿರುಗಿದೆ. ವಿದೇಶಗಳಲ್ಲಿ ಇಸ್ಲಾಮಿಸ್ಟ್ "ಪ್ರತಿರೋಧ" ವನ್ನು ವೈಭವೀಕರಿಸುತ್ತಿದೆ ಮತ್ತು ಸ್ವದೇಶದಲ್ಲಿ ಮೂಲಭೂತವಾದಿಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ಲಂಡನ್ನಿಂದ ನ್ಯೂಯಾರ್ಕ್ನಿಂದ ದುಬೈವರೆಗೆ, ಇದರ ಪರಿಣಾಮಗಳು ರಕ್ತಪಾತ ಮತ್ತು ಪ್ರತಿದಾಳಿಯಲ್ಲಿ ಕಂಡುಬರುತ್ತಿವೆ" ಎಂದು ವರದಿಯಲ್ಲಿ ತಿಳಿಸಲಾಗಿದ.
'ಏಷ್ಯನ್ ನ್ಯೂಸ್ ಪೋಸ್ಟ್' ವರದಿಯ ಪ್ರಕಾರ, ಇಸ್ಲಾಮಾಬಾದ್ನ ಮಿಲಿಟರಿ ನೇತೃತ್ವದ ಕಾರ್ಯತಂತ್ರವು ಪಾಕಿಸ್ತಾನದ ಗಡಿಗಳನ್ನು ಸುರಕ್ಷಿತಗೊಳಿಸುವಲ್ಲಿ, ಅದರ ನಾಗರಿಕರನ್ನು ರಕ್ಷಿಸುವಲ್ಲಿ ಮತ್ತು ವಿದೇಶಗಳಲ್ಲಿ ಸೌಹಾರ್ದತೆಯನ್ನು ಸೃಷ್ಟಿಸುವಲ್ಲಿ ವಿಫಲವಾಗಿದೆ. ಬದಲಾಗಿ, ಇದು ವ್ಯಾಪಕವಾದ ನೋವು, ಮಾನವೀಯ ಬಿಕ್ಕಟ್ಟುಗಳಿಗೆ ಉತ್ತೇಜನ ನೀಡಿದೆ ಮತ್ತು ವಿಶಾಲ ಪ್ರದೇಶವನ್ನು ಅಸ್ಥಿರಗೊಳಿಸಿದೆ ಎಂದಿದೆ.


