ಭಾರತದ ಮೂಲದ ಬಿಲೇನಿಯರ್​ ವಸುಂಧರಾ ಓಸ್ವಾಲ್​ ಅವರನ್ನು ಉಗಾಂಡಾದಲ್ಲಿ ಅಕ್ರಮ ಬಂಧಿಸಿ ಇಡಲಾಗಿದೆ ಎಂದು ಕುಟುಂಬ ಆರೋಪಿಸಿದೆ.  ಏನಿದು ವಿಷಯ?  

 ಭಾರತೀಯ ಮೂಲದ ಶತ ಕೋಟ್ಯಧೀಶೆಯಾಗಿರುವ ಉದ್ಯಮಿ ವಸುಂಧರಾ ಓಸ್ವಾಲ್ ಅವರನ್ನು ಪೂರ್ವ ಆಫ್ರಿಕಾ ರಾಷ್ಟ್ರವಾದ ಉಗಾಂಡಾದಲ್ಲಿ ಅಕ್ರಮವಾಗಿ ಬಂಧಿಸಿ ಇಡಲಾಗಿದ್ದು, ಅಲ್ಲಿ ಆಕೆಯನ್ನು ಬಂಧಿಸಿರುವ ಘನಘೋರ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. 26 ವರ್ಷ ವಯಸ್ಸಿನ ವಸುಂಧರಾ ಓಸ್ವಾಲ್ ಅವರು ಉದ್ಯಮಿ ಪಂಕಜ್ ಓಸ್ವಾಲ್ ಅವರ ಪುತ್ರಿ. ಇದೀಗ ವಿಶ್ವ ಸಂಸ್ಥೆಯ ಮೊರೆ ಹೋಗಿರುವ ಪಂಕಜ್​ ಅವರು ತಮ್ಮ ಮಗಳ ಬಿಡುಗಡೆಗೆ ಮಧ್ಯೆ ಪ್ರವೇಶಿಸುವಂತೆ ವಿಶ್ವ ಸಂಸ್ಥೆಗೆ ಮನವಿ ಸಲ್ಲಿಸಿದ್ದಾರೆ. ತಮ್ಮ ಸಹೋದರಿಯನ್ನು ಅಕ್ರಮವಾಗಿ ಬಂಧಿಸಿರುವ ಬಗ್ಗೆ ಫೋಟೋಗಳನ್ನು ಶೇರ್​ ಮಾಡಿರುವ ಅವರ ಸಹೋದರ, ವಸುಂಧರಾಗೆ ಕನಿಷ್ಠ ಸೌಕರ್ಯವನ್ನೂ ನೀಡಲಿಲ್ಲ. ಆಕೆಯನ್ನು ಇರಿಸಿರುವ ಕೊಠಡಿಯಲ್ಲಿ ಒಂದು ಟಾಯ್ಲೆಟ್ ಇದ್ದು, ಅದು ಮಲ ಹಾಗೂ ರಕ್ತ ಕೂಡಿದೆ. ಆಕೆಗೆ ಐದು ದಿನಗಳವರೆಗೆ ಬಟ್ಟೆ ಬದಲಿಸಲು ಹಾಗೂ ಸ್ನಾನ ಮಾಡಲು ಅವಕಾಶ ನೀಡಲಾಗಿಲ್ಲ. ಸರಿಯಾದ ಆಹಾರ ನೀಡುತ್ತಿಲ್ಲ. ಮಲಗಲು ಚಿಕ್ಕ ಟೇಬಲ್ ನೀಡಲಾಗಿದೆ. ಶಂಕಿತರ ಪರೇಡ್‌ನಲ್ಲಿ ಭಾಗಿಯಾಗುವಂತೆ ಒತ್ತಾಯ ಮಾಡಲಾಗುತ್ತಿದೆ ಎಂದಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಕೆಲ ದಿನಗಳ ಹಿಂದೆ ವಸುಂಧರಾ ಅವರನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. 1649 ಕೋಟಿ ರೂಪಾಯಿ ಬೆಲೆ ಬಾಳುವ ಮನೆಯಲ್ಲಿ ವಾಸಿಸುತ್ತಿರುವ ವಸುಂಧರಾ ಅವರ ಈ ಸ್ಥಿತಿ ಕಂಡು ಎಲ್ಲರೂ ಶಾಕ್​ ಆಗಿದ್ದಾರೆ. ಅವರ ಸಹೋದರ ಹೇಳುವ ಪ್ರಕಾರ, ವಸುಂಧರಾ ಉಗಾಂಡಾದಲ್ಲಿರುವ ಬಂಜರು ಭೂಮಿ ಲುವೆರೊದಲ್ಲಿ 2021ರಲ್ಲಿ ಉದ್ಯಮ ಆರಂಭಿಸಿದ್ದರು. ಚಿಕ್ಕದೊಂದು ಟೆಂಟ್ ಹಾಕಿಕೊಂಡು ಬಿಜಿನೆಸ್​ ಶುರು ಮಾಡಿರುವ ಅವರು ಅತ್ಯಂತ ಅಲ್ಪ ಕಾಲದಲ್ಲಿಯೇ 110 ಮಿಲಿಯನ್ ಡಾಲರ್ ಮೌಲ್ಯದ ಇಎನ್‌ಎ ಕೈಗಾರಿಕಾ ಘಟಕವನ್ನು ಅಭಿವೃದ್ದಿಪಡಿಸಿದ್ದಾರೆ. ಇದನ್ನು ಸಹಿಸದವರು ಆಕೆಯನ್ನು ಅಕ್ರಮವಾಗಿ ಬಂಧಿಸಿ ಇಟ್ಟಿದ್ದಾರೆ ಎನ್ನುವುದುದ. 68 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನ ಕೈವಾಡ ಇದರಲ್ಲಿ ಇದೆ ಎಂದಿರುವ ಅವರು, ಆ ವ್ಯಕ್ತಿ ಯಾರು ಎಂಬ ಬಗ್ಗೆ ವಿವರಿಸಿಲ್ಲ.

ಸೈಫ್​ ಅಲಿ ಮಕ್ಕಳು, ರವೀಂದ್ರನಾಥ್​ ಟ್ಯಾಗೋರ್​ರ ಮರಿಮೊಮ್ಮಕ್ಕಳು! ಮತಾಂತರದ ಕುತೂಹಲದ ಇತಿಹಾಸ

ಇದೇ ಅಕ್ಟೋಬರ್​ 1ರಂದು ಶಸ್ತ್ರಾಸ್ತ್ರ ಹೊಂದಿದ್ದ 20 ಪುರುಷರ ತಂಡ ಏಕಾಏಕಿ ವಸುಂಧರಾ ಓಸ್ವಾಲ್ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದೆ. ಆದರೆ ಅವರು ತಾವು ಯಾವ ತನಿಖಾ ಸಂಸ್ಥೆಗೆ ಸೇರಿದವರು ಎಂದು ಹೇಳಿಲ್ಲ. ನ್ಯಾಯಾಲಯಕ್ಕೂ ಹಾಜರುಪಡಿಸಿಲ್ಲ. ಆಕೆಯ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. ಉಗಾಂಡಾದಲ್ಲಿ ಓಸ್ವಾಲ್ ಮಾಲೀಕತ್ವದ ಹೆಚ್ಚುವರಿ ತಟಸ್ಥ ಮದ್ಯ ತಯಾರಿಕಾ ಘಟಕ ಇದೆ. ಇಲ್ಲಿಂದಲೇ ಆಕೆಯನ್ನು ಬಂಧಿಸಿ ಕರೆದೊಯ್ಯಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ವಾರವೇ ಓಸ್ವಾಲ್ ಪರಿವಾರ ಈ ಕುರಿತಾಗಿ ವಿಶ್ವ ಸಂಸ್ಥೆಗೆ ಅರ್ಜಿ ಸಲ್ಲಿಸಿದೆ. ಇಷ್ಟೇ ಅಲ್ಲದೇ, ಇದರಲ್ಲಿ, ಉಗಾಂಡಾ ಸರ್ಕಾರ, ಸೇನೆ ಹಾಗೂ ಪೊಲೀಸರ ಕೈವಾಡವೂ ಇದೆ ಎಂದಿರುವ ಅವರು, ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳಿಗೂ ದೂರು ನೀಡಿದ್ದಾರೆ. 

ಓಸ್ವಾಲ್ ಕುಟುಂಬದ ಮಾಜಿ ಉದ್ಯೋಗಿಯೊಬ್ಬರು ಮಾಡಿದ ಸುಳ್ಳು ಆರೋಪಗಳನ್ನು ಆಧರಿಸಿ ತನ್ನ ಮಗಳ ಬಂಧನವಾಗಿದೆ ಎಂದು ಪಂಕಜ್ ಓಸ್ವಾಲ್ ಆರೋಪಿಸಿದ್ದಾರೆ. ಅವರು ಮೌಲ್ಯಯುತ ಆಸ್ತಿಯನ್ನು ಕದ್ದಿದ್ದಾರೆ ಮತ್ತು ಕುಟುಂಬದೊಂದಿಗೆ $ 200,000 ಸಾಲವನ್ನು ಗ್ಯಾರಂಟಿಯಾಗಿ ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಇದೀಗ, ವಸುಂಧರಾ ಅವರ ತಾಯಿ ರಾಧಿಕಾ ಓಸ್ವಾಲ್ ಕೂಡಾ ಉಗಾಂಡಾ ಸರ್ಕಾರಕ್ಕೆ ಪತ್ರ ಬರೆದಿದ್ದು, ಮಗಳನ್ನು ಬಿಡುವಂತೆ ಕೋರಿಕೊಂಡಿದ್ದಾರೆ! ಖ್ಯಾತ ಮಾನವ ಹಕ್ಕುಗಳ ವಕೀಲ ಚೆರಿ ಬ್ಲೇರ್ ವಸುಂಧರಾ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ.

ಸಲ್ಮಾನ್​ ಖಾನ್​ ತಂದಿಟ್ಟ ಸಂಕಷ್ಟ? ಆಪ್ತ ಬಾಬಾ ಸಿದ್ಧಿಕಿ ಅಂತ್ಯಕ್ರಿಯೆಯೂ ಶಾರುಖ್​ಗೆ ಹೋಗಲಾಗದ ಸ್ಥಿತಿ...