Asianet Suvarna News Asianet Suvarna News

ಕೋವಿಡ್ ಹೋರಾಟದಲ್ಲಿ 150 ರಾಷ್ಟ್ರಗಳಿಗೆ ಭಾರತದ ನೆರವು

ಕೊರೋನಾ ಸಾಂಕ್ರಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತ 150ಕ್ಕೂ ಹೆಚ್ಚು ದೇಶಗಳಿಗೆ ನೆರವಾಗಿದೆ. ಭಾರತದಲ್ಲಿ ಸಾಂಕ್ರಾಮಿಕದ ವಿರುದ್ಧದ ಹೋರಾಟವನ್ನು ನಾವು ಜನಾಂದೋಲನವಾಗಿ ಮಾಡಲು ಯತ್ನಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

 

India has helped over 150 countries in global fight against covid 19
Author
Bengaluru, First Published Jul 18, 2020, 10:01 AM IST

ನವದೆಹಲಿ (ಜು. 18):  ಕೊರೋನಾ ಸಾಂಕ್ರಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತ 150ಕ್ಕೂ ಹೆಚ್ಚು ದೇಶಗಳಿಗೆ ನೆರವಾಗಿದೆ. ಭಾರತದಲ್ಲಿ ಸಾಂಕ್ರಾಮಿಕದ ವಿರುದ್ಧದ ಹೋರಾಟವನ್ನು ನಾವು ಜನಾಂದೋಲನವಾಗಿ ಮಾಡಲು ಯತ್ನಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಸಭೆಯನ್ನುದ್ದೇಶಿಸಿ ಶುಕ್ರವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಮೋದಿ, ‘ಇಡೀ ವಿಶ್ವವನ್ನೇ ಬಾಧಿಸುತ್ತಿರುವ ಕೊರೋನಾ ಎಲ್ಲ ದೇಶಗಳ ಪುನಶ್ಚೇತನದ ಸಾಮರ್ಥ್ಯವನ್ನೇ ಪರೀಕ್ಷೆಗೊಳಪಡಿಸಿದೆ. ಅದಕ್ಕಾಗಿ ಭಾರತದಲ್ಲಿ ಸರ್ಕಾರ ಮತ್ತು ನಾಗರಿಕ ಸಮಾಜವನ್ನು ಒಟ್ಟುಗೂಡಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟವನ್ನು ಜನರ ಹೋರಾಟವಾಗಿ ಪರಿವರ್ತಿಸಲಾಗಿದೆ. ದೇಶದಲ್ಲಿ ಭಾರೀ ಪ್ರಮಾಣದ ಸೋಂಕು ಪತ್ತೆಯಾಗುತ್ತಿದ್ದರೂ, ಗುಣಮುಖರಾಗುವವರ ಪ್ರಮಾಣ ವಿಶ್ವದಲ್ಲೇ ಅತ್ಯಧಿಕವಾಗಿದೆ. ಇದಕ್ಕೆಲ್ಲಾ ಕಾರಣವಾಗಿರುವುದು ದೇಶದ ತಳಮಟ್ಟದ ಆರೋಗ್ಯ ವ್ಯವಸ್ಥೆ’ ಎಂದು ಹೇಳಿದರು.

ಇದೇ ವೇಳೆ ಲಾಕ್ಡೌನ್‌ ಅವಧಿಯಲ್ಲಿ ಸರ್ಕಾರ ಪ್ರತಿಯೊಂದು ಬಡ ಕುಟುಂಬಕ್ಕೂ ಸರ್ಕಾರದ ಯೋಜನೆಗಳು ತಲುಪುವಂತೆ ನೋಡಿಕೊಂಡಿದೆ ಮತ್ತು 300 ಶತಕೋಟಿ ಡಾಲರ್‌ಗೂ ಹೆಚ್ಚಿನ ಪ್ಯಾಕೇಜ್‌ ಘೋಷಿಸಿದೆ. ಇದು ಆರ್ಥಿಕತೆ ಪುನಶ್ಚೇತನಕ್ಕೆ ಸಾಧ್ಯವಾಗಲಿದೆ. ಸರ್ಕಾರ ತನ್ನ ಹೊಸ ಯೋಜನೆಗಳನ್ನು ಆತ್ಮನಿರ್ಭರ ಭಾರತದ ಮೂಲಕ ಜಾರಿಗೆ ಮುಂದಾಗಿದೆ. ಇದು ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಕಾರಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಷ್ಯಾದಿಂದ ಕೊರೊನಾ ಲಸಿಕೆ ಸಂಶೋಧನಾ ಮಾಹಿತಿ ಕಳವು?

ವಿಶ್ವಸಂಸ್ಥೆ ಪುರ್ನಜನ್ಮ, ಸುಧಾರಣೆಗೆ ಮೋದಿ ಕರೆ

2ನೇ ಮಹಾಯುದ್ಧ ಸಾವು-ನೋವುಗಳೇ ವಿಶ್ವಸಂಸ್ಥೆ ಹುಟ್ಟಿಗೆ ಕಾರಣ

ಅಪಾರ ಪ್ರಮಾಣದ ಸಾವು-ನೋವುಗಳನ್ನುಂಟು ಮಾಡಿದ 2ನೇ ಮಹಾಯುದ್ಧದ ಪರಿಣಾಮ ವಿಶ್ವದಲ್ಲಿ ಶಾಂತಿಯ ಪುನಃಸ್ಥಾಪನೆಗಾಗಿ ವಿಶ್ವಸಂಸ್ಥೆ ಉದಯಿಸಿತು. ಇದೀಗ ವಿಶ್ವಸಂಸ್ಥೆಯ ಮರುಹುಟ್ಟು ಮತ್ತು ಸುಧಾರಣೆಗೆ ಕೊರೋನಾ ಸದಾವಕಾಶ ಕಲ್ಪಿಸಿಕೊಡಲಿದೆ. ಈ ಸದಾವಕಾಶವನ್ನು ನಾವು ಕಳೆದುಕೊಳ್ಳಬಾರದು. ಸುಧಾರಿತ ಬಹುತ್ವದಿಂದ ಮಾತ್ರವೇ ಮಾನವೀಯತೆಯ ಆಕಾಂಕ್ಷೆಗಳನ್ನು ಪೂರೈಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ.

193 ದೇಶಗಳನ್ನು ಸದಸ್ಯ ರಾಷ್ಟ್ರವಾಗಿಸಿಕೊಂಡಿರುವ ವಿಶ್ವಸಂಸ್ಥೆಯು ಸ್ಥಾಪನೆಯಾದಗಿಂದಲೂ ಈವರೆಗೆ ಹಲವು ಮಾರ್ಪಾಡುಗಳಿಗೆ ಒಳಪಟ್ಟಿದೆ. ಬಹುತ್ವದ ಮೂಲಕ ಸಮೃದ್ಧಿ ಸಾಧನೆ ಮತ್ತು ಸುಸ್ಥಿರ ಶಾಂತಿ ಸ್ಥಾಪನೆಯಲ್ಲಿ ಭಾರತ ನಂಬಿಕೆಯಿರಿಸಿದೆ. ಅಲ್ಲದೆ, ಪ್ರಸ್ತುತ ವಿಶ್ವವು ಬಹುತ್ವವನ್ನು ಪ್ರತಿಬಿಂಬಿಸಬೇಕು ಎಂಬುದು ಭಾರತದ ಆಕಾಂಕ್ಷೆಯಾಗಿದ್ದು, ಇದಕ್ಕಾಗಿ 75ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಈ ವೇಳೆ ಜಾಗತಿಕ ಬಹುತ್ವ ವ್ಯವಸ್ಥೆಯ ಸುಧಾರಣೆಗೆ ಎಲ್ಲ ರಾಷ್ಟ್ರಗಳು ಪಣ ತೊಡಬೇಕು ಎಂದು ಕರೆ ನೀಡಿದರು.

ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಕಾಯಂಯೇತರ ಸದಸ್ಯ ದೇಶವಾಗಿ ಅಭೂತಪೂರ್ವ ಮತಗಳಿಂದ ಭಾರತ ಆಯ್ಕೆಯಾದ ಬಳಿಕ, ಸದಸ್ಯ ದೇಶಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾಡಿದ ಮೊದಲ ಭಾಷಣ ಇದಾಗಿತ್ತು.

Follow Us:
Download App:
  • android
  • ios