ರೋಗ ನಿರೋಧಕ ಶಕ್ತಿ ಹೆಚ್ಚಳ ಹೇಗೆ? ಸಿಂಗಪುರ ಕನ್ನಡ ಸಂಘದ ವೆಬಿನಾರ್ನಲ್ಲಿ ಡಾ. ಆಂಜನಪ್ಪ
* ಸಿಂಗಪುರ ಕನ್ನಡ ಸಂಘದಿಂದ ವೆಬಿನಾರ್
* ಆಹಾರ - ಆರೋಗ್ಯದ ಮಹತ್ವ ವಿವರಿಸಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರೊ ಡಾ. ಆಂಜನಪ್ಪ ಟಿ.ಎಚ್
* ಕಾಯಿಲೆಗಳಿಂದ ದೂರ ಉಳಿಯುವ ಬಗೆ ಹೇಗೆ?
* ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಆಹಾರ ಯಾವುದು?
* ರಂಜಿತ ಟಿ.ಕೆ ಕನ್ನಡ ಸಂಘ (ಸಿಂಗಪುರ)
ಸಿಂಗಪುರ(ಸೆ. 02) ಕನ್ನಡ ಸಂಘ(ಸಿಂಗಪುರ)ವು “ಅರಿಯುವ ಹಾದಿಯಲ್ಲಿ, ಹಸನಾಗಲಿ ಜೀವನ” ಎಂಬ ಧ್ಯೇಯದ ಅಡಿಯಲ್ಲಿ ಇಲ್ಲಿಯವರೆಗೂ ಹಲವಾರು ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಈ ಬಾರಿ ಆರೋಗ್ಯ ಕಾಪಾಡಿಕೊಳ್ಳುವ ಬಗೆಗೆಸಂಬಂಧಿಸಿ ವೆಬಿನಾರ್ ಹಮ್ಮಿಕೊಳ್ಳಲಾಗಿತ್ತು. ಶನಿವಾರ ಸಂಜೆ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ. ಡಾ. ಆಂಜನಪ್ಪ ಟಿ.ಎಚ್ ಅವರನ್ನು ಆಹ್ವಾನಿಸಲಾಗಿತ್ತು.
ಕನ್ನಡ ಸಂಘ (ಸಿಂಗಪುರ)ದ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರಾದ ಸತೀಶ್. ಆರ್. ಎಲ್ ಡಾ.ಆಂಜನಪ್ಪನವರನ್ನು ಪರಿಚಯಿಸಿದರು. ಡಾ.ಆಂಜನಪ್ಪನವರು ಮೂಲತಃ ದೊಡ್ಡಬಳ್ಳಾಪುರದವರು. ಬಳ್ಳಾರಿ ಮೆಡಿಕಲ್ ಕಾಲೇಜ್ ನಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು ಪಡೆದು, ಸಾಮಾನ್ಯ ಶಸ್ತ್ರಚಿಕಿತ್ಸೆಯ ಅಧ್ಯಯನವನ್ನು ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಹುಬ್ಬಳ್ಳಿಯಲ್ಲಿ ಪೂರ್ಣಗೊಳಿಸಿರುತ್ತಾರೆ ಹಾಗೂ ಭಾರತೀಯ ವೈದ್ಯಕೀಯ ಅಸೋಸಿಯೇಷನ್ ಮತ್ತು ಸರ್ಜಿಕಲ್ ಸೊಸೈಟಿಯ ಸದಸ್ಯರಾಗಿರುತ್ತಾರೆ. ರಾಷ್ಟ್ರೀಯ ರತ್ನ ಪ್ರಶಸ್ತಿ, ಭಾರತ್ ವಿಕಾಸ್ ಪ್ರಶಸ್ತಿ, ರಾಷ್ಟ್ರೀಯ ಗೌರವ ಪ್ರಶಸ್ತಿ ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಇವರು ಮಮತಾ ನರ್ಸಿಂಗ್ ಹೋಮ್ ರಾಜಾಜಿನಗರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ವೃತ್ತಿಯಲ್ಲಿ ಪ್ರೊಫೆಸರ್ ಹಾಗೂ ವೈದ್ಯರಾಗಿದ್ದರೂ ಸಹ ಅವರ ಹಾಸ್ಯ ಮಿಶ್ರಿತವಾದ ಮಾತುಗಳು ಆಸಕ್ತಿದಾಯಕ ಮತ್ತು ಆರೋಗ್ಯದ ತಿಳುವಳಿಕೆಯನ್ನು ನೀಡಿದವು. ಆಡು ಭಾಷೆಯ ಕನ್ನಡವನ್ನು ಮಾತನಾಡುವಾಗ ಹೇಗೆ ವೈದ್ಯಕೀಯ ಕ್ಷೇತ್ರದಲ್ಲಿ ಅರ್ಥಗಳು ಬದಲಾಗಿ ತಪ್ಪುಗಳುಂಟಾಗುತ್ತವೆಂದು ಹಾಸ್ಯಸ್ಪದ ಉದಾಹರಣೆಗಳೊಂದಿಗೆ ಎಷ್ಟು ಎಚ್ಚರದಿಂದ ಮಾತನಾಡಬೇಕೆಂದು ವಿವರಿಸಿದರು.
ವೈಜ್ಞಾನಿಕ ಮನೋಭಾವನೆ ಎಷ್ಟುಮುಖ್ಯ? ಗ್ಯಾಸ್ಟಿಕ್ ಹಾಗೂ ಗ್ಯಾಸ್ ಟ್ರಬಲ್ ವ್ಯತ್ಯಾಸವೇನು? ಗ್ಯಾಸ್ಟ್ರಿಕ್ ಸಮಸ್ಯೆಗೆ ಮುಖ್ಯ ಕಾರಣಗಳೇನು? ಪಿತ್ತಗಲ್ಲುಗಳು(Gallstones) ಹೇಗೆ ಉಂಟಾಗುತ್ತವೆ? ರೋಗನಿರೋಧಕ ಶಕ್ತಿಯನ್ನು ಯಾವ ಆಹಾರಗಳನ್ನು ಸೇವಿಸಿಸುವುದರಿಂದ ಹೆಚ್ಚಿಸಿಕೊಳ್ಳಬಹುದು? ಸಸ್ಯಾಹಾರಿಗಳು ಮತ್ತು ಮಾಂಸಹಾರಿಗಳು ಯಾವ ರೀತಿಯ ಆಹಾರದಿಂದ ತಮ್ಮ ದೈನಂದಿನ ದೈಹಿಕ ಸಧೃಡತೆಯನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಭೃಂಗದ ಸಂಗೀತ ಕೇಳಿ.. ಸಿಂಗಪುರ ಕನ್ನಡಿಗರ ಸಾಹಸ
ತಮ್ಮ ದೈನಂದಿನ ಚಟುವಟಿಕೆಗಳು ಹೇಗೆ ಆರಂಭಗೊಂಡರೆ ಗ್ಯಾಸ್ಟ್ರಿಕ್ ನಿಂದ ದೂರ ಉಳಿಯಬಹುದು ಎಂದು ವಿವರಿಸುತ್ತಾ ನಮ್ಮ ದೇಹಕ್ಕೆ ನೀರಿನ ಪೂರೈಕೆಯ ಬಗ್ಗೆ ಜಾಲತಾಣಗಳಲ್ಲಿ, ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಬರುವ ಅನೇಕ ಅವೈಜ್ಞಾನಿಕ ಮಾಹಿತಿಗಳ ಬಗ್ಗೆ ಸ್ಪಷ್ಟನೆಯನ್ನು ನೀಡಿದರು. ಇದೇ ನಿಟ್ಟಿನಲ್ಲಿ ಸತ್ಯ -ಮಿಥ್ಯಗಳ ಸಂದೇಶಗಳನ್ನು ವಿವರಿಸುತ್ತಾ ಹಲವಾರು ನೈಜ ಉದಾಹರಣೆಗಳನ್ನು ಕೆಲವು ಮಹತ್ವಪೂರ್ಣ ವಿಷಯಗಳನ್ನು ಸಿಂಗಪುರ ಕನ್ನಡಿಗರೊಂದಿಗೆ ಹಂಚಿಕೊಂಡರು.
ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಲಕ್ಷ್ಮಿ ಶ್ರೀ ಪ್ರಶ್ನೋತ್ತರ ಭಾಗವನ್ನು ನಿರ್ವಹಿಸಿದರು. ಡಾ.ಆಂಜನಪ್ಪನವರ ಆರೋಗ್ಯದ ಅರಿವನ್ನು ಸ್ವಲ್ಪ ಮಟ್ಟಿಗೆ ನಮ್ಮಲ್ಲಿ ತಲುಪಿಸುವಷ್ಟರಲ್ಲಿ ಒಂದು ಗಂಟೆ ಮೂವತ್ತು ನಿಮಿಷಗಳ ಕಾಲ ನಡೆಯಬೇಕಾದ ಕಾರ್ಯಕ್ರಮವು ಸುಮಾರು ಎರಡು ಗಂಟೆ ಮೂವತ್ತು ನಿಮಿಷಗಳ ಕಾಲ ಮುಂದುವರಿಸಬೇಕಾಯಿತು.
ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾದ ಡಾ.ಆಂಜನಪ್ಪನವರು, ಒಬ್ಬ ವೈದ್ಯ ತನ್ನ ರೋಗಿಗೆ ಭೂಮಿಯ ಮೇಲೆ ಅತೀ ಹೆಚ್ಚು ಪ್ರಬಲವಾದ ಯಾವ ಔಷಧಿಯನ್ನು ನೀಡಬಲ್ಲನು ಎಂಬ ಅವರ ಗುರುಗಳ ಪ್ರಶ್ನೆಗೆ - ಆತ್ಮವಿಶ್ವಾಸದ ಮಾತುಗಳು ಎಂದು ವಿವರಿಸಿ ಅದರ ಮಹತ್ವವನ್ನು ತಿಳಿಸಿದರು.