Asianet Suvarna News Asianet Suvarna News

ವಿಶ್ವವು ಜಾಗತಿಕ ಶಾಂತಿ, ಭದ್ರತೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ: UN Chief Antonio Guterres

ಇತ್ತೀಚಿನ ವರ್ಷಗಳಲ್ಲಿ ವಿಶ್ವವು ದೊಡ್ಡಮಟ್ಟದಲ್ಲಿ ಜಾಗತಿಕ ಶಾಂತಿ ಮತ್ತು ಭದ್ರತೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದ ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೋ ಗುಟೆರಸ್‌ ಬುಧವಾರ ಹೇಳಿದ್ದಾರೆ.

Biggest global peace crisis in years UN chief Antonio Guterres gvd
Author
Bangalore, First Published Feb 24, 2022, 2:25 AM IST | Last Updated Feb 24, 2022, 2:25 AM IST

ವಿಶ್ವಸಂಸ್ಥೆ (ಫೆ.24): ಇತ್ತೀಚಿನ ವರ್ಷಗಳಲ್ಲಿ ವಿಶ್ವವು ದೊಡ್ಡಮಟ್ಟದಲ್ಲಿ ಜಾಗತಿಕ ಶಾಂತಿ ಮತ್ತು ಭದ್ರತೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದ ವಿಶ್ವಸಂಸ್ಥೆಯ (United Nations) ಮುಖ್ಯಸ್ಥ ಆಂಟೋನಿಯೋ ಗುಟೆರಸ್‌ (Antonio Guterres) ಬುಧವಾರ ಹೇಳಿದ್ದಾರೆ. ರಷ್ಯಾ (Russia) ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Vladimir Putin) ಉಕ್ರೇನ್‌ (Ukraine) ಮೇಲೆ ಯುದ್ಧ ಸಾರಲು ಸೇನೆಯನ್ನು ಕಳುಹಿಸಿದರ ವಿರುದ್ಧ ವಾಗ್ದಾಳಿ ನಡೆಸಿದ ಅವರು ನಾವು ಎಂದಿಗೂ ಅಪೇಕ್ಷಿಸದ ಕ್ಷಣವನ್ನು ನಾನು ಪ್ರಧಾನ ಕಾರ್ಯದರ್ಶಿಯಾಗಿರುವ ಅವಧಿಯಲ್ಲಿ ಎದುರಿಸಬೇಕಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಉಕ್ರೇನಿನಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮಾತನಾಡಿದ ಗುಟೆರಸ್‌ ‘ಡೋನೆಸ್ಕ್‌ ಹಾಗೂ ಲೂಹಾನ್ಸ್‌ ಪ್ರದೇಶದಲ್ಲಿನ ಕೆಲವು ಸ್ಥಳಗಳನ್ನು ರಷ್ಯಾ ಸ್ವತಂತ್ರ್ಯ ಎಂದು ಘೋಷಿಸಿದೆ. ಈ ಕ್ರಮವು ಉಕ್ರೇನಿನ ಪ್ರಾದೇಶಿಕ ಸಮಗ್ರತೆ, ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ. ಇದು ವಿಶ್ವಸಂಸ್ಥೆಯ ತತ್ವಗಳ ವಿರುದ್ಧವಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅನುಮೋದಿಸಿದ ಡಾನ್‌ಬಾಸ್‌ ಪ್ರದೇಶದಲ್ಲಿ ಯುದ್ಧ ಕೊನೆಗೊಳಿಸಲು ಮಾಡಲಾದ ಅಂತಾರಾಷ್ಟ್ರೀಯ ಒಪ್ಪಂದಗಳ ಸರಣಿಯಾದ ಮಿನ್ಸಕ ಒಪ್ಪಂದಗಳಿಗೆ ಮರಣದಂಡನೆಯಾಗಿದೆ’ ಎಂದು ಕಿಡಿಕಾರಿದರು.

Rana Ayyub Case ರಾಣಾ ಅಯೂಬ್‌ಗೆ ಕಿರುಕುಳ ಎಂದ ವಿಶ್ವಸಂಸ್ಥೆಗೆ ಕಾನೂನು ಎಲ್ಲರಿಗೂ ಒಂದೆ ಎಂದು ಭಾರತ ತಿರುಗೇಟು!

ಪೂರ್ವ ಉಕ್ರೇನಿಗೆ ಸೇನೆಯನ್ನು ಕಳುಹಿಸಿದ ಪುಟಿನ್‌ ತನ್ನ ಪಡೆಯನ್ನು ‘ಶಾಂತಿಪಾಲಕರು’ ಎಂದು ಸಂಬೋಧಿಸಿದ್ದನ್ನು ಕಟುವಾಗಿ ಟೀಕಿಸಿದ ಅವರು ಇದು ಶಾಂತಿಪಾಲನೆಯ ಹೆಸರಿನಲ್ಲಿ ನಡೆಸುತ್ತಿರುವ ವಿಕೃತಿಯಾಗಿದೆ. ಒಂದು ದೇಶದ ಅನುಮತಿಯಿಲ್ಲದೇ ಇನ್ನೊಂದು ದೇಶದ ಸೇನೆಯು ಅದರ ಗಡಿಯನ್ನು ಪ್ರವೇಶಿಸಿದಾಗ ಅವರನ್ನು ಶಾಂತಿಪಾಲಕರು ಎನ್ನಲಾಗುವುದಿಲ್ಲ ಎಂದರು.

ಉಕ್ರೇನಿನ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ರಾಜಕೀಯ ಸ್ವಾತಂತ್ರ್ಯವನ್ನು ವಿಶ್ವಸಂಸ್ಥೆ ಎತ್ತಿಹಿಡಿದಿದೆ. ಹೀಗಾಗಿ ಕೂಡಲೇ ರಷ್ಯಾ ಕದನ ವಿರಾಮವನ್ನು ಘೋಷಿಸಬೇಕು. ಉಕ್ರೇನಿನಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಯು ಮರುಸ್ಥಾಪನೆಯಾಗಬೇಕು. ಯಾವುದೇ ರಾಷ್ಟ್ರವೂ ಯುದ್ಧವನ್ನು ಖಚಿತಗೊಳಿಸುವ ಯಾವುದೇ ಆಕ್ರಮಣಕಾರಿ ಕ್ರಮ, ಹೇಳಿಕೆಗಳನ್ನು ನೀಡಬಾರದು. ಶಾಂತಿ ಸ್ಥಾಪನೆಗಾಗಿ ಮಾತುಕತೆಯನ್ನು ಆರಂಭಿಸಲು ಇದು ಸುಸಮಯ ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದರು.

ಶಾಂತಿ ಸ್ಥಾಪನೆಗೆ ಭಾರತ ಕರೆ: ರಷ್ಯಾ ಮತ್ತು ಉಕ್ರೇನ್‌ (Ukraine Russia Conflict) ಮಧ್ಯೆ ಉದ್ಭವವಾಗಿರುವ ಯುದ್ಧದ ಕಾರ್ಮೋಡದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತ, ಆ ಎರಡೂ ದೇಶಗಳ ಮಧ್ಯೆ ಶಾಂತಿ ಮರುಕಳಿಸಬೇಕಿರುವುದು ತಕ್ಷಣದ ಆದ್ಯತೆಯಾಗಿದೆ ಎಂದು ವಿಶ್ವಸಂಸ್ಥೆ ಸಭೆಯಲ್ಲಿ ಪ್ರತಿಪಾದಿಸಿದೆ. ಈ ಉಭಯ ದೇಶಗಳ ಮಧ್ಯೆ ತಲೆದೋರಿದ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆ ಕರೆಯಲಾಗಿತ್ತು. ಉಕ್ರೇನ್‌ ಬಂಡುಕೋರರಿರುವ ಎರಡು ಪ್ರಾಂತ್ಯಗಳನ್ನು ಸ್ವಾಯತ್ತ ಎಂದು ಗುರುತಿಸಬೇಕು ಎಂಬ ನಿರ್ಣಯಕ್ಕೆ ರಷ್ಯಾದ ಅಧ್ಯಕ್ಷ ವ್ಲಾದಿಮರ್‌ ಪುಟಿನ್‌ ಅವರು ಸಹಿಹಾಕಿದ ಬೆನ್ನಲ್ಲೇ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆ ಕರೆದಿತ್ತು.

ಈ ಸಭೆಯಲ್ಲಿ ಮಾತನಾಡಿದ ಭಾರತದ ಪರ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಶಾಶ್ವತ ಪ್ರತಿನಿಧಿಯಾಗಿರುವ ಟಿ.ಎಸ್‌ ತಿರುಮೂರ್ತಿ ಅವರು, ‘ನಾವು ಈಗಾಗಲೇ ಉಕ್ರೇನ್‌ ಮತ್ತು ಉಕ್ರೇನ್‌ನ ಪೂರ್ವ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ರಷ್ಯಾದ ಘೋಷಣೆಗಳನ್ನು ಗಮನಿಸುತ್ತಿದ್ದೇವೆ. ಈ ಎಲ್ಲಾ ಬೆಳವಣಿಗೆಗಳು ಉಭಯ ದೇಶಗಳ ಭದ್ರತೆ ಮತ್ತು ಶಾಂತಿಗೆ ಭಂಗವಾಗುವ ಸಾಧ್ಯತೆ ನಿಚ್ಚಳವಾಗಿದೆ. ಹೀಗಾಗಿ ಎಲ್ಲಾ ದೇಶಗಳ ಕಾನೂನುಬದ್ಧ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಂಡು, ಉದ್ವಿಗ್ನತೆಯನ್ನು ಶಾಂತಗೊಳಿಸುವುದು ಮತ್ತು ದೀರ್ಘಾವಧಿ ಶಾಂತಿ ಮತ್ತು ಸ್ಥಿರತೆಯನ್ನು ಭದ್ರಪಡಿಸುವುದು ತಕ್ಷಣದ ಆದ್ಯತೆಯಾಗಿದೆ’ ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿನ ದ್ವೇಷಪೂರಿತ ವಾತಾವರಣ ಹತ್ತಿಕ್ಕಬೇಕೆಂದ ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಮೀಷನರ್

ಉಕ್ರೇನ್‌ನಿಂದ ಭಾರತೀಯರ ಕರೆತಂದ ಏರ್‌ ಇಂಡಿಯಾ ವಿಮಾನ: ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣದ ಭೀತಿ ಹಿನ್ನಲೆಯಲ್ಲಿ ತನ್ನ ಪ್ರಜೆಗಳನ್ನು ರಕ್ಷಿಸಲು ಭಾರತ ಮುಂದಾಗಿದ್ದು, ಭಾರತೀಯರ ಹೊತ್ತ ಮೊದಲ ಏರ್‌ ಇಂಡಿಯಾ ವಿಮಾನ ದಿಲ್ಲಿಗೆ ಮಂಗಳವಾರ ರಾತ್ರಿ ಆಗಮಿಸಿದೆ. ಉಕ್ರೇನ್‌ನಲ್ಲಿರುವ ಭಾರತೀಯರನ್ನು ಕರೆತರಲು ಏರಿಂಡಿಯಾದ 3 ವಿಶೇಷ ವಿಮಾನಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದ್ದು, ಮೊದಲ ಬ್ಯಾಚ್‌ನಲ್ಲಿ 250 ಜನರು ಭಾರತಕ್ಕೆ ಆಗಮಿಸಿದರು. ಇನ್ನೆರಡು ವಿಮಾನ ಫೆ. 24, 26ರಂದು ಕಾರ್ಯಾಚರಣೆ ನಡೆಸಲಿವೆ.

Latest Videos
Follow Us:
Download App:
  • android
  • ios