Asianet Suvarna News Asianet Suvarna News

"ದೇವರು ನನಗೆ ಮರುಜೀವ ನೀಡಿದ್ದಾನೆ": ಗುಂಡಿನ ದಾಳಿಯ ನಂತರ ಇಮ್ರಾನ್‌ ಖಾನ್‌ ಹೇಳಿಕೆ

Imran Khan assassination attempt: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮೇಲೆ ಲಾಹೋರ್‌ನಲ್ಲಿ ದಾಳಿ ಮಾಡಲಾಗಿದ್ದು ಅವರ ಕಾಲುಗಳಿಗೆ ಗುಂಡು ಬಿದ್ದಿದೆ. ಜೀವ ಉಳಿದಿದ್ದಕ್ಕೆ ದೇವರು ನನಗೆ ಇನ್ನೊಮ್ಮೆ ಬದುಕಲು ಅವಕಾಶ ಮಾಡಿಕೊಟ್ಟಿದ್ದಾನೆ ಎಂದು ಖಾನ್‌ ಹೇಳಿದ್ಧಾರೆ. 

after being attacked imran khan says god has given them another chance to live
Author
First Published Nov 4, 2022, 11:36 AM IST

ನವದೆಹಲಿ: ಪಾಕಿಸ್ತಾನದ ವಜೀರಾಬಾದ್‌ನಲ್ಲಿ ತೆಹ್ರೀಕ್‌ ಎ ಇನ್ಸಾಫ್‌ ರ್ಯಾಲಿಯಲ್ಲಿ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮೇಲೆ ಗುಂಡಿನ ದಾಳಿಯಾದ ಬಳಿಕ ಆಸ್ಪತ್ರೆಯಲ್ಲಿ ಅವರು ಮಾತನಾಡಿದ್ದು ದೇವರು ಜೀವದಾನ ಮಾಡಿದ್ದಾನೆ ಎಂದಿದ್ದಾರೆ. ಗುರುವಾರ ರ್ಯಾಲಿಯಲ್ಲಿ ಇಮ್ರಾನ್‌ ಖಾನ್‌ ಮೇಲೆ ಗುಂಡು ಹಾರಿಸಲಾಗಿದೆ. ಇಮ್ರಾನ್‌ ಖಾನ್‌ ಕಾಲಿಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟೂ ಮೂರು ಗುಂಡುಗಳನ್ನು ಹಾರಿಸಲಾಗಿದ್ದು ಒಂದು ಇಮ್ರಾನ್‌ ಖಾನ್‌ಗೆ ತಾಗಿದರೆ ಇನ್ನುಳಿದವು ಅವರ ಬೆಂಬಲಿಗರಿಗೆ ಬಿದ್ದಿದೆ. ಇಮ್ರಾನ್‌ ಖಾನ್‌ ದಾಳಿಯಲ್ಲಿ ಪಾಕಿಸ್ತಾನ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಮೇಲೆ ಮತ್ತು ಪ್ರಧಾನಿ ಶಹಬಾಜ್‌ ಶರೀಫ್‌ ಮೇಲೆ ಆರೋಪ ಮಾಡಿದ್ದಾರೆ. 

ಪಾಕಿಸ್ತಾನದ ಎಆರ್‌ವೈ ನ್ಯೂಸ್‌ನಲ್ಲಿ ವಿಡಿಯೋ ಒಂದನ್ನು ಪ್ರಸಾರ ಮಾಡಲಾಗಿದ್ದು, ಇಮ್ರಾನ್‌ ಖಾನ್‌ ಆಸ್ಪತ್ರೆಯಲ್ಲಿ ಗಾಯಾಳುವಾಗಿ ಮಲಗಿದ್ದಾರೆ. ಅವರ ಬಲಗಾಲಿಗೆ ಬ್ಯಾಂಡೇಜ್‌ ಹಾಕಲಾಗಿದ್ದು ಅವರು ಏನನ್ನೋ ಹೇಳುತ್ತಿರುವುದು ಕಾಣುತ್ತದೆ. ಮೂಲಗಳ ಪ್ರಕಾರ ಈ ಘಟನೆಯನ್ನು ಇಮ್ರಾನ್‌ ಖಾನ್‌ ಮರುಜೀವ ಎಂದು ಪರಿಗಣಿಸಿದ್ದಾರೆ. ದೇವರು ನನಗೆ ಇನ್ನೊಮ್ಮೆ ಬದುಕಲು ಅವಕಾಶ ಕೊಟ್ಟಿದ್ದಾನೆ, ನಾನು ಮರಳಿ ಬರುತ್ತೇನೆ ಎಂದೂ ಅವರು ಹೇಳಿದ್ದಾರೆ ಎನ್ನಲಾಗಿದೆ. 

ಪಾಕಿಸ್ತಾನದಲ್ಲಿ ಪ್ರಧಾನಿ, ಸಚಿವರು, ಮಾಜಿ ಪ್ರಧಾನಿಗಳನ್ನು ಟಾರ್ಗೆಟ್ ಮಾಡುವುದು ಹೊಸದೇನಲ್ಲ. ಈಗಾಗಲೇ ಹಲವು ಪ್ರಮುಖರು ಈ ದಾಳಿಯಲ್ಲಿ ಹತರಾಗಿದ್ದಾರೆ. ಇದೀಗ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆದಿದೆ. ಪಾಕಿಸ್ತಾನದ ವಾಜಿರಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಗುಂಡಿನ ದಾಳಿ ಗುರಿ ತಪ್ಪಿದ ಕಾರಣ ಇಮ್ರಾನ್ ಖಾನ್ ಕಾಲಿಗೆ ತುಗುಲಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಮ್ರಾನ್ ಖಾನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಸಂಬಂಧ ಒರ್ವನ ಅರೆಸ್ಟ್ ಮಾಡಲಾಗಿದೆ. ಘಟನೆ ಕುರಿತು ಮಾಹಿತಿ ನೀಡಿರುವ ಪಾಕ್ ಸಚಿವ ಮೊಹಮ್ಮದ್ ಬಶರತ್ ರಾಜಾ, ಈ ಘಟನೆ ಹಿಂದಿರುವ ಎಲ್ಲರನ್ನು ಬಂಧಿಸಿ ನ್ಯಾಯ ಒದಗಿಸಲಾಗುವುದು ಎಂದಿದ್ದಾರೆ.

ಇಮ್ರಾನ್ ಖಾನ್ ಗುರಿಯಾಗಿಸಿ ದಾಳಿ ನಡೆಸಲಾಗಿದೆಯಾ? ಈ ಘಟನೆ ಹಿಂದೆ ಉಗ್ರರ ಅಥವಾ ಪ್ರಭಾವಿಗಳ ಕೈವಾಡವಿದೆಯಾ ಅನ್ನೋ ಕುರಿತು ಪಾಕಿಸ್ತಾನ ಸರ್ಕಾರ ತನಿಖೆ ನಡೆಸಲಿದೆ ಎಂದು ಮೊಹಮ್ಮದ್ ಬಶರತ್ ರಾಜಾ ಹೇಳಿದ್ದಾರೆ. 

 

Imran Khan: ನವಾಜ್‌ ರೀತಿ ಓಡಿಹೋಗಲ್ಲ, ಐಎಸ್‌ಐ ಜಾತಕ ಬಯಲು ಮಾಡ್ತೀನಿ ಎಂದ ಪಾಕ್‌ ಮಾಜಿ ಪ್ರಧಾನಿ!

ಪಾಕಿಸ್ತಾನ ಸರ್ಕಾರದ ವಿರುದ್ಧದ ಸತತ ವಾಗ್ದಾಳಿ ನಡೆಸುತ್ತಿದ್ದ ಇಮ್ರಾನ್ ಖಾನ್, ಭಾರಿ ದೊಟ್ಟ ಮಟ್ಟದಲ್ಲಿ ರ್ಯಾಲಿ ಆಯೋಜಿಸಿ ಯಶಸ್ವಿಯಾಗಿದ್ದರು. ಸತತ ರ್ಯಾಲಿ ಮೂಲಕ ಪಾಕಿಸ್ತಾನದಲ್ಲಿ ಮತ್ತೆ ಅಧಿಕಾರ ಹಿಡಿಯಲು ಸರ್ವ ಪ್ರಯತ್ನ ನಡೆಸುತ್ತಿದ್ದರು.  ತಮ್ಮ ರ್ಯಾಲಿಯಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ವಿದೇಶಾಂಗ ನೀತಿಯನ್ನು ಹಾಡಿಹೊಗಳಿದ್ದರು. 

ಶೂನ್ಯ ಭ್ರಷ್ಟಾಚಾರದ ವಿಷಯಲ್ಲಿ ಮೋದಿ ಅವರನ್ನು ನೋಡಿ ಕಲೀರಿ ಎಂದು ಪಾಕಿಸ್ತಾನ ಪ್ರಧಾನಿ ನವಾಜ್‌ ಶರೀಫ್‌ಗೆ ಚಾಟಿ ಬೀಸಿದ್ದಾರೆ. ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಇಮ್ರಾನ್‌, ಯಾವ ದೇಶದ ಪ್ರಧಾನಿಗೆ ವಿದೇಶದಲ್ಲಿ ನಿವಾಸವಿದೆ ಎಂದು ನವಾಜ್‌ ನಡೆಸಿದ ಭ್ರಷ್ಟಾಚಾರವನ್ನು ಪ್ರಶ್ನಿಸಿದ್ದಾರೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಇರದಿದ್ದರೆ ಅಲ್ಲಿ ಭ್ರಷ್ಟಾಚಾರ ನಡೆಯುತ್ತದೆ. ನವಾಜ್‌ ವಿದೇಶದಲ್ಲಿ ಎಷ್ಟುಹಣ ಸಂಗ್ರಹಿಸಿಟ್ಟಿದ್ದಾರೆ ಯಾರೂ ಊಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. 

Imran Khan Disqualified: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ 5 ವರ್ಷ ನಿಷೇಧ

ಇಮ್ರಾನ್‌ ಚುನಾವಣೆ ಸ್ಪರ್ಧೆಗೆ ನಿಷೇಧ ಇಲ್ಲ:
ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ನಿರ್ಬಂಧವಿಲ್ಲ ಎಂದು ಸ್ಥಳೀಯ ನ್ಯಾಯಾಲಯವೊಂದು ಸೋಮವಾರ ಹೇಳಿದೆ. ಗಣ್ಯರು ನೀಡಿದ ಉಡುಗೊರೆ ದುರ್ಬಳಕೆ ಮಾಡಿಕೊಂಡ ಪ್ರಕರಣದಲ್ಲಿ ಇಮ್ರಾನ್‌ ಅವರನ್ನು ಮುಂದಿನ 5 ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಕಳೆದ ವಾರವಷ್ಟೇ ಚುನಾವಣಾ ಆಯೋಗ ಆದೇಶಿಸಿತ್ತು. ಇದನ್ನು ಇಮ್ರಾನ್‌ ಪ್ರಶ್ನಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಇಮ್ರಾನ್‌ ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ಆಯೋಗ ನಿರ್ಬಂಧ ಹೇರಿಲ್ಲ ಎಂದು ಹೇಳಿದೆ. ಹೀಗಾಗಿ ಅ.30ರಂದು ನಡೆಯುವ ಖೈಬರ್‌ ಪಖ್ತಾನ್‌ಕ್ವಾ ಪ್ರಾಂತ್ಯದ ಖುರ್ರಂ ಜಿಲ್ಲೆಯಲ್ಲಿ ನಡೆವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಇಮ್ರಾನ್‌ ಅವಕಾಶ ಪಡೆದಂತೆ ಆಗಿದೆ.

Follow Us:
Download App:
  • android
  • ios