ದೇವಸ್ಥಾನದಲ್ಲಿ ಕಸ ಗುಡಿಸಿದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು!
ಸರಿಯಾಗಿ ಇನ್ನು 29 ದಿನಕ್ಕೆ ಆದಿವಾಸಿ ಮಹಿಳೆ, ಸಂತಾಲ್ ಸಮುದಾಯದ ದ್ರೌಪದಿ ಮುರ್ಮು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಪದವಿಗೇರುತ್ತಾರೆ. ಸೋಮವಾರ ಬಿಜೆಪಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಬೆನ್ನಲ್ಲೇ ರಾಯ್ರಂಗ್ಪುರದಲ್ಲಿನ ಶಿವ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ಕಸ ಗುಡಿಸಿ, ಪೂಜೆ ಸಲ್ಲಿಸಿದರು.
ಭುವನೇಶ್ವರ (ಜೂನ್ 22): ಆದಿವಾಸಿ ಮಹಿಳೆ, ಸಂತಾಲ್ ಸಮುದಾಯದ (Santhal society) ದ್ರೌಪದಿ ಮುರ್ಮು (Draupadi Murmu) ಇನ್ನು 29 ದಿನಕ್ಕೆ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ (president of india) ಪದವಿಗೇರುವುದು ಬಹುತೇಕ ನಿಶ್ಚಯವಾಗಿದೆ. ಸೋಮವಾರ ಬಿಜೆಪಿ ಮಿತ್ರಪಕ್ಷಗಳು (BJP) ರಾಷ್ಟ್ರಪತಿ ಚುನಾವಣೆಗೆ ದ್ರೌಪದಿ ಮುರ್ಮು (Presidential elections 2022) ಅವರ ಹೆಸರನ್ನು ಅಂತಿಮ ಮಾಡಿದ ಬೆನ್ನಲ್ಲಿಯೇ ಬುಡಕಟ್ಟು ಸಮುದಾಯದ ಮಹಿಳೆ ಕಣ್ಣೀರಾದರು.
ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯ ನಿರ್ಣಯ, ಸಭೆಗಳು ದೆಹಲಿಯಲ್ಲಿ ನಡೆಯುತ್ತಿದ್ದರೆ, ಇದರ ಬಗ್ಗೆ ಯಾವ ಗಮನವನ್ನೂ ನೀಡದ ದ್ರೌಪದಿ ಮುರ್ಮು ಒಡಿಶಾದ ಮಯೂರ್ಭಂಜ್ನ ಮಹುಲ್ದಿಯಾದ (Mahuldiha) ತಮ್ಮ ಗ್ರಾಮದ ಮನೆಯಲ್ಲಿದ್ದರು. ದ್ರೌಪದಿ ಮುರ್ಮು ಅವರೊಂದಿಗೆ ಮಗಳು ಇತಿಶ್ರೀ (Itishree ) ಕೂಡ ಇದ್ದರು.
"ಬಹುಶಃ ಸಂಜೆಯ ವೇಳೆಗೆ ಪ್ರಧಾನಿ ಮೋದಿ ಅವರಿಂದಲೇ ಕರೆ ಬಂದಿರಬೇಕು. ಅವರು ಏನು ಹೇಳಿದರು ಎನ್ನುವುದು ನನಗೆ ತಿಳಿದಿಲ್ಲ. ಆದರೆ, ಅವರು ಹೇಳಿದ ಮಾತಿಗೆ ಅಮ್ಮ ಶಾಂತವಾಗಿ ನಿಂತಿದ್ದರು. ಆಕೆಯ ಕಣ್ಣಲ್ಲಿ ನೀರಿತ್ತು. ಯಾರೊಂದಿಗೂ ಏನನ್ನೂ ಮಾತನಾಡಿರಲಿಲ್ಲ. ಕೆಲ ಸಮಯದ ಬಳಿಕ, ದೂರವಾಣಿ ಕರೆಯಲ್ಲೇ ತುಂಬಾ ಕಷ್ಟದಲ್ಲೇ ಥ್ಯಾಂಕ್ಯು ಎಂದು ಹೇಳಿದರು' ಎಂದು ರಾಷ್ಟ್ರಪತಿ ಅಭ್ಯರ್ಥಿಯಾಗಿ ತಮ್ಮ ತಾಯಿಯನ್ನು ಆಯ್ಕೆ ಮಾಡಿದ ಬಗ್ಗೆ ಇತಿಶ್ರಿ ಹೇಳಿದ್ದಾರೆ.
ಇದು ನನ್ನ ಪಾಲಿಗೆ, ಬುಡಕಟ್ಟು ಜನರ ಪಾಲಿಗೆ ಕೊನೆಗೆ ಮಹಿಳೆಯರ ಪಾಲಿಗೆ ಐತಿಹಾಸಿಕವಾದದ್ದು ಎಂದು ದ್ರೌಪದಿ ಮುರ್ಮು ಹೇಳಿದರು. ಇದೊಂದು ಐತಿಹಾಸಿಕ ಕ್ಷಣ. ಹುಲ್ಲಿನ ಗುಡಿಸಲಲ್ಲಿ ಇದ್ದ ನಾನು ದೇಶದ ಉನ್ನತ ಪದವಿಗೇರೋದು ಕನಸಿನಲ್ಲಿ ಮಾತ್ರ. ಆದರೆ, ಅದೀಗ ನಿಜವಾಗಿದೆ. ನಮ್ಮ ಬುಡಕಟ್ಟು ಜನಾಂಗದವರು ಕನಸಿನಲ್ಲೂ ಕೂಡ ಇದನ್ನು ಕಾಣೋದಿಲ್ಲ ಎಂದು ಇತಿಶ್ರೀ ಹೇಳುತ್ತಾರೆ.
ತಾವು ಸಂತಾಲ್ ಸಮುದಾಯದವರು ಎಂದಿರುವ ದ್ರೌಪದಿ ಮುರ್ಮು, ನಮ್ಮದು ಬಹಳ ಬಡ ಕುಟುಂಬವಾಗಿತ್ತು. ಆರಂಭಿಕ ಹಂತದಲ್ಲಿ ಒಂದು ಸಣ್ಣ ಕೆಲಸ ಮಾಡುವ ಮೂಲಕ ನಮ್ಮ ಕುಟುಂಬವನ್ನು ಸಾಕುವುದಷ್ಟೇ ನನ್ನ ಗುರಿಯಾಗಿತ್ತು. ನನಗೆ ಕೆಲಸ ಸಿಕ್ಕಿತ್ತು. ಆದರೆ, ಅದಾಗಲೇ ಮದುವೆಯಾಗಿದ್ದ ಕಾರಣ, ಇದನ್ನು ಬಿಡುವ ಅನಿವಾರ್ಯತೆ ಎದುರಾಯಿತು. ಆದರೆ, ಇದು ನನಗೆ ಇಷ್ಟವಿರಲಿಲ್ಲ. ಹಾಗಾಗಿ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲು ಆರಂಭಿಸಿದೆ ಅಲ್ಲಿಂದಲೇ ನನ್ನ ಸಾಮಾಜಿಕ ಸೇವೆ ಆರಂಭವಾಯಿತು.
ದ್ರೌಪದಿ ಮುರ್ಮು ಆಯ್ಕೆ ಬೆನ್ನಲ್ಲೇ 'ನಾವು ಜಾತಿವಾದಿಗಳಲ್ಲ.. ರಾಷ್ಟ್ರವಾದಿಗಳು' ಟ್ರೆಂಡಿಂಗ್!
ಇಬ್ಬರು ಮಕ್ಕಳು ಹಾಗೂ ಗಂಡನ ಸಾವಿನ ಬಳಿಕ ಖಿನ್ನತೆಗೆ ಇಳಿದಿದ್ದ ದ್ರೌಪದಿ ಮುರ್ಮು: 1997 ರಲ್ಲಿ, ಅವರು ರಾಯರಂಗಪುರ ನಗರ ಪಂಚಾಯತ್ನಲ್ಲಿ ಮೊದಲ ಬಾರಿಗೆ ಕೌನ್ಸಿಲರ್ ಚುನಾವಣೆಗೆ ಸ್ಪರ್ಧಿಸಿ ಜಯ ಕಂಡಿದ್ದರು. 2000ರಲ್ಲಿ ಶಾಸಕ ಸ್ಥಾನದ ಟಿಕೆಟ್ ಪಡೆದು ಅದರಲ್ಲೂ ಗೆಲುವು ಕಂಡ ಮಂತ್ರಿಯೂ ಆಗಿದ್ದರು. 2009ರ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಗ್ರಾಮಕ್ಕೆ ಮರಳಿದ ದ್ರೌಪದಿ ಮುರ್ಮು ಅವರಿಗೆ ಅದಕ್ಕಿಂತ ದೊಡ್ಡ ಶಾಕ್ ಕಾದಿತ್ತು. ಹಿರಿಯ ಮಗ ಅಫಘಾತದಲ್ಲಿ ಸಾವು ಕಂಡ ಸುದ್ದಿ ಕೇಳಿ ಖಿನ್ನತೆಗೆ ಒಳಗಾಗಿದ್ದ ಅವರು. 2013ರಲ್ಲಿ ತಮ್ಮ 2ನೇ ಮಗನನ್ನೂ ಅಪಘಾತದಲ್ಲಿ ಕಳೆದುಕೊಂಡರು. ಇದರ ಬೆನ್ನಲ್ಲಿಯೇ 2014ರಲ್ಲಿ ಪತಿಯ ಸಾವನ್ನೂ ನೋಡಿದರು. ಸಂಪೂರ್ಣ ಕುಸಿದು ಹೋಗಿದ್ದ ದ್ರೌಪದಿ ಮುರ್ಮು ಬಳಿಕ ಸಮಾಜಸೇವೆಯಲ್ಲಿಯೇ ತೊಡಗಿಕೊಳ್ಳುವ ಮೂಲಕ ಬದುಕಿನ ಆಶಾಕಿರಣ ಕಂಡಿದ್ದರು.
ಯಾರೀಕೆ ದ್ರೌಪದಿ ಮುರ್ಮು.. ಬಿಜೆಪಿಯ ರಾಷ್ಟಪತಿ ಅಭ್ಯರ್ಥಿ?
ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಬೆನ್ನಲ್ಲಿಯೇದ ದ್ರೌಪದಿ ಮುರ್ಮು ಅವರಿಗೆ ಕೇಂದ್ರದಿಂದ ಝಡ್ ಪ್ಲಸ್ ಭದ್ರತೆಯನ್ನು ನೀಡಲಾಗಿದೆ. ಸೋಮವಾರದಿಂದಲೇ ಅವರಿಗೆ ಸಿಆರ್ಪಿಎಫ್ ಭದ್ರತೆಯನ್ನು ನೀಡಲಾಗಿದೆ. ಸೈನಿಕರ ಒಂದು ದಳವೇ ಅವರಿಗೆ ಭದ್ರತೆಯನ್ನು ನೀಡಲು ಆರಂಭಿಸಿದೆ. ಭದ್ರತಾ ಕವರ್ ಪಡೆದ ನಂತರ, ಮುರ್ಮು ತಮ್ಮ ವಿಧಾನಸಭಾ ಕ್ಷೇತ್ರವಾದ ರಾಯರಂಗಪುರದ ಜಗನ್ನಾಥ ಹಾಗೂ ಶಿವ ದೇವಾಲಯಕ್ಕೆ ಭೇಟಿ ನೀಡಿದ್ದಲ್ಲದೆ, ಹೊರಜಗುಲಿಯಲ್ಲಿದ್ದ ನಂದಿ ಸುತ್ತಲಿನ ಸ್ಥಳ ಸ್ವಚ್ಚಗೊಳಿಸಿದರು.ದೇವಸ್ಥಾನದ ಆವರಣ ಸ್ವಚ್ಚಗೊಳಿಸಿ ದ್ರೌಪದಿ ಮುರ್ಮು ದೇವರ ದರ್ಶನವನ್ನೂ ಪಡೆದರು.