ಬಿಜೆಪಿ ಅಧಿಕಾರದಲ್ಲಿದ್ದ ಎಲ್ಲಾ ಕಡೆ ಇರುವ ಆರೋಪವೇನೆಂದರೆ ಅವರು ಹಿಂದುತ್ವವಾದಿಗಳು ಎನ್ನುವುದು. ಆದರೆ, ದೇಶದ ಅತ್ಯುನ್ನತ ಸಾವಿಂಧಾನಿಕ ಹುದ್ದೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂರು ಅವಕಾಶ ಸಿಕ್ಕಾಗಲೂ ತನ್ನ ಅಚ್ಚರಿಯ ಆಯ್ಕೆಗಳ ಮೂಲಕ ರಾಷ್ಟ್ರ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.

ಬೆಂಗಳೂರು (ಜೂನ್ 21): ರಾಷ್ಟ್ರಪತಿ ಭವನದಲ್ಲಿ ತನ್ನ ಆಯ್ಕೆಯ ರಾಷ್ಟ್ರಪತಿ ಅಭ್ಯರ್ಥಿಗಳನ್ನು (President candidate) ಆಯ್ಕೆ ಮಾಡಬೇಕಾದ ಸಂದರ್ಭದಲ್ಲಿ ಬಿಜೆಪಿ (BJP) ವಹಿಸಿರುವ ಜಾಣ ನಡೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಬಿಜೆಪಿಗೆ ಈವರೆಗೂ ಮೂರು ಬಾರಿ ರಾಷ್ಟ್ರಪತಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅವಕಾಶ ಸಿಕ್ಕಿತ್ತು. ಈ ಮೂರೂ ಬಾರಿಯೂ ಅಚ್ಚರಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ರಾಜಕೀಯ ಮಾಸ್ಟರ್ ಸ್ಟ್ರೋಕ್ ಬಾರಿಸಿದೆ.

2002ರಲ್ಲಿ ಮೊದಲ ಬಾರಿಗೆ ಈ ಅವಕಾಶ ಎದುರಿಗೆ ಬಂದಾಗ ಮುಸ್ಲಿಂ ಆಗಿದ್ದ ಡಾ. ಎಪಿಜೆ ಅಬ್ದುಲ್ ಕಲಾಂ (Abdul kalam) ಅವರನ್ನು ರಾಷ್ಟ್ರಪತಿ ಪದವಿಗೆ ಆಯ್ಕೆ ಮಾಡಿತ್ತು. 2017ರಲ್ಲಿ ಮತ್ತೊಮ್ಮೆ ಈ ಅವಕಾಶ ಬಂದಾಗ ದಲಿತರಾಗಿದ್ದ ರಾಮನಾಥ ಕೋವಿಂದ್ (Ramnath Kovind) ಅವರನ್ನು ಈ ಪದವಿಗೆ ಆಯ್ಕೆ ಮಾಡಿತ್ತು. ಮೂರನೇ ಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ರಾಷ್ಟ್ರಪತಿ ಆಯ್ಕೆ ಮಾಡುವ ಅವಕಾಶ ಸಿಕ್ಕಾಗ, ಅಚ್ಚರಿ ಎನ್ನುವಂತೆ ಆದಿವಾಸಿ ಮಹಿಳೆ, ಜಾರ್ಖಂಡ್‌ನ ಮಾಜಿ ಗವರ್ನರ್ ಆಗಿದ್ದ 64 ವರ್ಷದ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಿದೆ.

ಮೇಲ್ಜಾತಿ ಹಿಂದೂಗಳಿಗೆ ಮಾತ್ರವೇ ಪ್ರಾಧಾನ್ಯತೆ ನೀಡುವ, ದಲಿತ ಹಾಗೂ ಅಲ್ಪಸಂಖ್ಯಾತ ವಿರೋಧಿ ಎಂದೇ ಈವರೆಗೂ ಪರಿಗಣಿಸಲಾದ ಬಿಜೆಪಿಯ ರಾಷ್ಟ್ರಪತಿ ಆಯ್ಕೆ ಖಂಡಿತವಾಗಿಯೂ ಜನರ ಹುಬ್ಬೇರಿಸಿದೆ. ಈ ಕುರಿತಾಗಿಯೇ ಹಲವರು ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. "ರಾಷ್ಟ್ರಪತಿ ಹುದ್ದೆಗೆ ಬಿಜೆಪಿಯು ಕಲಾಂ (ಒಬ್ಬ ಮುಸ್ಲಿಂ) ಮತ್ತು ಕೋವಿಂದ್ (ಎ ದಲಿತ) ಮತ್ತು ಈಗ #ದ್ರೌಪದಿ ಮುರ್ಮು (ಬುಡಕಟ್ಟು ಮಹಿಳೆ) ಅವರನ್ನು ಬೆಂಬಲಿಸಿದೆ. ಆದರೂ ಬಿಜೆಪಿಯನ್ನು ದಲಿತ ವಿರೋಧಿ ಮುಸ್ಲಿಂ ವಿರೋಧಿ ಮತ್ತು ಮಹಿಳಾ ವಿರೋಧಿ ಎಂದು ಕರೆಯುತ್ತಾರೆ' ಎಂದು ಶರತ್ ಚಂದ್ರ (@sharath_haritas) ಎನ್ನುವ ವ್ಯಕ್ತಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

"ಮುಸ್ಲಿಂ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದು ನಾವೇ, ದಲಿತ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದೂ ನಾವೇ, ಇಂದು ಮಹಿಳೆ ಅದೂ ಆದಿವಾಸಿ ಬುಡಕಟ್ಟು ಜನಾಂಗದ ಮಹಿಳೆಯನ್ನು ರಾಷ್ಟ್ರಪತಿ ಮಾಡುವುದು ನಾವೇ... ಏಕೆಂದರೆ ನಾವು ಜಾತಿವಾದಿಗಳಲ್ಲಾ-ರಾಷ್ಟ್ರವಾದಿಗಳು' ಎಂದು ವ್ಯಾಟ್ಸ್ಆಪ್ ನಲ್ಲಿ ಬಂದ ಸಂದೇಶವನ್ನು ಕರ್ನಾಟಕದ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

Scroll to load tweet…


"ಎಂತಹ ಆಯ್ಕೆಗಳು! ಡಾ.ಕಲಾಂ ಅವರಿಂದ ಹಿಡಿದು ರಾಮನಾಥ್ ಕೋವಿಂದ್ ವರೆಗೆ ದ್ರೌಪದಿ ಮುರ್ಮುವರೆಗೆ ಬಿಜೆಪಿ ಶ್ರೇಷ್ಠ ರಾಷ್ಟ್ರಪತಿಗಳನ್ನು ನೀಡಿದೆ' ಎಂದು ಅಮಿತ್ ದಹ್ಲಾಲ್ (@AmitDahal) ಬರೆದಿದ್ದಾರೆ. 

ಮುಸ್ಲಿಂ ರಾಷ್ಟ್ರಪತಿ : ಭಾರತರತ್ನ ಡಾ.ಎಪಿಜೆ ಅಬ್ದುಲ್ ಕಲಾಂ, ದಲಿತ ರಾಷ್ಟ್ರಪತಿ : ಶ್ರೀ ರಾಮ್ ನಾಥ್ ಕೋವಿಂದ್, ಬುಡಕಟ್ಟು ಜನಾಂಗದ ಮಹಿಳೆ : ದ್ರೌಪದಿ ಮುರ್ಮು, ಇಂಥ ಆಯ್ಕೆಗಳನ್ನು ಮಾಡಲು ಬಿಜೆಪಿಯಿಂದ ಮಾತ್ರವೇ ಸಾಧ್ಯ ಎಂದು ವಿಜಯ್ ದೇಸಾಯಿ (@vk_desaii) ಬರೆದುಕೊಂಡಿದ್ದಾರೆ.

ಎನ್‌ಡಿಎ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಘೋಷಣೆ, ದ್ರೌಪದಿ ಮುರ್ಮುಗೆ ಬರ್ತ್‌ಡೇ ಗಿಫ್ಟ್ ನೀಡಿದ ಬಿಜೆಪಿ!

"ಎಪಿಜೆ ಅಬ್ದುಲ್ ಕಲಾಂ ಮೂಲಕ ಮುಸ್ಲಿಂ ಕಾರ್ಡ್. ರಾಮನಾಥ್ ಕೋವಿಂದ್ ಮೂಲಕ ದಲಿತ ಕಾರ್ಡ್. ದ್ರೌಪದಿ ಮುರ್ಮು ಮೂಲಕ ಆದಿವಾಸಿ ಕಾರ್ಡ್. ರಾಜಕೀಯ ತಂತ್ರಗಾರಿಕೆಯಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಯಾವಾಗಲೂ ಇತರ ಪಕ್ಷಗಳಿಗಿಂತ ಮೈಲುಗಳಷ್ಟು ಮುಂದಿದೆ' ಎಂದು ಸೈಕತ್ ದಾಸ್ (@SaikatSD10) ಬರೆದುಕೊಂಡಿದ್ದಾರೆ.

ಯಾರೀಕೆ ದ್ರೌಪದಿ ಮುರ್ಮು.. ಬಿಜೆಪಿಯ ರಾಷ್ಟಪತಿ ಅಭ್ಯರ್ಥಿ?

"ಎಲ್ಲಾ ರಾಷ್ಟ್ರಪತಿಗಳು (ಭಾರತದ ಪ್ರಥಮ ಪ್ರಜೆ) "DIVERSE" ಹಿನ್ನೆಲೆಯಿಂದ ಬಂದವರು. ಹಾಗಿದ್ದರೂ ಬಿಜೆಪಿ ಮುಸ್ಲಿಮರ ವಿರುದ್ಧ, ಬಿಜೆಪಿ ದಲಿತರ ವಿರುದ್ಧ, ಬಿಜೆಪಿ ಆದಿವಾಸಿಗಳ ವಿರುದ್ಧ' ಎಂದು ಪ್ರಿಯಾ ಕುಲಕರ್ಣಿ (@priyaakulkarni2) ಬರೆದಿದ್ದಾರೆ.