Asianet Suvarna News Asianet Suvarna News

Google Twitter ಭಾರತ ಬಗ್ಗೆ ನಕಲಿ ಸುದ್ದಿಯಿಂದ ಕೆಟ್ಟ ಹೆಸರು, ಸುಳ್ಳು ಸುದ್ದಿ ತಡೆಯದ ಗೂಗಲ್‌, ಟ್ವೀಟರ್‌ಗೆ ಕೇಂದ್ರ ತರಾಟೆ!

  • ಜಾಲತಾಣ, ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ವ್ಯಾಪಕ
  • ‘ನಕಲಿ ಸುದ್ದಿ’ ಎಂದು ಗುರುತಿಸಿ ತಿಳಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ
  • ಕೂಡಲೇ ಸುಳ್ಳು ಸುದ್ದಿಗಳ ಪ್ರಸಾರ ತಡೆಯದಿದ್ದರೆ ಕಠಿಣ ಕ್ರಮ
Government slams Google Twitter Facebook for not proactively removing fake news ckm
Author
Bengaluru, First Published Feb 3, 2022, 4:04 AM IST | Last Updated Feb 3, 2022, 7:35 AM IST

ನವದೆಹಲಿ(ಫೆ.03): ‘ಭಾರತದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ(Social Media) ಹಾಗೂ ಜಾಲತಾಣಗಳಲ್ಲಿ(Internet) ಹರಿದಾಡುತ್ತಿರುವ ಸುಳ್ಳು ಸುದ್ದಿಗಳು(Fake News) ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಕೆಟ್ಟಹೆಸರು ತರುತ್ತಿವೆ. ಆದರೆ ಇವನ್ನು ‘ನಕಲಿ ಸುದ್ದಿಗಳು’ ಎಂದು ಗುರುತಿಸಿ ತೆಗೆದುಹಾಕುವಂತೆ ಹೇಳಿದರೂ ಅದನ್ನು ಕಡೆಗಣಿಸಲಾಗುತ್ತಿದೆ’ ಎಂದು ಕೇಂದ್ರ ಸರ್ಕಾರವು ಗೂಗಲ್‌, ಟ್ವೀಟರ್‌, ಫೇಸ್‌ಬುಕ್‌ ಹಾಗೂ ಇತರ ಕೆಲವು ಸಾಮಾಜಿಕ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಸುಳ್ಳು ಸುದ್ದಿ ತಡೆಯದಿದ್ದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಈ ಸಂಬಂಧ ಸೋಮವಾರ ಈ ಸಾಮಾಜಿಕ ಮಾಧ್ಯಮಗಳು ಹಾಗೂ ಜಾಲತಾಣಗಳ ಅಧಿಕಾರಿಗಳ ಜತೆ ವರ್ಚುವಲ್‌ ಸಭೆ ನಡೆಸಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು, ಕಂಪನಿಗಳ ನಿರ್ಲಕ್ಷ್ಯವನ್ನು ಬಲವಾಗಿ ಟೀಕಿಸಿ, ಸುಳ್ಳು ಸುದ್ದಿಗಳನ್ನು ನಿಯಂತ್ರಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

WhatsApp Limited Backup: ಅನ್‌ಲಿಮಿಟೆಡ್ ಗೂಗಲ್‌ ಡ್ರೈವ್ ಬ್ಯಾಕಪ್‌ಗೆ ಕಡಿವಾಣ?

‘ಕೂಡಲೇ ಸುಳ್ಳು ಸುದ್ದಿಗಳ ಪ್ರಸಾರವನ್ನು ತಡೆಹಿಡಿಯಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುತ್ತದೆ. ಈಗಾಗಲೇ ಸಾಮಾಜಿಕ ಮಾಧ್ಯಮಗಳು ಹಾಗೂ ಜಾಲತಾಣಗಳಲ್ಲಿ ಇರಬೇಕಾದ ಅಂಶಗಳ ಬಗ್ಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳನ್ನು ಪಾಲಿಸದೇ ಇದ್ದರೆ, ಸರಿಯಾದ ಬೆಲೆ ತೆರಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ ಎಂದು ಅವು ಹೇಳಿವೆ. ಈ ಸಭೆಯಲ್ಲಿ ಭಾರೀ ಬಿಸಿಬಿಸಿ ಚರ್ಚೆ ನಡೆಯಿತು. ಇದು ಭಾರತ ಹಾಗೂ ಪಾಶ್ಚಾತ್ಯ ಸಾಮಾಜಿಕ ಮಾಧ್ಯಮಗಳ ನಡುವಿನ ತ್ವೇಷಮಯ ಸಂದರ್ಭದ ದ್ಯೋತಕದಂತಿತ್ತು. ಆದರೆ ಕ್ರಮ ಕೈಗೊಳ್ಳಲು ಯಾವುದೇ ಕಾಲಮಿತಿಯನ್ನು ಸರ್ಕಾರ ವಿಧಿಸಲಿಲ್ಲ ಎಂದು ಅವು ಸ್ಪಷ್ಟಪಡಿಸಿವೆ.

ಇದರ ಬೆನ್ನಲ್ಲೇ, ‘ಸುಳ್ಳು ಮಾಹಿತಿಯ ಹರಡುವಿಕೆಯನ್ನು ತಡೆಯಲು ಕ್ರಮ ತೆಗೆದುಕೊಳ್ಳುವುದಾಗಿ ಜಾಲತಾಣ ಕಂಪನಿಗಳು ತಿಳಿಸಿದವು. ಆದರೆ ಯಾವ ಅಂಶಗಳನ್ನು ತೆಗೆದು ಹಾಕಬೇಕು ಎಂಬುದನ್ನು ನೇರವಾಗಿ ನಮಗೆ ತಿಳಿಸಿ. ಸಾರ್ವಜನಿಕವಾಗಿ(Public) ಹೇಳಬೇಡಿ. ಇದರಿಂದ ಸಮಸ್ಯೆ ಸುಸೂತ್ರವಾಗಿ ಪರಿಹಾರವಾಗುತ್ತದೆ ಕೋರಿದರು’ ಎಂದು ಮೂಲಗಳು ತಿಳಿಸಿವೆ.

Location sharing ಆಫ್ ಮಾಡಿದ್ದರೂ ಜಾಹೀರಾತುದಾರರೊಂದಿಗೆ ಲೊಕೇಶನ್‌ ಹಂಚಿಕೊಳ್ಳುತ್ತಿರುವ Google!

ಕಳೆದ ಜನವರಿಯಲ್ಲಿ ಕೇಂದ್ರ ಸರ್ಕಾರ ಭಾರತ ವಿರೋಧಿ ಮತ್ತು ಸುಳ್ಳುಸುದ್ದಿ ಹರಡುವ 55 ಯುಟ್ಯೂಬ್‌ ಚಾನಲ್‌ಗಳನ್ನು ಬ್ಲಾಕ್‌ ಮಾಡುವಂತೆ ಸೂಚಿಸಿತ್ತು.

ಬಂಗಾಳ ರಾಜ್ಯಪಾಲರನ್ನೇ ಟ್ವಿಟರ್‌ಲ್ಲಿ ಬ್ಲಾಕ್‌ ಮಾಡಿದ ದೀದಿ!
ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್‌ ಧನಕರ್‌, ತಮ್ಮ ಸರ್ಕಾರದ ವಿರುದ್ಧ ಸತತ ಟ್ವೀಟ್‌ ಮಾಡುತ್ತಿರುವುದರಿಂದ ವಿಚಲಿತರಾದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ತಮ್ಮ ಟ್ವಿಟರ್‌ನಿಂದಲೇ ಬ್ಲಾಕ್‌ ಮಾಡಿದ್ದಾರೆ. ‘ರಾಜ್ಯಪಾಲರು ಹಲವಾರು ಬಾರಿ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್‌ ಮಹಾ ನಿರ್ದೇಶಕರಿಗೆ ಬೆದರಿಕೆಯೊಡ್ಡಿದ್ದಾರೆ. ರಾಜ್ಯಪಾಲರನ್ನು ತೆಗೆದು ಹಾಕುವಂತೆ ಕೋರಿ ನಾನು ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದೇನೆ. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಅವರನ್ನು ಟ್ವೀಟರ್‌ನಿಂದ ಬ್ಲಾಕ್‌ ಮಾಡಿದ್ದೇನೆ’ ಎಂದು ಮಮತಾ ಹೇಳಿದ್ದಾರೆ.

ಪ್ಲೇಸ್ಟೋರ್‌ ನಿಯಮ
ಸುಧಾರಿತ ನ್ಯೂ ಪ್ಲೇಸ್ಟೋರ್‌ ನಿಯಮಗಳಿಗೆ ಸಂಬಂಧಿಸಿದ ತನಿಖೆ ಹಿನ್ನೆಲೆಯಲ್ಲಿ ಗೂಗಲ್‌ ಸಂಸ್ಥೆ ವಿರುದ್ಧ ಜ.5ರವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಹೈಕೋರ್ಟ್‌ಗೆ ಭರವಸೆ ನೀಡಿದೆ. ಪ್ಲೇಸ್ಟೋರ್‌ ನಿಯಮಗಳ ಸಂಬಂಧ ತನ್ನ ವಿರುದ್ಧ ತನಿಖೆಗೆ ಆದೇಶಿಸಿದ ಸಿಸಿಐ ಕ್ರಮ ಪ್ರಶ್ನಿಸಿ ಗೂಗಲ್‌ ಸಂಸ್ಥೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ ಪ್ರಸಾದ್‌ ಅವರ ರಜಾಕಾಲದ ನ್ಯಾಯಪೀಠಕ್ಕೆ ಸಿಸಿಐ ಪರ ವಕೀಲರು ಈ ಭರವಸೆ ನೀಡಿದರು.

ಅದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು 2022ರ ಜ.5ಕ್ಕೆ ಮುಂದೂಡುತ್ತಿರುವುದಾಗಿ ತಿಳಿಸಿತು.ಸಿಸಿಐ ಪರ ವಕೀಲರು ಹಾಜರಾಗಿ, ಪ್ರಕರಣ ಸಂಬಂಧ ಸಿಸಿಐ ಅನುಸರಿಸಿರುವ ಕ್ರಮವನ್ನು ಸಮರ್ಥಿಸಿಕೊಂಡರಾದರೂ ಅರ್ಜಿ ಕುರಿತ ಮುಂದಿನ ವಿಚಾರಣೆವರೆಗೆ ಗೂಗಲ್‌ ಸಂಸ್ಥೆ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸುವುದಿಲ್ಲ ಎಂದು ಭರವಸೆ ನೀಡಿದರು.
 

Latest Videos
Follow Us:
Download App:
  • android
  • ios