ರಾಯಚೂರಿನಲ್ಲಿ ನದಿಗೆ ತಳ್ಳಲ್ಪಟ್ಟ ಗಂಡನ ಕಥೆ ತಿರುವು ಪಡೆದಿದೆ. ವೈರಲ್ ವಿಡಿಯೋದಲ್ಲಿ ಹೆಂಡತಿಯೇ ತಪ್ಪಿತಸ್ಥಳೆಂದು ತೋರಿಸಿದರೂ, ಗಂಡನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಅಪ್ರಾಪ್ತ ವಯಸ್ಸಿನ ಹೆಂಡತಿಯನ್ನು ಮದುವೆಯಾಗಿ, ನಂತರ ಆಕೆಯ ಮೇಲೆಯೇ ಆರೋಪ ಹೊರಿಸಿದ್ದಾನೆ.

ರಾಯಚೂರು (ಜು.20): ರಾಯಚೂರು ಜಿಲ್ಲೆಯ ಗುರ್ಜಾಪುರ ಗ್ರಾಮದ ಬಳಿಯಲ್ಲಿ ಕೃಷ್ಣಾ ನದಿಗೆ ನಿರ್ಮಿಸಲಾಗಿದ್ದ ಸೇತುವೆಯಿಂದ ಹೆಂಡತಿ ತನ್ನನ್ನು ನದಿಗೆ ತಳ್ಳಿದ್ದಾನೆ ಎಂಬ ಘಟನೆಯ ವೈರಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲಿಯೇ 2025ರಲ್ಲಿ ಹೆಂಡತಿ ಕೊಲೆ ಪ್ರಯತ್ನದ ಬಳಿಕವೂ ಬದುಕುಳಿದ ಏಕೈಕ ಗಂಡ ಎಂಬೆಲ್ಲಾ ಟ್ಯಾಗ್‌ಲೈನ್‌ಗಳು ವೈರಲ್ ಆಗಿದ್ದವು. ಹೆಂಡತಿಯೇ ತನ್ನನ್ನು ನದಿಗೆ ತಳ್ಳಿದ್ದಾಳೆ ಎಂದು ಆರೋಪ ಮಾಡಿದ್ದ ಗಂಡನ ವಿರುದ್ಧವೇ ಇದೀಗ ಪೋಕ್ಸೋ ಕೇಸ್ ದಾಖಲಾಗಿದೆ.

ಹೌದು, ರಾಯಚೂರಿನ ಗುರ್ಜಾಪುರದ ಕೃಷ್ಣಾ ನದಿ ಬ್ರಿಡ್ಜ್ ಮೇಲೆ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ಇಂತಹ ಹೆಂಡತಿ ಇದ್ದರೆ ಗಂಡನಿಗೆ ಉಳಿಗಾಲ ಇಲ್ಲವೆಂಬ ಮಾತುಗಳು ಕೇಳಿಬಂದಿದ್ದವು. ನೋಡಲಿಕ್ಕೆ ನಸಗುನ್ನಿಯಂತಿರುವ ಹೆಂಡತಿ, ಮಾಡಿದ್ದು ಮಾತ್ರ ಮನೆಹಾಳ ಕೆಲಸ ಎಂತೆಲ್ಲಾ ಬೈದವರೂ ಇದ್ದರು. ಗಂಡನನ್ನೇ ನದಿಗೆ ತಳ್ಳಿದ ಹೆಂಡತಿಯನ್ನು ಸುಮ್ಮನೆ ಬಿಡಬೇಡಿ, ಎಲ್ಲರೂ ಸೇರಿ ಆಕೆಯನ್ನು ಎತ್ತಿ ನದಿಗೆ ಎಸೆಯಿರಿ, ಕಾನೂನು ಶಿಕ್ಷೆ ಕೊಡಿಸಿರಿ, ಜೀವಾವಧಿ ಶಿಕ್ಷೆ ಕೊಡಿಸಿ ಜೈಲಿನಲ್ಲಿ ಕೊಳೆಯುವಂತೆ ಮಾಡಿ ಎಂಬ ಆಕ್ರೋಶದ ಮಾತುಗಳು ನೆಟ್ಟಿರಿಂದ ಕೇಳಿಬಂದಿದ್ದವು.

ಕಲೆದ ಮೂರು ತಿಂಗಳ ಹಿಂದಷ್ಟೇ ತಾತಪ್ಪ (ಗಂಡನ ಹೆಸರು) ಗದ್ದೆಮ್ಮ (ಹೆಂಡತಿ ಹೆಸರು) ಇಬ್ಬರೂ ಮದುವೆ ಮಾಡಿಕೊಂಡಿದ್ದರು. ಅತ್ತೆಯ ಮಗಳಾಗಿದ್ದ ಗದ್ದೆಮ್ಮ 8ನೇ ತರಗತಿ ಓದಿಕೊಂಡು ಹೊಲ, ಮನೆ ಕೆಲಸ ಮಾಡಿಕೊಂಡು ಮನೆಯ್ಲಿದ್ದಳು. ಮನೆಯವರು ಇಬ್ಬರನ್ನೂ ಮದುವೆ ಮಾಡಿಸಿ, ಸುಖ ಸಂಸಾರ ಮಾಡಿಕೊಂಡಿರಲು ಆಶೀರ್ವಾದ ಮಾಡಿದ್ದರು. ನವಜೋಡಿ ಆಗಿದ್ದರಿಂದ ಊರೂರು ಸುತ್ತಾಡುವುದು, ಬೀಗರ ಮನೆಗೆ ಹೋಗಿ ಬರುವುದು ಸಾಮಾನ್ಯ. ಅಂತೆಯೇ ಗದ್ದೆಮ್ಮಳ ಚಿಕ್ಕಮ್ಮನ ಮನೆಗೆ ಗಂಡ-ಹೆಂಡತಿ ಇಬ್ಬರೂ ಹೋಗಿ ವಾಪಸ್ ಗಂಡನ ಮನೆಗೆ ಬಕ್‌ನಲ್ಲಿ ಹೋಗುತ್ತಿರುವಾಗ ಬ್ರಿಡ್ಜ್ ಬಳಿ ಫೋಟೋ ತೆಗೆದುಕೊಳ್ಳಲು ಬೈಕ್ ನಿಲ್ಲಿಸಿದ್ದಾರೆ. ಆಗ ಸೆಲ್ಫಿ ಫೋಟೋಗೆ ಗದ್ದೆಮ್ಮ ನಿರಾಕರಿಸಿದ್ದಾಳೆ. ಗಂಡನನ್ನು ಒಬ್ಬನೇ ನಿಲ್ಲಲು ಹೇಳಿ, ಫೋಟೋ ತೆಗೆಯುವಾಗ ತಳ್ಳಿದ್ದಾಳೆ ಎಂದು ಆಕೆಯ ಗಂಡ ಹೇಳಿದ್ದಾನೆ.

ಇನ್ನು ಕೃಷ್ಣಾ ನದಿಯಲ್ಲಿ ಈಜಿಕೊಂಡು ಅಲ್ಲಿದ್ದ ನಡುಗಡ್ಡೆಯ ಕಲ್ಲೊಂದರ ಮೇಲೆ ಕುಳಿತು ಸಹಾಯಕ್ಕೆ ಬೇಡಿಕೊಂಡಿದ್ದಾನೆ. ಜೊತೆಗೆ, ಅಕಿನ ಬಿಡಬೇಡಿ ಬ್ರೋ, ಅಕಿನಾ ಹಿಡಿರಿ ಬ್ರೋ, ಅಕಿನಾ ನನ್ನ ನದಿಗೆ ತಳ್ಳಿದ್ದಾಳೆ ಬ್ರೋ ಎಂದೆಲ್ಲಾ ಕೂಗಾಡಿದ್ದಾನೆ. ನಂತರ ಆತನನ್ನು ರಕ್ಷಣೆ ಮಾಡಿದ ಸ್ಥಳೀಯರು ಇಬ್ಬರನ್ನೂ ಮನೆಗೆ ಬಿಟ್ಟು ಬಂದಿದ್ದಾನೆ. ನಂತರ ರಾಜಿ ಪಂಚಾಯಿತಿ ಮಾಡಿದರೂ ಬಗ್ಗದ ಗಂಡ ತಾತಪ್ಪ, ಈಕೆ ನನ್ನನ್ನು ನದಿಗೆ ತಳ್ಳಿ ಸಾಯಿಸಲು ಪ್ರಯತ್ನ ಮಾಡಿದ್ದಾಳೆ, ಈಕೆಯೊಂದಿಗೆ ನಾನು ಸಂಸಾರ ಮಾಡೋದಿಲ್ಲ. ಈಕೆಯಿಂದ ಡಿವೋರ್ಸ್ ಬೇಕು ಎಂದು ಹೇಳಿದ್ದಾನೆ. ಇದರಿಂದ ಮನನೊಂದ ಯುವತಿ ಮನೆಯವರು ಇಬ್ಬರೂ ಸುಖ ಸಂಸಾರ ಮಾಡಿಕೊಂಡು ಹೋಗ್ತಾರಂತ ಮದುವೆ ಮಾಡಿದ್ದೇವೆ. ಈಗ ಇಂತಹ ಘಟನೆ ನಡೆದಿದೆ. ಯಾರ ಮಾತನ್ನು ಕೇಳಬೇಕೋ ಗೊತ್ತಾಗುತ್ತಿಲ್ಲ, ಅವರ ಹಣೆಬರಹದಲ್ಲಿ ಇದ್ದಂತೆ ಆಗಲಿ ಎಂದು ಅಳಲು ತೋಡಿಕೊಂಡಿದ್ದರು. ಇದಾದ ನಂತರ ಗಂಡ ತಾತಪ್ಪ ಹೆಂಡತಿಗೆ ಡಿವೋರ್ಸ್ ಕೊಡಲು ಅರ್ಜಿ ಸಲ್ಲಿಸಿದ್ದಾನೆ.

ತಾತಪ್ಪನ ಅಸಲಿ ಸತ್ಯ ಬಹಿರಂಗ:

ಅಷ್ಟಕ್ಕೂ ಹೆಂಡತಿ ಗದ್ದೆಮ್ಮ ನನಗೆ ಬೇಡ, ಆಕೆ ನನ್ನ ಸಾಯಿಸೋ ಪ್ರಯತ್ನ ಮಾಡಿದ್ದಾಳೆ. ಆಕೆಯಿಂದ ಡಿವೋರ್ಸ್ ಬೇಕು ಎಂದು ಅರ್ಜಿ ಸಲ್ಲಿಕೆ ಮಾಡಿದ ತಾತಪ್ಪನ ಅಸಲಿ ಮುಖ ಇಲ್ಲಿ ಬಹಿರಂಗವಾಗಿದೆ. ಅಸಲಿಗೆ ಯುವತಿ ಗದ್ದೆಮ್ಮಳಿಗೆ ಇನ್ನೂ ಮದುವೆಯ ವಯಸ್ಸೇ ಆಗಿಲ್ಲ. ಅಪ್ರಾಪ್ತಳಾಗಿದ್ದ ಅತ್ತೆಯ ಮಗಳನ್ನು ಮದುವೆ ಮಾಡಿಕೊಂಡು ಆಕೆಯೊಂದಿಗೆ ಮೂರು ತಿಂಗಳು ಸಂಸಾರವನ್ನೂ ಮಾಡಿದ್ದಾನೆ. ಗದ್ದೆಮ್ಮಳಿಗೆ ಇನ್ನೂ ಕಾನೂನಿನ ಅನ್ವಯ ಮದುವೆಯ ವಯಸ್ಸು 18 ವರ್ಷ ತುಂಬಿಲ್ಲ. ಆಕೆಗಿನ್ನೂ 15 ವರ್ಷ 8 ತಿಂಗಳು ಆಗಿದೆ. ಯಾದಗಿರಿಯಲ್ಲಿ ಓದುವಾಗಲೇ ಮದುವೆ ಮಾಡಿಕೊಂಡು, ಇದೀಗ ಕೊಲೆ ಮಾಡಲು ಪ್ರಯತ್ನ ಮಾಡಿದ್ದಾಳೆ ಎಂಬ ಆರೋಪ ಮಾಡಿದ್ದಾನೆ ಎಂದು ತಾತಪ್ಪನ ವಿರುದ್ಧವೇ ಪೋಕ್ಸೋ ಕೇಸ್ ದಾಖಲು ಮಾಡಿಕೊಳ್ಳುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯ ಮಕ್ಕಳ ಹಕ್ಕು ಆಯೋಗದ ಸದಸ್ಯ ಶಶಿಧರ್ ಕೂಸುಂಬೆ ಅವರು ಹೆಂಡತಿಯೇ ಗಂಡನನ್ನು ನದಿಗೆ ತಳ್ಳಿದ್ದಾಳೆ ಎಂಬ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲಿಯೇ ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಭಾಗಿತ್ವದೊಂದಿಗೆ ಯುವತಿಯ ಮಾಹಿತಿ ಕಲೆ ಹಾಕಿದ್ದಾರೆ. ಆಗ ನವ ವಿವಾಹಿತೆ ಗದ್ದೆಮ್ಮಳಿಗೆ ಇನ್ನೂ 16 ವರ್ಷವೂ ತುಂಬಿಲ್ಲ. ಅಪ್ರಾಪ್ತೆಯನ್ನು ಮದುವೆ ಮಾಡಿಕೊಂಡು ತಾತಪ್ಪ, ಆರೋಪ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಬಾಲ್ಯವಿವಾಹ ಮತ್ತು ಪೋಕ್ಸೋ ಕೇಸ್‌ನಡಿ ತಾತಪ್ಪ ಹಾಗೂ ಆತನ ಕುಟುಂಬದವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಸೂಚನೆ ಮಾಡಿದ್ದಾರೆ. ಇನ್ನು ಸಂತ್ರಸ್ತೆ ಗದ್ದೆಮ್ಮಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ, ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹ ಮಾಡಿದ್ದಾರೆ.

ಯಾದಗಿರಿ ಪ್ರಕರಣಕ್ಕೆ ಪೋಕ್ಸೋ ಟ್ವಿಸ್ಟ್: ಪತ್ನಿ ವಿರುದ್ಧ ಹೊಸ ಕೇಸ್?| Yadagiri Crime, POCSO Case Suvarna News