ಅನಂತಪುರದ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ, ಅತ್ತೆಯ ಕಿರುಕುಳಕ್ಕೆ ಬೇಸತ್ತ ಸೊಸೆಯೊಬ್ಬಳು 'ನನ್ನ ಅತ್ತೆ ಸಾಯುವಂತೆ ಮಾಡು' ಎಂದು ಬರೆದ 20 ರು. ನೋಟು ಪತ್ತೆಯಾಗಿದೆ. ಈ ಹಿಂದೆ ಕಲಬುರಗಿಯಲ್ಲೂ ಇಂಥದ್ದೇ ಘಟನೆ ನಡೆದಿದ್ದು, ಅತ್ತೆ-ಸೊಸೆ ಸಂಬಂಧದ ಕಠೋರ ವಾಸ್ತವ ತೆರೆದಿಟ್ಟಿದೆ.

ಅನಂತಪುರ (ಜೂ.21): ಅತ್ತೆ-ಸೊಸೆ ನಡುವಿನ ಸಂಬಂಧ ಹಾವು-ಮುಂಗುಸಿಗೆ ಹೋಲಿಸಲಾಗುತ್ತೆ. ಹಿಂದಿನಿಂದಲೂ ಅತ್ತೆ ಕಂಡರೆ ಸೊಸೆಗೆ ಆಗದು, ಸೊಸೆ ಕಂಡರೆ ಅತ್ತೆಗೆ ಆಗದು. ಯಾವ ಕಾರಣಕ್ಕೆ ಈ ದ್ವೇಷ ಸಾಧಿಸುತ್ತಾರೋ? ಇಂದಿನ ಅತ್ತೆಯೇ ಹಿಂದೆ ಸೊಸೆಯಾಗಿ ಬಂದವರೇ ಆಗಿರುತ್ತಾರೆ. ಈಗಿನ ಸೊಸೆ ಮುಂದೆ ಅತ್ತೆಯಾಗುವವರೇ ತಾನೆ? ಒಂದು ಮನೆಯಲ್ಲಿ ಅತ್ತೆ-ಸೊಸೆ ಒಟ್ಟಿಗೆ ಖುಷಿಯಾಗಿದ್ದಾರೆಂದರೆ ಆ ಮನೆಯೇ ಸ್ವರ್ಗ ಅಂತಾರೆ. ಇಂಥ ಕುಟುಂಬಗಳು ಇರೋದು ಅಪರೂಪವೇ. ಆದರೆ ಪ್ರತಿ ಮನೆಗಳಲ್ಲಿ ಅತ್ತೆ-ಸೊಸೆ ನಡುವೆ ಒಂದಲ್ಲೊಂದು ಕಿರಿಕ್ ಇದ್ದೇ ಇರುತ್ತೆ. ಕೆಲವು ಕುಟುಂಬಗಳಲ್ಲಿ ಅದೆಷ್ಟು ದ್ವೇಷ ಸಾಧಿಸುತ್ತಿರುತ್ತಾರೆಂದರೆ, ಒಬ್ಬರನ್ನೊಬ್ಬರು ನಾಶ ಮಾಡಲು ಯತ್ನಿಸುತ್ತಲೇ ಇರುತ್ತಾರೆ. ಅಂತಹದ್ದೊಂದು ಘಟನೆ ಮತ್ತೆ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ನನ್ನ ಅತ್ತೆ ಸಾಯುವಂತೆ ಮಾಡು'

ಅತ್ತೆಯ ಕಿರುಕುಳಕ್ಕೆ ಬೇಸತ್ತು ಸೊಸೆಯೊಬ್ಬಳು ದೇವರ ಮೊರೆ ಹೋಗಿದ್ದಾರೆ. ಅನಂತಪುರದ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ, ‘ಸ್ವಾಮಿ, ನನ್ನ ಅತ್ತೆ ನೀಡುತ್ತಿರುವ ಹಿಂಸೆಯನ್ನು ತಾಳಲಾರೆ. ಆದಷ್ಟು ಬೇಗ ಆಕೆ ಸಾಯುವಂತೆ ಮಾಡು’ ಎಂದು ತೆಲುಗಿನಲ್ಲಿ ಬರೆದಿದ್ದ 20 ರು. ನೋಟು ಪತ್ತೆಯಾಗಿದೆ.

ಕಾಣಿಕೆ ಎಣಿಕೆ ವೇಳೆ ಉತ್ತಮ ಆರೋಗ್ಯ, ಒಳ್ಳೆ ಕೆಲಸ, ಮದುವೆ, ಮಕ್ಕಳು ಇತ್ಯಾದಿಗಳನ್ನು ಬೇಡಿ ಬರೆದಿರುವ ನೋಟುಗಳು ಸಿಗುವುದು ಸಹಜ. ಆದರೆ ಈಗ ಸಿಕ್ಕ ಈ ನೋಟನ್ನು ಕಂಡು ಅಧಿಕಾರಿಗಳು ದಂಗಾಗಿದ್ದಾರೆ. ಕೆಲವರಿಗಿದು ತಮಾಷೆಯಾಗಿ ಕಂಡರೆ, ಒಂದಿಷ್ಟು ಮಂದಿ ‘ಆ ಅತ್ತೆ ಅದೆಷ್ಟು ಕಾಟ ಕೊಡುತ್ತಿರಬಹುದು’ ಎಂದು ಊಹಿಸಿಕೊಳ್ಳುತ್ತಿದ್ದಾರೆ.

ಕಲಬುರಗಿಯಲ್ಲೂ ಇಂಥ ನೋಟು ಪತ್ತೆಯಾಗಿತ್ತು

ಅತ್ತೆ ಬೇಗ ಸಾಯಲೆಂದು ಸೊಸೆಯೊಬ್ಬರು ಘತ್ತರಗಿ ಭಾಗ್ಯವಂತಿ ದೇವಿಗೆ ಹರಕೆ ಹೊತ್ತ ಘಟನೆ ನಡೆದಿತ್ತು. ದೇವಸ್ಥಾನಕ್ಕೆ ಬಂದ ಸೊಸೆ. ಇಪ್ಪತ್ತು ರೂಪಾಯಿ ನೋಟಿನ ಮೇಲೆ 'ನನ್ನ ಅತ್ತೆ ಬೇಗ ಸಾಯ್ಲಿ' ಬೇಗ ಸತ್ತರೆ ಹರಕೆ ತೀರಿಸುವುದಾಗಿ ನೋಟಿನ ಮೇಲೆ ಬರೆದು ಹುಂಡಿಗೆ ಹಾಕಿದ್ದ ಮಹಿಳೆ. ಈ ಘಟನೆ ಸ್ಥಳೀಯವಾಗಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅಂಥದ್ದೇ ಪ್ರಕರಣ ಮತ್ತೆ ಮರುಕಳಿಸಿದೆ. ವಿಚಿತ್ರ ಎಂದರೆ ಇಬ್ಬರೂ ದೇವರ ಹುಂಡಿಗೆ ಹಾಕಲು ಇಪ್ಪತ್ತು ರೂಪಾಯಿ ನೋಟುಗಳನ್ನೇ ಬಳಸಿದ್ದಾರೆ.