ಕಾಕ್ರೋಚ್ ಜನತಾ ಪಕ್ಷ ಎಂಬ ಇನ್ಸ್ಟಾಗ್ರಾಂ ಖಾತೆಯು ಕೇವಲ ನಾಲ್ಕು ದಿನಗಳಲ್ಲಿ 1 ಕೋಟಿಗೂ ಅಧಿಕ ಫಾಲೋವರ್ಸ್ಗಳನ್ನು ಗಳಿಸಿ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಹೇಳಿಕೆಯಿಂದ ಪ್ರೇರಿತವಾದ ಈ ಪುಟವು, ನಿರುದ್ಯೋಗದಂತಹ ಯುವಕರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಗುರಿ ಹೊಂದಿದೆ.
ನವದೆಹಲಿ: ಕಾಕ್ರೋಚ್ ಜನತಾ ಪಕ್ಷ ಎಂಬ ಇನ್ಸ್ಟಾಗ್ರಾಂ ಖಾತೆ ಸೋಶಿಯಲ್ ಮೀಡಿಯಾದಲ್ಲಿ ಹಲ್-ಚಲ್ ಸೃಷ್ಟಿಸುತ್ತಿದೆ. ನೋಡ ನೋಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಈ ಅಕೌಂಟ್ ಓಪನ್ ಆದ್ಮೇಲೆ ಕೇವಲ ನಾಲ್ಕು ದಿನಗಳಲ್ಲಿಯೇ 10 ಮಿಲಿಯನ್ಗಿಂತಲೂ ಅಂದ್ರೆ 1 ಕೋಟಿಗೂ ಅಧಿಕ ಫಾಲೋವರ್ಸ್ ಹೊಂದಿದೆ. ಸದ್ಯ ಬಿಜೆಪಿಯ ಅಧಿಕೃತ ಇನ್ಸ್ಟಾಗ್ರಾಂ ಖಾತೆಯ ಫಾಲೋವರ್ಸ್ ಸಂಖ್ಯೆಯನ್ನು ಹಿಂದಿಕ್ಕಿದೆ.

@cockroachjantaparty ಹೆಸರಿನ Instagram ಖಾತೆ ಈವರೆಗೆ 10.6 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದು, ಕ್ಷಣ ಕ್ಷಣದಿಂದ ಈ ಸಂಖ್ಯೆ ಏರಿಕೆಯಾಗುತ್ತಿದೆ. ಬಿಜೆಪಿ ಅಧಿಕೃತ ಇನ್ಸ್ಟಾಗ್ರಾಂನಲ್ಲಿ (@bjp4india) ಸುಮಾರು 8.7 ಮಿಲಿಯನ್, ಕಾಂಗ್ರೆಸ್ (@incindia) ಇನ್ಸ್ಟಾದಲ್ಲಿ 13.2 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದೆ. ಇನ್ನು ಆಮ್ ಆದ್ಮಿ ಪಕ್ಷದ Instagram ಖಾತೆಯು ಸುಮಾರು 1.9 ಮಿಲಿಯನ್ ಫಾಲೋವರ್ಸ್ ಹೊಂದಿದೆ.
ಈ ಪೇಜ್ ಹುಟ್ಟಿಕೊಂಡಿದ್ದು ಹೇಗೆ?
ಮೇ 16ರಂದು ಕಾಕ್ರೋಚ್ ಜನತಾ ಪಕ್ಷ ಎಂಬ ಅಭಿಯಾನ ಸೋಶಿಯಲ್ ಮೀಡಿಯಾದಲ್ಲಿ ಆರಂಭಗೊಂಡಿತ್ತು. ಈ ಅಭಿಯಾನಕ್ಕೆ ಪ್ರಮುಖ ಕಾರಣ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಹೇಳಿಕೆಯಾಗಿದೆ. ನ್ಯಾಯಾಧೀಶರ ಹೇಳಿಕೆ ಯುವಕ ಸಮುದಾಯ ಆರಂಭಿಸಿದ ವಿಡಂಬನಾತ್ಮಕ ಅಭಿಯಾನ ಇದಾಗಿದೆ. ಮೊದಲಿಗೆ ಎಕ್ಸ್ ಖಾತೆಯಲ್ಲಿ ತಮಾಷೆಯಾಗಿ ಕಾಕ್ರೋಚ್ ಜನತಾ ಪಾರ್ಟಿ ಎಂದು ಕಮೆಂಟ್ ಮಾಡಲಾಗುತ್ತಿತ್ತು. ಮರುದಿನವೇ ಕಾಕ್ರೋಚ್ ಜನತಾ ಪಾರ್ಟಿ ಹೆಸರಿನಲ್ಲಿ ಇನ್ಸ್ಟಾಗ್ರಾಂ ಖಾತೆ ಆರಂಭಿಸಲಾಯ್ತು. ಅಂದಿನಿಂದ ಈ ಖಾತೆಯ ಜನಪ್ರಿಯತೆ ದಿನದಿಂದ ದಿನಕ್ಕೆ ರಾಕೆಟ್ ವೇಗದಲ್ಲಿ ಹೆಚ್ಚಾಗುತ್ತಿದೆ.
ಈ ಪೇಜ್ ಉದ್ದೇಶ ಏನು?
ಯುವಕರ, ಯುವಕರಿಗಾಗಿ ಮತ್ತು ಯುವಕರಿಂದ ರಾಜಕೀಯ ವೇದಿಕೆ ಎಂದು ಪೇಜ್ ಹೇಳಿಕೊಂಡಿದೆ. ನಿರುದ್ಯೋಗ, ರಾಜಕೀಯ ಹೊಣೆಗಾರಿಕೆಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಯುವ ಸಮುದಾಯದ ಸಮಸ್ಯೆಗಳ ಕುರಿತ ಪೋಸ್ಟ್ಗಳನ್ನು ಈ ಪೇಜ್ ಮಾಡಲಿದೆ. ಈ ಹಿನ್ನೆಲೆಯಲ್ಲಿ ಯುವ ಸಮುದಾಯ ಕಾಕ್ರೋಚ್ ಜನತಾ ಪಕ್ಷ ಪುಟವನ್ನು ಫಾಲೋ ಮಾಡುತ್ತಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿ ಆರಂಭವಾದ 78 ಗಂಟೆಯಲ್ಲಿ 3 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಇಡೀ ದೇಶದ ಗಮನ ಸೆಳೆದಿದೆ. ಇಲ್ಲಿಯವರೆಗೆ ಖಾತೆಯಲ್ಲಿ ಕೇವಲ 56 ಪೋಸ್ಟ್ಗಳನ್ನು ಮಾತ್ರ ಮಾಡಲಾಗಿದೆ. ಯುವಕರ ಶಕ್ತಿಯನ್ನು ಅಂಡರ್ಎಸ್ಟಿಮೇಟ್ ಮಾಡಿ ಎಂದು ಯುವಕರು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಎಕ್ಸ್ ಖಾತೆಯಲ್ಲಿ 165,000 ಫಾಲೋವರ್ಸ್ ಹೊಂದಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದೇನು?
‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳ ರೀತಿ ವರ್ತಿಸುತ್ತಿದ್ದಾರೆ. ಅವರಲ್ಲಿ ಕೆಲವರು ಮಾಧ್ಯಮಗಳಲ್ಲಿ, ಇನ್ನು ಕೆಲವರು ಸಾಮಾಜಿಕ ಮಾಧ್ಯಮದಲ್ಲಿದ್ದರೆ, ಇನ್ನು ಕೆಲವರು ಆರ್ಟಿಐ ಕಾರ್ಯಕರ್ತರಾಗಿದ್ದಾರೆ’ ಎಂದು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಶುಕ್ರವಾರ ಕಿಡಿಕಾರಿದ್ದರು.
ವಕೀಲರೊಬ್ಬರು, ‘ನನಗೆ ದೆಹಲಿ ಹೈಕೋರ್ಟ್ ಹಿರಿಯ ವಕೀಲ ಸ್ಥಾನ ನೀಡಿಲ್ಲ. ಇದು ಸುಪ್ರೀಂಕೋರ್ಟ್ನ ಆದೇಶ ಉಲ್ಲಂಘನೆ ಹಾಗೂ ನ್ಯಾಯಾಂಗ ನಿಂದನೆ ಆಗುತ್ತದೆ’ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಕದ ಬಡಿದಿದ್ದರು.
ಇದನ್ನೂ ಓದಿ: AI ಫೋಟೋ ಬಳಸಿ 1 ಕೋಟಿ ಬಿಲ್ ಕ್ಲಿಯರ್ ಮಾಡಿಕೊಂಡ ಗುತ್ತಿಗೆದಾರ; ಅಪಾಯದಲ್ಲಿ 12 ಗ್ರಾಮ
ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನ್ಯಾ. ಸೂರ್ಯಕಾಂತ್ ಹಾಗೂ ನ್ಯಾ। ಜಯಮಾಲ್ಯ ಬಾಗ್ಚಿ ಅವರ ಪೀಠ, ‘ನಿಮಗೆ ಗೌರವವಿಲ್ಲದಿದ್ದರೆ, ಬೇರೆಯವರು ಗೌರವ ಕೊಡಲಿ ಎಂದು ಏಕೆ ಬಯಸುತ್ತೀರಿ? ಈಗಾಗಲೇ ವ್ಯವಸ್ಥೆಯ ಮೇಲೆ ದಾಳಿ ಮಾಡುವ ಪರಾವಲಂಬಿಗಳು ಸಮಾಜದಲ್ಲಿ ಇದ್ದಾರೆ. ಉದ್ಯೋಗವಿಲ್ಲದ ಯುವಕರು ಜಿರಳೆಗಳ ರೀತಿ ವರ್ತಿಸುತ್ತಿದ್ದಾರೆ. ಅವರಲ್ಲಿ ಕೆಲವರು ಸಾಮಾಜಿಕ ಮಾಧ್ಯಮದಲ್ಲಿದ್ದರೆ, ಇನ್ನು ಕೆಲವರು ಆರ್ಟಿಐ ಕಾರ್ಯಕರ್ತರಾಗಿದ್ದಾರೆ. ಈಗ ನೀವು ಹೈಕೋರ್ಟ್ ಏನೂ ಕ್ರಮ ಕೈಗೊಂಡಿಲ್ಲ ಎಂಬ ಕಾರಣಕ್ಕೆ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಸಲ್ಲಿಸುತ್ತೀರಿ’ ಎಂದು ಕಿಡಿಕಾರಿತು.
ಇದನ್ನೂ ಓದಿ: ಬೆಂಗಳೂರಿನ ಮಂತ್ರಿಮಾಲ್ನಲ್ಲಿ ಯುವತಿಗೆ ಡಬಲ್ ಜಾಕ್ಪಾಟ್; ಯಾರಿಗುಂಟು ಈ ಅದೃಷ್ಟ?


