ಅಸ್ಸಾಂನಲ್ಲಿ ನಡೆದ ಸರಳ ವಿವಾಹವೊಂದಕ್ಕೆ ಆಹ್ವಾನವಿಲ್ಲದೆ ಬಂದ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು, ಊಟದ ನಂತರ ವಧುವಿಗೆ ಹರಿದ 10 ರೂಪಾಯಿ ನೋಟನ್ನು ಉಡುಗೊರೆಯಾಗಿ ನೀಡಿ ಆಶೀರ್ವದಿಸಿದ್ದಾರೆ. ಈ ಹೃದಯಸ್ಪರ್ಶಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚಿನ ದಿನಗಳಲ್ಲಿ ಮದುವೆ ಅಂದ್ರೇನೆ ಲಕ್ಷ ಲಕ್ಷ ಹಣ ಖರ್ಚು, ಶ್ರೀಮಂತಿಕೆ ಪ್ರತಿಷ್ಠೆ, ಅದ್ದೂರಿತನ ಎದ್ದು ಕಾಣುವುದು ಸಾಮಾನ್ಯ. ವದು-ವರರ ದುಬಾರಿ ಉಡುಗೊರೆ, ಮದುವೆಗೆ ಬರುವ ಸಂಬಂಧಿಕರ ಉಡುಗೆತೊಡುಗೆಯೂ ಅಷ್ಟೇ ರಿಚ್. ಇಂಥ ಮದುವೆಗೆ ಸಾಮಾನ್ಯನೊಬ್ಬ ಆಹ್ವಾನವಿಲ್ಲದೆ ಹೋಗಲು ಸಾಧ್ಯವೇ ಇಲ್ಲ. ತೊಟ್ಟಿರುವ ಬಟ್ಟೆಯಿಂದಲೇ ಅವನು ಸಂಬಂಧಿಯೋ, ಊಟಕ್ಕೆ ಬಂದಿರುವವನೋ ಎಂದು ಗುರುತಿಸಿಬಿಡುತ್ತಾರೆ. ಒಂದು ವೇಳೆ ಆಹ್ವಾನ ಇಲ್ಲದೆ ಹೋಗಿದ್ದೇ ಅದರೆ ಅವಮಾನದೊಂದಿಗೆ ಹೊರಬೀಳುವುದು ಖಚಿತ. ಆದರೆ ಅಸ್ಸಾಂನಲ್ಲಿ ನಡೆದ ಒಂದು ಸರಳ ವಿವಾಹ ಸಮಾರಂಭ ಈ ಎಲ್ಲ ಕಲ್ಪನೆಗಳನ್ನು ಮೀರಿ ಮಾನವೀಯತೆಯ ನಿಜವಾದ ಅರ್ಥವನ್ನು ಜಗತ್ತಿಗೆ ಪರಿಚಯಿಸಿದೆ. ಮದುವೆಗೆ ಆಹ್ವಾನವಿಲ್ಲದ ವ್ಯಕ್ತಿಯೊಬ್ಬರು ಸಮಾರಂಭಕ್ಕೆ ಆಗಮಿಸಿದ್ದು, ಅಲ್ಲಿದ್ದವರ ಹೃದಯ ಗೆದ್ದಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದೆ.
ಹರಿದ 10 ರೂಪಾಯಿ ನೋಟಲ್ಲಿತ್ತು ಕೋಟಿ ಮೌಲ್ಯದ ಪ್ರೀತಿ!
ಮನರಂಜನ್ ಎಂಬ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ಯಾವುದೇ ಆಹ್ವಾನವಿಲ್ಲದೆ ಮದುವೆ ಮನೆಗೆ ನುಗ್ಗಿದ್ದಾರೆ. ಆದರೆ ಅಲ್ಲಿದ್ದವರು ಅವನನ್ನು ಹೊರಗೆ ಕಳುಹಿಸದೆ ತಮ್ಮ ಪಾಡಿಗೆ ತಾವು ಇದ್ದಾರೆ.ಅವನು ಮಾನಸಿಕ ಅಸ್ವಸ್ಥನೆಂದು ತಿಳಿದು ಕರುಣೆ ತೋರಿಸಿ ಸುಮ್ಮನಾಗಿದ್ದಾರೆ. ಆದರೆ ಕೆಲವೇ ಕ್ಷಣಗಳಲ್ಲಿ ಆ ವ್ಯಕ್ತಿಯ ನಡೆ ಕಂಡು ವಧು-ವರ ಸೇರಿ ಅಲ್ಲಿದ್ದವರ ಕಣ್ಣುಗಳು ತೇವಗೊಂಡವು. ಮದುವೆ ಮನೆಯಲ್ಲಿ ಹೊಟ್ಟೆ ತುಂಬಾ ಉಂಡ ಮನರಂಜನ್ ಹಾಗೆಯೇ ವಾಪಸ್ ಬರಲಿಲ್ಲ. ಹಿಂದೂ ಸಂಪ್ರಾದಯದಂತೆ ಊಟದ ಬಳಿಕ ತನ್ನ ಬಳಿ ಇದ್ದ ಹರಿದ 10 ರೂಪಾಯಿ ನೋಟನ್ನು ವಧುವಿನ ಕೈಗೆ ನೀಡಿ ಆಶೀರ್ವದಿಸಿದ! ಆಹಾ! ಎಲ್ಲರೂ ಮಾನಸಿಕ ಅಸ್ವಸ್ಥನೆಂದು ಗುರುತಿಸುವ ಈ ವ್ಯಕ್ತಿಯಲ್ಲಿ ಎಂಥ ಮಾನವೀಯತೆ ಉಂಟು! ಅವನು ಬಡವನಿರಬಹುದು, ಗತಿ ಇಲ್ಲದವನು ಇರಬಹುದು, ಹರಿದ ಬಟ್ಟೆ ಧರಿಸಿರಬಹುದು. ಆದರೆ ಊಟದ ಬಳಿಕ ಅವನಲ್ಲಿದ್ದ ಹತ್ತು ರೂಪಾಯಿಯನ್ನೇ ಹಿಂದೆ ಮುಂದೆ ಯೋಚಿಸದೇ ವದುವರಿಗೆ ನೀಡುವಾಗ ಆ ನೋಟಿನ ಮೌಲ್ಯ ಕೋಟಿ ರೂಪಾಯಿಗೆ ಹೆಚ್ಚು. ಅವನ ಪ್ರೀತಿ, ಮುಗ್ಧತೆ ಮತ್ತು ಹಾರೈಕೆಯ ಮೌಲ್ಯವನ್ನು ಹಣದಲ್ಲಿ ಅಳೆಯಲು ಸಾಧ್ಯವಿಲ್ಲದಂತದ್ದು. ಈ ಘಟನೆಗೆ ಮದುವೆ ಮನೆಯಲ್ಲಿ ನೆರೆದಿದ್ದ ಜನರು ಸಂಬಂಧಿಕರು ನೋಡಿ ಕಣ್ತುಂಬಿಬಂತು.
ಅಸ್ಸಾಂ ಮಾನಸಿಕ ವ್ಯಕ್ತಿಯ ವಿಡಿಯೋ ವೈರಲ್:
ಈ ಹೃದಯಸ್ಪರ್ಶಿ ಘಟನೆಯ ವಿಡಿಯೊವನ್ನು 'ಬಾರ್ಪೆಟಾ ಬಝ್' ಇನ್ಸ್ಟಾಗ್ರಾಮ್(Instagram)ನಲ್ಲಿ ಹಂಚಿಕೊಂಡಿದ್ದು, ಕೆಲವೇ ದಿನಗಳಲ್ಲಿ 4.8 ಮಿಲಿಯನ್ಗಿಂತ ಹೆಚ್ಚು ವೀಕ್ಷಣೆಗಳನ್ನು, ಲಕ್ಷಾಂತರ ಲೈಕ್ಗಳನ್ನು ಗಳಿಸಿತು. 'ಯಾವುದೇ ಸ್ವಾರ್ಥವಿಲ್ಲದೆ ಕೊಡುವುದೇ ನಿಜವಾದ ದಾನ' ಎಂದು ಕೆಲವರು ಪ್ರತಿಕ್ರಿಯಿಸಿದರೆ, 'ಅವನ ಮುಗ್ಧತೆ ನೋಡಿ ಕಣ್ಣೀರು ಬಂತು' ಎಂದು ಅನೇಕರು ಭಾವುಕರಾಗಿ ಕಾಮೆಂಟ್ ಮಾಡಿದ್ದಾರೆ. ಮದುವೆ ಮನೆಯವರು ಮನರಂಜನ್ ಅವರನ್ನು ಗೌರವದಿಂದ ಸ್ವಾಗತಿಸಿದ ರೀತಿ ನೆಟ್ಟಿಗರ ಮೆಚ್ಚುಗೆಗೂ ಪಾತ್ರವಾಗಿದೆ.
ದುಬಾರಿ ಉಡುಗೊರೆಗಳಿಗಿಂತ ದೊಡ್ಡದಾಗಿತ್ತು ಆ ಆಶೀರ್ವಾದ
ಭಾರತೀಯ ಸಂಸ್ಕೃತಿಯಲ್ಲಿ 'ಮುಯ್ಯಿ' ಬರೆಸುವುದು ಪದ್ಧತಿ. ಅದರರ್ಥ ಇಲ್ಲಿ ಹಣ ಕೊಡುವುದು ಅಂತರ್ಥಲ್ಲ. ಅದರ ಹಿಂದೆ ಒಂದೊಳ್ಳೆ ಸಂಬಂಧ, ಭಾವನೆ ಇದೆ.. ಮನರಂಜನ್ ನೀಡಿದ ಹರಿದ 10 ರೂಪಾಯಿ ನೋಟು ವಧುವಿಗೆ ಕೇವಲ ಮುಯ್ಯಿ ಆಗಿರಲಿಲ್ಲ. ಅದು ಪ್ರೀತಿ, ಒಳ್ಳೆಯ ಹಾರೈಕೆ ಮತ್ತು ಮುಗ್ಧನ ಆಶೀರ್ವಾದದ ಸಂಕೇತವಾಗಿತ್ತು.
ಪ್ರತಿದಿನ ಐಷಾರಾಮಿ ಮದುವೆಗಳ ವಿಡಿಯೊಗಳು ವೈರಲ್ ಆಗುವ ಈ ಕಾಲದಲ್ಲಿ, ಯಾವುದೇ ಆಡಂಬರವಿಲ್ಲದ ಮದುವೆಯಲ್ಲಿ ನಡೆದ ಈ ಚಿಕ್ಕ ಘಟನೆ ಮಾನವೀಯತೆಯ ದೊಡ್ಡ ಪಾಠವನ್ನು ಜಗತ್ತಿಗೆ ಕಲಿಸಿದೆ. ಕೆಲವೊಮ್ಮ ಹೃದಯಾಂತರಾಳದಿಂದ ನೀಡಿದ ಸಣ್ಣ ಉಡುಗೊರೆಯೇ ಅತ್ಯಮೂಲ್ಯ ಸಂಪತ್ತಾಗುತ್ತದೆ ಎಂಬುದನ್ನು ಈ ಘಟನೆಯೇ ಸಾಕ್ಷಿ, ಏನಂತೀರಿ? ಈ ವಿಡಿಯೋ ನೋಡಿದ ಬಳಿಕ ನಿಮಗೆ ಏನನಿಸಿತು? ಕಾಮೆಂಟ್ ಮಾಡಿ


