ಸೀರಿಯಲ್‌ನಲ್ಲಿ ಸಿನಿಮಾ ಸ್ಟೋರಿಲೈನ್ ಬಳಸಿಕೊಳ್ಳೋದು ಕಾಮನ್. ಇದೀಗ ಪುನೀತ್ ರಾಜ್ ಕುಮಾರ್ ನಟನೆಯ 'ಮಿಲನ' ಸಿನಿಮಾದ ಕಥೆ ಅಣ್ಣಯ್ಯ ಸೀರಿಯಲ್‌ಗೆ ಶಿಫ್ಟ್‌ ಆಗಿದೆ. ಆದರೆ ಮುಂದೈತೆ ಬೆಂಕಿ ಅಂತಿರೋದ್ಯಾಕೆ ಫ್ಯಾನ್ಸ್?

ಅಣ್ಣಯ್ಯ ಸೀರಿಯಲ್ ಸದ್ಯ ಮಹಾತಿರುವಿನ ಘಟ್ಟದಲ್ಲಿದೆ. ಇದರಲ್ಲೀಗ ಪಾರು ಮೆಡಿಕಲ್ ಕ್ಯಾಂಪ್‌ಗೆ ಅಂತ ಸಿಟಿಗೆ ಬಂದಿದ್ದಾಳೆ. ಶಿವು ಅವಳಿಗೆ ಸಾಥ್ ಕೊಟ್ಟಿದ್ದಾನೆ. ಪಾರು ಗೆಳತಿಯೊಬ್ಬಳು ಪಾರುಗೆ ಕಾಲ್ ಮಾಡಿ ಮೆಡಿಕಲ್ ಕ್ಯಾಂಪ್ ಇದೆ ನೀನೂ ಬಾ ಎಂದು ಕರೆದಿದ್ದಾಳೆ. ಆದರೆ ಪಾರು ಮೊದಲು ಕ್ಯಾಂಪ್‌ಗೆ ಬರೋದಕ್ಕೆ ಮನಸು ಮಾಡೋದಿಲ್ಲ. ಆಮೇಲೆ ಶಿವು ಬಲವಂತಕ್ಕೆ ಮಣಿದು ಹೊರಡಲು ಅನುವಾಗ್ತಾಳೆ. ಇಲ್ಲೂ ಶಿವು ಬಳಸಿದ್ದು ಸಿದ್ಧಾರ್ಥ್ ಎಂಬ ಮಂತ್ರದಂಡವನ್ನು. ಶಿವು ಹೇಳ್ತಾನೆ 'ನಿನಗೆ ಹೇಗಂದ್ರೂ ಸಿದ್ದಾರ್ಥ್‌ನ ಹುಡುಕ ಬೇಕಲ್ಲ, ಹಾಗಾಗಿ ನೀನು ಈಗೊಮ್ಮೆ ಹೋಗಿ ಬಾ, ನಾನೂ ನಿನ್ನ ಜೊತೆ ಬರ್ತೀನಿ' ಎಂದು ಹೇಳುತ್ತಾನೆ. ಅವನ ಮಾತು ಪಾರುಗೆ ನಿಜ ಅನಿಸಿ ಅವಳು ಹೋಗಲು ರೆಡಿಯಾಗ್ತಾಳೆ. ಆದರೆ ಇಲ್ಲಿ ಶಿವು ಮಾತು ನಿಜ ಆಗುತ್ತೆ ಅಂತ ಸ್ವತಃ ಶಿವುಗೂ ಗೊತ್ತಿಲ್ಲ. ಗೊತ್ತಿದ್ದರೆ ಅವನು ಖಂಡಿತಾ ಪಾರು ಹೋಗಲು ಬಿಡ್ತಿರಲಿಲ್ಲ. ಏಕೆಂದರೆ ಶಿವುಗೆ ಸಿದ್ಧಾರ್ಥ್ ಮಾಡಿರೋ ಮೋಸದ ಕಥೆ ಗೊತ್ತು. ಆಲ್‌ರೆಡಿ ಡಾಕ್ಟರ್‌ ಒಬ್ರು ಸಿದ್ಧಾರ್ಥ್ ಅವಳಿಗೆ ಮೋಸ ಮಾಡಿರೋ ಕಥೆಯನ್ನು ಶಿವುಗೆ ಹೇಳಿದ್ದಾರೆ. ಆದರೆ ಅದನ್ನು ಪಾರುಗೆ ಹೇಳಿದರೆ ಅವಳು ತಡ್ಕೊಳಲ್ಲ ಅಂತ ಶಿವು ಸುಮ್ಮನಾಗಿದ್ದಾನೆ.

ಇನ್ನೊಂದೆಡೆ ಪಾರು ಸಿದ್ಧಾರ್ಥನ ಕಥೆಗೆ ಪುಲ್‌ಸ್ಟಾಪ್ ಇಡುವಂಥಾ, ತನ್ನ ತಂದೆ, ಅಣ್ಣನ ವಿರುದ್ಧವೇ ಪಾರು ಸಮರ ಸಾರುವಂಥಾ ಸನ್ನಿವೇಶ ಬಂದಿದೆ. ಶಿವು ಜೊತೆ ಸಿಟಿಗೆ ಬಂದ ಪಾರು ಕಬ್ಬಿನ ಹಾಲು ಕುಡೀತಿರುವಾಗ ಅಲ್ಲೇ ಪಕ್ಕದಲ್ಲಿದ್ದ ಇನ್ನೊಬ್ಬನಿಗೆ ಕಾಲ್ ಬರುತ್ತದೆ. ಕಾಲ್ ಬಂದ ತಕ್ಷಣ ಅವನು ಮಾತು ಆರಂಭಿಸುತ್ತಾನೆ. ಯಾರು? ಯಾವ ಸಿದ್ದಾರ್ಥ್‌? ಏನ್ ಕೆಲಸ ಮಾಡೋದು? ಡಾಕ್ಟರಾ ಎಂದೆಲ್ಲ ಮಾತಾಡುತ್ತಾನೆ. ಅದನ್ನು ಕೇಳಿ ಪಾರು ಶಾಕ್ ಆಗ್ತಾಳೆ.

ವೈಷ್ಣವ್ ಗೆ ಜ್ಞಾನೋದಯವಾಯ್ತಾ? ಅಮ್ಮನ ಮೇಲೆ ಕೂಗಾಡ್ತಿರೋದು ಕನಸಾ, ನನಸಾ?

ಆದರೆ ಅದು ತನ್ನ ಸಿದ್ದಾರ್ಥ್‌ ಇರಬಹುದು ಎಂದು ಅವಳಿಗೆ ಅನುಮಾನ ಬರುತ್ತದೆ.ನಂತರ ಶಿವು ಇಲ್ಲ ಪಾರು ಅವರು ಬೇರೆ ಯಾರೋ ಆಗಿರ್ತಾರೆ. ನೀನು ಕಬ್ಬಿನ ಹಾಲು ಕುಡಿ ಎಂದು ಅವಳ ಗಮನ ಬೇರೆಕಡೆ ಸೆಳೆಯುತ್ತಾನೆ. ಅದಾದ ನಂತರದಲ್ಲಿ ಪಾರು ಮುಖ ಮಂಕಾಗುತ್ತದೆ. ಶಿವು ಮೆಡಿಕಲ್ ಕ್ಯಾಂಪ್‌ ಬಗ್ಗೆ ಚರ್ಚೆ ಮಾಡುತ್ತಾನೆ. ನಿನ್ನ ಗೆಳತಿಗೊಮ್ಮೆ ಕಾಲ್ ಮಾಡು ಎಂದು ಹೇಳುತ್ತಾನೆ. ಆದರೆ ಅವಳು ಕಾಲ್ ರಿಸೀವ್ ಮಾಡೋದಿಲ್ಲ.

ಈ ಟೈಮಲ್ಲಿ ಅವಳಿಗೆ ಸಿದ್ಧಾರ್ಥನ ತಂದೆ ಟೂವೀಲರ್‌ನಲ್ಲಿ ಹೋಗ್ತಿರೋದು ಕಾಣುತ್ತೆ. ಸ್ನೇಹಿತೆಯೊಬ್ಬಳ ಸಹಾಯದಿಂದ ಅವರನ್ನು ಫಾಲೋ ಮಾಡ್ಕೊಂಡು ದೇವಸ್ಥಾನಕ್ಕೆ ಬಂದರೆ ಅಲ್ಲೊಂದು ಮಹಾ ತಿರುವು ಅವಳಿಗಾಗಿ ಕಾದಿದೆ. ಸ್ವತಃ ಸಿದ್ಧಾರ್ಥನ ತಂದೆಯೇ ತನ್ನ ಮಗನ ನೀಚ ಬುದ್ಧಿಯನ್ನು ಪಾರು ಮುಂದೆ ತೆರೆದಿಡ್ತಾನೆ.

ಪುಷ್ಪ 2 ದುರಂತ: ಸಂಧ್ಯಾ ಥಿಯೇಟರ್ ಮಾಲೀಕ& ಮ್ಯಾನೇಜರ್ ಅರೆಸ್ಟ್‌!

ಪಾರು ಅಣ್ಣ ಸಿದ್ಧಾರ್ಥ್‌ಗೆ ಹಣದ ಆಮಿಷವೊಡ್ಡಿ ಆತ ಪಾರುವಿನಿಂದ ದೂರಾಗುವ ಹಾಗೆ ಮಾಡಿರ್ತಾನೆ. ದುಡ್ಡಿನ ಮುಂದೆ ತಾನು ಪ್ರೀತಿಸಿದ ಹುಡುಗಿಯನ್ನೇ ಮರೆಯೋ ಸಿದ್ಧಾರ್ಥ ಮಹಾ ವಂಚಕ ಅನ್ನೋದು ಈಗ ಪಾರುಗೆ ಗೊತ್ತಾಗ್ತಿದೆ.

ಆದರೆ ಈ ಸ್ಟೋರಿ ಲೈನ್ ಮಿಲನ ಸಿನಿಮಾದಿಂದ ಕದ್ದಿದ್ದು ಅಂತ ವೀಕ್ಷಕರು ಕೂಡಲೇ ಪತ್ತೆ ಹಚ್ಚಿದ್ದಾರೆ. ಇದರಲ್ಲೂ ನಾಯಕಿಗೆ ಅಷ್ಟೊಳ್ಳೆ ನಾಯಕ ಕಣ್ಣೆದುರಿಗಿದ್ದರೂ ಅವಳು ಹಳೇ ಲವ್‌ ಹಿಂದೆ ಬಿದ್ದಿರ್ತಾಳೆ. ಆದರೆ ಒಂದು ಹಂತದಲ್ಲಿ ಅವಳಿಗೆ ನಾಯಕನ ಸದ್ಗುಣ, ತಾನು ಪ್ರೀತಿಸಿದ ಹುಡುಗನ ದುರ್ಗಣ ತಿಳಿಯುತ್ತದೆ. ಸೀರಿಯಲ್‌ಗಳಲ್ಲಿ ಸಿನಿಮಾ ಲೈನ್‌ ಇರೋದು ಕಾಮನ್. ಎಷ್ಟೋ ಕಡೆ ಸಿನಿಮಾ ಕಥೆಯನ್ನೇ ಸೀರಿಯಲ್ ಮಾಡಿದ್ದೂ ಇದೆ. ಸದ್ಯ 'ಅಣ್ಣಯ್ಯ'ದಲ್ಲಿ ಮಿಲನ ಸಿನಿಮಾದ ಒಂದೆಳೆ ತರಲಾಗಿದೆ. ಆದರೆ ಮುಂದೈತೆ ಬೆಂಕಿ ಅಂತಿದ್ದಾರೆ ವೀಕ್ಷಕರು. ಏಕೆಂದರೆ ಇದರಲ್ಲಿ ತಾನು ಪ್ರೀತಿಸಿದ ಹುಡುಗನ ಕೆಟ್ಟತನ ಪಾರುಗೆ ಗೊತ್ತಾಗುತ್ತೆ. ತನ್ನ ಅಣ್ಣನ ನೀಚತನವೂ ತಿಳಿಯುತ್ತೆ. ಮುಂದೆ ಪಾರು ಇಡೊ ಹೆಜ್ಜೆಯೇ ಬೆಂಕಿ ಥರ ಇದೆ ಅಂತ ಆ ಸೀನ್‌ಗಳಿಗೆ ವೀಕ್ಷಕರು ಎದುರು ನೋಡ್ತಿದ್ದಾರೆ.

ಅಣ್ಣಯ್ಯ ಸೀರಿಯಲ್ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ವಿಕಾಸ್‌ ಉತ್ತಯ್ಯ ನಾಯಕ ಶಿವು ಆಗಿ ನಟಿಸಿದ್ದಾರೆ. ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿ ಪಾರುವಾಗಿ ಗಮನಸೆಳೆಯುತ್ತಿದ್ದಾರೆ.

View post on Instagram