ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಅಮೃತಧಾರೆʼ ಧಾರಾವಾಹಿಯಲ್ಲಿ ಏಕಕಾಲಕ್ಕೆ ಜೀವ, ಮಹಿಮಾ ಪಾತ್ರಧಾರಿಗಳು ಬದಲಾಗಿದ್ದಾರೆ. ಇದಕ್ಕೆ ಕಾರಣ ಏನು? ಅಷ್ಟೇ ಅಲ್ಲದೆ ಈ ಪಾತ್ರಕ್ಕೆ ಹೊಸ ಕಲಾವಿದರ ಆಗಮನವೂ ಆಗಿದೆ. ಇಷ್ಟು ದಿನ ಈ ಜೋಡಿ ಕಾಣೆಯಾಗಿದ್ದಕ್ಕೆ ನಿಖರ ಕಾರಣವೂ ಬಹಿರಂಗವಾದಂತಾಗಿದೆ.    

ʼಅಮೃತಧಾರೆʼ ಧಾರಾವಾಹಿಯಲ್ಲಿ ಗೌತಮ್‌ ದಿವಾನ್‌ ತಾಯಿ ಭಾಗ್ಯ ಪಾತ್ರದ ಎಂಟ್ರಿ ಆಗುತ್ತಿದ್ದಂತೆ, ಕಥೆ ಇನ್ನಷ್ಟು ರೋಚಕವಾಗುತ್ತಿದೆ. ಪರಿಣಾಮ ಈ ಧಾರಾವಾಹಿ ಕಳೆದ ವಾರ ಟಿಆರ್‌ಪಿಯಲ್ಲಿ ನಂ 1 ಸ್ಥಾನ ಪಡೆದಿದೆ. ಅಷ್ಟೇ ಅಲ್ಲದೇ ತಾರಾಬಳಗದಲ್ಲಿ ಹೊಸ ಬದಲಾವಣೆಯೂ ಆಗಿದೆ. ಹೌದು, ʼಅಮೃತಧಾರೆʼ ಧಾರಾವಾಹಿಯಿಂದ ಇಬ್ಬರು ಕಲಾವಿದರು ಹೊರ ಬಂದಿದ್ದಾರೆ.

ಈ ಧಾರಾವಾಹಿ ನಾಯಕಿ ಭೂಮಿ ತಮ್ಮ ಜೀವನ್‌ ಹಾಗೂ ಅವನ ಪತ್ನಿ ಮಹಿಮಾ ಪಾತ್ರಧಾರಿಗಳು ಬದಲಾಗಿದ್ದಾರೆ. ಜೀವನ್‌ ಪಾತ್ರದಲ್ಲಿ ಶಶಿ ಹೆಗಡೆ ನಟಿಸುತ್ತಿದ್ದರೆ, ಮಹಿಮಾ ಪಾತ್ರದಲ್ಲಿ ಸಾರಾ ಅಣ್ಣಯ್ಯ ಅವರು ನಟಿಸುತ್ತಿದ್ದರು. ಈ ಹಿಂದೆ ʼರಾಜ ರಾಣಿʼ ಧಾರಾವಾಹಿಯಲ್ಲಿ ಶಶಿ ಹೆಗಡೆ, ʼಕನ್ನಡತಿʼ ಧಾರಾವಾಹಿಯಲ್ಲಿ ಸಾರಾ ಅಣ್ಣಯ್ಯ ಅವರು ನಟಿಸಿದ್ದರು.

ಈ ಕಲಾವಿದರ ಜೊತೆ ನಟಿಸೋ ಅವಕಾಶ ಸಿಕ್ಕಿದ್ದೆ ಭಾಗ್ಯ ಎಂದ ಅಮೃತಧಾರೆಯ ಭಾಗ್ಯ

ಕಥೆ ಹೇಗೆ ಸಾಗ್ತಿದೆ?
ಕೆಲ ಎಪಿಸೋಡ್‌ಗಳಲ್ಲಿ ಗೌತಮ್‌ ದಿವಾನ್‌ ಕುಟುಂಬವನ್ನು ಹೈಲೈಟ್‌ ಮಾಡಿ ತೋರಿಸಲಾಗುತ್ತಿತ್ತು, ಅವರ ಮನೆ ಸುತ್ತವೇ ಕಥೆ ಸಾಗುತ್ತಿತ್ತು. ಹೀಗಾಗಿ ಭೂಮಿ ತವರು ಮನೆಯ ಕುರಿತು ಎಪಿಸೋಡ್‌ ಪ್ರಸಾರ ಆಗಿರಲಿಲ್ಲ. ಈಗ ʼಅಮೃತಧಾರೆʼ ಧಾರಾವಾಹಿಯಲ್ಲಿ ಭೂಮಿ ತವರು ಮನೆಯ ಕುರಿತು ಎಪಿಸೋಡ್‌ ಪ್ರಸಾರ ಮಾಡಲಾಗ್ತಿದೆ. ಜೀವ ಹೊಸ ಮನೆ ತಗೊಂಡಿದ್ದು, ಅದರ ಗೃಹ ಪ್ರವೇಶ ಮಾಡಲಾಗಿದೆ. ಅಲ್ಲಿಯೂ ಟ್ವಿಸ್ಟ್‌ ಇಡಲಾಗಿದೆ. ಇಷ್ಟುದಿನ ಒಳ್ಳೆಯವನಾಗಿದ್ದ ಜೀವ ಈಗ ವಿಲನ್‌ ಆಗುವಂತೆ ಕಾಣಿಸುತ್ತಿದೆ. ಗೌತಮ್‌ ದಿವಾನ್‌ ವಿರೋಧಿ ಬಳಿ ಕೆಲಸ ಮಾಡ್ತಿರುವ ಜೀವ, ಮುಂದಿನ ದಿನಗಳಲ್ಲಿ ಏನು ಮಾಡಲಿದ್ದಾನೆ ಎಂದು ಕಾದು ನೋಡಬೇಕಿದೆ. 

ಹೊಸ ಪಾತ್ರಧಾರಿಗಳ ಆಗಮನ
ಈಗ ಜೀವ-ಮಹಿ ಇರುವ ಎಪಿಸೋಡ್‌ ಪ್ರಸಾರ ಆಗ್ತಿದ್ದು, ಇದರಲ್ಲಿ ಪಾತ್ರಧಾರಿಗಳು ಬದಲಾಗಿರೋದು ಬಯಲಾಗಿದೆ. ಹೌದು, ಜೀವ ಪಾತ್ರದಿಂದ ಶಶಿ ಹೆಗಡೆ, ಮಹಿಮಾ ಪಾತ್ರದಿಂದ ಸಾರಾ ಅಣ್ಣಯ್ಯ ಹೊರಗಡೆ ಬಂದಿದ್ದಾರೆ. ಜೀವ ಪಾತ್ರಕ್ಕೆ ಹೊಸ ನಟನ ಎಂಟ್ರಿ ಆಗಿದೆ. ಇನ್ನು ಮಹಿಮಾ ಪಾತ್ರಕ್ಕೆ ಇಷಿತಾ ವರ್ಷ ಬಂದಿದ್ದಾರೆ. ʼಅಗ್ನಿಸಾಕ್ಷಿʼ ಧಾರಾವಾಹಿಯಲ್ಲಿ ಮಾಯಾ ಆಗಿ ಮೆರೆದಿದ್ದ ನಟಿ ಇಷಿತಾ ವರ್ಷ ಅವರು ಪತಿ ಮುರುಗಾನಂದ ಜೊತೆಗೆ ʼರಾಜಾ ರಾಣಿʼ ಹಾಗೂ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ವರ್ಷಗಳ ಬಳಿಕ ಈಗ ಅವರು ಈ ಸೀರಿಯಲ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇಷಿತಾ ವರ್ಷ ಅವರು ಕಿರುತೆರೆಯಲ್ಲಿ ಹೆಸರು ಮಾಡಿದ ನಟಿ. ಇವರ ಆಗಮನದಿಂದ ಮಹಿಮಾ ಪಾತ್ರಕ್ಕೆ ಇನ್ನಷ್ಟು ಗಟ್ಟಿತನ ಸಿಗಲಿದೆಯಾ ಎಂಬ ಪ್ರಶ್ನೆ ಕಾಡಿದೆ. 

ಲಚ್ಚಿ ಪುಟ್ಟ ಗುಂಡುಮಾಮನ ಜೊತೆ ಮಲ್ಕೊಂಡ್ರೆ ಸುಟ್ಟ ವಾಸನೆ ಬರ್ತಿರೋದು ಎಲ್ಲಿಂದ? ಭೂಮಿ ಕ್ಯೂಟ್‌ ಪೊಸೆಸ್ಸಿವ್‌ನೆಸ್‌ ನೋಡಿ!

ಯಾಕೆ ಧಾರಾವಾಹಿ ಬಿಟ್ರು?
ಈ ಮೊದಲೇ ಹೇಳಿದಂತೆ ಜೀವ-ಮಹಿಮಾ ಪಾತ್ರದ ಕುರಿತು ಎಪಿಸೋಡ್‌ ಪ್ರಸಾರ ಆಗುತ್ತಿರಲಿಲ್ಲ. ಕನ್ನಡ ಕಿರುತೆರೆಯಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವವರು ಏಕಕಾಲಕ್ಕೆ ಕನ್ನಡದ ಬೇರೆ ವಾಹಿನಿಗಳಲ್ಲಿ ಬೇರೆ ಧಾರಾವಾಹಿಗಳಲ್ಲಿ ನಟಿಸುವಂತಿಲ್ಲ. ಹೀಗಾಗಿ ಶಶಿ ಹೆಗಡೆ, ಸಾರಾ ಅಣ್ಣಯ್ಯ ಅವರು ʼಅಮೃತಧಾರೆʼ ಬಿಟ್ಟು ಕನ್ನಡದ ಬೇರೆ ಧಾರಾವಾಹಿಗಳಲ್ಲಿ ಏಕಕಾಲಕ್ಕೆ ನಟಿಸುವ ಅವಕಾಶ ಇಲ್ಲದೆ ಇರಬಹುದು. ಈ ನಿಯಮ ಇವರಿಬ್ಬರಿಗೂ ಅನ್ವಯ ಆಗುತ್ತದೆಯೇ ಇಲ್ಲವೋ ಎಂಬ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಡೇಟ್ಸ್‌ ಕಡಿಮೆ ಆಗಿರುವ ಕಾರಣಕ್ಕೆ ಇವರಿಬ್ಬರು ಧಾರಾವಾಹಿಯಿಂದ ಹೊರನಡೆದಿರುವ ಸಾಧ್ಯತೆ ಹೆಚ್ಚಿದೆ. ಯಾವ ಕಾರಣಕ್ಕೆ ಸೀರಿಯಲ್‌ ಬಿಟ್ಟೆವು ಎಂದು ಇವರಿಬ್ಬರು ಮಾಹಿತಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಇವರಿಬ್ಬರು ಬೇರೆ ಧಾರಾವಾಹಿಗಳಲ್ಲಿ ನಟಿಸಬಹುದು ಅಥವಾ ಈಗಾಗಲೇ ಬೇರೆ ಪ್ರಾಜೆಕ್ಟ್‌ಗಳಲ್ಲಿ ಭಾಗಿಯಾಗಿರಲೂಬಹುದು. ಒಟ್ಟಿನಲ್ಲಿ ʼಅಮೃತಧಾರೆʼ ಧಾರಾವಾಹಿ ಕಥೆಯಲ್ಲಿ ಟ್ವಿಸ್ಟ್‌ ಪಡೆದು ಟಿಆರ್‌ಪಿಯಲ್ಲಿ ನುಗ್ಗುತ್ತಲಿದೆ.