ಅಣ್ಣಯ್ಯ ಸೀರಿಯಲ್ನಲ್ಲಿ (annayya serial) ಕಳ್ ಸೀನ ತನ್ ಹೆಂಡ್ತಿ ಗುಂಡಮ್ಮ ಕಾಲಿಗೆ ಸಾಷ್ಟಾಂಗ ನಮಸ್ಕಾರ ಮಾಡಿಬಿಟ್ಟಿದ್ದಾನೆ. ನಿಜಕ್ಕೂ ಚೇಂಜ್ ಆದ್ನಾ ಕಳ್ ಸೀನ.. ಇದು ತನ್ನ ಅಣ್ಣ ಶಿವುಗೆ ದೂರು ನೀಡಬಹುದೆಂಬ ಭಯದಿಂದ ಮಾಡಿದ ನಾಟಕವೇ ಅಥವಾ ನಿಜವಾದ ಬದಲಾವಣೆಯೇ ಎಂಬ ಕುತೂಹಲ ಮೂಡಿದೆ. 

ಅಣ್ಣಯ್ಯ ಸೀರಿಯಲ್ನಲ್ಲಿ ಟರ್ನೋ ಟರ್ನು, ಟ್ವಿಸ್ಟೋ ಟ್ವಿಸ್ಟು. ಒಂದು ಕಡೆ ಶಿವು ಮನೇಲಿ ಹೈ ಡ್ರಾಮಾ ನಡೀತಿದೆ. ರತ್ನ ಪರಶು ನಿಶ್ಚಿತಾರ್ಥದಲ್ಲಿ ಅಮ್ಮ ಶಾರದಾ ಹಾಜರಾಗಿದ್ದಾಳೆ. ಶಿವು ಹಾಕಿದ ಸವಾಲುಗಳಲ್ಲೆಲ್ಲ ಮಾಕಾಳವ್ವ ಶಾರದವ್ವನ ಕೈ ಹಿಡಿದಿದ್ದಾಳೆ. ತಾಯಿ ಬಂದರೂ ತಂಗಿ ರತ್ನ ತಾಯಿಗಿಂತ ಹೆಚ್ಚಾಗಿ ಬೆಳೆಸಿದ ಅಣ್ಣನ ಪರ ನಿಂತಿದ್ದಾಳೆ. ಹಾಗೆ ನೋಡಿದರೆ ಈ ಶಿವು ಮಾಡಿರೋ ಒಳ್ಳೆ ಕೆಲಸ ಒಂದೆರಡಲ್ಲ. ಇತ್ತೀಚೆಗೆ ಪೀರಿಯೆಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಎಪಿಸೋಡ್ ಈ ಸೀರಿಯಲ್ನಲ್ಲಿ ಪ್ರಸಾರವಾಗಿತ್ತು.

Add Asianetnews Kannada as a Preferred SourcegooglePreferred

ತನ್ನ ತಂಗಿಯರಷ್ಟೇ ಅಲ್ಲದೆ ಊರಿನ ಎಲ್ಲಾ ಹೆಣ್ಣುಮಕ್ಕಳ ಹಿತದೃಷ್ಟಿಯಿಂದ 'ಮಡಿಲು' ಎಂಬ ಯೋಜನೆಯನ್ನು ಶಿವು ಆರಂಭಿಸಿದ್ದ. ಋತುಸ್ರಾವದ ಸಂದರ್ಭದಲ್ಲಿ ಹೆಣ್ಣುಮಕ್ಕಳು ಶುಚಿತ್ವ ಕಾಪಾಡಿಕೊಳ್ಳಬೇಕು ಮತ್ತು ಮನೆಯಲ್ಲಿರುವ ಗಂಡುಮಕ್ಕಳು ಮುಜುಗರ ಬಿಟ್ಟು ಅವರ ಜತೆ ನಿಲ್ಲಬೇಕು ಎಂದು ನಾಯಕಿ ಡಾಕ್ಟರ್ ಪಾರು ಜತೆ ಸೇರಿ ದೊಡ್ಡ ಸಂದೇಶ ನೀಡಿರುವ ಶಿವು, ತನ್ನ ಅಂಗಡಿಯಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್ ನೀಡುವ ವ್ಯವಸ್ಥೆ ಮಾಡಿದ್ದ.

ತನ್ನಂತೆಯೇ ಇತರರು ಕೂಡಾ ತಮ್ಮ ಕೈಲಾದಂತೆ ತಮ್ಮ ತಮ್ಮ ಊರುಗಳಲ್ಲಿ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದ್ದ. ಮಾರಿಗುಡಿ ಮನೆಮಗನಂತಿರುವ ಶಿವಣ್ಣನಿಗೆ ಊರ ಜನರಿಂದ ಮೆಚ್ಚುಗೆ ಸಿಕ್ಕಿತ್ತು. ಮನರಂಜನೆಯೊಂದಿಗೆ ಇಂತಹ ಪ್ರಮುಖ ವಿಚಾರಗಳ ಬಗ್ಗೆ ಗಮನ ಸೆಳೆಯುತ್ತಿರುವುದಕ್ಕೆ ಸೀರಿಯಲ್ ಟೀಂಗೂ ಶಹಭಾಸ್ ಗಿರಿ ಸಿಕ್ಕಿತ್ತು.

ಬದಲಾಯ್ತಾ ಗುಂಡಮ್ಮ- ಸೀನ ಲೈಫು!

ಈಗ ಕಥೆ ಮತ್ತೊಂದು ಕಡೆ ತಿರುಗಿದೆ. ಗುಂಡಮ್ಮ ಸೀನನ ಲೈಫು ಕೊಂಚ ಚೇಂಜ್ ಆಗೋ ಥರ ಕಾಣ್ತಿದೆ. ಸದ್ಯ ಪ್ರಸಾರ ಆಗಿರೋ ಪ್ರೋಮೋದಲ್ಲಿ ಸೀನ ತನ್ನ ಹೆಂಡತಿ ರಶ್ಮಿಯ ಕಾಲಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದಾನೆ. ಇದಕ್ಕೆ ಗುಂಡಮ್ಮನ ಮೇಲಿನ ಭಯ ಕಾರಣವಾ ಅನ್ನೋದು ಸದ್ಯದ ಪ್ರಶ್ನೆ. ಏಕಂದರೆ ಗುಂಡಮ್ಮ ಈ ಊಸರವಳ್ಳಿ ತಾಯಿ, ಮಗ ತನಗೆ ಆರಂಭದಲ್ಲಿ ಅನ್ನ ನೀರು ಹಾಕದೇ ನೀಡಿದ ಹಿಂಸೆ, ಈಗ ಸೀನ ಪಿಂಕಿ ಹಿಂದೆ ಬಿದ್ದು ಮಾಡುತ್ತಿರುವ ರಂಪವನ್ನೆಲ್ಲ ಎಲ್ಲಿ ತನ್ನಣ್ಣ ಶಿವುಗೆ ಹೇಳುತ್ತಾಳೋ ಅಂತ ಸೀನಂಗೆ ಭಯ ಶುರುವಾಗಿದೆ. ಈ ಭಯದಲ್ಲೇ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳೋ ಪ್ಲಾನ್ ಮಾಡ್ತಿದಾನಾ ಅನ್ನೋದು ಈ ಸೀರಿಯಲ್ ನೋಡೋರ ಗುಮಾನಿ.

ಶೀನ ಗುಂಡಮ್ಮನ ಕಾಲಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದಾನೆ. ಇದನ್ನು ಕಂಡು ಅವನಮ್ಮ ತಬ್ಬಿಬ್ಬಾದರೆ ಗುಂಡಮ್ಮ ಮುಜುಗರ, ಗೊಂದಲದಲ್ಲಿ ಬಿದ್ದಿದ್ದಾಳೆ. ತನ್ನ ಗಂಡ ಸೀನ ತನಗೆ ಇನ್ನೇನು ಹೊಡೀತಾನೆ ಅಂತ ಕೆನ್ನೆ ಮೇಲೆ ಏಟು ಬೀಳೋದನ್ನು ನಿರೀಕ್ಷಿಸಿದ ಗುಂಡಮ್ಮಂಗೆ ಹೀಗೆ ಏಕಾಏಕಿ ಆತ ನೀಟಂಪ ನಮಸ್ಕಾರ ಹಾಕಿದ್ರೆ ಹೇಗಿರಬೇಡ..

ಇನ್ಮೇಲಾದ್ರೂ ಈ ಸಣಕಲ ಗುಂಡಮ್ಮ ಜೋಡಿ ಸಿಟ್ಟು, ದ್ವೇಷ ಮರೆತು ಮನುಷ್ಯರ ಥರ ಇರ್ತಾರ, ಇವರಿಬ್ಬರ ನಡುವೆ ಅನುರಾಗ ಅರಳುತ್ತ ಅನ್ನುವ ಒಂದು ಆಸೆಯೂ ವೀಕ್ಷಕರಲ್ಲಿದೆ.

View post on Instagram

ಈ ಸೀರಿಯಲ್ನಲ್ಲಿ ಅಣ್ಣಯ್ಯ ಶಿವು ಪಾತ್ರದಲ್ಲಿ ವಿಕಾಶ್ ಉತ್ತಯ್ಯ ಕಾಣಿಸಿಕೊಂಡಿದ್ದು, ನಾಯಕಿ ಪಾರ್ವತಿ ಪಾತ್ರದಲ್ಲಿ ನಿಶಾ ರವಿಕೃಷ್ಣನ್ ಕಾಣಿಸಿಕೊಂಡಿದ್ದಾರೆ. ಪ್ರತೀಕ್ಷಾ ಎಂಬ ಪ್ರತಿಭಾವಂತ ನಟಿ ರಶ್ಮಿ ಅರ್ಥಾತ್ ಗುಂಡಮ್ಮನ ಪಾತ್ರದಲ್ಲಿ ನಟಿಸಿ ವೀಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.