ಪುಟ್ಟಕ್ಕನ ಮಕ್ಕಳು ಸ್ನೇಹಾ ಜಿಲ್ಲಾಧಿಕಾರಿಯಾಗಿರುವ ಹೊತ್ತಲ್ಲೇ ಸಾವನ್ನಪ್ಪಿರುವುದು ಹಲವು ವೀಕ್ಷಕರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈಗ ಯುವಕನೊಬ್ಬನ ಪೋಸ್ಟ್‌ ಇದಕ್ಕೆ ಹಿಡಿದ ಕನ್ನಡಿಯಾಗಿದೆ. ಏನಿದೆ ಅದರಲ್ಲಿ? 

ಇಂದು ಸೀರಿಯಲ್​ಗಳು ಎಂದರೆ ಅದು ಕೇವಲ ಸೀರಿಯಲ್​ಗಳಾಗಿ ಉಳಿದಿಲ್ಲ. ಬಹುತೇಕ ಮಂದಿ ಇದನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗ ಅಂದೇ ಅಂದುಕೊಂಡಿದ್ದಾರೆ. ಅಲ್ಲಿ ಬರುವ ಪಾತ್ರಗಳು ಕೇವಲ ಪಾತ್ರಗಳಾಗಿರದೇ ನಿಜ ಜೀವನ ಅಂದುಕೊಳ್ಳುವವರು ಇದ್ದಾರೆ. ಇದೇ ಕಾರಣಕ್ಕೆ ಎಷ್ಟೋ ಸೀರಿಯಲ್​ಗಳು ಇಂದು ಹಲವರಿಗೆ ದಾರಿದೀಪಗಳಾಗಿವೆ. ಅಲ್ಲಿರುವುದನ್ನೇ ಅನುಸರಿಸುತ್ತಾರೆ. ಕೆಲವೊಂದು ನಟ-ನಟಿಯರನ್ನು ತಮ್ಮ ಆದರ್ಶ ಎಂದುಕೊಂಡುಬಿಡುತ್ತಾರೆ. ಇದೇ ಕಾರಣಕ್ಕೆ ಸೀರಿಯಲ್​ಗಳಲ್ಲಿ ಏನೇ ಎಡವಟ್ಟು ಆದರೂ ಅದು ಕೇವಲ ಧಾರಾವಾಹಿ ಎನ್ನುವುದನ್ನು ಮರೆತು ಬೈಯುವುದು ಉಂಟು. ಇನ್ನು ವಿಲನ್​ ಪಾತ್ರಧಾರಿಗಳು ಹೊರಗಡೆ ಹೋದಾಗ ಜನರು ಅವರನ್ನು ನಿಜವಾದ ವಿಲನ್​ಗಳೇ ಅಂದುಕೊಂಡು ಛೀಮಾರಿ ಹಾಕುವುದೂ ಇದೆ.

ಇದೀಗ ಅಂಥದ್ದೇ ಒಂದು ಘಟನೆಗೆ ಸಾಕ್ಷಿಯಾಗಿದೆ ಯುವಕನೊಬ್ಬನ ಪೋಸ್ಟ್‌. ಜಯರಾಮ್ ಗೌಡ ಎನ್ನುವವರು ಈ ಪೋಸ್ಟ್‌ ಶೇರ್‍‌ ಮಾಡಿಕೊಂಡಿದ್ದಾರೆ. ಸೀರಿಯಲ್‌ ಮುಗಿಸುವಂತೆ ಪುಟ್ಟಕ್ಕನ ಮಕ್ಕಳು ನಿರ್ದೇಶಕರಿಗೆ ಅವರು ಮನವಿ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಅವರು ಕಣ್ಣೀರು ಹಾಕ್ತಿರೋದಕ್ಕೆ ಕಾರಣವೂ ಇದೆ. ಅದೇನೆಂದ್ರೆ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಡಿಸಿ ಮೇಡಂ ಸ್ನೇಹಾ ಸತ್ತು ಹೋಗಿದ್ದಾಳೆ. ಈ ಪಾತ್ರವನ್ನು ಸಾಯಿಸುವ ಉದ್ದೇಶ ಇಲ್ಲದಿದ್ದರೂ ಅದರ ಪಾತ್ರಧಾರಿ ಸಂಜನಾ ಬುರ್ಲಿ ಅವರು ಸೀರಿಯಲ್‌ ಬಿಟ್ಟು ಹೋಗುವುದರಿಂದ ಹೀಗೆ ಮಾಡಲಾಗಿದೆ. ಆದರೆ ಇದನ್ನು ಅರಗಿಸಿಕೊಳ್ಳಲು ಹಲವರಿಗೆ ಆಗುತ್ತಿಲ್ಲ. ಏಕೆಂದ್ರೆ ಪುಟ್ಟಕ್ಕನ ರೂಪದಲ್ಲಿಯೇ ತಮ್ಮನ್ನು ತಾವು ಕಂಡುಕೊಂಡವರು ಅದೆಷ್ಟೋ ಮಹಿಳೆಯರು. ಪುಟ್ಟಕ್ಕ ಅವರಿಗೆ ಆದರ್ಶ. ಕಡುಬಡತನದಲ್ಲಿ ಹುಟ್ಟಿದ ಸ್ನೇಹಾಳಂಥ ಹೆಣ್ಣುಮಗಳೊಬ್ಬರು ಡಿಸಿಯಂಥ ಹುದ್ದೆ ಏರಿರುವುದು ಕೂಡ ಹಲವರಿಗೆ ಕೇವಲ ಸೀರಿಯಲ್‌ ಪಾತ್ರವಾಗಿ ಕಂಡಿಲ್ಲ. ಅದು ಅವರ ಬದುಕಿನ ಅವಿಭಾಜ್ಯ ಅಂಗವಾಗಿತ್ತು. ಇನ್ನೇನು ಎಲ್ಲವೂ ಒಳ್ಳೆಯದಾಗುತ್ತದೆ ಎನ್ನೋ ಹೊತ್ತಿನಲ್ಲಿ ಸ್ನೇಹಾ ಸಾವು ಕಂಡಿದ್ದಾಳೆ.

ತಾಳಿ ಕಟ್ಟೋ ಟೈಂನಲ್ಲಿ ಪಂಚೆ ಬಿದ್ದೋದ್ರೆ ಏನ್‌ ಮಾಡ್ತೀರಾ ಕೇಳಿದ್ರೆ ವಿಜಯ್‌ ಸೂರ್ಯ ತರ್ಲೆ ಉತ್ತರ ಕೇಳಿ!

ಇದರಿಂದ ಹಲವರು ಇದಾಗಲೇ ತಾವು ಸೀರಿಯಲ್‌ ನೋಡುವುದನ್ನು ಬಿಟ್ಟಿರುವುದಾಗಿ ಹೇಳುತ್ತಿದ್ದಾರೆ. ಇದರ ನಡುವೆಯೇ ಯುವಕ ಒಬ್ಬರ ಪೋಸ್ಟ್ ವೈರಲ್‌ ಆಗಿದೆ. ಅದರಲ್ಲಿ ಅವರು, ನಮ್ಮಜ್ಜಿಯ ಹಾರ್ಟ್ ಪುಟ್ಟಕ್ಕನ ಮಕ್ಕಳು ನೋಡಿ ಅರ್ಧ ವೀಕ್‌ ಆಗಿದೆ. ಡಿಸಿ ಸ್ನೇಹಾ ಸತ್ತಾಗಲೇ ನಮ್ಮಜ್ಜಿ ನನ್ನನ್ನು ಕರ್ಕೊಂಡು ಬಿಡು ದೇವ್ರೆ ಅಂತಿದ್ರು. ಬೇಗ ಧಾರಾವಾಹಿ ಮುಗಿಸಿ ನಮ್‌ ಅಜ್ಜಿ ಜೀವ ಉಳಿಸಿ ಎಂದು ಕಣ್ಣೀರು ಹಾಕಿದ್ದಾರೆ. ಇದನ್ನು ಕೆಲವರು ತಮಾಷೆಗೆ ಬರೆದಿರುವ ಪೋಸ್ಟ್‌ ಎಂದು ಕಮೆಂಟ್‌ ಮಾಡಿದ್ದರೂ, ಇದರಲ್ಲಿ ಸತ್ಯಾಂಶ ಇದೆ. ಇದು ಹಲವು ಮನೆ ಮಂದಿಯ ಪಾಡು ಎಂದು ಮತ್ತೆ ಕೆಲವರು ತಮ್ಮ ಅನುಭವ ಶೇರ್‍‌ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ ಅನ್ನು ಟೆಲಿವುಡ್ ಕನ್ನಡ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‍‌ ಮಾಡಲಾಗಿದೆ.

ಅದಕ್ಕೆ ಫನ್‌ಡ್ರೈವ್‌ ಎನ್ನುವ ಖಾತೆಯ ಒಬ್ಬರು, ದಯವಿಟ್ಟು ಅಜ್ಜಿಗೆ ಭಾಗ್ಯಲಕ್ಷ್ಮಿ ಸೀರಿಯಲ್‌ ತೋರಿಸಬೇಡಿ ಅಷ್ಟೇ ಕಥೆ ಎಂದು ಹೇಳಿದ್ದಾರೆ. ಈ ಸೀರಿಯಲ್‌ನಲ್ಲಿ ಮನೆ, ಗಂಡ, ಮಕ್ಕಳು, ಕುಟುಂಬ ಎಂದು ಜೀವನಪೂರ್ತಿ ಜೀವ ಸವೆಸುತ್ತಿರುವ ಭಾಗ್ಯಳಿಗೆ ಈಗ ಘನಘೋರ ಸತ್ಯದ ಅರಿವಾಗಿದೆ. ಅದೇನೆಂದ್ರೆ ಅವಳ ಗಂಡ ಇನ್ನೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎನ್ನುವುದು. ಪತಿಗಾಗಿ ತನ್ನನ್ನು ತಾನು ಬದಲಿಸಿಕೊಂಡು ಪತಿಗೆ ತಕ್ಕನಾದ ಪತ್ನಿಯಾಗಿ ಇರಬೇಕು ಎಂದು ತನ್ನತನವನ್ನೇ ಬಲಿಕೊಟ್ಟಿದ್ದ ಭಾಗ್ಯಳಿಗೆ ಈಗ ಸತ್ಯದ ಅರಿವಾಗಿದೆ. ಇಬ್ಬರು ಬೆಳೆದು ನಿಂತಿರುವ ಮಕ್ಕಳು ಇರುವಾಗ, ಗಂಡ ಇನ್ನೊಬ್ಬಳನ್ನು ಮದುವೆಯಾಗ ಹೊರಟಿರುವ ಸತ್ಯ ತಿಳಿದರೆ ಅಂಥ ಹೆಣ್ಣಿಗೆ ಏನಾಗಬೇಕು? ಆ ಸ್ಥಿತಿಯಲ್ಲಿ ಇರುವ ಭಾಗ್ಯಳ ಗೋಳು ಕೇಳಲಾಗುತ್ತಿಲ್ಲ. ಇದನ್ನೇ ಕಮೆಂಟಿಗರು ಬರೆದಿದ್ದಾರೆ. ಒಟ್ಟಿನಲ್ಲಿ ಸೀರಿಯಲ್‌ಗಳು ಸಾಮಾನ್ಯ ಜನರ ಬದುಕಿನಲ್ಲಿ ಏನೆಲ್ಲಾ ಆಟವಾಡುತ್ತಿದೆ ಎನ್ನುವುದು ಈ ಕಮೆಂಟ್‌ಗಳಿಂದ ತಿಳಿದು ಬರುತ್ತದೆ. 

ಬೆಕ್ಕು ಅಡ್ಡ ಬರೋದು, ವಿಧವೆ ಎದುರಿಗೆ ಬರೋದು... ವ್ಹಾವ್‌ ಅದೆಷ್ಟು ಚೆಂದ ಹೇಳಿದ್ರಿ ಡುಮ್ಮಾ ಸರ್‍!