ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ನೆಗೆಟಿವ್‌ ರೋಲ್‌ನಲ್ಲಿ ಕಾಣಿಸಿಕೊಳ್ತಿರೋದಕ್ಕೆ ವೀಕ್ಷಕರಿಂದ ಹೊರಗಡೆ ಹೇಗೆಲ್ಲಾ ಛೀಮಾರಿ ಹಾಕಿಸಿಕೊಳ್ಳಬೇಕು ಎನ್ನುವ ಬಗ್ಗೆ ನಟಿ ರಮ್ಯಾ ರಾಜು ಮಾತನಾಡಿದ್ದಾರೆ. 

ಇಂದು ಸೀರಿಯಲ್​ಗಳು ಕೇವಲ ಸೀರಿಯಲ್​ಗಳಾಗಿ ಉಳಿದಿಲ್ಲ. ಅದು ಮನೆಮನೆಯ ಕಥೆಗಳಾಗಿವೆ. ಅಲ್ಲಿರುವ ಪಾತ್ರಗಳು ತಾವೇ ಎಂದು ಅಂದುಕೊಳ್ಳುತ್ತಾರೆ ಪ್ರೇಕ್ಷಕರು. ಆದ್ದರಿಂದ ಎಲ್ಲವೂ ತಾವು ಅಂದುಕೊಂಡಂತೆ ಆಗಬೇಕು ಎನ್ನುವುದು ಅವರ ಮನದಾಳದ ಆಸೆ. ಒಂದು ಸೀರಿಯಲ್​ ಅಂದ್ರೆ ಹೀಗೆಯೇ ಇರಬೇಕು, ಎಲ್ಲವೂ ಒಳ್ಳೆಯದಾಗಬೇಕು, ಒಳ್ಳೆಯವರಿಗೆ ಒಳ್ಳೆಯದಾಗಬೇಕು- ಕೆಟ್ಟವರಿಗೆ ಕೆಟ್ಟದ್ದಾಗಬೇಕು. ಅದು ಎಷ್ಟರಮಟ್ಟಿಗೆ ಎಂದ್ರೆ ವರ್ಷಗಟ್ಟಲೆ ಚ್ಯೂಯಿಂಗ್​ ಗಮ್​ನಂತೆ ಸೀರಿಯಲ್​ ಎಳೆದರೂ ಎಲ್ಲಿಯೂ ಒಳ್ಳೆಯವರಿಗೆ ಕೆಟ್ಟದ್ದು ಆಗಬಾರದು. ವಿಲನ್​ಗಳು ವಿನ್ ಆಗಬಾರದು... ಹೀಗೆ ಏನೇನೋ ಕಲ್ಪನೆಯಲ್ಲಿ ಮುಳುಗಿರುತ್ತಾರೆ ಸೀರಿಯಲ್​ ಪ್ರೇಮಿಗಳು. ಬಹುತೇಕ ಮಂದಿ ಸೀರಿಯಲ್‌ಗಳನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗ ಅಂದೇ ಅಂದುಕೊಂಡಿದ್ದಾರೆ. ಅಲ್ಲಿ ಬರುವ ಪಾತ್ರಗಳು ಕೇವಲ ಪಾತ್ರಗಳಾಗಿರದೇ ನಿಜ ಜೀವನ ಅಂದುಕೊಳ್ಳುವವರು ಇದ್ದಾರೆ. ಇದೇ ಕಾರಣಕ್ಕೆ ಎಷ್ಟೋ ಸೀರಿಯಲ್​ಗಳು ಇಂದು ಹಲವರಿಗೆ ದಾರಿದೀಪಗಳಾಗಿವೆ. ಅಲ್ಲಿರುವುದನ್ನೇ ಅನುಸರಿಸುತ್ತಾರೆ. ಕೆಲವೊಂದು ನಟ-ನಟಿಯರನ್ನು ತಮ್ಮ ಆದರ್ಶ ಎಂದುಕೊಂಡುಬಿಡುತ್ತಾರೆ. ಸೀರಿಯಲ್​ಗಳಲ್ಲಿ ಏನೇ ಎಡವಟ್ಟು ಆದರೂ ಅದು ಕೇವಲ ಧಾರಾವಾಹಿ ಎನ್ನುವುದನ್ನು ಮರೆತು ಬೈಯುವುದು ಉಂಟು. 

Add Asianetnews Kannada as a Preferred SourcegooglePreferred

ಇನ್ನು ವಿಲನ್​ ಪಾತ್ರಧಾರಿಗಳು ಹೊರಗಡೆ ಹೋದಾಗ ಜನರು ಅವರನ್ನು ನಿಜವಾದ ವಿಲನ್​ಗಳೇ ಅಂದುಕೊಂಡು ಛೀಮಾರಿ ಹಾಕುವುದೂ ಇದೆ. ಅದೇ ರೀತಿಯ ಕೆಟ್ಟ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ ಪುಟ್ಟಕ್ಕನ ಮಕ್ಕಳು ಸೀರಿಯಲ್ ರಾಧಾ. ರಾಧಾ ಪಾತ್ರಧಾರಿಯ ಹೆಸರು ರಮ್ಯಾ ರಾಜು. ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಇವರದ್ದು ನೆಗೆಟಿವ್‌ ರೋಲ್‌. ಮನೆ ಹಾಳು ಮಾಡುವ ಪಾತ್ರ. ಇದೇ ಕಾರಣಕ್ಕೆ ತಾವು ಜನರಿಂದ ಎಷ್ಟು ಛೀಮಾರಿ ಹಾಕಿಕೊಳ್ಳಬೇಕಾಗುತ್ತಿದೆ ಎನ್ನುವುದನ್ನು ಅವರು ಪಂಚಮಿ ಟಾಕ್ಸ್‌ ಎಂಬ ಯೂಟ್ಯೂಬ್‌ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ನನಗೆ ಹೆಚ್ಚಾಗಿ ನೆಗೆಟಿವ್‌ ರೋಲ್‌ಗಳೇ ಬರುತ್ತಿವೆ. ಅದೇನೂ ನಾನು ಬಯಸಿ ಪಡೆದಿರುವುದಲ್ಲ. ಇದೇ ಕಾರಣಕ್ಕೆ ಸೀರಿಯಲ್‌ಗಳು ಬಂದಾಗಲೆಲ್ಲಾ ಜನರು ನನ್ನನ್ನೇ ಆ ಪಾತ್ರ ಎಂದುಕೊಂಡು ಸಾಕಷ್ಟು ಬೈಯುವುದು ಇದೆ. ಸದ್ಯ ಪುಟ್ಟಕ್ಕನ ಮಕ್ಕಳು ಟಾಪ್‌ನಲ್ಲಿಇರುವ ಕಾರಣ, ನನ್ನನ್ನು ರಮ್ಯಾ ಎಂದುಕೊಳ್ಳದೇ ರಾಧಾ ಎಂದುಕೊಳ್ಳುವವರೇ ಹೆಚ್ಚುಮಂದಿ. ನೀನ್ಯಾಕೆ ಇಷ್ಟುಕೆಟ್ಟವಳು, ಸ್ನೇಹಾ ಸತ್ತರೆ ನಿನಗ್ಯಾಕೆ ಖುಷಿ ಎಂದೆಲ್ಲಾ ಬೈಯುತ್ತಾರೆ. ಜನರು ಮಾತ್ರವಲ್ಲದೇ ನನ್ನ ಫ್ರೆಂಡ್ಸ್‌ ಅಮ್ಮಂದಿರ ಬಳಿಯೂ ಬೈಸಿಕೊಂಡಿದ್ದೇನೆ. 

ಸ್ನೇಹಾ ಸತ್ತದ್ದಕ್ಕೆ ನಗಬೇಕಿತ್ತು, ಆದ್ರೆ ಚಿತೆ ನೋಡಿ ಅಪ್ಪನ ನೆನಪಾಗೋಯ್ತು... ಕಣ್ಣೀರಾದ ಪುಟ್ಟಕ್ಕನ ಮಕ್ಕಳು ವಿಲನ್‌ ರಾಧಾ!

ಒಮ್ಮೆ ದೇವಸ್ಥಾನಕ್ಕೆ ಹೋದಾಗ ಅಜ್ಜಿಯೊಬ್ಬರು ನೀನು ರಾಧಾ ಅಲ್ವಾ ಕೇಳಿದರು. ನಾನು ಹೌದು ಎಂದೆ. ಚೆನ್ನಾಗಿ ಬೈದರು. ನಿನಗ್ಯಾಕೆ ಮನೆಹಾಳು ಕೆಲಸ ಬೇಕು ಎಂದೆಲ್ಲಾ ಸಿಟ್ಟಿನಿಂಗ ಬೈಯುತ್ತಿದ್ದರು. ಅವರು ನನ್ನನ್ನು ಹೊಡೆಯಲು ಬರಲಿಲ್ಲ ಎನ್ನುವುದೇ ಪುಣ್ಯ. ನೆಗೆಟಿವ್‌ ರೋಲ್‌ ಮಾಡಿದ್ರೆ ಇಷ್ಟೆಲ್ಲಾ ಸಮಸ್ಯೆಗಳು ಇವೆ ಎಂದಿದ್ದಾರೆ ರಮ್ಯಾ ರಾಜು. ಈ ರೀತಿ ಜನರು ಮಾಡುತ್ತಿದ್ದಾರೆ ಎಂದರೆ ನಮ್ಮ ಪಾತ್ರವನ್ನು ನಾವು ಚೆನ್ನಾಗಿ ನಿಭಾಯಿಸುತ್ತಿದ್ದೇವೆ ಎಂದೇ ಅರ್ಥ. ತುಂಬಾ ಮಂದಿ ನನ್ನ ಪಾತ್ರಕ್ಕೆ ಶ್ಲಾಘನೆಯನ್ನೂ ವ್ಯಕ್ತಪಡಿಸುವುದು ಇದೆ. ಇನ್ನು ಹಲವರು ನಿನ್ನ ಮುಖ ನೋಡಿದರೆ ವಿಲನ್‌ಗೆ ಸೂಟ್‌ ಆಗಲ್ಲಾ ಅಂತಾರೆ. ಅದ್ರೂ ಹೆಚ್ಚಾಗಿ ನೆಗೆಟಿವ್‌ ರೋಲ್‌ಗಳೇ ನನ್ನನ್ನು ಅರಸಿ ಬರುತ್ತಿವೆ, ಏನು ಮಾಡಲು ಆಗುವುದಿಲ್ಲ. ಕೊಟ್ಟ ಪಾತ್ರವನ್ನು ಚೆನ್ನಾಗಿ ನಿಭಾಯಿಸಬೇಕು ಅಷ್ಟೇ ಎನ್ನುತ್ತಾರೆ ರಮ್ಯಾ. ಇದೇ ವಿಡಿಯೋದಲ್ಲಿ ತಮ್ಮ ಬಾಲ್ಯ, ತಂದೆಯನ್ನು ಕಳೆದುಕೊಂಡು ಪಡಬಾರದ ಪಾಡು ಪಟ್ಟ ಬಗ್ಗೆಯೂ ರಮ್ಯಾ ವಿವರಿಸಿದ್ದಾರೆ.

ಶೆಫ್‌ ಆಗಿದ್ದ ಅವರು, ಒಮ್ಮೆ ಸಂಬಂಧಿಕರ ಮನೆಯಲ್ಲಿ ಎಲೆಕ್ಟ್ರಿಕ್‌ ರಿಪೇರಿ ಮಾಡುವ ಸಮಯದಲ್ಲಿ ಗ್ರೌಂಡ್‌ ಆಗಿ ಶಾಕ್‌ಗೆ ಒಳಗಾಗಿ ಮೃತಪಟ್ಟಿರುವ ಬಗ್ಗೆ ತಿಳಿಸಿರುವ ಅವರು, ಸೀರಿಯಲ್‌ನಲ್ಲಿ ಸ್ನೇಹಾಳನ್ನು ಶವದ ಪೆಟ್ಟಿಗೆಯಲ್ಲಿ ತಂದಾಗ, ನೇರವಾಗಿ ಆ ದೃಶ್ಯ ನನ್ನ ತಂದೆಯ ಜೊತೆ ಲಿಂಕ್‌ ಆಗಿ ಅತ್ತುಬಿಟ್ಟೆ ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ. ಅಂದಹಾಗೆ ನಟಿ ರಮ್ಯಾ ರಾಜು ಅವರು ಪುಟ್ಟಕ್ಕನ ಮಕ್ಕಳು ಸೀರಿಯಲ್‌ಗೆ ಬರುವುದಕ್ಕೂ ಮುಂಚೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಆದರೆ ಇವರು ಹೆಚ್ಚು ಫೇಮಸ್‌ ಆಗಿರುವುದು ವಿಲನ್‌ ರೋಲ್‌ ಮೂಲಕ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನಸೆಲ್ಲಾ ನೀನೆ' ಧಾರಾವಾಹಿಯಲ್ಲಿ ನಟಿಸಿದ್ದರು. ಬಳಿಕ 'ಗೀತಾ', 'ಕೆಂಡಸಂಪಿಗೆ' ಧಾರಾವಾಹಿಯಲ್ಲೂ ಪಾತ್ರ ಮಾಡಿದ್ದಾರೆ. ಮೊದಲಿಗೆ ನಾಯಕಿಯಾಗಿ ಮಿಂಚಿದ್ದರು. ಈಗಲೂ ವಿಲನ್‌ ರೋಲ್‌ನಿಂದ ಹೊರಕ್ಕೆ ಬಂದು ಬೇರೆ ಬೇರೆ ಪಾತ್ರಗಳಲ್ಲಿ ನಟಿಸುವ ಆಸೆ ಇವರಿಗೆ. ಆದರೆ ಸದ್ಯ ವಿಲನ್‌ ರೋಲ್‌ ಇವರ ಕೈಹಿಡಿದಿದೆ. 

ಈ ಸಂದರ್ಶನ ಹೆಂಡ್ತಿಗೆ ತೋರಿಸ್ಬೇಡಿ ಅಂತಲೇ ಐವರು ಪ್ರೇಯಸಿಯರ ಹೆಸ್ರು ಥಟ್‌ ಅಂತ ಹೇಳಿದ ನಾ. ಸೋಮೇಶ್ವರ್!

YouTube video player