ಇಂದಿನ ಕನ್ನಡ ಧಾರಾವಾಹಿಗಳಲ್ಲಿ ಮದುವೆಯಾದರೂ ಗಂಡ-ಹೆಂಡತಿ ಒಂದಾಗದ ಕಥಾವಸ್ತು ಸಾಮಾನ್ಯವಾಗಿದೆ.   ‘ಶ್ರಾವಣಿ ಸುಬ್ರಹ್ಮಣ್ಯ’ರಿಗೆ ಮುಹೂರ್ತ ಫಿಕ್ಸ್​ ಆಗಿದ್ದು, ಈಗ ತಾನೇ ಲವ್​ ಹುಟ್ಟಿರೋ ದೀಪಾ-ಚಿರು ಮತ್ತು ಶರತ್​-ದುರ್ಗಾಗೂ ಮುಹೂರ್ತ ಫಿಕ್ಸ್​ ಮಾಡಿ ಅಂತಿದ್ದಾರೆ ಫ್ಯಾನ್ಸ್​

ಇಂದಿನ ಬಹುತೇಕ ಸೀರಿಯಲ್​ಗಳಲ್ಲಿ, ಅದು ಯಾವ ಭಾಷೆಯದ್ದೇ ಆಗಿರಲಿ. ಗಂಡ- ಹೆಂಡತಿ ಸಂಸಾರ ಮಾಡುವುದೇ ಇಲ್ಲ. ಯಾವುದೋ ಅನಿವಾರ್ಯ ಕಾರಣಗಳಿಂದ ಇಬ್ಬರೂ ಮದುವೆಯಾಗಿರುತ್ತಾರೆ. ಒಂದೋ ಮದುವೆ ಟೈಮ್​ನಲ್ಲಿ ಮದುಮಗನೋ, ಮದುಮಗಳೋ ಓಡಿ ಹೋಗಿರ್ತಾರೆ ಇಲ್ಲವೇ, ವರದಕ್ಷಿಣೆ ಅದೂ ಇದೂ ಎಂದು ಆಗುವ ಮದುವೆ ಮುರಿದು ಬಿದ್ದು ಇನ್ಯಾರೋ ಮದುವೆಯಾಗಿರುತ್ತಾರೆ. ಹೀಗೆಯೇ ಕಥೆ ಸಾಗುತ್ತದೆ. ಇದೇ ಕಾರಣಕ್ಕೆ ಮದುವೆಯಾದರೂ ಸಂಸಾರ ನಡೆಸುವುದೇ ಇಲ್ಲ. ಈ ಮೊದಲು ಗಂಡನಿಗೆ ಎರಡು ಸಂಬಂಧ ಇರುವ ಕಥೆಗಳು ಮಾಮೂಲು ಆಗಿದ್ದರೆ, ಈಗೀಗ ಮದುವೆಯಾದರೂ ಸಂಸಾರ ಮಾಡದೇ ಇರುವ ಒಂದೇ ರೀತಿಯ ಕಥೆಗಳೇ ಹೆಚ್ಚಾಗಿ ಸೀರಿಯಲ್​ಗಳಲ್ಲಿ ಇವೆ.

ಒಂದಾಗಲಿಲ್ಲ ಜೋಡಿ

ಜೀ ಕನ್ನಡದ ಮಟ್ಟಿಗೆ ಹೇಳುವುದಾದರೆ, ನಾ ನಿನ್ನ ಬಿಡಲಾರೆ ಸೀರಿಯಲ್​ನ ದುರ್ಗಾ ಮತ್ತು ಶರತ್​ ಇನ್ನೂ ಒಂದಾಗಲಿಲ್ಲ. ಮಾಟ ಮಂತ್ರದ ಪ್ರಯೋಗದಿಂದಾಗಿ ಇವರಿಬ್ಬರಿಗೂ ತಾವು ಮದುವೆಯಾಗಿದ್ದೇ ಗೊತ್ತಿರಲಿಲ್ಲ. ಇದೀಗ ಶರತ್​ಗೆ ದುರ್ಗಾ ಮೇಲೆ ಪ್ರೀತಿ ಹುಟ್ಟುತ್ತಿದೆ. ಇನ್ನು ಬ್ರಹ್ಮಗಂಟು ಸೀರಿಯಲ್​ನಲ್ಲಿ ಅಕ್ಕ ಓಡಿಹೋದಕ್ಕೆ ದೀಪಾ, ಚಿರಾಗ್​ನನ್ನು ಮದುವೆಯಾಗಿದ್ದಾಳೆ. ಆಕೆಯನ್ನು ಇನ್ನೂ ಪತ್ನಿ ಎಂದು ಒಪ್ಪಿಕೊಂಡಿರಲಿಲ್ಲ ಚಿರು. ಈಗ ಅವನಿಗೂ ದೀಪಾ ಮೇಲೆ ಲವ್​ ಶುರುವಾಗಿದೆ. ಎರಡೂ ಸೀರಿಯಲ್​ಗಳಲ್ಲಿ ಇನ್ನೇನು ಎರಡೂ ಜೋಡಿ ಸಂಸಾರ ಶುರು ಮಾಡುವುದು ಬಾಕಿ ಇದೆ.

ಶ್ರಾವಣಿ ಸುಬ್ರಹ್ಮಣ್ಯ ಮುಹೂರ್ತ ಫಿಕ್ಸ್​

ಇನ್ನು ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್​ನಲ್ಲಿ, ವಿಲನ್​ಗಳ ಕಿತಾಪತಿಯಿಂದ ಈ ಜೋಡಿ ಇನ್ನೂ ಮೊದಲರಾತ್ರಿ ಮಾಡಿಕೊಂಡಿಲ್ಲ. ಜಾತಕದಲ್ಲಿ ದೋಷ ಇದೆ ಎಂದು ಸುಳ್ಳು ಹೇಳಿಸಿ ಇಬ್ಬರನ್ನೂ ದೂರ ಇಟ್ಟಿದ್ದಾರೆ. ಇದೀಗ ಶ್ರಾವಣಿಯ ಅಮ್ಮ ಮಾರುವೇಷದಲ್ಲಿ ಮನೆ ಸೇರಿದ್ದಾಳೆ. ಇಬ್ಬರ ಪ್ರಸ್ತಕ್ಕೆ ಮುಹೂರ್ತ ಚೆನ್ನಾಗಿದೆ, ಇಂದೇ ಫಿಕ್ಸ್​ ಎಂದು ಹೇಳಿದ್ದಾಳೆ. ಇದನ್ನು ಕೇಳುತ್ತಿದ್ದಂತೆಯೇ, ಅವರಿಬ್ಬರ ಪ್ರಸ್ತದ ಜೊತೆ ದುರ್ಗಾ ಮತ್ತು ದೀಪಾ ಪ್ರಸ್ತನೂ ಒಟ್ಟಿಗೇ ಏರ್ಪಡಿಸಿ ಎಂದು ಕಮೆಂಟ್​ನಲ್ಲಿ ಹೇಳುತ್ತಿದ್ದಾರೆ.

ಆದಿಲಕ್ಷ್ಮಿ ಪುರಾಣ ಸ್ಟೋರಿ

ಅದೇ ರೀತಿ ಇದೀಗ ಕಲರ್ಸ್​ ಕನ್ನಡದ ಆದಿಲಕ್ಷ್ಮಿ ಪುರಾಣ ಕಥೆಯೂ ಸಾಗಿದೆ. ಇಲ್ಲಿ ಕೂಡ ಏನೋ ಎಡವಟ್ಟಿನಿಂದ ಲಕ್ಷ್ಮಿಯ ಮದುವೆ ಆಗಿಲಿಲ್ಲ. ಆದಿಯ ಜೊತೆ ಮದುವೆ ಮಾಡಿಸಿದ್ದಾರೆ. ಇದು ಕೂಡ ಅದೇ ದಿಕ್ಕಿನಲ್ಲಿ ಸಾಗುತ್ತಿದೆ. ಆದರೆ ಈಗಷ್ಟೇ ಇವರ ಮದುವೆ ಗಲಾಟೆ ನಡೆಯುತ್ತಿರುವುದರಿಂದ, ಮದುವೆ ಆಗಿ, ಜಗಳವಾಗಿ ಆಮೇಲೆ ಪ್ರೀತಿ ಮೂಡಲು ಇನ್ನೂ ಹಲವು ವರ್ಷ ಬೇಕಾಗುತ್ತದೆ. ಆದ ಕಾರಣ ಸದ್ಯ ಜೀ ಕನ್ನಡದ ಸೀರಿಯಲ್​ಗಳ ಜೋಡಿಗಳ ಮುಹೂರ್ತ ಫಿಕ್ಸ್ ಮಾಡಿ ಎನ್ನುತ್ತಿದ್ದಾರೆ ಸೀರಿಯಲ್​ ಪ್ರೇಮಿಗಳು.