ಕಲರ್ಸ್ ಕನ್ನಡದ ಕರಿಮಣಿ ಧಾರಾವಾಹಿಯಲ್ಲಿ ಅರುಂಧತಿ ಪಾತ್ರಧಾರಿ ಅನುಷಾ ರಾವ್ ಬ್ಲ್ಯಾಕ್ ರೋಸ್ ಎಂಬ ಟ್ವಿಸ್ಟ್ ನೀಡಿದ್ದಾರೆ. ಈ ಪಾತ್ರದ ಬಗ್ಗೆ ಮಾತನಾಡಿದ ಅನುಷಾ, ವೀಕ್ಷಕರು ತಮ್ಮ ಪಾತ್ರವನ್ನು ದ್ವೇಷಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ನೃತ್ಯಗಾರ್ತಿಯಾಗಿ ವೃತ್ತಿ ಆರಂಭಿಸಿದ ಅನುಷಾ, ಆಕಸ್ಮಿಕವಾಗಿ ಕಿರುತೆರೆಗೆ ಬಂದರು. ಪತಿ ಮನೋಹರ್ ಜೋಶಿ ಅವರ ಬೆಂಬಲದಿಂದ ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕರಿಮಣಿ ಸೀರಿಯಲ್​ಗೆ ಇದೀಗ ಒಂದು ಕುತೂಹಲದ ಟ್ವಿಸ್ಟ್​ ಸಿಕ್ಕಿದೆ. ಇಷ್ಟು ದಿನ ಗುಟ್ಟಾಗಿ ಇದ್ದ ಬ್ಲ್ಯಾಕ್​ ರೋಸ್​ ಯಾರು ಎಂದು ತಿಳಿದಿದೆ. ಗಂಡಸಿನ ದನಿಯಲ್ಲಿ ಮಾತನಾಡುತ್ತಿದ್ದ ಬ್ಲ್ಯಾಕ್​ ರೋಸ್​ ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತಿರೋ ಮಲತಾಯಿ ಅರುಂಧತಿನೇ ಎನ್ನುವುದು ವೀಕ್ಷಕರಿಗೆ ತಿಳಿದಿದೆ. ಇಷ್ಟು ದಿನ ಇದ್ದರೆ ಇಂಥ ತಾಯಿ ಇರಬೇಕು ಎಂದುಕೊಂಡಿದ್ದ ವೀಕ್ಷಕರಿಗೆ ಶಾಕ್​ ಆಗಿದೆ. ಸಾಮಾನ್ಯವಾಗಿ ಎಲ್ಲಾ ಸೀರಿಯಲ್​ಗಳಲ್ಲಿಯೂ ಮಲತಾಯಿ ಎಂದರೆ ಕೆಟ್ಟವಳೇ ಎನ್ನುವ ರೀತಿಯಲ್ಲಿ ತೋರಿಸಲಾಗುತ್ತಿದೆ. ಆದರೆ ಇದರಲ್ಲಿ ಒಳ್ಳೆಯ ಕ್ಯಾರೆಕ್ಟರ್​ ಮಾಡಿದ್ದಕ್ಕೆ ಅರುಂಧತಿ ಪಾತ್ರ ತುಂಬಾ ಶ್ಲಾಘನೆಗೆ ಒಳಗಾಗಿತ್ತು. ಆದರೆ ಇದೀಗ ಆಕೆಯೇ ವಿಲನ್​ ಎನ್ನುವುದು ಅಭಿಮಾನಿಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಇದರ ನಡುವೆಯೇ, ವಿಲನ್​ ಕ್ಯಾರೆಕ್ಟರ್​ ಅಂದ್ರೆ ಬ್ಲ್ಯಾಕ್​ರೋಸ್​ ಪಾತ್ರ ಮಾಡ್ತಿರೋ ಅರುಂಧತಿ ಅವರು, ತಮ್ಮ ಕ್ಯಾರೆಕ್ಟರ್​ ಬಗ್ಗೆ ಮಾತನಾಡಿದ್ದಾರೆ. 

Add Asianetnews Kannada as a Preferred SourcegooglePreferred

ಯೂಟ್ಯೂಬ್​ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅರುಂಧತಿ ಪಾತ್ರಧಾರಿ ಅನುಷಾ ರಾವ್‌ ಕುತೂಹಲದ ಮಾಹಿತಿಯನ್ನು ತೆರೆದಿಟ್ಟಿದ್ದಾರೆ. ಬ್ಲ್ಯಾಕ್​ರೋಸ್​ ವೀಕ್ಷಕರಿಗೆ ಎಷ್ಟು ಶಾಕಿಂಗೋ, ನನಗೂ ಅಷ್ಟೇ ಆಗಿತ್ತು. ಅಸಲಿಗೆ ಈ ಸೀರಿಯಲ್​ನಲ್ಲಿ ವಿಲನ್​ ಎನ್ನೋದು ಗೊತ್ತಿತ್ತು. ಆದರೆ ಬ್ಲ್ಯಾಕ್​ರೋಸ್​ ರೀತಿಯಲ್ಲಿ ಹೀಗೆಲ್ಲಾ ಎಂಟ್ರಿ ಆಗುತ್ತದೆ ಎನ್ನುವುದು ನನಗೆ ಗೊತ್ತಿರಲಿಲ್ಲ. ಬಹಳ ದಿನಗಳ ಬಳಿಕ ಗೊತ್ತಾಗಿದ್ದು ಎಂದಿದ್ದಾರೆ. ಮಲತಾಯಿ ಯಾಕೆ ತುಂಬಾ ಕೆಟ್ಟವಳನ್ನಾಗಿ ತೋರಿಸುತ್ತೀರಿ ಎಂದು ಹಲವರು ಬೈತಿದ್ದಾರೆ. ನನ್ನ ಒಳ್ಳೆಯ ಪಾತ್ರಕ್ಕೆ ವೀಕ್ಷಕರು ಬಾಗಿನ ಎಲ್ಲಾ ಕೊಟ್ಟು ಖುಷಿ ಪಟ್ಟಿದ್ದರು. ಆದರೆ ಈಗ ವಿಲನ್​ ಆಗಿರೋದಕ್ಕೆ ಅವರನ್ನು ಫೇಸ್​ ಮಾಡೋದೇ ಭಯ ಆಗ್ತಿದೆ. ಕೋಲು ಹಿಡಿದುಕೊಂಡು ಹೊಡೆಯಲು ಬರದಿದ್ದರೆ ಸಾಕು, ಹಾಗಾಗಿದೆ ಸ್ಥಿತಿ ಎಂದಿದ್ದಾರೆ. ನಾನು ತುಂಬಾ ಕಮೆಂಟ್ಸ್​ ಓದುತ್ತೇನೆ. ಕಮೆಂಟ್ಸ್​ ಓದುವ ಹುಚ್ಚು ನನಗೆ. ಮೊದಲೆಲ್ಲಾ ತುಂಬಾ ಹೊಗಳ್ತಿದ್ದೋರು ಈಗ ಕೆಟ್ಟ ಕೆಟ್ಟ ಶಬ್ದದಲ್ಲಿ ನನ್ನನ್ನು ಬೈತಿದ್ದಾರೆ. ಆದ್ದರಿಂದ ವೀಕ್ಷಕರು ನನ್ನನ್ನು ಹೊಡೆಯದಿದ್ದರೆ ಸಾಕು ಎನ್ನುತ್ತಿದ್ದಾರೆ ನಟಿ. 

ಎಲ್ಲೋದ್ರೂ ಇದೇ ಮುಖದಲ್ಲೇ ಹೋಗ್ಬೇಕು... ಬ್ರಹ್ಮಗಂಟು ದೀಪಾ ಬೇಸರ! ಸಂಭಾವನೆ ಬಗ್ಗೆ ನಟರು ಹೇಳಿದ್ದೇನು?

ಇನ್ನು ನಟಿ ಅನುಷಾ ರಾವ್​ ಕುರಿತು ಹೇಳುವುದಾದರೆ, ಕನ್ನಡ ಅಷ್ಟೇ ಅಲ್ಲದೇ ಹಲವು ಭಾಷೆಗಳಲ್ಲಿ ನಟಿಸುತ್ತಿದ್ದಾರೆ. ತೆಲಗುವಿನಲ್ಲಿ ಕೂಡ ವಿಲನ್​ ಆಗಿ ಮಿಂಚಿದ್ದಾರೆ. ಇನ್ನು ಇವರ ರಿಯಲ್​​ ಲೈಫ್​ ಬಗ್ಗೆ ಹೇಳುವುದಾದರೆ ಇವರು ನೃತ್ಯಗಾತಿ. ಕಿರುತೆರೆಗೆ ಬರಬೇಕು ಎನ್ನುವುದು ತಮ್ಮ ಕನಸೇನೂ ಇರಲಿಲ್ಲ. ಆದರೆ ಇಲ್ಲಿಗೆ ಬಂದಿದ್ದೇ ಕುತೂಹಲ ಎಂದು ಹಿಂದೊಮ್ಮೆ ಸಂದರ್ಶನದಲ್ಲಿ ನಟಿ ಹೇಳಿಕೊಂಡಿದ್ದರು. ಮೊದಲಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೆ. ಬಳಿಕ ಮದುವೆಯಾಯ್ತು. ನೃತ್ಯವನ್ನೇ ಕರಿಯರ್ ಆಗಿ ತೆಗೆದುಕೊಳ್ಳುವ ಉದ್ದೇಶದಿಂದ ಕೆಲಸ ಬಿಟ್ಟೆ. ಅದೊಂದು ದಿನ ಯಾರೋ ಸೀರಿಯಲ್​ ಆಡಿಷನ್​ ಇದೆ ಎಂದರು. ಡಾನ್ಸ್​ ವಾರಪೂರ್ತಿ ಇರುತ್ತಿರಲಿಲ್ಲವಾದ್ದರಿಂದ ಫ್ರೀ ಇದ್ದಾರೆ ಹೋದ್ರಾಯ್ತು ಎಂದು ಆಡಿಷನ್​ ಕೊಟ್ಟೆ ಅಷ್ಟೇ. ಬಣ್ಣದ ಲೋಕದ ಕನಸೇನೂ ಇರಲಿಲ್ಲ. ಆದರೆ ಅಚ್ಚರಿ ಎಂದರೆ, ಆಯ್ಕೆಯಾಗಿಬಿಟ್ಟೆ. ಇಲ್ಲಿ ನಾನು ಬಂದದ್ದು ಅಚಾನಕ್​ ಆಗಿ. ಆಮೇಲೆ ತೆಲಗು ಮಾತ್ರವಲ್ಲದೇ ಕನ್ನಡದಲ್ಲಿಯೂ ಅವಕಾಶ ಸಿಕ್ಕಿತು ಎಂದಿದ್ದಾರೆ. ಚಿತ್ರಕಥಾ, ಮನರೂಪ, ಪದವಿಪೂರ್ವ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.

ತಮ್ಮ ಮದುವೆ ಸಂಬಂಧದ ಕುರಿತು ಮಾತನಾಡಿರುವ ನಟಿ, ನನ್ನ ಗಂಡ ಮನೋಹರ್‌ ಜೋಶಿ ಮದುವೆಗೂ ಮುನ್ನ ಸಿಂಪಲ್ಲಾಗ್‌ ಒಂದು ಲವ್‌ ಸ್ಟೋರಿ ಸಿನಿಮಾಗೆ ಛಾಯಾಗ್ರಾಹಕರಾಗಿದ್ದರು. ಅದೇ ಸಮಯದಲ್ಲಿ ನನಗೆ ಯಾರೋ ಆಡಿಷನ್​ಗೆ ಕರೆದದ್ದು ಚಿಕ್ಕ ರೋಲ್​ಗೆ. ಹೇಗೋ ಫ್ರೀ ಇದ್ದೇನೆ ಎಂದು ಹೋಗಿದ್ದೆ. ಆದ್ರೆ ಸೆಲೆಕ್ಟ್​ ಆಗಿಬಿಟ್ಟೆ. ಅಲ್ಲಿ ಮನೋಹರ್​ ಅವರ ಪರಿಚಯವಾಯ್ತು. ಸ್ನೇಹವಾಗಿ ಮದುವೆಯೂ ಆಯ್ತು. ಅವರು ತುಂಬಾ ಸಪೋರ್ಟ್​ ಮಾಡ್​ತಾರೆ. ಅತ್ತೆ ಕೂಡ ತುಂಬಾ ಚೆನ್ನಾಗಿ ನೋಡಿಕೊಳ್ತಾರೆ ಎಂದಿದ್ದಾರೆ. ಇದೀಗ ಸದ್ಯ ಕನ್ನಡದ ವೀಕ್ಷಕರ ಕಣ್ಣಲ್ಲಿ ವಿಲನ್​ ಆಗಿದ್ದಾರೆ. ವೀಕ್ಷಕರು ಇಷ್ಟೆಲ್ಲಾ ಬೈತಾರೆ ಎಂದರೆ ನನ್ನ ರೋಲ್​ ಅನ್ನು ನಾನು ಚೆನ್ನಾಗಿ ಮಾಡುತ್ತಿದ್ದೇನೆ ಎಂದೇ ಅರ್ಥ ಎನ್ನುತ್ತಾರೆ ಅನುಷಾ. 

'ಕರಿಮಣಿ' ಸೀರಿಯಲ್​ ಜೋಡಿ ರಿಯಲ್​ ಲೈಫ್​ನಲ್ಲೂ ಮದ್ವೆಯಾಗ್ತಿದ್ದಾರಾ? ಗುಟ್ಟು ರಿವೀಲ್​ ಮಾಡಿದ ತಾರೆಯರು