ಕನ್ನಡತಿಯೇ ಕನ್ನಡಾಂಬೆ ದೇವಸ್ಥಾನದ ಬಗ್ಗೆ ರೀಲ್ಸ್ ಮಾಡಿದ್ರೆ ಏನ್ ಮಜಾ ಇರುತ್ತಲ್ಲಾ, ತಮ್ಮ ಅಭಿಮಾನಿಗಳನ್ನು ಅಂಥದ್ದೊಂದು ಅಚ್ಚರಿಗೆ ದೂಡಿದ್ದಾರೆ ಕನ್ನಡತಿ ನಾಯಕಿ ರಂಜನಿ ರಾಘವನ್. ಇನ್ನೊಂದು ಕಡೆ ಮುಂಗಾರು ಮಳೆ ಸಿನಿಮಾ ಸ್ಟೈಲಲ್ಲಿ ಭುವಿಯನ್ನೆತ್ತಿಕೊಂಡು ನೂರಾರು ಮೆಟ್ಟಿಲೇರಿ ಕನ್ನಡಾಂಬೆ ದೇವಸ್ಥಾನಕ್ಕೆ ಹರ್ಷ ಎಂಟ್ರಿ ಕೊಟ್ಟಿದ್ದಾನೆ.

ರಂಜನಿ ರಾಘವನ್(Ranjini Raghavan) ಕನ್ನಡತಿ ಸೀರಿಯಲ್ ನ ನಾಯಕಿ. ತೀರಾ ಕನ್ನಡತಿ(Kannadathi) ನಾಯಕಿ ಭುವಿಯಷ್ಟಲ್ಲವಾದರೂ ಉಳಿದ ಸೀರಿಯಲ್ ನಾಯಕಿಯರಿಗೆ ಹೋಲಿಸಿದರೆ ಅದ್ಭುತವಾಗಿ ಕನ್ನಡ ಮಾತಾಡ್ತಾರೆ ರಂಜನಿ. ಕನ್ನಡದಲ್ಲಿ 'ಕಥೆ ಡಬ್ಬಿ' ಅನ್ನೋ ಸಣ್ಣ ಕಥೆಗಳ(Short stories) ಸಂಕಲನವನ್ನೂ ಅವರು ಹೊರತಂದಿದ್ದಾರೆ. ಇಂಥಾ ನಟಿ 'ಕನ್ನಡತಿ' ಸೀರಿಯಲ್ ಶೂಟಿಂಗ್ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಸಮೀಪ ಇರುವ ಕನ್ನಡಾಂಬೆ ಭುವನೇಶ್ವರಿ ದೇವಸ್ಥಾನಕ್ಕೆ(Sri Bhuvaneshvari temple, Sidhapura) ಭೇಟಿ ಕೊಟ್ಟಿದ್ದಾರೆ. ಕಳೆದ ವಾರವೇ ಈ ಸೀರಿಯಲ್ ಜೋಡಿ ಇಲ್ಲಿಗೆ ಭೇಟಿಕೊಟ್ಟ ಪ್ರೋಮೋ ವೈರಲ್(viral) ಆಗಿತ್ತು. ಇದೀಗ ಆ ಭಾಗದ ದೃಶ್ಯಗಳ ಪ್ರಸಾರ ಶುರುವಾಗಿದೆ.

ರಂಜನಿ ರಾಘವನ್ ಈ ಕನ್ನಡಾಂಬೆ ದೇವಸ್ಥಾನದ ಬಗ್ಗೆ ರೀಲ್ಸ್(Reels) ಮಾಡಿ ಇನ್‌ಸ್ಟಾಗ್ರಾಂನಲ್ಲಿ(Instagram) ಪೋಸ್ಟ್ ಮಾಡಿದ್ದಾರೆ. ಈ ಭುವನಗಿರಿಯ ಭುವನೇಶ್ವರಿ ದೇವಾಲಯ ಕನ್ನಡದ ಏಕೈಕ ದೇವಾಲಯವೆಂದು ಪ್ರಸಿದ್ಧಿ ಪಡೆದಿದೆ. ಶೂಟಿಂಗ್ (Shooting)ಬಿಡುವಿನ ನಡುವೆ ಈ ದೇವಾಲಯದ ವೀಡಿಯೋ ಮಾಡಿರುವ ರಂಜನಿ ದೇವಾಲಯದ ಮಹತ್ವವನ್ನು ವಿವರಿಸಿದ್ದಾರೆ. ಆರಂಭದಲ್ಲಿ ದೇವಾಲಯದ ಹೊರ ಭಾಗದಲ್ಲಿ ನಿಂತು ದೇವಸ್ಥಾನದ ಪರಿಸರ ಕಾಣುವಂತೆ ವೀಡಿಯೋ ಮಾಡಿದ್ದಾರೆ. ಬಳಿಕ ದೇವಾಲಯದ ಒಳಭಾಗಕ್ಕೆ ನಡೆದಿದ್ದಾರೆ. ವೀಡಿಯೋ ಮೂಲಕವೇ ಕನ್ನಡ ತಾಯಿ ಭುವನೇಶ್ವರಿಯ ದರ್ಶನವನ್ನು ತಮ್ಮ ಅಭಿಮಾನಿಗಳಿಗೆ ಮಾಡಿಸಿದ್ದಾರೆ. ದೇವಸ್ಥಾನದ ಒಳಭಾಗದಲ್ಲಿ ಶೂಟಿಂಗ್ ಸೆಟ್‌ನ ದೃಶ್ಯಗಳೂ ಈ ವೀಡಿಯೋದಲ್ಲಿ ಸೆರೆಯಾಗಿದೆ. ಇದಕ್ಕೆ ಹಿನ್ನೆಲೆಯಾಗಿ 'ಭುವನೇಶ್ವರಿಯಾ ನೆನೆ ಮಾನಸವೇ' ಎಂಬ ಶಾಸ್ತ್ರೀಯ ಸಂಗೀತದ ಗೀತೆ ಇದೆ. ಇದನ್ನು ಹಾಡಿರುವ ದನಿಯನ್ನು ಕೇಳುವಾಗ ಇದನ್ನು ರಂಜನಿಯವರೇ ಹಾಡಿದ್ದಾರೇನೋ ಅಂತ ಅನುಮಾನ ಬರುತ್ತೆ. ಏಕೆಂದರೆ 'ಕನ್ನಡತಿ' ಸೀರಿಯಲ್ ನೋಡುವವ ಅವರ ಅಭಿಮಾನಿಗಳಿಗೆ ರಂಜನಿ ಅವರು ಶಾಸ್ತ್ರೀಯ ಸಂಗೀತ(classical music) ಕಲಿತಿರೋದು, ಅವರಿಗೆ ಹಾಡೋದಕ್ಕೆ ಬರುತ್ತೆ ಅನ್ನೋದೂ ಗೊತ್ತು. ಆದರೆ ತೀರ ಇಷ್ಟು ಚಂದವಾಗಿ ಹಾಡ್ತಾರ, ಇದು ಅವರ ಧ್ವನಿಯಾ ಅನ್ನೋದರ ಬಗ್ಗೆ ಪಕ್ಕಾ ಮಾಹಿತಿ ಸಿಕ್ಕಿಲ್ಲ. ಆದರೆ ರಂಜನಿಯವರ ಈ ರೀಲ್ಸ್ ಅನ್ನು ಕನ್ನಡತಿ ಅಭಿಮಾನಿಗಳು ಬಹಳ ಇಷ್ಟಪಟ್ಟಿದ್ದಾರೆ.

View post on Instagram

ಇನ್ನೊಂದೆಡೆ ಕನ್ನಡತಿ ಸೀರಿಯಲ್‌ನಲ್ಲಿ ಮುಂಗಾರುಮಳೆ ಸಿನಿಮಾ (Mungaru male Kannada movie) ವನ್ನು ಹೋಲುವ ದೃಶ್ಯ ಪ್ರಸಾರವಾಗುತ್ತಿದೆ. ಇದರಲ್ಲಿ ಹರ್ಷ ಮತ್ತು ಭುವಿ ಕನ್ನಡಾಂಬೆಯ ದೇವಾಲಯದೆದುರು ನಿಂತಿದ್ದಾರೆ. ಕೆಳಗೆ ಹೂ ಮಾರುವ ಅಜ್ಜಿ ಒಬ್ಬಳು ಹರ್ಷನಿಗೆ ಹೇಳಿದ್ದಾಳೆ, ಹೆಂಡತಿ ಅಥವಾ ಭಾವಿ ಹೆಂಡತಿಯನ್ನು ಎತ್ತಿಕೊಂಡು ಮುಂದಿನ ನೂರಾರು ಮೆಟ್ಟಿಲು ಹತ್ತಿ ದೇವಸ್ಥಾನಕ್ಕೆ ಹೋದರೆ ಗಂಡ ಹೆಂಡತಿ ಕೊನೆಯವರೆಗೂ ಚೆನ್ನಾಗಿರುತ್ತಾರೆ ಅಂತ. ಇಂಥದ್ದೊಂದು ಮಾತು ಕೇಳಿ ಮುಂಗಾರು ಮಳೆ ಪ್ರೀತಂ ಥರ ನಮ್ ಹೀರೋ ಹರ್ಷನ ಹೀರೋಯಿಸಂ(heroism) ಜಾಗೃತವಾಗಿದೆ. ಭುವಿ ಬೇಡ, ಇಳಿಸಿ ಅಂದರೂ ಕೇಳದ ತನ್ನ ಭಾವೀ ಪತ್ನಿಯನ್ನು ಎತ್ತಿಕೊಂಡು ಆತ ನೂರಾರು ಮೆಟ್ಟಿಲುಗಳನ್ನು ಏರುತ್ತಾನೆ.

ಕನ್ನಡತಿ ಸೀರಿಯಲ್‌ ಮುಗಿದೇ ಹೋಗ್ತಿದೆಯಾ? ಸೀರಿಯಲ್ ಫ್ಯಾನ್ಸ್‌ಗೆ ಬಿಗ್‌ ಶಾಕ್‌!

ಬೆಟ್ಟ ಹತ್ತುವಾಗಲೂ ಇದೆಲ್ಲ ಸಿನಿಮಾದಲ್ಲಷ್ಟೇ ಚಂದ, ಇದನ್ನೆಲ್ಲ ಮಾಡದಿದ್ರೂ ನಾವು ಪ್ರೀತಿಯಿಂದ ಚೆನ್ನಾಗಿಯೇ ಇರ್ತೀವಿ ಅಂದರೂ ಹರ್ಷ ಅವಳ ಮಾತನ್ನು ಕೇಳಲು ರೆಡಿ ಇಲ್ಲ. ಅವಳನ್ನೆತ್ತಿಕೊಂಡು ದೇವಸ್ಥಾನದ ಮೆಟ್ಟಿಲುಗಳನ್ನು ಯಶಸ್ವಿಯಾಗಿ ಏರಿದ್ದಾನೆ. ಮೇಲೆ ಬಂದರೆ ಅಲ್ಲೇ ಎದುರಿಗೆ ಅರ್ಚಕರು ಸಿಗುತ್ತಾರೆ. 'ಏನು ಈ ಹುಡುಗಿಗೆ ಕಾಲು ನೋವಾ?' ಅಂತ ಕೇಳ್ತಾರೆ. ಹರ್ಷ ಫುಲ್ ಬಿಲ್ಡಪ್‌ನಲ್ಲಿ ಪ್ರೀತಿ ಹೆಚ್ಚಾಗ್ಲಿ ಅಂತ ಎತ್ಕೊಂಡು ಬಂದೆ ಅನ್ನುತ್ತಾನೆ. ಆಗ ಆ ಹಿರಿಯರು, 'ಕೆಳಗೆ ಹೂ ಮಾರೋ ಅಜ್ಜಿ ಇದನ್ನು ಹೇಳಿದಳಾ? ಅವಳು ಹೊಸ ಜೋಡಿ ಯಾರು ಕಂಡರೂ ಹೀಗೇ ಹೇಳ್ತಾಳೆ' ಅಂದಾಗ ಭುವಿ ಬಿದ್ದು ಬಿದ್ದೂ ನಕ್ಕರೆ ಹರ್ಷ ಪೆಚ್ಚಾಗ್ತಾನೆ.

ಭುವನೇಶ್ವರಿ ದೇವಾಲಯದಲ್ಲಿ ಹರ್ಷ ಭುವಿ, ಇಲ್ಲೇ ನಡಿಯುತ್ತಾ ಕನ್ನಡದ ಮದುವೆ?

ಅಲ್ಲಿಗೆ ಹರ್ಷನನ್ನು ಮಾತ್ರ ಅಲ್ಲ, ಸಖತ್ ರೊಮ್ಯಾಂಟಿಕ್ ಫೀಲಿಂಗ್(Romantic feeling) ಇಟ್ಕೊಂಡು ಈ ದೃಶ್ಯ ನೋಡ್ತಿದ್ದ ಪ್ರೇಕ್ಷಕರನ್ನೂ ಯಾಮಾರಿಸಿದ್ದಾರೆ ಸೀರಿಯಲ್ ಟೀಮ್‌ನವರು. ಆದರೆ ಮುಂದಿನ ಕಥೆಯ ಬಗ್ಗೆ ಕುತೂಹಲ ಹೆಚ್ಚಿಸಿದ್ದಾರೆ ಅನ್ನೋದು ಸುಳ್ಳಲ್ಲ.