Asianet Suvarna News Asianet Suvarna News

ಊಟ ಸೇರೋಲ್ಲ, ಉಸಿರಾಡಲು ಕಷ್ಟ, ವಿಪರೀತ ಅಳು ಬರುತ್ತಿತ್ತು: ಶಾಲಿನಿ ಸತ್ಯನಾರಾಯಣ್

ಕೊರೋನಾ ಸೋಂಕು ನಮ್ಮ ದೇಹವನ್ನು ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ಎಷ್ಟೆಲ್ಲಾ ಹಿಂಸೆ ನೀಡಿ, ಕುಗ್ಗಿಸುತ್ತದೆ ಎಂಬುದನ್ನು ಹಾಸ್ಯ ಕಲಾವಿದೆ, ಖ್ಯಾತ ನಿರೂಪಕಿ ಲಿನಿ ಸತ್ಯನಾರಾಯಣ್ ಹೇಳಿಕೊಂಡಿದ್ದಾರೆ.

Kannada Host Shalini Sathyanarayan talks about physical and mental health havoc by covid19 vcs
Author
Bangalore, First Published Apr 22, 2021, 1:17 PM IST

ಕನ್ನಡ ಚಿತ್ರರಂಗದ ಮಾತಿನ ಮಲ್ಲಿ, ಕಿರುತೆರೆ ವೀಕ್ಷಕರ ನೆಚ್ಚಿನ ಪಾಚು ಅಲಿಯಾಸ್ ಶಾಲಿ ಸತ್ಯನಾರಾಯಣ್ ಕೆಲವು ದಿನಗಳ ಹಿಂದೆ ಕೊರೋನಾ ಸೋಂಕು ತಗುಲಿತ್ತು. ಈ ಕಾರಣ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ತಮ್ಮ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮವನ್ನು ಅನುಪಮಾ ಗೌಡ ನಡೆಸಿಕೊಡುವುದರ ಬಗ್ಗೆ ವಿಡಿಯೋ ಕಾಲ್‌ ಮೂಲಕ ಮಾಹಿತಿ ನೀಡಿದ್ದರು. ಮನೆಯಲ್ಲಿ ಕ್ವಾರಂಟೈನ್‌ ಆಗಿರುವ ಶಾಲಿ ಸೋಂಕಿನಿಂದ ತಮ್ಮ ಆರೋಗ್ಯದಲ್ಲಿ ಆದ ಬದಲಾವಣೆಗಳ ಮತ್ತಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. 

'ಮೊದಲು ನನಗೆ ಧ್ವನಿ ಕೆಟ್ಟಿತ್ತು. ದಿನದಲ್ಲಿ 12 ಗಂಟೆ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ನನಗೆ ಇದು ಸಾಮಾನ್ಯ ಎನಿಸಿತ್ತು. ಸುಮ್ಮನಾದೆ. ಆ ನಂತರ ಮೂಗು, ಗಂಟಲು ನೋವು ಶುರುವಾಯಿತು.  ಪರಿಚಯದ ವೈದ್ಯರ ಬಳಿ ಹೋಗಿ ಪರಿಕ್ಷೆ ಮಾಡಿಸಿಕೊಂಡೆ. ಕೊರೋನಾ ಪಾಸಿಟಿವ್ ಅಂತ ಗೊತ್ತಾಯಿತು. ನನ್ನ ಮಗಳು ಹಾಗೂ ಪತಿ ಪರೀಕ್ಷೆ ಮಾಡಿಸಿಕೊಂಡರು. ನೆಗೆಟಿವ್ ವರದಿ ಬಂತು. ಮಗಳನ್ನು ದೂರದ ಸಂಬಂಧಿಯೊಬ್ಬರ ಮನೆಗೆ ಕಳುಹಿಸಿದೆವು. ಪತಿ ನನ್ನ ಜೊತೆ ಮನೆಯಲ್ಲಿಯೇ ಉಳಿದುಕೊಂಡರು. ಒಂದೆರಡು ದಿನದ ನಂತರ ಅವರಿಗೂ ಕೊರೋನಾ ಪಾಸಿಟಿವ್ ಬಂತು,' ಎಂದು ಶಾಲಿನಿ ಹೇಳಿದ್ದಾರೆ.

Kannada Host Shalini Sathyanarayan talks about physical and mental health havoc by covid19 vcs

'ವೈದ್ಯರು ಹೇಳಿದ ಹಾಗೆ ಮನೆಯಲ್ಲಿಯೇ ಐಸೋಲೇಟ್ ಆದೆ. ಆದರೆ ತೀವ್ರ ಜ್ವರ ಬರಲು ಆರಂಭವಾಯಿತು. ಮೈ ಕೈ ನೋವು ಹೆಚ್ಚಾಯಿತು. ಹಲ್ಲು ಉಜ್ಜಲೂ ಆಗುತ್ತಿರಲಿಲ್ಲ. ಅಷ್ಟೊಂದು ನೋವು. ನಾನು 8ನೇ ತರಗತಿಯಲ್ಲಿದ್ದಾಗ ತ್ರೀವ ಜ್ವರದಿಂದ ಬದುಕಿ ಬಂದದ್ದೇ ಹೆಚ್ಚಾಗಿತ್ತು. ಅದೆಲ್ಲಾ ನೆನಪು ಶುರುವಾಯ್ತು. ಭ್ರಮೆ ಕಾಡಲು ಶುರುವಾಯಿತು. ಹೆಳೆಯ ನೆನಪುಗಳು ಬಂದು ಈ ಬಾರಿ ನಾನು ಬದುಕುವುದಿಲ್ಲ ಎನಿಸುತ್ತಿತ್ತು. ವಿದೇಶದಲ್ಲಿರುವ ಸಹೋದರರಿಗೆ ಕರೆ ಮಾಡಿ ಅಳುತ್ತಿದ್ದೆ,' ಎಂದಿದ್ದಾರೆ ಶಾಲಿನಿ. 

ನಿರೂಪಕಿ ಶಾಲಿನಿಗೆ ಅನಾರೋಗ್ಯ;ಈಗ 'ಸೂಪರ್ ಸ್ಟಾರ್' ಸಾರಥಿ ಅನುಪಮಾ ಗೌಡ! 

'ಊಟ ಮಾಡಿದರೆ ಸೇರುತ್ತಿಲ್ಲ. ನೀರು ಕುಡಿದರೂ ಕಸ ಹೋದಂತೆ ಎನಿಸುತ್ತಿತ್ತು. ಎದೆ ನೋವು ಶುರುವಾಯ್ತು. ವೈದ್ಯರು ಉಸಿರಾಟದ ವ್ಯಾಯಾಮ ಮಾಡಲು ಹೇಳಿದರು. ಆಗ ತುಸು ಸಮಾಧಾನ ಆಯಿತು. ನೀರು ಕುಡಿದರೂ ವಾಂತಿಯಾಗುತ್ತಿತ್ತು. ಈ ಕೊರೋನಾದಿಂದ ದೇಹ ಮಾತ್ರವಲ್ಲ, ಮಾನಸಿಕ ಆರೋಗ್ಯವೂ ಹಾಳಾಗುತ್ತದೆ. ನನಗೆ ಆಶ್ಚರ್ಯ ಏನೆಂದರೆ ಸುಮಾರು ಸೆಲೆಬ್ರಿಟಿಗಳಿಗೆ ಕೊರೋನಾ ಬರುತ್ತಿದೆ. ಅವರೆಲ್ಲಾ ಎಂಜಾಯ್ ಮಾಡುತ್ತಿದ್ದೇವೆ, ಎನ್ನುವ ಅರ್ಥದಲ್ಲಿ ಬರೆದಿರುತ್ತಾರೆ. ಆದರೆ ದಯವಿಟ್ಟು ಸತ್ಯ ಹೇಳಬೇಕು. ಜನರನ್ನು ದಿಕ್ಕು ತಪ್ಪಿಸಬಾರದು. ಕಠಿಣವಾದ ಸತ್ಯ ಹೇಳಿದರೂ ಪರ್ವಾಗಿಲ್ಲ, ಜನರನ್ನು ಜಾಗೃತಗೊಳಿಸಬೇಕು,' ಎಂದು ಶಾಲಿನಿ ಹೇಳಿದ್ದಾರೆ.

'ಪಾಪ ಪಾಂಡು' ಶಾಲಿನಿ 'ಶಾಲಿವುಡ್‌' ಹೇಗಿದೆ ನೋಡಿ! 

ಸ್ಯಾಂಡಲ್‌ವುಡ್‌ನ ಅನೇಕ ತಾರೆಯರಿಗೆ ಕೊರೋನಾ ವೈರಸ್ ಸೋಂಕು ತಗುಲಿದ್ದು, ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಮತ್ತೆ ಕೆಲವರು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ. ಎಲ್ಲರೂ ಜಾಗೃತರಾಗಿದ್ದು, ಸರ್ವಾಜನಿಕರೂ ಹುಷಾರಾಗಿರುವಂತೆ ವಿನಂತಿಸಿಕೊಳ್ಳುತ್ತಿದ್ದಾರೆ. ಅನು ಪ್ರಭಾಕರ್ ಮುಖರ್ಜಿ ಸಹ ಕೊರೋನಾ ಸೋಂಕಿನಿಂದ ಬಳಲುತ್ತಿದ್ದು, ಸೃಷ್ಟಿಯಾದ ಕಷ್ಟದ ಸ್ಥಿತಿ ಬಗ್ಗೆ ಮಾತನಾಡಿದ್ದಾರೆ.

Follow Us:
Download App:
  • android
  • ios