ಅಮೃತಧಾರೆ ಸೀರಿಯಲ್ನಲ್ಲಿ (Amruthadhare serial) ನಮ್ಮ ಸಂಸಾರ ಆನಂದ ಸಾಗರ ಥರದ ಸ್ಟೋರಿ ನಡೀತಿದೆ. ಈ ನಡುವೆ ನಮ್ ಗೌತಮ್ ಸರ್ಗೆ ಪಿಸಿಓಡಿ ಅಂತೊಂದು ಮಾತು ಕೇಳ್ತಿದೆ! ಇದೇನ್ರೀ ಕರ್ಮ…!
ಅಮೃತಧಾರೆ ಸೀರಿಯಲ್ ರೊಮ್ಯಾಂಟಿಕ್ ಆಗಿ ಅಷ್ಟೇ ಲೈವ್ಲೀ ಆಗಿ ಮುಂದೆ ಹೋಗ್ತಿದೆ. ಈ ನಡುವೆ ವೀಕ್ಷಕರ ತಲೆ ಹಾಳು ಮಾಡುವಂಥಾ ಒಂದು ವಿಚಾರ ಬಂದಿದೆ. ಅದು ಪಿಸಿಓಡಿಯದ್ದು. ಅಷ್ಟಕ್ಕೂ ಈ ಪಿಸಿಓಡಿ ಪ್ರಾಬ್ಲೆಮ್ ಮಲ್ಲಿಗಾ, ಅಥವಾ ಇನ್ಯಾವುದೋ ಫೀಮೇಲ್ ಪಾತ್ರಕ್ಕಾ ಅಂದರೆ, ಅಲ್ವಂತೆ. ಈ ಡೈಲಾಗ್ ಬಂದು ಹೋದ ಮೇಲೆ ಒಂದಿಷ್ಟು ಕಾಲೇಜ್ ಪಡ್ಡೆಗಳು, ʼಗಂಡಸ್ರಿಗೆ ಪಿಸಿಓಡಿ ಬರುತ್ತಾ?ʼ ಅನ್ನೋ ಸೀರಿಯಸ್ ರೀಸರ್ಚ್ನಲ್ಲಿ ತೊಡಗಿದ್ದಾರೆ. ಅವರ ಸರ್ಚ್ ಎಂಜಿನ್ಗೂ ಗೊತ್ತಾಗದೇ ಅದು ಹ್ಯಾಂಗ್ ಆಗಿ ಬಿಟ್ಟಿತಂತೆ.
ಅಷ್ಟಕ್ಕೂ ಪಿಸಿಓಡಿ ಅಂದರೆ Polycystic Ovarian Disease. ಇದು ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ ಹಾರ್ಮೋನ್ ಅಸಮತೋಲನ ಸ್ಥಿತಿ. ಇದು ಅಂಡಾಶಯದಲ್ಲಿ ಅಪರಿಪಕ್ವ ಮೊಟ್ಟೆಗಳು ಸಿಸ್ಟ್ಗಳಾಗಿ (ನೀರಿನ ಗುಳ್ಳೆಗಳು) ಸಂಗ್ರಹವಾಗಲು ಕಾರಣವಾಗುತ್ತದೆ, ಇದರಿಂದ ಅಂಡೋತ್ಪತ್ತಿ (Ovulation) ತಡೆಯಲ್ಪಟ್ಟು, ಮುಟ್ಟಿನ ಸಮಸ್ಯೆಗಳು, ಬೊಜ್ಜು ಮತ್ತು ಬಂಜೆತನ ಉಂಟಾಗಬಹುದು. ಅನುವಂಶೀಯತೆ, ಅಧಿಕ ಒತ್ತಡ, ಅನಾರೋಗ್ಯಕರ ಆಹಾರ ಪದ್ಧತಿ (ಕೊಬ್ಬಿನಾಂಶ) ಮತ್ತು ವ್ಯಾಯಾಮದ ಕೊರತೆ ಇದಕ್ಕೆ ಕಾರಣ.
ಇದರಿಂದ ಏನಾಗುತ್ತೆ ಅಂದರೆ ಅನಿಯಮಿತ ಮುಟ್ಟು, ತೂಕ ಹೆಚ್ಚಳ, ವಿಶೇಷವಾಗಿ ಸೊಂಟದ ಸುತ್ತ ಬೊಜ್ಜು, ಮುಖ, ದೇಹದ ಮೇಲೆ ಅತಿಯಾದ ಕೂದಲು ಬೆಳವಣಿಗೆ ಮತ್ತು ಮೊಡವೆಗಳು, ಹೆಚ್ಚಿನ ರಕ್ತಸ್ರಾವ, ಬಂಜೆತನದ ಸಮಸ್ಯೆ. ಇದಕ್ಕೆ ಚಿಕಿತ್ಸೆ ಪಡೆಯದಿದ್ದರೆ ಮಧುಮೇಹ, ಹೃದಯರೋಗ ಮತ್ತು ಗರ್ಭಾಶಯದ ಕ್ಯಾನ್ಸರ್ ಅಪಾಯ ಹೆಚ್ಚಾಗಬಹುದಂತೆ.
ಪ್ರತಿದಿನ ವ್ಯಾಯಾಮ, ಯೋಗ, ಮತ್ತು ಒತ್ತಡ ನಿರ್ವಹಣೆ, ನಾರಿನಂಶ (Fiber) ಹೆಚ್ಚಿರುವ, ಕಡಿಮೆ ಸಕ್ಕರೆ ಮತ್ತು ಕಡಿಮೆ ಕೊಬ್ಬಿನ ಆಹಾರ ಸೇವನೆ, ಹಾರ್ಮೋನ್ ನಿಯಂತ್ರಣ ಮಾತ್ರೆಗಳಿಂದ ಇದನ್ನು ನಿಯಂತ್ರಿಸಬಹುದಂತೆ. ಮಹಿಳೆಯರಿಗೆ ಬರುವ ಈ ಸಮಸ್ಯೆ ಗೌತಮ್ ಸರ್ಗೆ ಬಂದಿದೆಯಾ ಅನ್ನೋದು ಪ್ರಶ್ನೆ. ಇದಕ್ಕೆ ಉತ್ತರ ಸಿಗಬೇಕು ಅಂದರೆ ತರಲೆ ಆನಂದನ ತಲೆಗೆ ಕುಟ್ಬೇಕು ಅನ್ನೋದು ಒಂದಿಷ್ಟು ಬುದ್ಧಿವಂತರ ಸಲಹೆ.
ಪಿಸಿಒಡಿ ಎಲ್ಲಿಂದ ಬಂತಪ್ಪಾ!
ಅಮೃತಧಾರೆ ಸೀರಿಯಲ್ ಕಥೆ ಎಷ್ಟು ಚೆಂದವೋ, ಅದರ ಸಂಭಾಷಣೆಯೂ ಚೆನ್ನಾಗಿರುತ್ತದೆ. ಲೈಟ್ ಹಾರ್ಟೆಡ್ ಜನರ ನಡುವೆ ಚಾಲ್ತಿಯಲ್ಲಿರುವ ಜೋಕ್ಗಳನ್ನೂ ಇಲ್ಲಿ ಬಳಸೋ ಕಾರಣ ಇದು ಹೆಚ್ಚು ಜನಕ್ಕೆ ಕನೆಕ್ಟ್ ಆಗುತ್ತೆ. ಸದಾ ನೋವು, ಅಳು ಇತ್ಯಾದಿಗಳು ಈ ಸೀರಿಯಲ್ನಲ್ಲಿ ಕೊಂಚ ಕಡಿಮೆ. ಇದರಲ್ಲಿ ಬರುವ ಗೆಳೆಯರಾದ ಗೌತಮ್ ಹಾಗೂ ಆನಂದನ ನಡುವಿನ ಸಂಭಾಷಣೆ ಮಜವಾಗಿರುತ್ತದೆ. ಇವತ್ತು ಪ್ರಸಾರವಾಗೋ ಎಪಿಸೋಡ್ನಲ್ಲಿ ಇವರಿಬ್ಬರ ಮಜವಾದ ಸಂಭಾಷಣೆ ಇದೆ. "ನಿನ್ನ ಓಸಿಡಿ, ಪಿಸಿಓಡಿ ಪ್ರಾಬ್ಲೆಮ್ ಎಲ್ಲ ಏನಾಯ್ತು?ʼ ಅಂತ ತರಲೆ ಆನಂದ್ ಕೇಳ್ತಾನೆ. ಓಸಿಡಿ ಸಮಸ್ಯೆ ಗೌತಮ್ಗೆ ಮೊದಲಿದ್ದದ್ದು ನಿಜ, ಈ ಪಿಸಿಓಡಿ ಎಲ್ಲಿಂದ ಬಂತಪ್ಪಾ.. ಅಂದರೆ ಅದಕ್ಕೆ ಆನಂದ್ ಕೊಡೋ ಉತ್ತರ ಸಾರಿ, ಫ್ಲೋ ಅಲ್ಲಿ ಬಂದ್ಬಿಟ್ತು, ಓಸಿಡಿಯಲ್ಲೂ ಡಿ ಇದೆ, ಪಿಸಿಓಡಿಯಲ್ಲೂ ಡಿ ಇದೆ ಅಲ್ವಾ ಅಂತ. ಇನ್ನೂ ಈ ಫ್ಲೋನಲ್ಲಿ ಏನೇನ್ ಬರುತ್ತೋ, ಕರ್ಮ ಕರ್ಮ ಅಂತ ನಗುತ್ತಲೇ ಈ ಸೀರಿಯಲ್ ವೀಕ್ಷಕರು ತುಂಟ ಆನಂದನ ತಲೆಗೆ ಕುಟ್ಟೋ ಥರ ಕಾಮೆಂಟ್ ಮಾಡ್ತಿದ್ದಾರೆ.
ಇಲ್ಲೀವರೆಗೆ ಗೌತಮ್ ದೊಡ್ಡ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದ ಕಾರಣ ಆನಂದನ ಕಾಮಿಡಿಗೆ ಬ್ರೇಕ್ ಬಿದ್ದಿತ್ತು. ಈಗ ಗೌತಮ್ ಮತ್ತೆ ಸಂಸಾರ ಸಾಗರಕ್ಕೆ ಮರಳಿರುವ ಕಾರಣ ಆನಂದನ ಜೋಕ್ಗೆ ಮತ್ತೆ ಫ್ಲೋ ಬಂದಿದೆ. ಆ ಫ್ಲೋದಲ್ಲಿ ಓಸಿಡಿಯೂ ಪಿಸಿಓಡಿಯೂ ಜೊತೆಜೊತೆಗೆ ಬಂದಿದೆ. ನಿಜಕ್ಕೂ ಪಿಸಿಓಡಿ ಇರುವವರಿಗೆ ಇದರಿಂದ ಕಣ್ಣು ಕೆಂಪಾದ್ರೆ, ಉಳಿದವರು ಬಿದ್ದೂ ಬಿದ್ದೂ ನಕ್ಕಿದ್ದಾರೆ.
ದೊಡ್ಡದೊಂದು ತಿರುವು ಬಂದು ಹೋದ ನಿರಾಳತೆಯಲ್ಲಿ ಈ ಸೀರಿಯಲ್ ಮುಂದುವರೀತಾ ಇದೆ. ಇದು ಹೀಗೇ ಇರಲಿ, ಇನ್ನು ಭೂಮಿಗೂ ಗೌತಮ್ಗೂ ಕಷ್ಟ ಕೊಡ್ಬೇಡಿ, ಆನಂದ್ ಜೋಕ್ಗೆ ಕತ್ತರಿ ಹಾಕ್ಬೇಡಿ ಅಂತ ಈ ವೀಕ್ಷಕರು ಬೇರೆ ದುಂಬಾಲು ಬೀಳುತ್ತಿದ್ದಾರೆ. ಸೀರಿಯಲ್ ಟೀಮ್ನವ್ರು ಈ ಕಾಮೆಂಟ್ ನೋಡಿ ಮೂಗಿನಡಿಯೇ ನಗುತ್ತ, ವಾಟ್ ನೆಕ್ಸ್ಟ್ ಟ್ವಿಸ್ಟ್ ಮಚಾ ಅಂತ ಸೀರಿಯಸ್ ಡಿಸ್ಕಶನ್ ಅಲ್ಲಿ ಮುಳುಗಿದ್ದಾರೆ ಅನ್ನೋದು ಲೇಟೆಸ್ಟ್ ಸುದ್ದಿ.


