Bigg Boss Suraj Singh: ಬಿಗ್‌ ಬಾಸ್‌ ಕನ್ನಡ ವೇದಿಕೆಯು ಸ್ಪರ್ಧಿಗಳಿಗೆ ವಿವಿಧ ಅವಕಾಶಗಳನ್ನು ನೀಡುವುದಂತೂ ಸತ್ಯ. ಅದರಂತೆ ಸೂರಜ್‌ ಸಿಂಗ್‌ ಅವರ ಜೀವನದಲ್ಲಿ ಈಗ ದೊಡ್ಡ ಬದಲಾವಣೆ ಆಗಿದೆ. ಹಾಗಿದ್ದರೆ ಏನದು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋಗೆ ಕಾಲಿಟ್ಟ ಹ್ಯಾಂಡ್‌ಸಮ್‌ ಹಂಕ್‌ ಸೂರಜ್‌ ಸಿಂಗ್‌ ಅವರಿಗೆ ( Suraj Singh ) ನಿಜಕ್ಕೂ ಬಯಸಿದ ಬಾಗಿಲು ತೆಗೆದಿದೆ. ಅವರು ಸುರಸುಂದರಾಂಗ ಎನ್ನೋದು ಎಲ್ಲರಿಗೂ ಗೊತ್ತಿದೆ. ಈ ಸುಂದರನಿಗೆ ಈಗ ಮದುವೆ ಆಗಿದೆ.

Add Asianetnews Kannada as a Preferred SourcegooglePreferred

ಧಾರಾವಾಹಿಗೆ ಹೀರೋ ಆದರು!

ಹೌದು, ಕಲರ್ಸ್‌ ಕನ್ನಡ ವಾಹಿನಿಯು ಹೊಸ ಪ್ರೋಮೋವೊಂದನ್ನು ರಿಲೀಸ್‌ ಮಾಡಿದೆ. ಸೂರಜ್‌ ಸಿಂಗ್‌ ಅವರು ನಟಿಸಿದ ‘ಪವಿತ್ರ ಬಂಧನ’ ಸೀರಿಯಲ್‌ನ ಪ್ರೋಮೋ ಅದಾಗಿದೆ. ಸೂರಜ್‌ ಹೊರಗಡೆ ಬಂದು ಎರಡು ವಾರ ಆಗಿದೆ ಅಷ್ಟೇ. ಅವರು ಹೊರಗಡೆ ಬರುತ್ತಿದ್ದಂತೆ ವಾಹಿನಿಯೊಂದರ ಧಾರಾವಾಹಿಗೆ ಹೀರೋ ಆದರು ಎನ್ನಲಾಗಿತ್ತು.

ಸಾಮಾನ್ಯವಾಗಿ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಒಂದು ವರ್ಷಗಳ ಕಾಲ ಒಪ್ಪಂದ ಇರುವುದು. ಅದರಂತೆ ಸೂರಜ್‌ ಹೀರೋ ಆದರೆ ಕಲರ್ಸ್‌ ಕನ್ನಡಕ್ಕೆ ಆಗಿರುತ್ತದೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಅದರಂತೆ ಸೂರಜ್‌ ಹೀರೋ ಆಗಿದ್ದಾರೆ.

ಪ್ರೋಮೋದಲ್ಲಿ ಏನಿದೆ?

ಅಂಗಡಿಯಲ್ಲಿದ್ದವರು, “9.45 ಆಯ್ತು, ನಿಮ್ಮ ಅಣ್ಣ ಬರುತ್ತಾರೆ ತಾನೇ?” ಎಂದು ಕೇಳಿದ್ದಾರೆ.

ತಿಲಕ್:‌ ಬರುತ್ತಾನೆ

ದೇವ್:‌ ಯಾವುತ್ತಾದರೂ ಮಾತಿಗೆ ತಪ್ಪಿದೀನಾ? ತಮ್ಮಯ್ಯ?

ತಿಲಕ್:‌ ಇಲ್ಲ

ದೇವ್:‌ ತಮ್ಮಯ್ಯ, ನಾನು ನಿನ್ನ ಮಾತು ಉಳಿಸಿಕೊಂಡಿದೀನಿ, ನೀನು ನಿನ್ನ ಮಾತು ಉಳಿಸಿಕೊಳ್ಳಬೇಕು. ಬಾ ಆಫೀಸ್‌ಗೆ

ಅಣ್ಣ ಹಾಗೂ ತಮ್ಮ ಇಬ್ಬರೂ ಹಾರ್ಟ್‌ಗೆ ಸಂಬಂಧಪಟ್ಟಂತೆ ಒಂದೇ ರೀತಿ ಟ್ಯಾಟೂ ಹಾಕಿಸಿಕೊಳ್ತಾರೆ, ಕೈಗಳನ್ನು ಅಕ್ಕ-ಪಕ್ಕ ಇಟ್ಟಾಗ ಆ ಟ್ಯಾಟೂಗಳಲ್ಲಿರುವ ಹಾರ್ಟ್‌ ಒಂದಾಗುವುದು.

ಅಲ್ಲಿಗೆ ಹೀರೋಯಿನ್‌ ಎಂಟ್ರಿ ಆಗುವುದು.

ತಿಲಕ್: ನಿನಗೆ ನಾನು ಅಂದರೆ ಇಷ್ಟ ತಾನೇ?

ಪವಿತ್ರಾ: ಇಷ್ಟ ಇಲ್ಲ ಅಂದ್ರೆ ಬರುತ್ತಿದ್ದನಾ?‌

ತಿಲಕ್:‌ ಅಣ್ಣನ ಅಶೀರ್ವಾದ ತಗೊಂಡು ನಾವಿಬ್ಬರೂ ಮದುವೆ ಆಗಬೇಕು

ಪವಿತ್ರಾಗೆ ಆಫೀಸ್‌ ಬಾಸ್‌ ಕಂಡರೆ ಇಷ್ಟ ಆಗೋದಿಲ್ಲ. ಆದರೆ ತಿಲಕ್‌ ಅಣ್ಣ ದೇವ್‌ ತನ್ನ ಬಾಸ್‌ ಎನ್ನೋದು ಅವಳಿಗೆ ಗೊತ್ತಿಲ್ಲ. ಈ ವಿಷಯ ತಿಲಕ್‌ಗೆ ಗೊತ್ತು. ಆದರೆ ವಿಧಿ ಬೇರೆ ಲೆಕ್ಕಾಚಾರ ಹಾಕುವುದು. ದೇವ್‌ ಹಾಗೂ ಪವಿತ್ರಾ ಮದುವೆ ಆಗುವುದು.

ಸೂರಜ್‌ಗೆ ಅದೃಷ್ಟದ ಬಾಗಿಲು

ಕೆನಡಾದಲ್ಲಿ ಶೆಫ್‌ ಆಗಿದ್ದ ಸಾಫ್ಟ್‌ವೇರ್‌ ಇಂಜಿನಿಯರ್‌ ಸೂರಜ್‌ ಸಿಂಗ್‌ ಅವರು ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅದರ ಜೊತೆಗೆ ಪಾರ್ಟ್‌ ಟೈಮ್‌ ಜಿಮ್‌ನಲ್ಲಿ ಟ್ರೇನರ್‌ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಮಾಡೆಲಿಂಗ್‌ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಸೂರಜ್‌ಗೆ ಅಚಾನಕ್‌ ಆಗಿ ಬಿಗ್‌ ಬಾಸ್‌ ಅವಕಾಶ ಸಿಕ್ಕಿತ್ತು.

ಬಿಗ್‌ ಬಾಸ್‌ ಶೋನಲ್ಲಿ ರೋಸ್‌ ಹಿಡಿದುಕೊಂಡು, ಸ್ವಿಮ್ಮಿಂಗ್‌ ಪೂಲ್‌ನಿಂದ ಎದ್ದು ಬಂದ ಸೂರಜ್‌ ಸಿಂಗ್‌ ಅವರನ್ನು ನೋಡಿ ಆ ಮನೆಯಲ್ಲಿದ್ದವರು, ಹೊರಗಡೆ ವೀಕ್ಷಕರು ಕಳೆದುಹೋಗಿದ್ದರು. ಸೂರಜ್‌ಗೆ ಮನರಂಜನಾ ಲೋಕದ ಗಂಧಗಾಳಿ ಗೊತ್ತಿಲ್ಲ. ಈಗ ಅವರಿಗೆ ಸೀರಿಯಲ್‌ನಲ್ಲಿ ಹೀರೋ ಆಗುವ ಅವಕಾಶ ಸಿಕ್ಕಿದೆ. ಪ್ರೋಮೋ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂದು ಕಾದು ನೋಡಬೇಕಿದೆ.

ದಾಸ ಪುರಂದರ, ಬೃಂದಾವನ ಧಾರಾವಾಹಿ ನಟಿ ಅಮೂಲ್ಯ ಅವರು ಈ ಸೀರಿಯಲ್‌ ಮೂಲಕ ಮತ್ತೆ, ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ.