ಬಿಗ್ ಬಾಸ್ ಕನ್ನಡ 11ರ ವಿಜೇತ ಹನುಮಂತು ಅವರಿಗೆ ಸಿನಿಮಾ ಆಫರ್ಗಳ ಜೊತೆಗೆ ರಾಜಕೀಯ ಆಫರ್ಗಳು ಕೂಡ ಬಂದಿವೆ. ಹಾವೇರಿ ರಾಜಕೀಯ ನಾಯಕ ಮಾಜಿ ಸಚಿವರೊಬ್ಬರು ಹನುಮಂತುಗೆ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಇದರಿಂದ ಹನುಮಂತು ರಾಜಕೀಯಕ್ಕೆ ಬರುವ ಸಾಧ್ಯತೆ ಇದೆ ಎಂಬ ಚರ್ಚೆ ಶುರುವಾಗಿದೆ.
ಬೆಂಗಳೂರು (ಫೆ.08): ಬಿಗ್ ಬಾಸ್ ಕನ್ನಡ ಸೀಸನ್ 11ರ ಟ್ರೋಫಿ ವಿಜೇತ ಹಳ್ಳಿಹೈದ ಗಾಯಕ ಹನುಮಂತು ಅವರಿಗೆ ಈಗಾಗಲೇ ಸಿನಿಮಾಗೆ ಬರುವಂತೆ ಆಫರ್ಗಳು ಬಂದಿವೆ. ಇದೀಗ ಕರ್ನಾಟಕದ ಮಾಜಿ ಸಚಿವರೊಬ್ಬರು ಹನುಮಂತುಗೆ ಕರೆ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಹಳ್ಳಿ ಹೈದ ಹನುಮಂತು ರಾಜಕೀಯಕ್ಕೆ ಬರುತ್ತಾರಾ ಎಂಬ ಚರ್ಚೆ ಶುರುವಾಗಿದೆ.
ಬಿಗ್ ಬಾಸ್ ಸೀಸನ್ 11ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ 30 ದಿನಗಳ ಆಸುಪಾಸಿನಲ್ಲಿ ಬಂದ ಹಳ್ಳಿ ಹೈದ ಹನುಮಂತ ಅವರು ಕೆಲವೇ ದಿನಗಳಲ್ಲಿ ಇಡೀ ರಾಜ್ಯದ ಜನತೆಯ ಮನಸ್ಸನ್ನು ಗೆದ್ದಿದ್ದಾರೆ. ಇದರಿಂದ ಪ್ರತಿವಾರ ಹನುಮಂತು ಅವರು ಭಾರೀ ವೋಟ್ಗಳನ್ನು ಪಡೆದು ಸೇಫ್ ಆಗುತ್ತಾ ಫಿನಾಲೆಗೂ ಎಂಟ್ರಿ ಕೊಟ್ಟಿದ್ದರು. ಹನುಮಂತನ ನ್ಯಾಯಪರ ಆಟ ಮತ್ತು ಸಹ ಸ್ಪರ್ಧಿಗಳು ಮಾಡುತ್ತಿದ್ದ ಕುಂತತ್ರಗಳನ್ನು ನೋಡುತ್ತಿದ್ದ ಬಿಗ್ ಬಾಸ್ ರಿಯಾಲಿಟಿ ಶೋ ವೀಕ್ಷಕರು ಫಿನಾಲೆ ವಾರದಲ್ಲಿ ಹನುಮಂತನಿಗೆ 5.3 ಕೋಟಿ ವೋಟ್ ಮಾಡುವ ಮೂಕ ಬಿಗ್ ಬಾಸ್ ಟ್ರೋಪಿ ವಿಜೇತನಾಗುವುದಕ್ಕೆ ಬೆಂಬಲ ನೀಡಿದ್ದಾರೆ. ಈ ಮೂಲಕ ಹನುಮಂತಗೆ ಸ್ಟಾರ್ ಪಟ್ಟ ಸಿಕ್ಕಿದೆ.
ಇದರ ಬೆನ್ನಲ್ಲಿಯೇ ಗಾಯಕ ಹನುಮಂತ ಅವರು ತಮ್ಮ ಸ್ವಗ್ರಾಮಕ್ಕೆ ತೆರಳಿ ಟ್ರೋಫಿಯನ್ನು ತಮ್ಮ ಆರಾಧ್ಯ ದೈವ ಹನುಮಂತ ದೇವರ ಪಾದಕ್ಕೆ ಅರ್ಪಿಸಿ ಪೂಜೆ ನೆರವೇರಿಸಿ ಬಂದಿದ್ದರು. ಇದರ ನಂತರ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಮತ್ತೊಂದು ರಿಯಾಲಿಟಿ ಶೋ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಭಾಗವಹಿಸಿದ್ದಾರೆ. ಇದೀಗ ಹಳ್ಳಿಹೈದ ಹನುಮಂತು ಟಿವಿ ವಾಹಿನಿಗಳ ಟಿಆರ್ಪಿ ಕಿಂಗ್ ಆಗಿ ಪರಿವರ್ತನೆ ಆಗುತ್ತಿದ್ದಾನೆ. ತನಗೆ ಎಷ್ಟೇ ಗೌರವ ಸಿಕ್ಕಿದರೂ ತಾನು ಅತ್ಯಂತ ಸರಳವಾಗಿಯೇ ನಡೆದುಕೊಳ್ಳುವುದರಿಂದ ಆತನ ಎಲ್ಲ ಕಾರ್ಯಕ್ರಮ ವೀಕ್ಷಣೆ ಮಾಡುವುದಕ್ಕೆ ಜನರು ಹೆಚ್ಚಿನ ಆದ್ಯತೆ ನೀಡುತ್ತಾರೆ.
ಇದನ್ನೂ ಓದಿ: ಹನುಮಂತ ನಾಟಕ ಮಾಡ್ತಾನೆ ಅನ್ನೋರು ನೋಡ್ಬೇಕಂತೆ ಇದು.. ಏನಂತೆ 'ಬಿಗ್ ಬಾಸ್' ಮ್ಯಾಟರ್?
ಬಿಗ್ ಬಾಸ್ ಸೀಸನ್ 11ರಲ್ಲಿ ಪಾಲ್ಗೊಂಡಿದ್ದ ಅನೇಕ ಸ್ಪರ್ಧಿಗಳಿಗೆ ಸಿನಿಮಾದ ಆಫರ್ಗಳು ಬಂದಿವೆ. ಇದರಲ್ಲಿ ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ ಪೈ, ಭವ್ಯಾ ಗೌಡ ಟ್ರೋಫಿ ವಿಜೇತ ಹನುಮಂತನಿಗೂ ಸಿನಿಮಾ ಆಫರ್ಗಳು ಬಂದಿವೆ. ಇದರ ಬೆನ್ನಲ್ಲಿಯೇ ಹನುಮಂತನಿಗೆ ಮತ್ತೊಂದು ಆಫರ್ ಕೂಡ ಬಂದಿದೆ. ಅದೇ ರಾಜಕೀಯ ಆಫರ್ ಎಂದು ಕೆಲವರು ಹೇಳುತ್ತಿದ್ದಾರೆ. ಸ್ವತಃ ಹಾವೇರಿ ಜಿಲ್ಲೆಯ ರಾಜಕೀಯ ನಾಯಕ, ಮಾಜಿ ಸಚಿವರೇ ಹನುಮಂತುಗೆ ಕರೆ ಮಾಡಿದ್ದರಿಂದ ಸ್ಥಳೀಯ ರಾಜಕಾರಣಕ್ಕೆ ಎಂಟ್ರಿ ಕೊಡುವ ಸಾಧ್ಯತೆಯೂ ಹೆಚ್ಚಾಗಿದೆ ಎಂಬ ಚರ್ಚೆಗಳು ಶುರುವಾಗಿವೆ.
ಕಳೆದ 4 ದಿನಗಳ ದಿನಗಳ ಹಿಂದೆ ಹಾವೇರಿ ಜಿಲ್ಲೆಯ ರಾಜಕೀಯ ನಾಯಕ ಹಾಗೂ ಮಾಜಿ ಕೃಷಿ ಸಚಿವರೂ ಆಗಿರುವ ಬಿ.ಸಿ. ಪಾಟೀಲ್ ಅವರು ಕರೆ ಮಾಡಿ, ಕಂಗ್ರಾಜುಲೇಷನ್ಸ್ ಹನುಮಂತು. ಹಾವೇರಿ ಘನತೆ ಗೌರವವನ್ನು ಎತ್ತಿ ಹಿಡಿದಿದ್ದೀಯ. ನಾನು ನಿಮ್ಮನ್ನು ನೋಡ್ತಿದ್ದೇನೆ ತುಂಬಾ ಚೆನ್ನಾಗಿ ಆಟವಾಡಿದ್ದೀರಿ ಎಂದು ಹೇಳಿದ್ದಾರೆ. ಈ ಆಡಿಯೋವನ್ನು ಸ್ವತಃ ಮಾಜಿ ಸಚಿವ ಬಿ.ಸಿ. ಪಾಟೀಲ್ ಅವರೇ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ತಮ್ಮ ಪೋಸ್ಟ್ಗೆ 'ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 11ರ ವಿಜೇತರಾದ ನಮ್ಮ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಶ್ರೀ ಹನುಮಂತ ಲಮಾಣಿ ಅವರಿಗೆ ಇಂದು ದೂರವಾಣಿ ಕರೆಯ ಮೂಲಕ ಮಾತನಾಡಿ, ಶುಭಾಶಯ ತಿಳಿಸಿದ ಸಂದರ್ಭ' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ ಹನುಮಂತುಗೆ ಸಿನಿಮಾ ಆಫರ್! ಸ್ಯಾಂಡಲ್ವುಡ್ಗೆ ಎಂಟ್ರಿ ಯಾವಾಗ, ಯಾವ ಚಿತ್ರ? ಇಲ್ಲಿದೆ ಡಿಟೇಲ್ಸ್
ಆದರೆ, ಬಿಗ್ ಬಾಸ್ ಟ್ರೋಫಿ ವಿಜೇತ ಹನುಮಂತು ಅವರು ರಾಜಕೀಯಕ್ಕೆ ಬರುತ್ತಾರಾ ಇಲ್ಲವೇ ಎಂಬುದರ ಬಗ್ಗೆ ಯಾವುದೇ ಚರ್ಚೆಯನ್ನು ಮಾಡಲಾಗಿಲ್ಲ. ಗ್ರಾಮೀಣ ಭಾಗದಲ್ಲಿ ರಾಜಕೀಯ ನಾಯಕರು ಹನುಮಂತನನ್ನು ರಾಜಕೀಯಕ್ಕೆ ಕರೆತರುವುದಕ್ಕೆ ಚಿಂತನೆ ನಡೆಸಿದ್ದಾರೆ ಎಂಬುದು ತಿಳಿದುಬಂದಿದೆ. ಇದರಿಂದ ಸ್ಥಳೀಯವಾಗಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ನೆರವಾಗಲಿದೆ ಎಂಬುದು ಅವರ ಆಶಯವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಹನುಮಂತನನ್ನು ಸೆಳೆಯಲು ಮುಂದಾಗಿವೆ. ಈ ಹಿಂದೆ ಗಾಯಕ ಹನುಮಂತ ಅವರಿ ಹಾವೇರಿ ಜಿಲ್ಲೆಯ ಮತದಾರ ಜಾಗೃತಿಯ ಸ್ವೀಪ್ ರಾಯಭಾರಿಯಾಗಿಯೂ ಕೆಲಸ ಮಾಡಿದ್ದರು.
